ಚಾಮರಾಜನಗರ: ಕಾರು, ಬೈಕ್, ಲಾರಿ ನಡುವೆ ಅಪಘಾತ: ಮೂವರು ಬಾಲಕರು ಸಾವು
ಚಾಮರಾಜನಗರದ ಬೈಪಾಸ್ನಲ್ಲಿ ಶನಿವಾರ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಬಾಲಕರು ಸಾವನ್ನಪ್ಪಿದ್ದಾರೆ.

Published : September 7, 2025 at 9:02 AM IST
ಚಾಮರಾಜನಗರ: ಲಾರಿ, ಕಾರು ಹಾಗೂ ಬೈಕ್ ನಡುವೆ ಶನಿವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಇನ್ನಿಬ್ಬರು ಬಾಲಕರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚಾಮರಾಜನಗರದ ಗಾಳಿಪುರ ಬೈಪಾಸ್ ಬಳಿ ಈ ಘಟನೆ ಸಂಭವಿಸಿದೆ.
ಘನನೆಯಲ್ಲಿ ಚಾಮರಾಜನಗರದ ಕೆ.ಪಿ. ಮೊಹಲ್ಲಾದ ಮೆರಾನ್ (10) ಸ್ಥಳದಲ್ಲೇ ಮೃತಪಟ್ಟಿದ್ದ. ಚಿಂತಾಜನಕ ಸ್ಥಿತಿಯಲ್ಲಿದ್ದ ಮೆರಾನ್ನ ಅಣ್ಣ ಫೈಜಲ್ ಹಾಗೂ ರಿಯಾಸ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾರೆ. ಇನ್ನೋರ್ವ ಬಾಲಕ ಅದಾನ್ ಪಾಷಾ ಎಂಬಾತನಿಗೆ ಚಿಕಿತ್ಸೆ ಮುಂದುವರೆದಿದೆ. ಘಟನೆಯಲ್ಲಿ, ಕಾರಿನ ಚಾಲಕ ಶ್ರೀಕಾಂತ್ (22) ಹಾಗೂ ಮಣಿಕಾಂತ್ (45) ಎಂಬ ಇಬ್ಬರಿಗೂ ಗಾಯಗಳಾಗಿದ್ದು, ಅವರಿಗೆ ಸಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶನಿವಾರ ಮಧ್ಯಾಹ್ನ ಬೈಕ್ನಲ್ಲಿ ನಾಲ್ವರು ಬಾಲಕರು ತೆರಳುತ್ತಿದ್ದಾಗ ಬೆಂಗಳೂರಿನಿಂದ ತಾಳವಾಡಿಗೆ ತೆರಳುತ್ತಿದ್ದ ಕಾರು ಗುದ್ದಿದ ಪರಿಣಾಮ, ಲಾರಿ ಕೆಳ ಭಾಗದಲ್ಲಿ ಬೈಕ್ ಸಿಲುಕಿ ಅಪಘಾತ ನಡೆದಿತ್ತು. ಕಾರಿನಲ್ಲಿದ್ದವರು ಸೊಲ್ಲಾಪುರದ ಮೂಲದವರಾಗಿದ್ದು, ಖಾಸಗಿ ಟ್ಯಾಕ್ಸಿ ಮೂಲಕ ತಮಿಳುನಾಡಿನ ತಾಳವಾಡಿಗೆ ತೆರಳುತ್ತಿದ್ದರು.
ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಚಾಮರಾಜನಗರ ಟ್ರಾಫಿಕ್ ಠಾಣೆ ಪೊಲೀಸರು ಮೂರು ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.
ಪ್ರತ್ಯೇಕ ಅಪಘಾತ - ಬೈಕ್ಗಳ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಯುವಕರು ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಸಿರವಾರ-ರಾಯಚೂರು ಸಂಪರ್ಕಿಸುವ ರಸ್ತೆಯ ಕಲಮಲಾ ಗ್ರಾಮದ ಹೊರವಲಯದ ಬಳಿ ಶುಕ್ರವಾರ ಸಂಭವಿಸಿತ್ತು.
ಮೃತರನ್ನು ಬೈಕ್ ಸವಾರರಾದ ಅತ್ತನೂರು ಗ್ರಾಮದ ತಾಜುದ್ದೀನ್ (20) ಹಾಗೂ ಬಂದೇನವಾಜ್ (19) ಎಂದು ಗುರುತಿಸಲಾಗಿದೆ. ಗಾಯಗೊಂಡ ಮತ್ತಿಬ್ಬರು ಸವಾರರು ಸಿರವಾರ ಪಟ್ಟಣದವರಾಗಿದ್ದಾರೆ.
ತಾಜುದ್ದೀನ್ ಹಾಗೂ ಬಂದೇನವಾಜ್ ಅತ್ತನೂರಿನಿಂದ ಬೈಕ್ನಲ್ಲಿ ಈದ್ ಮಿಲಾದ್ ಹಬ್ಬದ ಮೆರವಣಿಗೆ ಹಾಗೂ ಕಾರ್ಯಕ್ರಮ ವೀಕ್ಷಣೆಗೆಂದು ಹೋಗುತ್ತಿದ್ದಾಗ, ಅತ್ತ ರಾಯಚೂರಿನಿಂದ ಬರುತ್ತಿದ್ದ ಬೈಕ್ ಸವಾರರ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ತಾಜುದ್ದೀನ್ ತೀವ್ರ ಗಾಯದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಬಂದೇನವಾಜ್ನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಅಸುನೀಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಬೈಕ್ ಸವಾರರು ಇಬ್ಬರೂ ಗಾಯಗೊಂಡಿದ್ದು, ಒಬ್ಬರಿಗೆ ರಿಮ್ಸ್ ಆಸ್ಪತ್ರೆ ಮತ್ತೊಬ್ಬರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಯಚೂರು ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೇರಳದಲ್ಲಿ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಕರ್ನಾಟಕದ ಆರ್ಟಿಸಿ ಬಸ್; 6 ಮಂದಿ ಸಾವು

