ಬೆಂಗಳೂರು: ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್ಎಫ್) ಬಳಸುತ್ತಿರುವ ಹೈ-ಆಲ್ಟಿಟ್ಯೂಡ್ ಡ್ರೋನ್ಗಳ ವಿನ್ಯಾಸ ಮತ್ತದರ ದತ್ತಾಂಶ (ಸಾಫ್ಟ್ವೇರ್) ಕದ್ದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದರೆ ತನಿಖಾ ಸಂಸ್ಥೆಗಳನ್ನು ನಿರಾಸೆಗೊಳಿಸಿದಂತಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಬಂಧನ ಭೀತಿ ಎದುರಿಸುತ್ತಿರುವ ಇಬ್ಬರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ.
ಪ್ರಕರಣ ಸಂಬಂಧ ಬಂಧನ ಭೀತಿಯಲ್ಲಿದ್ದು, ನಿರೀಕ್ಷಣಾ ಜಾಮೀನು ಕೋರಿ ಉತ್ತರ ಪ್ರದೇಶದ ಪ್ರಭಾತ್ ಶರ್ಮಾ ಮತ್ತು ಬೆಂಗಳೂರಿನ ಯಲಹಂಕದ ಆಕಾಶ್ ಎಂ.ಪಾಟೀಲ್ ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಪೀಠ ಆದೇಶಿಸಿ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕೆಂದ ಪೀಠ: ಇಂತಹ ಪ್ರಕರಣದಲ್ಲಿ ಕದ್ದ ದತ್ತಾಂಶದ ಪ್ರಮಾಣ ಪಡೆಯಬೇಕಿರುತ್ತದೆ. ಅರ್ಜಿದಾರ ಆರೋಪಿಗಳು ಪ್ರಕರಣದ ಸಾಕ್ಷ್ಯಗಳನ್ನು ನಾಶ ಮಾಡುವ ಮತ್ತು ತಿರುಚುವ ಸಾಮರ್ಥ್ಯ ಮತ್ತು ಇಚ್ಛೆ ಹೊಂದಿರುವುದನ್ನು ಕಾಣಬಹುದಾಗಿದೆ. ಸೈಬರ್ ಆರ್ಥಿಕ ಅಪರಾಧಗಳಲ್ಲಿ ವಿಶೇಷವಾಗಿ ತಾಂತ್ರಿಕ ಸ್ವರೂಪ ಹೊಂದಿರುವ ಅಪರಾಧಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸುವ ಅಗತ್ಯವಿರುವ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡುವಾಗ ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ಪೀಠ ಹೇಳಿದೆ.
ಅಲ್ಲದೆ, ಇಂತಹ ಪ್ರಕರಣಗಳ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡುವುದರಿಂದ ತನಿಖೆ ಮೇಲೆ ದುಷ್ಪರಿಣಾಮ ಬೀರಬಹುದು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದರೆ ಉಪಯುಕ್ತ ಮಾಹಿತಿ ಸಂಗ್ರಹಿಸಬಹುದು ಎಂಬ ನಿರೀಕ್ಷೆಯಲ್ಲಿರುವ ತನಿಖಾ ಸಂಸ್ಥೆಯನ್ನು ನಿರಾಶೆಗೊಳಿಸಿದಂತಾಗುತ್ತದೆ. ಅತ್ಯಾಧುನಿಕ ಸೈಬರ್ ಅಪರಾಧಗಳನ್ನು ಎದುರಿಸಲು ಕಾನೂನು ಜಾರಿ ಸಂಸ್ಥೆಗಳ ಸಾಮರ್ಥ್ಯವನ್ನು ಸಹ ದುರ್ಬಲಗೊಳಿಸಿದಂತಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ಬಿಎಸ್ಎಫ್ ಬಳಸುತ್ತಿರುವ ಹೈ-ಆಲ್ಟಿಟ್ಯೂಡ್ ಡ್ರೋನ್ಗಳ ವಿನ್ಯಾಸ ಮತ್ತದರ ದತ್ತಾಂಶವನ್ನು (ಸಾಫ್ಟ್ವೇರ್) ಕದ್ದ ಬಗ್ಗೆ ಅದನ್ನು ಅಭಿವೃದ್ಧಿಪಡಿಸುವ ಖಾಸಗಿ ಕಂಪನಿಯಾದ ನ್ಯೂಸ್ಪೇಸ್ ರಿಸರ್ಚ್ ಮತ್ತು ಟೆಕ್ನಾಲಜೀಸ್ ಪ್ರೈ.ಲಿಮಿಟೆಡ್ನ ಸಿಇಓ ಸಮೀರ್ ಜೋಷಿ ಅವರು 2024ರ ಡಿ.25ರಂದು ಈಶಾನ್ಯ ವಿಭಾಗದ ಸಿಎಇನ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಪ್ರಭಾತ್ ಶರ್ಮಾ ಮತ್ತು ಆಕಾಶ್ ಎಂ.ಪಾಟೀಲ್ ಅವರು ತಮ್ಮ ಕಂಪನಿಯ ಮಾಜಿ ಉದ್ಯೋಗಿಗಳಾಗಿದ್ದಾರೆ. ಅವರು ಸದ್ಯ ಕೆಲಸ ಮಾಡುತ್ತಿರುವ ಕಂಪನಿಯ ಲಾಭಕ್ಕಾಗಿ ಹೈ-ಆಲ್ಟಿಟ್ಯೂಡ್ ಡ್ರೋನ್ಗಳ ಸೋರ್ಸ್ ಕೋಡ್, ಮೂಲ ಕ್ಯಾಡ್ ಡಿಸೈನ್ ಮತ್ತು ಹಕ್ಕುಸ್ವಾಮ್ಯವನ್ನು ಕದ್ದಿದ್ದಾರೆ. ಜೊತೆಗೆ, ತಮ್ಮ ಅಪರಾಧ ಮರೆಮಾಚಲು ದತ್ತಾಂಶ ಅಳಿಸಿ ಹಾಕಲು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದರು.
ಇದರಿಂದ ಅರ್ಜಿದಾರ ಆರೋಪಿಗಳಿಗೆ ಬಂಧನ ಭೀತಿ ಎದುರಾಗಿತ್ತು. ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನುಗಳನ್ನು ವಜಾಗೊಳಿಸಿ ನಗರದ 56ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ 2025ರ ಜನವರಿ 13ರಂದು ಆದೇಶಿಸಿತ್ತು.
ಹಣಕಾಸು ಲಾಭಕ್ಕಾಗಿ ಆರೋಪಿಗಳ ಎಸಗಿರುವ ಕೃತ್ಯವು ರಾಷ್ಟ್ರದ ರಕ್ಷಣಾ ದತ್ತಾಂಶವನ್ನೇ ಅಸ್ಥಿರಗೊಳಿಸುವ ರೀತಿಯಲ್ಲಿದ್ದಾರೆ. ಹಾಗಾಗಿ, ರಾಷ್ಟ್ರದ ಭದ್ರತೆ ಮತ್ತು ಸುರಕ್ಷತೆ ಕಾಪಾಡುವ ಹಿತದೃಷ್ಟಿಯಿಂದ ಆರೋಪಿಗಳು ಕದ್ದ ದತ್ತಾಂಶವನ್ನು ಮೂಲದಿಂದ ಪಡೆಯಲು ಮತ್ತು ಅಪರಾಧದಲ್ಲಿ ಆರೋಪಿಗಳ ಪಾತ್ರ ಪತ್ತೆ ಹಚ್ಚಲು ತನಿಖೆ ಮುಂದುವರೆಯಬೇಕಿದೆ. ಅರ್ಜಿದಾರರ ವಿರುದ್ಧದ ಆರೋಪಗಳು ಗಂಭೀರವಾಗಿದ್ದು, ತನಿಖೆ ನಡೆಯುತ್ತಿರುವ ಕಾರಣ ನಿರೀಕ್ಷಣಾ ಜಾಮೀನು ನೀಡಲಾಗದು ಎಂದು ಸೆಷನ್ಸ್ ಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು. ಇದರಿಂದ ಆರೊಪಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಕೇತಗಾನಹಳ್ಳಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಆರೋಪ: ತಹಶೀಲ್ದಾರ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ಗೆ ಹೆಚ್ಡಿಕೆ ಅರ್ಜಿ