ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಬಗರ್ ಹುಕುಂ ಭೂಮಿಗಾಗಿ ಒಂದು ಕಾಲದಲ್ಲಿ ಹೋರಾಟ ನಡೆಯುತ್ತಿತ್ತು. ಇದು ಪ್ರತಿ ಚುನಾವಣೆ ಪ್ರಚಾರದ ವಿಷಯವಾಗಿರುತ್ತಿತ್ತು. ಆದರೆ, ಈಗ ಇದೇ ಅನ್ನದಾತರು ಅರಣ್ಯ ಇಲಾಖೆ ನೀಡುತ್ತಿರುವ ನೋಟಿಸ್ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ತುಂಡು ಭೂಮಿ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಾರೆ.
ಹೌದು, ಸುಮಾರು 50 - 60 ವರ್ಷಗಳ ಹಿಂದೆ ರಾಜ್ಯ ಸರ್ಕಾರದ ಕಂದಾಯ ಇಲಾಖೆ ನೀಡಿದ ಭೂಮಿಯ ಹಕ್ಕುಪತ್ರದ ವಿರುದ್ಧ ಅರಣ್ಯ ಇಲಾಖೆ ನೋಟಿಸ್ ನೀಡಿ ರೈತರ ಎದೆ ಬಡಿತ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ಸಾಗರ, ಹೊಸನಗರ, ತೀರ್ಥಹಳ್ಳಿ ಭಾಗದ ರೈತರಿಗೆ ಇಲ್ಲಿನ ಡಿಎಫ್ಓಗಳು ನೋಟಿಸ್ ನೀಡಿ ರೈತರ ಭೂಮಿಗೆ ಟ್ರಂಚ್ ಹೊಡೆಯುವ ಕಾರ್ಯ ಮಾಡುತ್ತಿದ್ದಾರೆ. 60 - 70 ವರ್ಷಗಳಿಂದ ಭೂಮಿಯ ಖಾತೆ ಪಡೆದು, ಪಾಣಿ ಪಡೆದು ಬ್ಯಾಂಕ್ ಸಾಲ ಪಡೆದು ಮನೆ ಕಟ್ಟಿಕೊಂಡು ನೆಮ್ಮದಿ ಜೀವನ ನಡೆಸುತ್ತಿದ್ದ ರೈತರಿಗೆ ಈಗ ನೋಟಿಸ್ ಜಾರಿಯಾಗಿದೆ.
ಶರಾವತಿ, ಚಕ್ರಾ, ಸಾವೆಹಕ್ಲು, ತುಂಗಭದ್ರಾ ಮುಳುಗಡೆ ಸಂತ್ರಸ್ತರಿಗೂ ನೋಟಿಸ್: ನಾಡಿಗೆ ಬೆಳಕು ನೀಡಲು ಸಂತ್ರಸ್ತರಾದ ಶರಾವತಿ ಹಿನ್ನೀರು ಸೇರಿದಂತೆ ಸಾವೆಹಕ್ಲು, ತುಂಗಭದ್ರಾ ಡ್ಯಾಂ ನಿರ್ಮಾಣದಿಂದ ಸಂತ್ರಸ್ತರಾದವರಿಗೆ ಕಂದಾಯ ಇಲಾಖೆ ನೀಡಿದ್ದ ಭೂಮಿ ಅರಣ್ಯ ಇಲಾಖೆಯದ್ದು ಎಂದು ನೋಟಿಸ್ ನೀಡಿದೆ. ಜಿಲ್ಲೆಯಲ್ಲಿ ಸುಮಾರು 25 ಸಾವಿರ ರೈತರಿಗೆ ನೋಟಿಸ್ ನೀಡಲಾಗಿದೆ.
ಶರಾವತಿ ಸಂತ್ರಸ್ತರು ಭೂಮಿ ಸಾಗುವಳಿ ಪತ್ರ ದೊರೆತ ಮೇಲೆ 1958ರಿಂದಲೂ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಕಂದಾಯ ಭೂಮಿಗೆ ಸರ್ಕಾರ ತಹಶೀಲ್ದಾರ್ ಕಡೆಯಿಂದ ಹಕ್ಕುಪತ್ರ ನೀಡಿದೆ. 1960, 1970, 1980, 1985, 1990, 2000, 2010ನೇ ಇಸವಿ ತನಕ ಹಕ್ಕುಪತ್ರ ನೀಡಲಾಗಿದೆ. ಹಕ್ಕುಪತ್ರ ಪಡೆದವರು ಖಾತೆ, ಪಾಣಿ ಮಾಡಿಕೊಂಡು ಬ್ಯಾಂಕ್ನಲ್ಲಿ ಸಾಲ ಪಡೆದು ಮನೆ ಕಟ್ಟಿಕೊಂಡಿದ್ದಾರೆ. ಈಗ ಅರಣ್ಯದ ಜಾಗ ಎಂದು ನೋಟಿಫಿಕೇಷನ್ ಮಾಡಿಕೊಳ್ಳಲಾಗಿದೆ. ಶಿವಮೊಗ್ಗ ಮಾತ್ರಲ್ಲದೇ ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಕೋಲಾರದಲ್ಲೂ ರೈತರಿಗೆ ನೋಟಿಸ್ ಬಂದಿವೆ.
ನೋಟಿಸ್ ಹಿಂಪಡೆಯುವಂತೆ ಮನವಿ: 2.18 ಲಕ್ಷ ಎಕರೆ ಭೂಮಿಯನ್ನು ಕಂದಾಯ ಇಲಾಖೆ ಅರಣ್ಯ ಇಲಾಖೆಗೆ ವಹಿಸಿಲ್ಲ, ಇಂಡಿಕರಣವಾಗಿಲ್ಲ ಎಂದು ಕೋರ್ಟ್ಗೆ ಹೋಗಿದ್ದರು. ಆಗ ರಾಜ್ಯ ಸರ್ಕಾರ ಕೋರ್ಟ್ ಮುಂದೆ ವಸ್ತುಸ್ಥಿತಿ ಮನವರಿಕೆ ಮಾಡಲು ವಿಫಲವಾಗಿತ್ತು. 120 ವರ್ಷಗಳ ಹಿಂದಿದ್ದ ಜನಸಂಖ್ಯೆ ಈಗ ಶೇ.50 ರಷ್ಟು ಏರಿಕೆಯಾಗಿದೆ. ನಂತರ ದೇವರಾಜ ಅರಸು, ಬಂಗಾರಪ್ಪ ಅವರು ಭೂಮಿ ನೀಡಿದ್ದರು. ಅಕ್ರಮ ಸಕ್ರಮದಡಿ ಮನೆ ನಿರ್ಮಾಣ ಮಾಡಿಕೊಂಡವರಿಗೆ ಹಕ್ಕುಪತ್ರ ನೀಡಲಾಗಿತ್ತು. ಇದರಿಂದ ಗ್ರಾಮಗಳು ದೊಡ್ಡ ಸಂಖ್ಯೆಯಲ್ಲಿ ಬೆಳೆದಿವೆ. ಮಹಾರಾಜರು ನೀಡಿದ ಭೂಮಿಯನ್ನು ಅರಣ್ಯ ಮಾಡಿ ಎಂದು ಸೂಚಿಸಿದ್ದು, ನೋಟಿಸ್ ವಾಪಸ್ ಪಡೆಯುವಂತೆ ಸಾಕಷ್ಟು ಸಲ ಮನವಿ ಸಲ್ಲಿಸಲಾಗಿದೆ ಎಂದು ರೈತರು ಹೇಳಿದ್ದಾರೆ.
ಅರಣ್ಯ ಇಲಾಖೆ ನೋಟಿಸ್ ಬಗ್ಗೆ ರೈತರು ಹೇಳುವುದಿಷ್ಟು: ರೈತ ಹನುಮಂತು ಮಾತನಾಡಿ, "1976 ರಿಂದಲೂ ಸರ್ಕಾರಗಳು ರೈತರಿಗೆ ಭೂ ಹಕ್ಕನ್ನು ನೀಡಿ ಹಕ್ಕುಪತ್ರ ನೀಡಿವೆ. ಅದರಂತೆ ರೈತರು ತಮ್ಮ ಹೆಸರಿಗೆ ಭೂ ನೋಂದಣಿ ಮಾಡಿಕೊಂಡು ಖಾತೆ - ಪಾಣಿ ಮಾಡಿಕೊಂಡು ಉಳುಮೆ ಮಾಡಿಕೊಂಡು ಬಂದಿದ್ದಾರೆ. ಅರಣ್ಯ ಇಲಾಖೆ ನೋಟಿಸ್ ಕುರಿತು ಉಪ ವಿಭಾಗಾಧಿಕಾರಿಗಳ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡು ರೈತರಿಗೆ ನ್ಯಾಯ ಒದಗಿಸಬೇಕಿದೆ" ಎಂದು ವಿನಂತಿಸಿದರು.
ರೈತ ಗಂಗಾಧರಪ್ಪ ಮಾತನಾಡಿ, "1994ರಲ್ಲಿ ನಮಗೆ ಭೂಮಿ ನೀಡಲಾಗಿದೆ. ಸಿಕ್ಕ ಭೂಮಿಯಲ್ಲೇ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಭೂಮಿ ನಂಬಿಕೊಂಡು ಲಕ್ಷಾಂತರ ರೂ. ಸಾಲ ಮಾಡಿದ್ದೇವೆ. ಈಗ ನೋಟಿಸ್ ನೀಡಿ ಭೂಮಿ ಕಸಿದುಕೊಂಡರೆ ನಮ್ಮ ಗತಿ ಏನು? ನಮ್ಮ ಜಮೀನನ್ನು ನಮಗೆ ಉಳಿಸಿಕೊಡಿ" ಎಂದು ಮನವಿ ಮಾಡಿದರು.
ಇದ್ದಕ್ಕಿದ್ದಂತೆ ಟ್ರಂಚ್ ಹೊಡೆದು ಹೋದರೆ ನಾವೇನು ಮಾಡೋದು: ಹೊಳೆಹೊನ್ನೂರು ಹೋಬಳಿ ತಡಸದ ರೈತ ಶಿವಾಜಿ ರಾವ್ ಮಾತನಾಡಿ, "ನಮ್ಮ ತಂದೆಯ ಕಾಲದಿಂದಲೂ 3 ಎಕರೆ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದೇವೆ. ಇದರಲ್ಲಿ ತೋಟ ಇದೆ. ಮಾವಿನ ಮರ ಇದೆ. ಈಗ ಏಕಾಏಕಿ ಅರಣ್ಯ ಇಲಾಖೆಯವರು ಬಂದು ನಮ್ಮ ಜಮೀನಿನಲ್ಲಿ ಟ್ರಂಚ್ ಹೊಡೆದು ಹೋಗಿದ್ದಾರೆ. ನಮಗೆ ನಮ್ಮ ಭೂಮಿ ನೀಡಬೇಕು. ಇಲ್ಲವಾದಲ್ಲಿ ಅವರು ಹೊಡೆದಿರುವ ಟ್ರಂಟ್ನಲ್ಲಿ ನಾನು ಉಳುಮೆ ಮಾಡುತ್ತೇನೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷರ ಮಾತು ಹೀಗಿದೆ: ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಮಾತನಾಡಿ, "3.62 ಲಕ್ಷ ಎಕರೆ ಕಂದಾಯ ಭೂಮಿಯನ್ನು ಅರಣ್ಯ ಭೂಮಿಯನ್ನಾಗಿ ಮಾಡಲು ಹೊರಟಿದ್ದಾರೆ. ಗಿರೀಶ್ ಆಚಾರ್ ಎಂಬುವರು ಹೈಕೋರ್ಟ್ನಲ್ಲಿ ನಮ್ಮ ಭೂಮಿಯನ್ನು ಸಂಪೂರ್ಣ ಇಂಡಿಕರಣ ಮಾಡಬೇಕೆಂದು ಕೇಸು ಹಾಕಿದ್ದಾರೆ. ಈಗ 1.82 ಲಕ್ಷ ಎಕರೆಭೂಮಿ ಇಂಡಿಕರಣ ಮಾಡಿದ್ದಾರೆ. ಇನ್ನೂ 1.50 ಲಕ್ಷ ಎಕರೆ ಭೂಮಿ ಇಂಡಿಕರಣ ಮಾಡಬೇಕಿದೆ. ಈಗ ಇಂಡಿಕರಣ ಭೂಮಿಗೆ, ಭೂಮಿ ನಮ್ಮದು ಕಾನೂನು ಬಾಹಿರವಾಗಿ ಭೂಮಿ ಪಡೆದುಕೊಂಡಿದ್ದೀರಿ ಎಂದು ರೈತರಿಗೆ ನೋಟಿಸ್ ನೀಡಲಾಗುತ್ತಿದೆ" ಎಂದು ಹೇಳಿದರು.
ಸರ್ಕಾರವೇ ಸಾಗುವಳಿ ಚೀಟಿ ನೀಡಿತ್ತು: "ಹಿಂದೆ ಸರ್ಕಾರ, ತಹಶೀಲ್ದಾರ್ ಸಾಗುವಳಿ ಚೀಟಿಯನ್ನು ನೀಡಿದ್ದರು. ವಿಪರ್ಯಾಸವೆಂದರೆ, ಇದೇ ಸರ್ಕಾರ ರೈತರಿಗೆ ಭೂಮಿ ಹಕ್ಕಿನ ದಾಖಲೆ ತೆಗೆದುಕೊಂಡು ಬನ್ನಿ ಎಂದು ನೋಟಿಸ್ ನೀಡುತ್ತಿದೆ. ಎಲ್ಲ ರೈತರು ಕೋರ್ಟ್ಗೆ ಹೋಗಬೇಕಿದೆ. ಇಲ್ಲವಾದಲ್ಲಿ ಪ್ರತಿವಾದಿ ಯಾರು ಇಲ್ಲ ಅಂತ ಕೇಸು ವಜಾ ಮಾಡುತ್ತಾರೆ. ಕೋರ್ಟ್ಗೆ ಹೋಗಿ ಹಕ್ಕುಪತ್ರ, ಮಿಟೇಷನ್, ಬ್ಯಾಂಕ್ ಸಾಲ ಪತ್ರ ಸೇರಿದಂತೆ ಎಲ್ಲವನ್ನು ನೀಡಬೇಕು. ಎಂಪಿಎಂ ಕಾರ್ಖಾನೆಗೆ ಕೈಗಾರಿಕಾ ಕಾಡು ಬೆಳೆಸಲು 70 ಸಾವಿರ ಎಕರೆ ಭೂಮಿಯನ್ನು ನೀಡಲಾಗಿದೆ. ಇಲ್ಲಿ ನೀಲಗಿರಿ, ಅಕೇಷಿಯಾ ಬೆಳೆಯಲು ನೀಡಿದ್ದಾರೆ. ಇದು ಪರಿಸರಕ್ಕೆ ಹಾನಿ, ಆದರೂ ನೀಡಿದ್ದಾರೆ. ಅಡಕೆ ಬೆಳೆಯನ್ನು ಅರಣ್ಯ ಬೆಳೆ ಎಂದು ಘೋಷಣೆ ಮಾಡಬೇಕು. ಸರ್ಕಾರ ತನ್ನ ಜವಾಬ್ದಾರಿ ಅರಿತು ಒಂದು ಎಕರೆ ಎರಡು ಎಕರೆ ರೈತರನ್ನು ರಕ್ಷಣೆ ಮಾಡಬೇಕು" ಎಂದು ಆಗ್ರಹಿಸಿದರು.
ಇವರೆಲ್ಲರಿಗೂ ನೋಟಿಸ್ : ಮಲೆನಾಡು ರೈತ ಹೋರಾಟ ಸಮಿತಿಯ ತೀ.ನಾ.ಶ್ರೀನಿವಾಸ್ ಮಾತನಾಡಿ, "ಅರಣ್ಯ ಅಧಿಕಾರಿಗಳು ಶರಾವತಿ, ಸಾವೆಹಕ್ಲು, ತುಂಗಭದ್ರಾ ಮುಳುಗಡೆ ಸಂತ್ರಸ್ತರಿಗೂ ಶಿವಮೊಗ್ಗ, ಸಾಗರ, ಹೊಸನಗರ ಡಿಎಫ್ಓ ಹಾಗೂ ವನ್ಯಜೀವಿ ಡಿಎಫ್ಓಗಳ ಮೂಲಕ ನೋಟಿಸ್ ನೀಡಿದ್ದಾರೆ" ಎಂದರು.
"ಕಾನೂನು ಬಾಹಿರ ಹಕ್ಕುಪತ್ರ ನೀಡಿದ್ದರೆ ವಜಾ ಮಾಡಬಹುದು ಎಂಬ ನಿಯಮವಿದೆ. ರಾಜ್ಯದ ಇತಿಹಾಸದಲ್ಲಿ ಇಂತಹ ಅನ್ಯಾಯ ನಡೆದಿಲ್ಲ. ಸರ್ಕಾರದಲ್ಲಿ ಕಂದಾಯ ಇಲಾಖೆಯಂತೆ ಅರಣ್ಯ ಇಲಾಖೆ ಸಹ ಒಂದು ಇಲಾಖೆ. ಹಾಗಾದರೆ ಕಂದಾಯ ಇಲಾಖೆಯ ತಹಶೀಲ್ದಾರ್ ನೀಡಿದ ಹಕ್ಕುಪತ್ರ ಕಾನೂನು ಬಾಹಿರ ಎಂದರ್ಥವಾ? ಈ ರೀತಿ ಮಾಡುವುದಾದರೆ ಕಂದಾಯ ಇಲಾಖೆಯೆ ಬೇಡ. ಕಂದಾಯ ಇಲಾಖೆಯು ಮಾತೃ ಇಲಾಖೆ ಅರಣ್ಯ ಇಲಾಖೆ ಅಂತ ಮಾಡಿದ್ದು 1980ರ ಅರಣ್ಯ ಸಂರಕ್ಷಣಾ ಕಾಯಿದೆ ಬಂದ ನಂತರವೇ ಹೊರತು ಮೊದಲು ಇರಲಿಲ್ಲ. ಜಿಲ್ಲಾದ್ಯಾಂತ 30 ಸಾವಿರ ಜನರಿಗೆ ನೋಟಿಸ್ ನೀಡಲಾಗಿದೆ. ಇದು ಅಮಾನವಿಯ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ವೆಲ್ಲೂರಿನ ಗ್ರಾಮವೊಂದರ 300 ನಿವಾಸಿಗಳಿಗೆ ವಕ್ಫ್ ಬೋರ್ಡ್ ನೋಟಿಸ್, ಕಂದಾಯ ಪಾವತಿಸಲು ಬೇಡಿಕೆ