ಬೆಂಗಳೂರು : ದಿನಗೂಲಿ ಆಧಾರದಲ್ಲಿ ಬರೋಬ್ಬರಿ 30 ವರ್ಷಗಳ ಕಾಲ ಅರಣ್ಯ ವೀಕ್ಷಕ/ಚಾಲಕ ಉದ್ಯೋಗದಲ್ಲಿ ಕಾರ್ಯನಿರ್ವಹಿಸಿದ ದಿನಗೂಲಿ ನೌಕರನೋರ್ವನ ಸೇವೆ ಖಾಯಂಗೊಳಿಸಲು ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಮಂಜೂರಾತಿ ಹುದ್ದೆಯಲ್ಲಿ 10 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದ ಉದ್ಯೋಗಿಯ ಸೇವೆ ಖಾಯಮಾತಿಗೆ ಅರ್ಹನಾಗುತ್ತಾನೆ ಎಂದು ಮತ್ತೊಮ್ಮೆ ಪೀಠ ಸ್ಪಷ್ಟಪಡಿಸಿ ಆದೇಶ ಹೊರಡಿಸಿದೆ.
ತಮ್ಮ ಸೇವೆ ಖಾಯಂಗೊಳಿಸಲು ನಿರಾಕರಿಸಿ ಅರಣ್ಯ ಇಲಾಖೆ ನೀಡಿದ್ದ ಹಿಂಬರಹವನ್ನು ಪುರಸ್ಕರಿಸಿದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದ (ಕೆಎಟಿ) ಆದೇಶ ರದ್ದು ಪಡಿಸುವಂತೆ ಕೋರಿ ಆನೇಕಲ್ ವಲಯದಲ್ಲಿ ಅರಣ್ಯ ವೀಕ್ಷಕ (ಫಾರೆಸ್ಟ್ ವಾಚರ್) ಪಿ. ಜುಂಜಪ್ಪ (53) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರ ಪೀಠ ಈ ಆದೇಶ ಮಾಡಿದೆ.
ದಿನಗೂಲಿ ನೌಕರನಾಗಿರುವ ಜುಂಜಪ್ಪ ಅವರು ಖಾಯಂ ಉದ್ಯೋಗಿಗೆ ಸರಿ ಸಮಾನವಾಗಿ 30 ವರ್ಷ ನಿರಂತರವಾಗಿ ಅರಣ್ಯ ವೀಕ್ಷಕ/ಚಾಲಕ ಉದ್ಯೋಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಅರಣ್ಯ ಇಲಾಖೆ ಆತನ ಸೇವೆ ಖಾಯಂಗೊಳಿಸುವುದಕ್ಕೆ ನಿರಾಕರಿಸಿರುವ ಜೊತೆಗೆ 30 ವರ್ಷ ನಿರಂತರವಾಗಿ ಆತ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿಲ್ಲ.
ಜುಂಜಪ್ಪ ಅವರ ವೇತನ, ಸೇವಾ ದಾಖಲೆಗಳು ಮತ್ತು ಅರಣ್ಯ ಇಲಾಖೆಯ ಅಧಿಕೃತ ಪತ್ರ ವ್ಯವಹಾರಗಳನ್ನು ಮೌಲ್ಯಮಾಪನ ಮಾಡುವಲ್ಲಿ ಕೆಎಟಿ ವಿಫಲವಾಗಿದೆ. ಔಪಚಾರಿಕ ನೇಮಕ ಪತ್ರವನ್ನು ಹಾಜರುಪಡಿಸಿಲ್ಲ ಎಂಬ ಏಕೈಕ ಅಂಶವು ನಿರಂತರವಾಗಿ ಸೇವೆ ಸಲ್ಲಿಸಿರುವ ಉದ್ಯೋಗಿಯ ಸೇವಾ ಖಾಯಂಮಾತಿಯ ಕಾನೂನುಬದ್ಧ ಹಕ್ಕನ್ನು ನಿರಾಕರಿಸುವುದಕ್ಕೆ ಆಧಾರವಾಗುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದ್ದು, ಜುಂಜಪ್ಪ ಅವರನ್ನು ಸೇವೆಗೆ ಖಾಯಂಗೊಳಿಸುವಂತೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು? : ಅರ್ಜಿದಾರ ಜುಂಜಪ್ಪ ದಿನಗೂಲಿ ಆಧಾರದ ಮೇಲೆ 30 ವರ್ಷ ಕಾಲ ನಿರಂತರವಾಗಿ ಅರಣ್ಯ ವೀಕ್ಷಕ ಹಾಗೂ ಚಾಲಕನಾಗಿ ಕೆಲಸ ಮಾಡಿದ್ದರು. ಅಡೆ ತಡೆಯಿಲ್ಲದೆ ಕಾರ್ಯ ನಿರ್ವಹಿಸಿದ್ದರೂ ಆತನ ಸೇವೆ ಖಾಯಂಗೊಳಿಸಲು ನಿರಾಕರಿಸಿ 2016ರ ಆ. 29ರಂದು ಅರಣ್ಯ ಇಲಾಖೆ ಹಿಂಬರಹ ನೀಡಿತ್ತು. ಅದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೆಎಟಿ ವಜಾಗೊಳಿಸಿ 2019ರ ಜು.31ರಂದು ಆದೇಶಿಸಿತ್ತು. ಇದರಿಂದ ಜುಂಜಪ್ಪ ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಜುಂಜಪ್ಪ ಖಾಯಂ ನೌಕರರಂತೆ 30 ವರ್ಷ ಅರಣ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಸೇವೆ ಖಾಯಂಮಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಹಲವು ಆದೇಶದಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಜುಂಜಪ್ಪ ಪೂರೈಸುತ್ತಾರೆ. ಅವರ ಸೇವೆ ಖಾಯಂಗೊಳಿಸುವುದಕ್ಕೆ ನಿರಾಕರಿಸುವುದು ಸಂವಿಧಾನದ ಪರಿಚ್ಛೇದ 14 ಮತ್ತು 16ರ ಉಲ್ಲಂಘನೆಯಾಗಿದೆ. ಮಂಜೂರಾದ ಹುದ್ದೆಗಳಲ್ಲಿ 10 ವರ್ಷ ನಿರಂತರವಾಗಿ ಸೇವೆ ಸಲ್ಲಿಸಿದವರ ಸೇವೆ ಖಾಯಂಗೊಳಿಸಬೇಕು ಎಂದು ಈಗಾಗಲೇ ಹೈಕೋರ್ಟ್ ಧಾರವಾಡ ನ್ಯಾಯಾಲಯವು ಆದೇಶಿಸಿದೆ ಎಂದು ಪೀಠಕ್ಕೆ ವಿವರಿಸಿದರು. ಈ ಅಂಶವನ್ನು ಪರಿಗಣಿಸಿ ಪೀಠ ಈ ಆದೇಶ ನೀಡಿದೆ.
ಇದನ್ನೂ ಓದಿ : ಸರ್ಕಾರಿ ಜಮೀನು ಒತ್ತುವರಿ ಆರೋಪ: ಕುಮಾರಸ್ವಾಮಿಯನ್ನು ಪ್ರತಿವಾದಿಯಾಗಿಸಲು ಹೈಕೋರ್ಟ್ ಅನುಮತಿ - LAND ENCROACHMENT CASE