ಸಕಲೇಶಪುರ (ಹಾಸನ): ಭಾರಿ ಗಾಳಿ, ಸಿಡಿಲು ಸಹಿತ ಮಳೆಯಿಂದ ವಿದ್ಯುತ್ ಕಂಬ ಬಿದ್ದು ಚಲಿಸುತ್ತಿದ್ದ ಆಟೋವೊಂದು ಜಖಂಗೊಂಡಿದ್ದು, ಅದೃಷ್ಟವಷಾತ್ ಚಾಲಕ ಅಪಾಯದಿಂದ ಪಾರಾದ ಘಟನೆ ತಾಲೂಕಿನ ಕುನಿಗನಹಳ್ಳಿ ಸಮೀಪ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಸಕಲೇಶಪುರ ತಾಲೂಕಿನ ಕುನಿಗನಹಳ್ಳಿ ಗ್ರಾಮದ ದಿಲೀಪ್ ಎಂಬವರು ಆಟೋದಲ್ಲಿ ಕೂಲಿ ಕಾರ್ಮಿಕರನ್ನು ಬಿಡಲು ಆಲೂರು ತಾಲೂಕಿನ ಬೋಸ್ಮಾನಹಳ್ಳಿಗೆ ತೆರಳುತ್ತಿದ್ದರು. ಮಧ್ಯಾಹ್ನ 2 ಗಂಟೆಯ ವೇಳೆಗೆ ಸುರಿದ ಭಾರಿ ಮಳೆಗೆ ರಸ್ತೆ ಬದಿಯಿದ್ದ ವಿದ್ಯುತ್ ಕಂಬವೊಂದು ರಸ್ತೆಗೆ ಬಿದ್ದು ಆಟೋ ಮುಂಭಾಗಕ್ಕೆ ಹೊಡೆದಿದೆ.
ಸಿಸಿಟಿವಿಯಲ್ಲಿ ಘಟನೆ ಸೆರೆ: ಅದೃಷ್ಟವಷಾತ್ ಆಟೋ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾನೆ. ಆಟೋ ಹಿಂಬದಿ ಕುಳಿತಿದ್ದ ಇಬ್ಬರು ಮಹಿಳೆಯರು ತುಸು ಗಾಯಗೊಂಡಿದ್ದು, ಬಾಳ್ಳುಪೇಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಬಿದ್ದ ವಿದ್ಯುತ್ ಕಂಬದಿಂದ ಆಟೋ ಭಾಗಶಃ ಜಖಂಗೊಂಡಿದೆ. ಸುರಿಯುತ್ತಿರುವ ಮಳೆಯಲ್ಲಿ ವಿದ್ಯುತ್ ಕಂಬ ಆಟೋ ಮೇಲೆ ಬಿದ್ದ ದೃಶ್ಯ ಪಕ್ಕದ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್ ಎನ್ನುವಂತಿದೆ.

ವಿದ್ಯುತ್ ಕಂಬ ಉರುಳಿದಾಗ ವಿದ್ಯುತ್ ತಂತಿ ತುಂಡರಿಸದ ಕಾರಣ ಹೆಚ್ಚಿನ ಅಪಾಯವಾಗಿಲ್ಲ. ಮಳೆ ಕೇವಲ ಅರ್ಧ ಗಂಟೆ ಕಾಲ ಮಾತ್ರ ಸುರಿದಿದ್ದು, ಗಾಳಿಯ ಆರ್ಭಟದಿಂದ ಘಟನೆ ಸಂಭವಿಸಿದೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.

ಸಿಡಿಲಿಗೆ ಹಸುಗಳು ಬಲಿ: ಇದೇ ವೇಳೆ, ಸಿಡಿಲು ಬಡಿದು ಎರಡು ಹಸುಗಳು ಸಾವನ್ನಪ್ಪಿರುವ ಘಟನೆ ಕುನಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೇಯಲು ಬಿಟ್ಟಿದ್ದ ಜಾನುವಾರುಗಳು ಸಿಡಿಲಿಗೆ ಬಲಿಯಾಗಿವೆ. ಇವು ಆನಂದ್ ಎಂಬವರಿಗೆ ಸೇರಿದ ಹಸುಗಳಾಗಿದ್ದು, ಸರ್ಕಾರದಿಂದ ಪರಿಹಾರ ನೀಡಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಿರುಗಾಳಿ ಮಳೆಗೆ ಹಾರಿಹೋದ ಸರ್ಕಾರಿ ಶಾಲೆಯ ಮೇಲ್ಛಾವಣಿ ಶೀಟ್ಗಳು: ದೃಶ್ಯ ಸೆರೆ