ಹಾಸನ: ಹಾಸನ ಮೂಲದ ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರ ಅನುವಾದಿತ 'ಹಾರ್ಟ್ ಲ್ಯಾಂಪ್' 2025ರ ಕೃತಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ.
ಲಂಡನ್ನ ಟೇಟ್ ಮಾರ್ಡನ್ನಲ್ಲಿ ನಡೆದ ಸಮಾರಂಭದಲ್ಲಿ ಹಾರ್ಟ್ ಲ್ಯಾಂಪ್ ಅಂತಿಮ ಸುತ್ತಿನಲ್ಲಿ ವಿಜೇತ ಕೃತಿಯಾಗಿ ಘೋಷಣೆ ಮಾಡಲಾಯಿತು. ಕನ್ನಡದಿಂದ ಇಂಗ್ಲಿಷ್ಗೆ ದೀಪಾ ಭಾಸ್ತಿ ಅವರು ಭಾಷಾಂತರಿಸಿದ ಈ ಕೃತಿಯು ಜಾಗತಿಕ ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡದ ಶಕ್ತಿಯನ್ನು ಮತ್ತೊಮ್ಮೆ ದೃಢಪಡಿಸಿದೆ. ಈ ಪ್ರತಿಷ್ಠಿತ ಪ್ರಶಸ್ತಿಯ ಜೊತೆಗೆ 52 ಲಕ್ಷ ರೂ. ಮೊತ್ತದ ನಗದನ್ನು ಲೇಖಕಿ ಬಾನು ಮುಷ್ತಾಕ್ ಮತ್ತು ಭಾಷಾಂತರಕಾರ್ತಿ ದೀಪಾ ಭಾಸ್ತಿ ಸಮಾನವಾಗಿ ಹಂಚಿಕೊಂಡಿದ್ದಾರೆ.
ಎಪ್ರಿಲ್ 8, 2025ರಂದು ಘೋಷಿತವಾದ ಆರು ಕೃತಿಗಳ ಶಾರ್ಟ್ ಲಿಸ್ಟ್ನಲ್ಲಿ 'ಹಾರ್ಟ್ ಲ್ಯಾಂಪ್' ಉಳಿದೆಲ್ಲಾ ಕೃತಿಗಳನ್ನು ಮೀರಿ ಈ ಸಾಲಿನ ಅತ್ಯುನ್ನತ ಸಾಹಿತ್ಯ ಗೌರವಕ್ಕೆ ಭಾಜನವಾಯಿತು. ತೀರ್ಪುಗಾರರ ಸಮಿತಿಯನ್ನು ಮ್ಯಾಕ್ಸ್ ಪೋರ್ಟರ್ ನೇತೃತ್ವ ವಹಿಸಿದ್ದರು.
ಬಾನು ಮುಷ್ತಾಕ್ ಕಾದಂಬರಿಯು ಮಾನವೀಯ ಸಂವೇದನೆಗಳನ್ನು ಆಳವಾಗಿ ಚಿತ್ರಿಸುವ, ಸಾಹಿತ್ಯಕವಾಗಿ ಶಕ್ತಿಶಾಲಿಯಾದ ಕೃತಿಯಾಗಿದೆ. ಎಂದು ತೀರ್ಪುಗಾರರು ಶ್ಲಾಘಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಈ ಗೆಲುವು ಒಂದು ಮೈಲಿಗಲ್ಲಾಗಿದ್ದು, ಭಾರತೀಯ ಭಾಷೆಗಳ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿಯುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ಸಾಧನೆಯಿಂದ ಕನ್ನಡಿಗರೆಲ್ಲರೂ ಹೆಮ್ಮೆಪಡುವಂತಾಗಿದೆ. ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಅವರಿಗೆ ಭಾರತೀಯರಷ್ಟೆಯಲ್ಲದೇ, ದೇಶ ವಿದೇಶಗಳ ಅಭಿಮಾನಿಗಳು ಅಂತರ್ಜಾಲದ ಮೂಲಕ ಶುಭಾಶಯಗಳ ಸುರಿ ಮಳೆ ಸುರಿದಿದ್ದಾರೆ.
ಬಾನು ಮುಷ್ತಾಕ್ ಸಾಹಿತ್ಯ ಪಯಣ : 1948ರ ಏಪ್ರಿಲ್ 3ರಂದು ಹಾಸನದಲ್ಲಿ ಜನಿಸಿದ ಬಾನು ಮುಷ್ತಾಕ್, ವೃತ್ತಿಯಲ್ಲಿ ನ್ಯಾಯವಾದಿಯಾಗಿದ್ದರೂ, ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ. ಲಂಕೇಶ್ ಪತ್ರಿಕೆಯಲ್ಲಿ ಜಿಲ್ಲಾ ವರದಿಗಾರರಾಗಿ 9 ವರ್ಷ ಸೇವೆ ಸಲ್ಲಿಸಿದ ಅವರು, ಹೆಜ್ಜೆ ಮೂಡಿದ ಹಾದಿ, ಬೆಂಕಿಮಳೆ, ಎದೆಯ ಹಣತೆ ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಕರಿನಾಗರಗಳು ಕತೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಹಸೀನಾ ಚಿತ್ರ 3 ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿತ್ತು.
ಕನ್ನಡ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಜನಾನುರಾಗಿಯಾಗಿರುವ ಬಾನು ಮುಷ್ತಾಕ್, ಈಗ ಬೂಕರ್ ಪ್ರಶಸ್ತಿಯೊಂದಿಗೆ ಕನ್ನಡ ಸಾಹಿತ್ಯವನ್ನು ಜಾಗತಿಕವಾಗಿ ಪರಿಚಯಿಸಿದ್ದಾರೆ.
ಈ ಗೆಲುವು ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದ್ದು, ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ವಿಶ್ವಕ್ಕೆ ತಿಳಿಸುವ ಮಹತ್ಕಾರ್ಯವನ್ನು ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಸಾಧಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಐತಿಹಾಸಿಕ ಕ್ಷಣವಾದ ಪ್ರಶಸ್ತಿ ಪ್ರಧಾನ ಸಮಾರಂಭವೂ ಭಾರತದ ಹಿರಿಮೆಯನ್ನು ಇಮ್ಮಡಿಗೊಳಿಸಿದೆ. ಹಾಸನದ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರ ಕಥಾಸಂಕಲನ ಹಸೀನಾ ಮತ್ತು ಇತರ ಕತೆಗಳು ಎಂಬ ಕೃತಿಯನ್ನು ಆಂಗ್ಲ ಭಾಷೆಗೆ ಅನುವಾದಿಸಿದ ದೀಪಾ ಭಾಸ್ತಿ ಹಾರ್ಟ್ ಲ್ಯಾಂಪ್ ಹೆಸರಿನಲ್ಲಿ ಪ್ರಕಟಿಸಿದ್ದರು. ಈ ಪ್ರತಿಷ್ಠಿತ ಕೃತಿಗೆ ಈಗ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ-2025 ಲಭಿಸಿದೆ. ಇದು ಕನ್ನಡ ಕೃತಿಗೆ ಲಭಿಸಿದ ಮೊದಲ ಬೂಕರ್ ಪ್ರಶಸ್ತಿಯಾಗಿದ್ದು, ಈ ಗೌರವವನ್ನು ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಭಾಸ್ತಿ ಲಂಡನ್ನ ಟೇಟ್ ಮಾರ್ಡನ್ನಲ್ಲಿ ನಡೆದ ಸಮಾರಂಭದಲ್ಲಿ ಜೊತೆಯಾಗಿ ಸ್ವೀಕರಿಸಿದರು.

"ಈ ಹಾರ್ಟ್ ಲ್ಯಾಪ್ ಎಂಬ ಕೃತಿಯು ದಕ್ಷಿಣ ಭಾರತದ ಮುಸ್ಲಿಂ ಸಮುದಾಯದ ಮಹಿಳೆಯರ ಜೀವನ, ಸಂಕಷ್ಟಗಳು ಮತ್ತು ಸಾಮಾಜಿಕ ಸವಾಲುಗಳನ್ನು ಪ್ರತಿಬಿಂಬಿಸುತ್ತದೆ. ನನ್ನ ಬರವಣಿಗೆಯಲ್ಲಿ ಕನ್ನಡ ಭಾಷೆಯ ಸೊಗಡು, ಜೀವನದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ಮೌಲ್ಯಗಳನ್ನು ಒಡಮೂಡಿಸಲು ಪ್ರಯತ್ನಿಸಿದ್ದೇನೆ. ಈ ಪ್ರಶಸ್ತಿಯು ಕನ್ನಡ ಸಾಹಿತ್ಯದ ಶಕ್ತಿಯನ್ನು ವಿಶ್ವಕ್ಕೆ ತೋರಿಸಬಹುದೆಂದು" ಎ.8ರಂದು ಶಾರ್ಟ್ ಲಿಸ್ಟ್ ನಲ್ಲಿ ಸ್ಥಾನಪಡೆದಾಗ ಈ ಟಿವಿ ಭಾರತಕ್ಕೆ ಹೇಳಿಕೆ ನೀಡಿದ್ದರು.
ಸಿಎಂ ಅಭಿನಂದನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾನು ಮುಷ್ತಾಕ್ ಈ ಸಾಧನೆಯನ್ನು ಕೊಂಡಾಡಿದ್ದು, "ಕನ್ನಡದ ಹೆಮ್ಮೆಯ ಲೇಖಕಿಯ ಈ ಗೌರವವು ಕರ್ನಾಟಕದ ಸಂಭ್ರಮದ ಕ್ಷಣ. ಬಾನು ಮುಷ್ತಾಕ್ ಅವರು ಕನ್ನಡದ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ" ಎಂದು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಬರೆದು ಅಭಿನಂದನೆ ಸಲ್ಲಿಸಿದ್ದಾರೆ.
ಮನೆಯಲ್ಲಿ ಸಂಭ್ರಮ ಸಡಗರ: ಪ್ರಸಕ್ತ ಸಾಲಿನ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಲೇಖಕಿ ಬಾನು ಮುಷ್ತಾಕ್ ಅವರ ಹಾಸನದ ಪೆನ್ಷನ್ ಮೊಹಲ್ಲಾದಲ್ಲಿರುವ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಕುಟುಂಬಸ್ಥರು ಸಿಹಿ ಹಂಚಿ ಗೆಲುವನ್ನು ಆಚರಿಸಿದ್ದಾರೆ. ಬಾನು ಮುಷ್ತಾಕ್ ಅವರ ಪತಿ ಮುಷ್ತಾಕ್ ಅಹಮದ್, ಪುತ್ರ ತಾಹೀರ್, ಸೊಸೆ ಯಾಸಿನ್ ಹಾಗೂ ಮೊಮ್ಮಗಳಿಗೆ ಸಿಹಿತಿನ್ನಿಸಿ ಸಂತಸವನ್ನು ಹಂಚಿಕೊಂಡರು. "ಈ ಗೌರವ ಕರ್ನಾಟಕಕ್ಕೆ, ವಿಶೇಷವಾಗಿ ಹಾಸನ ಜಿಲ್ಲೆಗೆ ಸಿಕ್ಕಿರುವುದು ಅತೀವ ಸಂತೋಷದ ವಿಷಯ. ಇಂಗ್ಲೆಂಡ್ನಲ್ಲಿ ಪ್ರಶಸ್ತಿ ಘೋಷಣೆಯವರೆಗೂ ಕುತೂಹಲದಿಂದ ಕಾದಿದ್ದೆವು. ಘೋಷಣೆಯಾದಾಗ ನಂಬಲಾಗಲಿಲ್ಲ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಕನ್ನಡದ ಸತ್ವಕ್ಕೆ ಜಾಗತಿಕ ಮನ್ನಣೆ ಸಿಕ್ಕಿದ್ದು, ಮನೆ ಮಂದಿಗೆಲ್ಲಾ ಖುಷಿ ನೀಡಿದೆ" ಎಂದರು.
ಇದನ್ನೂ ಓದಿ: 'ಬೂಕರ್' ಪ್ರಶಸ್ತಿ ಗೆದ್ದ ಬಾನು ಮುಷ್ತಾಕ್ಗೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ