ಮೈಸೂರು : ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಮಂತ್ರ ಮಾಂಗಲ್ಯದ ಮೂಲಕ ಪ್ರೇಮಿಗಳಿಬ್ಬರು ನವಜೀವನಕ್ಕೆ ಕಾಲಿಟ್ಟಿದ್ದಾರೆ.
ನಂಜನಗೂಡು ಜನ ಸಂಗ್ರಾಮ ಪರಿಷತ್ ವತಿಯಿಂದ ನಂಜನಗೂಡು ನಗರದ ನಂದಿ ಕನ್ವೆನ್ಷನ್ ಹಾಲ್ನಲ್ಲಿ ಪ್ರೇಮಿಗಳಾದ ಎಂ. ಸಂತೋಷ್ ಕುಮಾರ್ ಹಾಗೂ ಸಿ. ರಂಜಿತಾ ಅವರ ಅಂತರ್ಜಾತಿ ವಿವಾಹವನ್ನು ಪ್ರಗತಿಪರ ಚಿಂತಕರು ಮತ್ತು ಹೋರಾಟಗಾರರು, ರೈತ ದಲಿತ ಸಂಘಟನೆಗಳ ಸಮ್ಮುಖದಲ್ಲಿ ಸರಳವಾಗಿ ನಡೆಸಲಾಯಿತು.
ನಂಜನಗೂಡು ತಾಲೂಕಿನ ಮುಳ್ಳೂರು ಗ್ರಾಮದ ಎಂ. ಸಂತೋಷ್ ಕುಮಾರ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಸಗಾವಿ ಗ್ರಾಮದ ಸಿ. ರಂಜಿತಾ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಪ್ರೇಮಿಗಳಿಬ್ಬರು ಎರಡು ಕುಟುಂಬವನ್ನು ಒಪ್ಪಿಸಿ ಮಂತ್ರ ಮಾಂಗಲ್ಯದ ಮೂಲಕ ಮದುವೆಯಾಗಿ ಇತರರಿಗೆ ಮಾದರಿಯಾಗಿದ್ದಾರೆ.

ಮಾನವ ಬಂಧುತ್ವ ವೇದಿಕೆಯ ಮುಖ್ಯಸ್ಥ ಉಗ್ರ ನರಸಿಂಹೇಗೌಡ ಅವರು ದಂಪತಿಗೆ ಕುವೆಂಪು ಅವರ ಮಂತ್ರ ಮಾಂಗಲ್ಯದ ವಿವಾಹ ಸಂಹಿತೆಯನ್ನು ಬೋಧಿಸಿದರು. ವಿವಾಹಕ್ಕೆ ಆಗಮಿಸಿದ ಪ್ರಗತಿಪರ ಚಿಂತಕರು ಮತ್ತು ಹೋರಾಟಗಾರರು ಶುಭ ಹಾರೈಸಿದರು.
ಜಾತ್ಯತೀತ ಸಮಾಜವನ್ನು ನಿರ್ಮಾಣ ಮಾಡಲಿಕೆ ಸಾಧ್ಯ : ಈ ಬಗ್ಗೆ ಜನಸಂಗ್ರಾಮ ಪರಿಷತ್ತಿನ ಗೌರವಾಧ್ಯಕ್ಷ ನಗರ್ಲೆ ಎಂ. ವಿಜಯಕುಮಾರ್ ಅವರು ಮಾತನಾಡಿದ್ದು, ''ಇವತ್ತು ನಮ್ಮ ಸಂಬಂಧಿಕರ ವಿವಾಹ ನಡೆದಿದೆ. ಇದಕ್ಕೆ ನಮ್ಮ ಸ್ನೇಹಿತರು, ಪ್ರಗತಿಪರ ಸಂಘಟನೆ, ರೈತ ಸಂಘ, ಮಾನವ ಮಂಟಪ, ಪ್ರತಿಧ್ವನಿ ವೇದಿಕೆಯವರು ಪಾಲ್ಗೊಂಡು ನವ ವಧು-ವರರಿಗೆ ಆಶೀರ್ವಾದಿಸಿದ್ದಾರೆ. ಅಂಬೇಡ್ಕರ್ ಹೇಳಿದಂತೆ ವಿದ್ಯಾವಂತರಾದ್ರೆ ಇವತ್ತು ಸಮಸಮಾಜವನ್ನು, ಜಾತ್ಯತೀತ ಸಮಾಜವನ್ನು ನಿರ್ಮಾಣ ಮಾಡಲಿಕೆ ಸಾಧ್ಯ ಎಂದು ಹೇಳುವುದಕ್ಕೆ ಈ ಮದುವೆಯೇ ಸಾಕ್ಷಿ. ಇಬ್ಬರೂ ವಿದ್ಯಾವಂತರಿದ್ದಾರೆ. ಮನೆಯವರನ್ನು ಒಪ್ಪಿಸಿ ಮಂತ್ರಮಾಂಗಲ್ಯದ ಮೂಲಕ ಮದುವೆಯಾಗಿದ್ದಾರೆ. ಇಂತಹ ಮದುವೆಯಿಂದ ಮಾತ್ರ ಜಾತಿ ಎಂಬ ಪಿಡುಗು ಹೋಗಲು ಸಾಧ್ಯ'' ಎಂದು ಹೇಳಿದರು.

ದೇಶಕ್ಕೆ ಹಾಗೂ ಬದುಕಿಗೆ ಉಪಯುಕ್ತ : ''ಪ್ರಸ್ತುತ ದಿನಮಾನಗಳಲ್ಲಿ ಮಾನವೀಯ ಮೌಲ್ಯದ ಹರಿಕಾರರಾದ ಬಸವಣ್ಣ, ಬುದ್ದ, ಅಂಬೇಡ್ಕರ್, ಪೆರಿಯಾರ್, ಹಾಗೆಯೇ, ಕುವೆಂಪು ಅವರ ಆಶಯಗಳನ್ನು ಮೈಗೂಡಿಸಿಕೊಳ್ಳುವುದು ಹೆಚ್ಚೆಚ್ಚು ಆಗಬೇಕಿರುವುದಕ್ಕೆ ಸುಸಂದರ್ಭ ಎಂಬುದಕ್ಕೆ ಈ ಮದುವೆಯೇ ಸಾಕ್ಷಿ. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ಸಮಾಜಕ್ಕೆ ಆದರ್ಶಮುಖಿಯಾಗಿ ಬದುಕುತ್ತೇವೆ ಎಂದು ಹೇಳಿದ್ದಾರೆ. ಈ ರೀತಿಯ ಮದುವೆಗಳು ಹೆಚ್ಚೆಚ್ಚು ಆಗಬೇಕು. ಇದರಿಂದ ದೇಶಕ್ಕೆ ಹಾಗೂ ಬದುಕಿಗೆ ಉಪಯುಕ್ತವಾಗಲಿದೆ'' ಎಂದು ಜನಸಂಗ್ರಾಮ ಪರಿಷತ್ ಉಪಾಧ್ಯಕ್ಷ ಪ್ರಸನ್ನ ತಿಳಿಸಿದರು.