ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಆರ್ಸಿಬಿ ಮಾರ್ಕೆಂಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಬಿಡುಗಡೆಗೆ ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ಆದೇಶವನ್ನು ನಾಳೆಗೆ(ಗುರುವಾರ) ಕಾಯ್ದಿರಿಸಿದೆ.
ಇದೇ ವೇಳೆ ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ ಪ್ರೈವೇಟ್ ಲಿಮಿಟೆಡ್ನ ಮುಖ್ಯಸ್ಥ ಸುನೀಲ್ ಮ್ಯಾಥ್ಯೂ, ಕಿರಣ್ ಮತ್ತು ಶಮಂತ್ ಮಾವಿನಕೆರೆ ಅವರು ಸಲ್ಲಿಸಿರುವ ಮಧ್ಯಂತರ ಅರ್ಜಿಗಳ ತೀರ್ಪನ್ನು ನ್ಯಾಯಪೀಠ ಕಾಯ್ದಿರಿಸಿದೆ.
ನಿಖಿಲ್ ಸೋಸಲೆ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ ಆದೇಶ ಕಾಯ್ದಿರಿಸಿದ್ದು, ನಾಳೆ ಮಧ್ಯಾಹ್ನ 2.30ಕ್ಕೆ ಆದೇಶ ಪ್ರಕಟಿಸುವುದಾಗಿ ತಿಳಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ''ಆರ್ಸಿಬಿ ಗೆಲುವಿಗೆ ಸಂಬಂಧಿಸಿದಂತೆ ವಿಜಯೋತ್ಸವ ನಡೆಸುವ ಸಂಬಂಧ ಸರ್ಕಾರದ ಜೊತೆಗೆ ಯಾವುದೇ ಮನವಿಯನ್ನು ಮಾಡಿಲ್ಲ. ಆದರೆ, ಆರ್ಸಿಬಿ ಗೆಲುವಿಗೂ ಒಂದು ತಾಸು ಮುನ್ನ ಸಾಮಾಜಿಕ ಜಾಲಾತಾಣದಲ್ಲಿ ಪ್ರಕಟಿಸಿದ್ದಾರೆ. ಅನುಮತಿ ಇಲ್ಲದೆ ಇಡೀ ಜಗತ್ತನ್ನೇ ಆಹ್ವಾನಿಸಿದೆ. ಅದಕ್ಕೂ ಮುನ್ನ ಜೂನ್ 3ರ ಸಂಜೆ ಕೇವಲ ಮಾಹಿತಿ ಪತ್ರವನ್ನು ಮಾತ್ರ ನೀಡಿದೆ. ಇದು ನಿಯಮಗಳಿಗೆ ವಿರುದ್ದವಾಗಿದೆ'' ಎಂದು ಪೀಠಕ್ಕೆ ವಿವರಿಸಿದರು.
''ಅಲ್ಲದೆ, ಜೂನ್ 4ರಂದು ಬೆಳಗ್ಗೆ 7 ಗಂಟೆಗೆ ಆರ್ಸಿಬಿಯ ಸಾಮಾಜಿಕ ಮಾಧ್ಯಮಗಳಲ್ಲಿ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೂ ವಿಜಯೋತ್ಸವ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ. ಆರ್ಸಿಬಿ ಸಾಮಾಜಿಕ ಜಾಲತಾಣಕ್ಕೆ 28 ಲಕ್ಷ ಮಂದಿ (ಫಾಲೋವರ್ಸ್) ಅನುಸರಿಸುತ್ತಿದ್ದಾರೆ. ಅವರನ್ನೆಲ್ಲಾ ಅಹ್ವಾನಿಸಲಾಗಿದೆ. ಇದಕ್ಕೆ ಸರ್ಕಾರದಿಂದ ಯಾವುದೇ ಅನುಮತಿ ನೀಡಿರಲಿಲ್ಲ'' ಎಂದು ತಿಳಿಸಿದರು.
''ಜೊತೆಗೆ, ಅಭಿಮಾನಿಗಳನ್ನು ಹುರಿದುಂಬಿಸಲು ಬೆಳಗ್ಗೆ 8 ಗಂಟೆಗೆ ಮತ್ತೊಂದು ಪೋಸ್ಟ್ ಮಾಡಲಾಗಿದೆ. ಮತ್ತೊಂದು ವಿಡಿಯೋ ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದ್ದು, ಕ್ರೀಡಾಂಗಣ ಪ್ರವೇಶಕ್ಕೆ ಭಾಗವಹಿಸಬೇಕು ಎಂಬುದಾಗಿ ತಿಳಿಸಲಾಗಿದೆ. ಆದರೂ ಅರ್ಜಿದಾರರು ಸರ್ಕಾರವನ್ನು ಅಪವಾದ ಮಾಡುತ್ತಿದ್ದು, ಶುದ್ಧ ಹಸ್ತರಾಗಿ ಹೈಕೋರ್ಟ್ಗೆ ಬಂದಿಲ್ಲ. ಇದೊಂದು ಆರ್ಸಿಬಿಯ ಕಾರ್ಯವಾಗಿತ್ತು'' ಎಂದು ಹೇಳಿದರು.
''ಈ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರನ್ನು ಆಹ್ವಾನಿಸಿದ ಪರಿಣಾಮ ಸಾವಿರಾರು ಮಂದಿ ಜನ ಕ್ರೀಡಾಂಗಣಕ್ಕೆ ಜಮಾಯಿಸಿದ್ದರು. ಕ್ರೀಡಾಂಗಣ ಸೇರಿದಂತೆ ಎಲ್ಲ ದ್ವಾರಗಳ ನಿರ್ವಹಣೆ ಟಿಕೆಟ್ ವಿತರಣೆ ಕಾರ್ಯ ಆರ್ಸಿಬಿ ಮತ್ತು ಡಿಎನ್ಎಗೆ ಜವಾಬ್ದಾರಿಯಾಗಿತ್ತು. ಅನುಮತಿ ಕೇಳದೆ ನಡೆಸಿರುವ ಇಡೀ ಕಾರ್ಯಕ್ರಮ ಕಾನೂನುಬಾಹಿರ'' ಎಂದು ವಾದ ಮಂಡಿಸಿದರು.
ಸೋಸಲೆ ವಿದೇಶಕ್ಕೆ ಹೋಗುವವರಿದ್ದರು: ''ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸೋಸಲೆ ವಿದೇಶಕ್ಕೆ ಪಲಾಯನ ಮಾಡುವುದಕ್ಕೆ ಮುಂದಾಗಿದ್ದರು. ಮುಂಜಾನೆ ವಿಮಾನಕ್ಕೆ ರಾತ್ರಿ 11 ಗಂಟೆಯಲ್ಲಿ ವಿಮಾನಕ್ಕೆ ಟಿಕೆಟ್ ಖರೀದಿಸಿದ್ದರು. ಅವರು ಊಟ ಮಾಡುವಾಗ, ಮಲಗಿದ್ದಾಗ ಬಂಧಿಸಿಲ್ಲ. ತಪ್ಪಿಸಿಕೊಳ್ಳುತ್ತಿದ್ದ ಪರಿಣಾಮ ಬಂಧನ ಮಾಡಲಾಗಿದೆ. ಅದಕ್ಕೆ ಕಾರಣವನ್ನೂ ನೀಡಿದ್ದೇವೆ. ಮತ್ತಿಬ್ಬರು ಆರೋಪಿಗಳು ಹೊಸಕೋಟೆ ಬಳಿಯಲ್ಲಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಬಂಧಿಸಲಾಗಿದೆ'' ಎಂದು ಅಡ್ವೋಕೇಟ್ ಜನರಲ್ ತಿಳಿಸಿದರು.
ಮುಖ್ಯಮಂತ್ರಿಗಳ ಹೇಳಿಕೆಗೂ ಸೋಸಲೆ ಬಂಧನಕ್ಕೂ ಸಂಬಂಧವಿಲ್ಲ: ''ಅರ್ಜಿದಾರರ ಪರ ವಕೀಲರು ಮುಖ್ಯಮತ್ರಿಗಳ ಹೇಳಿಕೆಯಂತೆ ಅರ್ಜಿದಾರರನ್ನು ಬಂಧನ ಮಾಡಲಾಗಿದೆ ಎಂಬುದಾಗಿ ಹೇಳುತ್ತಿದ್ದಾರೆ. ಆದರೆ, ಮುಖ್ಯಮಂತ್ರಿಗಳ ಹೇಳಿಕೆಗೂ ಅರ್ಜಿದಾರರ ಬಂಧನಕ್ಕೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಕಾನೂನುಬಾಹಿರವಾಗಿ ಬಂಧಸಲಾಗಿದೆ ಎಂದಾದರೆ ಹೆಬಿಯಾಸ್ ಕಾರ್ಪಸ್ ಅರ್ಜಿಯ ಮೂಲಕ ನ್ಯಾಯಾಲಯದ ಮೆಟ್ಟಿಲೇರಬಹುದು'' ಎಂದು ವಿವರಿಸಿದರು.
ಕಂಪನಿಯು 2 ಬಿಲಿಯನ್ ಡಾಲರ್ ಹೊಂದಿದ್ದು, ಮತ್ತು ಅರ್ಜಿದಾರರು ಶ್ರೀಮಂತರಾಗಿದ್ದಾರೆ ಎಂಬುದಾಗಿ ಅವರು ಪೀಠಕ್ಕೆ ತಿಳಿಸಿದರು. ಇದಕ್ಕೆ ಪೀಠ, ಕಂಪನಿ ಶ್ರೀಮಂತರಾದರೆ ಉದ್ಯೋಗಿಗಳನ್ನು ಶ್ರೀಮಂತರು ಎಂಬುದಾಗಿ ಪರಿಗಣಿಸಲಾಗುವುದಿಲ್ಲ. ದೊಡ್ಡ ವ್ಯಕ್ತಿಗಳಾದರೂ ವೈಯಕ್ತಿಕ ಸ್ವಾತಂತ್ರ್ಯವನ್ನು ಪರಿಗಣನೆಗೆ ತೆಗೆದುಕೊಂಡಾಗ ಅದು ಅಪ್ರಸ್ತುತವಾಗಲಿದೆ ಎಂದು ತಿಳಿಸಿತು.
ಸರ್ಕಾರದ ವಾದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ''ಎಫ್ಐಆರ್ನಲ್ಲಿ ಆರ್ಸಿಬಿ ಮತ್ತು ಡಿಎನ್ಎ ಸಂಸ್ಥೆಗಳ ಹೆಸರನ್ನು ಉಲ್ಲೇಖಿಸಿದ್ದು, ನೌಕರರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಅವಕಾಶವಿಲ್ಲ. ಅಲ್ಲದೆ, ಬಂಧಿತರಿಗೆ ಮುಂಜಾನೆ 4 ಗಂಟೆಯ ವೇಳೆ ಬಂಧಿಸಿದ್ದು, ಅಂದು ಮಧ್ಯಾಹ್ನ ಅಂದರೆ 10 ತಾಸಿನ ಬಳಿಕ ಬಂಧನಕ್ಕೆ ಕಾರಣ ನೀಡಲಾಗಿದೆ. ಮುಖ್ಯಮಂತ್ರಿಗಳ ಸೂಚನೆಯ ಮೇರೆಗ ಬಂಧಿಸಿದ್ದಾರೆ. ವಿಜಯೋತ್ಸವಕ್ಕೆ ಉಪ ಮುಖ್ಯಮಂತ್ರಿಗಳು ಕೂಡ ಆಹ್ವಾನಿಸಿದ್ದಾರೆ. ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ಕ್ರಮ ಯಾಕಿಲ್ಲ'' ಎಂದು ಪ್ರಶ್ನಿಸಿದರು.
ಆರೋಪಿಗಳನ್ನು ಕಂಪನಿಯಿಂದ ಪ್ರತ್ಯೇಕವಾಗಿ ನೋಡಬೇಕು: ಈ ವೇಳೆ, ಆರೋಪಿಗಳನ್ನು ಕಂಪನಿಯ ವ್ಯಕ್ತಿಗಳು ಎಂಬುದಾಗಿ ನೋಡುವುದಕ್ಕೆ ಬದಲಾಗಿ, ಸಾಮಾನ್ಯ ವ್ಯಕ್ತಿಗಳನ್ನಾಗಿ ನೋಡಬೇಕು. ತನಿಖೆಯ ಬಳಿಕ ಘಟನೆಗೆ ಯಾರು ಜವಾಬ್ದಾರರು ಎಂಬುದು ಗೊತ್ತಾಗಲಿದೆ ಎಂದು ಪೀಠ ಹೇಳಿತು.
ಇದನ್ನೂ ಓದಿ: ಕಾಲ್ತುಳಿತ ದುರಂತ: 14 ಮಂದಿ ಗಾಯಾಳುಗಳ ಹೇಳಿಕೆ ದಾಖಲಿಸಿಕೊಂಡ ಜಿಲ್ಲಾಧಿಕಾರಿ ಜಗದೀಶ್