ಬೆಂಗಳೂರು: ನಗರದ ಮಲ್ಲೇಶ್ವರಂನ ಮೈಸೂರು ಶಿಕ್ಷಣ ಸೊಸೈಟಿ (ಎಂಇಎಸ್) ಕಾಲೇಜಿನ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುರಿತಾದ ರಾಷ್ಟ್ರೀಯ ಆಯೋಗ ದಾಖಲಿಸಿದ್ದ ಜಾತಿ ನಿಂದನೆ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಕಾಲೇಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ಮಾಡಿದೆ.
ಪ್ರಕರಣ ಸಂಬಂಧ ದೂರು ದಾಖಲಿಸಿದ್ದ ಪ್ರಕರಣದಲ್ಲಿ ಮೊದಲನೇ ಪ್ರತಿವಾದಿ ಪಿ.ಬಾಬು ಎರಡು ವರ್ಷ ರಜೆ ಕೋರಿದ್ದರು. ಅದನ್ನು ಕಾಲೇಜು ಮಂಜೂರು ಮಾಡಲಾಗಿತ್ತು. ನಂತರ ಅವರು ಸೇವೆಗೆ ಮರಳುವ ವೇಳೆಗೆ ಆ ಹುದ್ದೆಗೆ ಬೇರೆಯವರನ್ನು ನಿಯೋಜನೆ ಮಾಡಲಾಗಿತ್ತು. ಆದ ಕಾರಣ ಅವರನ್ನು ನಾಲ್ಕು ಕಿ.ಮೀ. ದೂರದಲ್ಲಿರುವ ಅದೇ ಸೊಸೈಟಿಯ ಮತ್ತೊಂದು ಕಾಲೇಜಿಗೆ ವರ್ಗಾಯಿಸಲಾಗಿತ್ತು.
ಅಲ್ಲದೇ, ಉದ್ಯೋಗದ ಷರತ್ತುಗಳಲ್ಲಿ ದೂರುದಾರರು ಸಹ ಎಲ್ಲವನ್ನೂ ಒಪ್ಪಿಕೊಂಡಿದ್ದರು. ಪ್ರಕರಣದ ಸಂಗತಿಗಳು ಹೀಗಿರುವಾಗ ಆಯೋಗ ದೂರನ್ನು ಪುರಸ್ಕರಿಸಬಾರದಿತ್ತು. ಇದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯ ದುರ್ಬಳಕೆಯಾಗಲಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪೂರಕ ಸಾಕ್ಷ್ಯ ಒದಗಿಸದ್ದಕ್ಕೆ ಪ್ರಕರಣ ರದ್ದು: ಜೊತೆಗೆ, ಸಂಸ್ಥೆ ಮತ್ತು ದೂರುದಾರ ಬಾಬು ನಡುವಿನ ಉದ್ಯೋಗ ಒಪ್ಪಂದದಲ್ಲಿ ದೂರುದಾರರು ಎಂಇಎಸ್ ಗುಂಪಿನ ಸಂಸ್ಥೆಯ ಯಾವುದೇ ಕಾಲೇಜಿಗೆ ಅಂತರ ವರ್ಗಾವಣೆಗೆ ಒಪ್ಪಿ ತಾವೇ ಸಹಿ ಹಾಕಿದ್ದಾರೆ. ಅಲ್ಲದೇ, ಅವರು 10 ವರ್ಷಗಳಿಂದ ಜಾತಿ ನಿಂದನೆ ನಡೆಯುತ್ತಿತ್ತೆಂದು ಆರೋಪಿಸಿದ್ದಾರೆ. ಆದರೆ, ಅದಕ್ಕೆ ಯಾವುದೇ ಪೂರಕ ಸಾಕ್ಷ್ಯ ಒದಗಿಸಿಲ್ಲ. ಹಾಗಾಗಿ, ಪ್ರಕರಣವನ್ನು ರದ್ದುಗೊಳಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ವಿವರಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಸುದೀರ್ಘ ರಜೆ ನಂತರವೂ ದೂರುದಾರ ಬಾಬು ಅವರನ್ನು ಸಂಸ್ಥೆ ಕೆಲಸಕ್ಕೆ ಸೇರಿಸಿಕೊಂಡಿದೆ. ಅವರೂ ಬೇರೊಂದು ಕಾಲೇಜಿಗೆ ವರ್ಗಾವಣೆ ಮಾಡಿದ್ದನ್ನು ಒಪ್ಪಿಕೊಂಡಿದ್ದರು. ಆನಂತರ ಅವರು 2024ರಲ್ಲಿಆಯೋಗದ ಮೊರೆ ಹೋಗಿ, ದೌರ್ಜನ್ಯ ಹಾಗೂ ಕಿರುಕುಳದ ಆರೋಪಗಳನ್ನು ಮಾಡಿದ್ದಾರೆ. ಆಯೋಗ ತನ್ನ ವ್ಯಾಪ್ತಿ ಇಲ್ಲದಿದ್ದರೂ ದೂರನ್ನು ಪುರಸ್ಕರಿಸಿ ನಗರ ಪೊಲೀಸ್ ಆಯುಕ್ತರಿಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿದೆ. ಹಾಗಾಗಿ, ಎಲ್ಲ ಪ್ರಕ್ರಿಯೆಗಳನ್ನು ರದ್ದುಗೊಳಿಸಬೇಕು'' ಎಂದು ಕೋರಿದ್ದರು.
ಇದನ್ನೂ ಓದಿ: ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ಸಲ್ಲಿಸಿರುವ ಬಿ-ವರದಿ ಪ್ರಶ್ನಿಸಿ ಇ.ಡಿ ಅರ್ಜಿ ಸಲ್ಲಿಸಬಹುದು: ವಿಶೇಷ ನ್ಯಾಯಾಲಯ
ಇದಕ್ಕೆ ಆಕ್ಷೇಪಿಸಿದ್ದ ದೂರುದಾರರ ಪರ ವಕೀಲರು, ''ತಮ್ಮ ಕ್ಷಕಿದಾರರು ಮರಳಿ ಸೇವೆಗೆ ಹೋದಾಗ ಅವರನ್ನು ಜಾತಿ ಹೆಸರಿನಲ್ಲಿ ನಿಂದಿಸಲಾಗಿದೆ. ಆಯೋಗ ಇದೀಗ ತನಿಖೆಗೆ ಆದೇಶ ನೀಡಿದ್ದು, ಆ ಪ್ರಕ್ರಿಯೆಯನ್ನು ಮುಂದುವರೆಸಲು ನ್ಯಾಯಾಲಯ ಅನುಮತಿಸಬೇಕು'' ಎಂದು ಪೀಠಕ್ಕೆ ಮನವಿ ಮಾಡಿದ್ದರು.
ಪ್ರಕರಣದ ಹಿನ್ನೆಲೆ : ಎಂಇಎಸ್ ಕಾಲೇಜಿನಲ್ಲಿ ಕಂಪ್ಯೂಟರ್ ಟೆಕ್ನೀಷಿಯನ್ ಆಗಿ ಸೇವೆ ಸಲ್ಲಿಸುತ್ತಿದ್ದ ಪಿ.ಬಾಬು ತಾನು ಪರಿಶಿಷ್ಟ ಜಾತಿಗೆ ಸೇರಿದವನಾಗಿರುವುದರಿಂದ ತನ್ನನ್ನು ಜಾತಿ ಆಧಾರದಲ್ಲಿ ತಾರತಮ್ಯ ಮಾಡಿ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಎಸ್ಸಿ/ಎಸ್ಟಿ ರಾಷ್ಟ್ರೀಯ ಆಯೋಗಕ್ಕೆ ದೂರು ನೀಡಿದ್ದರು. ಅದನ್ನು ಆಧರಿಸಿ ಆಯೋಗ ಶಾಲೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪ್ರಕ್ರಿಯೆ ಆರಂಭಿಸಿತ್ತು. ಇದನ್ನು ಪ್ರಶ್ನಿಸಿ ಕಾಲೇಜಿನವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: 'ಅತ್ಯಾಚಾರ ಕೇಸ್ಗಳ ತೀರ್ಪಿನಲ್ಲಿ ಸೂಕ್ಷ್ಮತೆ, ಜಾಗರೂಕತೆ ವಹಿಸಿ': ಹೈಕೋರ್ಟ್ಗಳಿಗೆ ಸುಪ್ರೀಂ ಎಚ್ಚರಿಕೆ