ಬೆಳಗಾವಿ: ''ನಾನಂತೂ ಬಿಡಿಸಿಸಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ ನಮ್ಮ ಮಾರ್ಗದರ್ಶನದಲ್ಲೇ ಆಡಳಿತ ಮಂಡಳಿಯು ಗೆಲ್ಲಲಿದೆ. ಅಕ್ಟೋಬರ್ನಲ್ಲಿ ನಮ್ಮವರೇ ಅಧ್ಯಕ್ಷ, ಉಪಾಧ್ಯಕ್ಷರಾಗುತ್ತಾರೆ'' ಎಂದು ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಜಿಲ್ಲೆಯಲ್ಲಿ ಅನೇಕ ಶಾಸಕರು ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಆದರೆ, ಬ್ಯಾಂಕಿನ ಒಳಗೆ ಯಾವುದೇ ರಾಜಕಾರಣ ಇಲ್ಲ. ಹೊರಗೆ ಎಷ್ಟೇ ರಾಜಕೀಯ ಜಗಳವಿದ್ದರೂ ಬ್ಯಾಂಕ್ ವಿಷಯ ಬಂದಾಗ ಎಲ್ಲರೂ ಒಂದೇ. ರಾಜಕಾರಣವಾದರೆ ರೈತರ ಮೇಲೆ ಅದು ನೇರ ಪರಿಣಾಮ ಬೀರುತ್ತದೆ. ಹೀಗಾಗಿ, ರಾಜಕೀಯವಿಲ್ಲದೇ ಬ್ಯಾಂಕ್ ಸಾಗಲಿದೆ'' ಎಂದರು.
ಬ್ಯಾಂಕ್ ನಿಲ್ಲುವುದಿಲ್ಲ: ''ಆಡಳಿತ ಮಂಡಳಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಗಟ್ಟಿಯಾಗಿ ಬ್ಯಾಂಕ್ ಮುನ್ನಡೆದಿದೆ. ಈ ವರ್ಷವೂ ಹೆಚ್ಚಿನ ಆದಾಯ ಗಳಿಸುವ ಮೂಲಕ ಬ್ಯಾಂಕ್ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಇನ್ನೂ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುವುದು. ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಿದ ಬ್ಯಾಂಕ್ ನಮ್ಮದಾಗಿದೆ. ವಸೂಲಾತಿಯೂ ಅಷ್ಟೇ ಪ್ರಮಾಣದಲ್ಲಿ ನಡೆದಿದೆ. ಯಾವುದೇ ಕಾರ್ಖಾನೆಯ ಕಟಬಾಕಿ ಉಳಿದಿಲ್ಲ. ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಯಾರೇ ಇದ್ದರೂ ಬ್ಯಾಂಕ್ ನಿರಂತರವಾಗಿ ಮುನ್ನಡೆಯಲಿದೆ. ಯಾವುದೇ ಕಾರಣಕ್ಕೂ ಬ್ಯಾಂಕ್ ನಿಲ್ಲುವುದಿಲ್ಲ'' ಎಂದು ಬಾಲಚಂದ್ರ ಹೇಳಿದರು.
33.11 ಕೋಟಿ ನಿವ್ವಳ ಲಾಭ: ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗೂಡೆ ಮಾತನಾಡಿ, ''ಬ್ಯಾಂಕ್ ಈ ಒಂದು ವರ್ಷದಲ್ಲಿ 33.11 ಕೋಟಿ ರೂ. ನಿವ್ವಳ ಲಾಭ ಹಾಗೂ 303 ಕೋಟಿ ರೂ. ಷೇರು ಹೊಂದಿದೆ. ಬ್ಯಾಂಕು ವರ್ಷದಿಂದ ವರ್ಷಕ್ಕೆ ಪ್ರಗತಿಯಲ್ಲಿ ಮುನ್ನಡೆಯುತ್ತಿದೆ. ಅತಿ ಹೆಚ್ಚಿನ ಲಾಭ ಗಳಿಸುವ ಮೂಲಕ ರೈತರು ಹಾಗೂ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಐದು ತಿಂಗಳ ಅವಧಿಯಲ್ಲಿಯೂ ಹೆಚ್ಚಿನ ಅಭಿವೃದ್ಧಿಯಾಗಿದೆ. ನಿಧಿಗಳು 375.9 ಕೋಟಿ ರೂ., ಠೇವುಗಳು 6,087 ಕೋಟಿ ರೂ., ಹೊರಗಿನ ಸಾಲ 1,664 ಕೋಟಿ ರೂ., ಗುಂತಾವಣೆಗಳು 2,276 ಕೋಟಿ ರೂ., ಸದಸ್ಯರ ಸಾಲಗಳು 5,893 ಕೋಟಿ ರೂ., ನಿವ್ವಳ ಲಾಭ 33.11 ಕೋಟಿ ರೂ., ದುಡಿಯುವ ಬಂಡವಾಳ 8,593 ಕೋಟಿ ರೂ., ಗ್ರಾಸ್ ಎನ್ಪಿಎ ಶೇ.2.07ರಷ್ಟು ಇದೆ'' ಎಂದು ವಿವರಿಸಿದರು.
ಬ್ಯಾಂಕ್ ಗುರಿ ಮೀರಿ ಸಾಧನೆ: ಬ್ಯಾಂಕ್ ನಿರ್ದೇಶಕ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ''ರಾಜ್ಯದಲ್ಲಿಯೇ ರೈತರಿಗೆ ಅತಿ ಹೆಚ್ಚು ಸಾಲ ನೀಡಿದ ಹೆಗ್ಗಳಿಕೆಗೆ ಬಿಡಿಸಿಸಿ ಬ್ಯಾಂಕ್ ಪಾತ್ರವಾಗಿದೆ. ಪ್ರಸ್ತುತ ಯೋಜನೆಯಡಿಯಲ್ಲಿ 3,175 ಕೋಟಿ ರೂ. ಅಲ್ಪಾವಧಿ ಬೆಳೆ ಸಾಲ ವಿತರಿಸುವ ಗುರಿ ನೀಡಲಾಗಿತ್ತು. ಆದರೆ, ನಮ್ಮ ಬ್ಯಾಂಕಗ ಜಿಲ್ಲೆಯ 4,88,379 ರೈತ ಸದಸ್ಯರಿಗೆ 3475.66 ಕೋಟಿ ರೂ. ಸಾಲ ವಿತರಿಸಿ ಶೇ. 109.47ರಷ್ಟು ಸಾಧನೆಗೈದಿದ್ದು, ಗುರಿ ಮೀರಿ ಸಾಧನೆ ಮಾಡಿದೆ. ಕಳೆದ ವರ್ಷ 4,68,775 ರೈತ ಸದಸ್ಯರಿಗೆ 3060.42 ಕೋಟಿ ರೂ. ಸಾಲ ಹಂಚಲಾಗಿತ್ತು. ಈ ವರ್ಷ 19,604 ಹೊಸ ಸದಸ್ಯರಿಗೆ ಸಾಲ ನೀಡಲಾಗಿದೆ. 415.24 ಕೋಟಿ ರೂ. ಬೆಳೆ ಸಾಲವನ್ನು ಹೆಚ್ಚಿಗೆ ನೀಡಲಾಗಿದೆ'' ಎಂದರು.
''ನಬಾರ್ಡ್ ಸಂಸ್ಥೆಯವರು ಪುನರ್ಧನ ಸಾಲ ಯೋಜನೆಯಡಿ ನಮ್ಮ ಬ್ಯಾಂಕ್ 1,270 ಕೋಟಿ ರೂ. (60:40) ಅರ್ಹತೆ ಹೊಂದಿದರೂ ಕಳೆದ ವರ್ಷ 774 ಕೋಟಿ ರೂ. ಮಾತ್ರ ನೀಡಿದ್ದರು. ಆದರೆ ಕಳೆದ ವರ್ಷಕ್ಕಿಂತ 313 ಕೋಟಿ ರೂ. ಕಡಿಮೆ ನೀಡಿದರೂ ಜಿಲ್ಲೆಯ ರೈತರಿಗೆ ಅನುಕೂಲವಾಗುವ ಸಲುವಾಗಿ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆದು 415.24 ಕೋಟಿ ರೂ. ಹೆಚ್ಚಿಗೆ ಬೆಳೆ ಸಾಲ ವಿತರಿಸಲಾಗಿದೆ. ಈ ಸಾಲದ ವಸೂಲಿ ಪ್ರಮಾಣ ಶೇ.99.22ರಷ್ಟಿದೆ'' ಎಂದರು.
''ಜಿಲ್ಲೆಯ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಶೇ.3ರ ಬಡ್ಡಿ ದರದಲ್ಲಿ ಟ್ರ್ಯಾಕ್ಟರ್, ಟ್ರೇಲರ್, ಕೃಷಿ ಉಪಕರಣಗಳ ಖರೀದಿಗಾಗಿ, ನೀರಾವರಿ ಪೈಪ್ಲೈನ್ ಮಾಡಿಸಲು ಮತ್ತು ಪಂಪ್ಸೆಟ್ ಖರೀದಿಗೆ 15 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತಿದೆ. ಟ್ರ್ಯಾಕ್ಟರ್ ಖರೀದಿಸಲು 2014 ರೈತ ಸದಸ್ಯರಿಗೆ 161.48 ಕೋಟಿ ರೂ., ಪೈಪ್ಲೈನ್ಗಾಗಿ 378 ರೈತ ಸದಸ್ಯರಿಗೆ 1,790 ಕೋಟಿ ರೂ., ಹೈನುಗಾರಿಕೆಗೆ 609 ರೈತರಿಗೆ 3.64 ಕೋಟಿ ರೂ. ಸಾಲ ವಿತರಿಸಲಾಗಿದೆ. ಶೇ.99.78ರಷ್ಟು ಸಾಲ ವಸೂಲಾತಿ ಪ್ರಮಾಣ ಇದೆ'' ಎಂದು ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಬ್ಯಾಂಕ್ ಶತಮಾನೋತ್ಸವ ಆಚರಣೆ:''ಬಿಡಿಸಿಸಿ ಬ್ಯಾಂಕ್ ಶತಮಾನೋತ್ಸವದ ಹೊಸ್ತಿಲು ದಾಟಿದರೂ ಕೋವಿಡ್ ಸೇರಿ ವಿವಿಧ ಕಾರಣಗಳಿಂದ ಸಂಭ್ರಮಾಚರಣೆ ಸಾಧ್ಯವಾಗಲಿಲ್ಲ. ಬರುವ ಮೇ ಅಥವಾ ಜೂನ್ ಮೊದಲ ವಾರದಲ್ಲಿ ಕೇಂದ್ರ ಮತ್ತು ರಾಜ್ಯ ನಾಯಕರ ಉಪಸ್ಥಿತಿಯಲ್ಲಿ ಸಮಾರಂಭ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಶತಮಾನೋತ್ಸವ ಹಿನ್ನೆಲೆಯಲ್ಲಿ ಬ್ಯಾಂಕ್ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು ಕ್ರಮ ವಹಿಸಲಾಗುವುದು. ಠೇವು ಹೆಚ್ಚಿಸಿಕೊಂಡು ಬ್ಯಾಂಕ್ ಲಾಭ ಅಧಿಕಗೊಳಿಸಲು ಪ್ರಯತ್ನಿಸಲಾಗುವುದು. ಜಿಲ್ಲೆಯ ಎಲ್ಲ ಶಾಖೆಗಳಿಗೂ ಪೀಠೋಪಕರಣ, ಒಂದೇ ತರಹದ ಸುಣ್ಣ, ಬಣ್ಣ ಸೇರಿ ವಿವಿಧ ಸೌಕರ್ಯಗಳನ್ನು ಒದಗಿಸಲಾಗುವುದು'' - ಶಾಸಕ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ಹಾಲು ಒಕ್ಕೂಟ ಅಧ್ಯಕ್ಷ
ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ, ಅರವಿಂದ ಪಾಟೀಲ, ಶ್ರೀಕಾಂತ ಧವಣ, ಶಿವಾನಂದ ಡೋಣಿ, ರಾಜೇಂದ್ರ ಅಂಕಲಗಿ, ಪಂಚನಗೌಡ ದ್ಯಾಮನಗೌಡರ, ನೀಲಕಂಠ ಕಪ್ಪಲಗುದ್ದಿ, ಗಜಾನನ ಕಳ್ವಿ, ಮುಖ್ಯ ಕಾರ್ಯನಿರ್ವಾಹಕ ಸುರೇಶ್ ಅಳಗುಂಡಿ ಸೇರಿ ಮತ್ತಿತರರು ಇದ್ದರು.
ಇದನ್ನೂ ಒದಿ: ಜಾತಿ ಗಣತಿ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳದ ನಿರ್ಣಯ: ಸಚಿವರು ಹೇಳಿದ್ದೇನು?