ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು 1 ರಿಂದ 7 ಪಾಲಿಕೆಗಳವರೆಗೆ ವಿಭಜನೆ ಮಾಡಲು ಅವಕಾಶ ಕಲ್ಪಿಸುವ 'ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ' ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಂಕಿತ ಹಾಕಿದ್ದಾರೆ.
ಇಂದು ಅಧಿಕೃತ ರಾಜ್ಯಪತ್ರ ಹೊರ ಬಿದ್ದಿದೆ. ಆ ಮೂಲಕ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಪ್ರಾಧಿಕಾರ ರಚನೆಯಾಗಲಿದೆ. ಅದರಡಿ ಬಿಬಿಎಂಪಿ ವಿಭಜನೆ ಮಾಡಿ ವಿವಿಧ ಪಾಲಿಕೆಗಳನ್ನು ರಚಿಸಲು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದ ಅಡಿ ಅವಕಾಶ ದೊರೆತಿದೆ.
ಬಜೆಟ್ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಅಂಗೀಕಾರ ಮಾಡಿ ಕಳುಹಿಸಿದ್ದ ವಿಧೇಯಕವನ್ನು ವಿವರಣೆ ಕೋರಿ ರಾಜ್ಯಪಾಲರು ಮಾರ್ಚ್ 27 ರಂದು ರಾಜ್ಯ ಸರ್ಕಾರಕ್ಕೆ ವಾಪಸು ಕಳುಹಿಸಿದ್ದರು. ವಿಧೇಯಕ ಸಂಬಂಧ ಹೆಚ್ಚುವರಿ ವಿವರಣೆಗಳನ್ನು ಕೇಳಿ ಮರು ಸಲ್ಲಿಕೆ ಮಾಡಲು ವಾಪಸು ಕಳುಹಿಸಿದ್ದರು.

ರಾಜ್ಯಪಾಲರಿಗೆ ಮತ್ತೆ ವಾಪಸ್ ಕಳುಹಿಸಲಾಗಿತ್ತು: ದೆಹಲಿಯಲ್ಲಿ ಏಳು ಪಾಲಿಕೆಗಳಾಗಿ ಪ್ರತ್ಯೇಕಗೊಳಿಸಿರುವ ಪ್ರಯೋಗ ವಿಫಲವಾಗಿದೆ. ಜೊತೆಗೆ ಇದು ಸಂವಿಧಾನದ 74ನೇ ತಿದ್ದುಪಡಿಗೆ ವಿರೋಧವಿದ್ದು, ಆಡಳಿತ ವಿಕೇಂದ್ರೀಕರಣದ ಬದಲು ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡಿದಂತಾಗಲಿದೆ. ಇದರ ಜೊತೆಗೆ ಟನರ್ ರಸ್ತೆ, ಸ್ಕೈ ಡೆಕ್, ಎಕ್ಸ್ಪ್ರೆಸ್ ಕಾರಿಡಾರ್ನಂತಹ ಯೋಜನೆಗಳಿಗೆ ಅವರ ವಿರೋಧವಿದೆ. ಹೀಗಾಗಿ ಇದನ್ನು ಪುನರ್ ಪರಿಶೀಲಿಸಿ ವಿವರಣೆ ನೀಡಿ ಎಂದು ರಾಜ್ಯಪಾಲರು ವಾಪಸು ಕಳುಹಿಸಿದ್ದರು. ವಿಧೇಯಕ ಸಂಬಂಧ ರಾಜ್ಯ ಸರ್ಕಾರವು ಸಂಪೂರ್ಣ ವಿವರಣೆಯೊಂದಿಗೆ ರಾಜ್ಯಪಾಲರಿಗೆ ಪುನಃ ಅನುಮೋದನೆಗೆ ಕಳುಹಿಸಲಾಗಿತ್ತು.
1.5ಕೋಟಿಗೆ ತಲುಪಿದ ಬೆಂಗಳೂರು ಜನಸಂಖ್ಯೆ: ಬೆಂಗಳೂರಿನ ಜನಸಂಖ್ಯೆ ಸುಮಾರು 1.5 ಕೋಟಿ ತಲುಪಿದೆ. 786 ಚ.ಕಿಮೀ ವಿಸ್ತೀರ್ಣದ ಬೆಂಗಳೂರು ನಗರವು ವಿಸ್ತರಣೆಯಾಗುತ್ತಿದೆ. ಒಬ್ಬ ಮೇಯರ್ ಮತ್ತು ಆಯುಕ್ತರಿಂದ ನಿರ್ವಹಣೆ ಮಾಡಲಾಗದು. ಆಡಳಿತ ಹತೋಟಿಗೆ ಸಿಗುತ್ತಿಲ್ಲ. ಪಾಲಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಪಾರದರ್ಶಕತೆ ಮತ್ತು ಸಮರ್ಥ ಆಡಳಿತದ ದೃಷ್ಟಿಯಿಂದ ಅಧಿಕಾರ ವಿಕೇಂದ್ರೀಕರಣ ಆಗಬೇಕು. ಹೀಗಾಗಿ, ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಅಗತ್ಯವಿದೆ ಎಂದು ವಿಧೇಯಕದಲ್ಲಿ ಕರ್ನಾಟಕ ಸರ್ಕಾರ ತನ್ನ ನಿಲುವು ತಿಳಿಸಿತ್ತು.
ರಾಜ್ಯ ಸರ್ಕಾರದ ಸ್ಪಷ್ಟೀಕರಣದ ಬಳಿಕ ಅಂಕಿತ: ಇದೀಗ ರಾಜ್ಯಪಾಲರು ವಿಧೇಯಕಕ್ಕೆ ಅಂಕಿತ ಹಾಕಿದ್ದು, ಇಂದು ರಾಜ್ಯ ಸರ್ಕಾರವು ಅಧಿಕೃತ ರಾಜ್ಯಪತ್ರ ಹೊರಡಿಸಿದೆ.
ಮಾರ್ಚ್ ನಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಸರ್ಕಾರ ಮಂಡಿಸಿದಾಗ, ಪ್ರತಿಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು.
ಇದನ್ನು ಓದಿ: ಮಹದೇಶ್ವರ ಬೆಟ್ಟ ಇನ್ಮುಂದೆ ಪಾನ ಮುಕ್ತ: ಸಿಎಂ ಸಿದ್ದರಾಮಯ್ಯ ಘೋಷಣೆ