ಬೆಂಗಳೂರು: ಪಹಲ್ಗಾಮ್ನಲ್ಲಿ ನಡೆದ ಉಗ್ರರ ಅಟ್ಟಹಾಸ ಹಿನ್ನೆಲೆಯಲ್ಲಿ ದೇಶದಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಹೊರ ಕಳುಸುವಂತೆ ಕೇಂದ್ರವು ರಾಜ್ಯಗಳಿಗೆ ತಾಕೀತು ಮಾಡಿದ ಬೆನ್ನಲೇ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.
ವೈದ್ಯಕೀಯ ವೀಸಾ ಹಿನ್ನೆಲೆಯಲ್ಲಿ ಅಧಿಕೃತವಾಗಿ ರಾಜ್ಯಕ್ಕೆ ಬಂದಿದ್ದ ಪಾಕ್ ಪ್ರಜೆಗಳನ್ನು ರಾಜ್ಯ ಸರ್ಕಾರ ಗುರುತಿಸಿದೆ. ಐವರು ಪಾಕಿಸ್ತಾನಿ ಪ್ರಜೆಗಳು ಮೆಡಿಕಲ್ ವೀಸಾದಡಿ ರಾಜ್ಯದಲ್ಲಿ ನೆಲೆಯೂರಿದ್ದಾರೆ. ವೈದ್ಯಕೀಯ ವೀಸಾದಡಿ ಬಂದಿರುವವರು ಏ.29ರವರೆಗೆ ಮಾತ್ರ ದೇಶದಲ್ಲಿರಲು ಕೇಂದ್ರ ವಿನಾಯಿತಿ ನೀಡಿದೆ. ಕೇಂದ್ರ ನೀಡಿದ ಗಡುವಿನೊಳಗೆ ನೆಲೆಯೂರಿರುವ ಪಾಕ್ ಪ್ರಜೆಗಳನ್ನ ನಿಯಮನುಸಾರ ಹೊರ ಕಳುಹಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವೈದ್ಯಕೀಯ ವೀಸಾ ಹೊರತುಪಡಿಸಿ ಪಾಕ್ ಪ್ರಜೆಗಳು ರಾಜ್ಯದಲ್ಲಿದ್ದಾರೆ. ಹಲವು ವರ್ಷಗಳಿಂದ ಇಲ್ಲೇ ನೆಲೆಸುವುದಲ್ಲದೆ ಭಾರತೀಯ ಪ್ರಜೆಯೊಂದಿಗೆ ವಿವಾಹ ಆದ ಹಿನ್ನೆಲೆಯಲ್ಲಿ ದೇಶದ ಪೌರತ್ವ ಪಡೆದುಕೊಂಡಿದ್ದಾರೆ. ಹೀಗಾಗಿ ಇಂತಹವರನ್ನ ಗಡೀಪಾರು ಮಾಡಲು ಬರುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ 25 ಮಂದಿ ಪಾಕಿಸ್ತಾನಿಯರನ್ನು ಅನಧಿಕೃತವಾಗಿ ಬಂಧಿಸಿ ಕಾನೂನು ಕ್ರಮ ಕೈಗೊಂಡಿರುವುದಾಗಿ ಗೃಹ ಸಚಿವ ಜಿ.ಪರಮೇಶ್ವರ್ ಅವರು ಮಾರ್ಚ್ನಲ್ಲಿ ನಡೆದಿದ್ದ ವಿಧಾನಮಂಡಲ ಅಧಿವೇಶನದಲ್ಲಿ ಮಾಹಿತಿ ನೀಡಿದ್ದರು.
ದಾವಣಗೆರೆಯ ಜೆಜೆ ಎಂ ಮೆಡಿಕಲ್ ಕಾಲೇಜಿನಲ್ಲಿ ಪಾಕಿಸ್ತಾನಿ ಪ್ರಜೆ ವ್ಯಾಸಂಗ:
ದಾವಣಗೆರೆಯಲ್ಲಿ ಓರ್ವ ಪಾಕಿಸ್ತಾನಿ ಪ್ರಜೆ ಇದ್ದು, ವ್ಯಾಸಂಗ ವೀಸಾ ಮೇಲೆ ಭಾರತಕ್ಕೆ ಆಗಮಿಸಿದ್ದಾರೆ. ಅವರು ವಿದ್ಯಾರ್ಥಿ ಆಗಿದ್ದು, ದಾವಣಗೆರೆಯ ಜೆಜೆ ಎಂ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಎಸ್ಪಿ ಉಮಾಪ್ರಶಾಂತ್ ಮಾಹಿತಿ ನೀಡಿದರು. ಅವರ ವಿಸಾ ಅವಧಿ ಇನ್ನೂ ಮುಗಿದಿಲ್ಲ. ಈ ಬಗ್ಗೆ ನಮ್ಮ ಇಲಾಖೆಯಿಂದ ಯಾವುದೇ ಸೂಚನೆ ಬಂದಿಲ್ಲ. ಇಲಾಖೆಯ ಸೂಚನೆ ಬಂದ ಬಳಿ ಕ್ರಮ ವಹಿಸುತ್ತೇವೆ. ಅವರು ಎಂಬಿಬಿಎಸ್ ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ ಎಂದು ತಿಳಿಸಿದರು.
ಪ್ರವಾಸಿಗರ ಮಾರಣಹೋಮ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಬಳಿಯ 'ಮಿನಿ ಸ್ವಿಟ್ಜರ್ ಲ್ಯಾಂಡ್' ಎಂದೇ ಪ್ರಸಿದ್ಧವಾಗಿರುವ ಹುಲ್ಲುಗಾವಲು ಪ್ರದೇಶದಲ್ಲಿ ಭಯೋತ್ಪಾದಕರು ಏಪ್ರಿಲ್ 22 ರಂದು ಕಂಡ ಕಂಡ ಪ್ರವಾಸಿಗರ ಮೇಲೆ ಗುಂಡು ಹಾರಿಸಿ 26 ಮಂದಿಯನ್ನು ಹತ್ಯೆ ಮಾಡಿದ್ದರು. ಇದರಲ್ಲಿ ಇಬ್ಬರು ಕನ್ನಡಿಗರು, ನೌಕಾಪಡೆ, ಗುಪ್ತಚರ ದಳ ಅಧಿಕಾರಿ ಸಾವನ್ನಪ್ಪಿದ್ದಾರೆ. 2019 ರಲ್ಲಿ ಪುಲ್ವಾಮಾ ದಾಳಿಯ ನಂತರದ ಅತ್ಯಂತ ಭೀಕರ ದಾಳಿ ಇದಾಗಿದೆ.
ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕ ಸಂಘಟನೆಯ ಜೊತೆ ಗುರುತಿಸಿಕೊಂಡಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಈ ದಾಳಿಯ ಹೊಣೆ ಹೊತ್ತಿದೆ. ಈ ಕೃತ್ಯದ ಬೆನ್ನಲ್ಲೆ ಪಾಕ್ಗೆ ಭಾರತ ಕಠಿಣ ಸಂದೇಶ ರವಾನಿಸಿದೆ.
ಇದನ್ನೂ ಓದಿ: ಪಹಲ್ಗಾಮ್ ಭಯೋತ್ಪಾದಕರ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಕೇರಳದ ಕುಟುಂಬ ಪಾರು: ಹೇಗೆ ಗೊತ್ತಾ?
ಇದನ್ನೂ ಓದಿ: ಪಾಕ್ ಪ್ರಜೆಗಳಿಗೆ ದೇಶ ಬಿಡಲು ಗಡುವು: ಪಾಟ್ನಾದಿಂದ 27 ಪಾಕ್ ನಾಗರಿಕರನ್ನು ವಾಪಸ್ ಕಳುಹಿಸಲು ಸಿದ್ಧತೆ