ಹುಬ್ಬಳ್ಳಿ: ನಗರದಾದ್ಯಂತ ಬುಧವಾರ ರಾತ್ರಿಯವರೆಗೂ ಸುರಿದ ಭಾರೀ ಮಳೆಗೆ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ ಬೈಕ್ ಸವಾರನ ಮೃತದೇಹ ಪತ್ತೆಯಾಗಿದೆ.
ನಗರದ ಬೀರಬಂದ ನಗರದ ನಿವಾಸಿ ಹುಸೇನ್ಸಾಬ್ ಕಳಸ (58) ಕೊಚ್ಚಿಹೋಗಿದ್ದ ವ್ಯಕ್ತಿ. ಹುಸೇನಸಾಬ್ ಮತ್ತು ಇನ್ನೊಬ್ಬ ಸೇರಿ ಜಮೀನಿನ ಕೆಲಸ ಮುಗಿಸಿಕೊಂಡು ಬೈಕ್ನಲ್ಲಿ ರಾತ್ರಿ 10.30ರ ಸುಮಾರಿಗೆ ನೇಕಾರನಗರಕ್ಕೆ ಮರಳುತ್ತಿದ್ದರು. ನೇಕಾರನಗರದ ಸೇತುವೆ ಬಳಿ ಜೋರಾಗಿ ಹರಿಯುತ್ತಿದ್ದ ಮಳೆ ನೀರಲ್ಲಿ ಕೆಲವರು ದಾಟಿ ಮುಂದೆ ಸಾಗಿದ್ದಾರೆ. ಇದನ್ನು ನೋಡಿದ ಹುಸೇನ್ ಸಾಬ್ ಸಹ ಬೈಕ್ ದಾಟಿಸಲು ಪ್ರಯತ್ನಿಸಿದ್ದು, ಈ ವೇಳೆ ಆಯತಪ್ಪಿ ಬಿದ್ದು, ನೀರಿನಲ್ಲಿ ಕೊಚ್ಚಿ ಹೋಗಿದ್ದರು.
ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ, ಪೊಲೀಸ್, ಪಾಲಿಕೆ ಹಾಗೂ ತಾಲೂಕು ಆಡಳಿತ ಸಿಬ್ಬಂದಿ ಧಾವಿಸಿ ನಿರಂತರ ಕಾರ್ಯಾಚರಣೆ ನಡೆಸಿದ್ದರು. ಇಂದು ಮಧ್ಯಾಹ್ನದ ವೇಳೆ ಘಟನೆ ನಡೆದ ಸ್ಥಳದಿಂದ ಒಂದೂವರೆ ಕಿಮೀ ದೂರದ ಹಳ್ಳದಲ್ಲಿ ಮೃತದೇಹ ಪತ್ತೆಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕೆಎಂಸಿಆರ್ಐಗೆ ರವಾನಿಸಿದ್ದು, ಬಳಿಕ ಕುಟುಂಬಕ್ಕೆ ಹಸ್ತಾಂತರ ಮಾಡಲಿದ್ದಾರೆ. ಈ ಕುರಿತಂತೆ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಲ್ಲಿ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ, ಆರ್.ವಿಜಯ ಕುಮಾರ್, ತಹಶೀಲ್ದಾರ್ ಕಲಗೌಡ ಪಾಟೀಲ ಹಾಗೂ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದರು.