ದಾವಣಗೆರೆ: ತಂಬಾಕು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಆಘಾತಕಾರಿ ಅಂಶ ಜಿಲ್ಲಾ ಸರ್ವೇಕ್ಷಣಾ ಇಲಾಖೆಯಿಂದ ಹೊರಬಿದ್ದಿರುವುದರಿಂದ ತಂಬಾಕು ಬೆಳೆಗಾರರ ಸಂಖ್ಯೆ ಒಂದಂಕಿಗೆ ಇಳಿದಿದೆ. ದುರಂತವೆಂದರೆ ಈ ತಂಬಾಕು ಬೆಳೆಯಿಂದ ರೈತರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದೇ ಬಹುತೇಕ ರೈತರಿಗೆ ತಿಳಿದಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಜಿ.ಡಿ.ರಾಘವನ್ ಹೇಳಿದ್ದಾರೆ.
ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದಾಗಿ ರೈತರಲ್ಲಿ ಜಾಗೃತಿ ಮೂಡಿಸಿ, ಪರ್ಯಾಯ ಬೆಳೆಯತ್ತ ಕರೆತರಲು ರಾಜ್ಯ ಸರ್ಕಾರ 2019ರಲ್ಲಿ ಸುತ್ತೋಲೆ ಹೊರಡಿಸಿತ್ತು. ಆಗ ಫೀಲ್ಡ್ಗಿಳಿದ ದಾವಣಗೆರೆ ಸರ್ವೇಕ್ಷಣಾ ಇಲಾಖೆ ಹಾಗೂ ರಾಷ್ಟ್ರೀಯ ತಂಬಾಕು ನಿಯಂತ್ರಣ ಅಧಿಕಾರಿಗಳ ತಂಡ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿ, ಬೇರೆ ಬೆಳೆಯತ್ತ ರೈತರು ಮುಖ ಮಾಡುವಂತೆ ಮಾಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಶೇ.90ರಷ್ಟು ರೈತರು ಈ ತಂಬಾಕು ಕೃಷಿಯಿಂದ ದೂರ ಸರಿದಿದ್ದಾರೆ.
ಈ ಕುರಿತು ಜಿಲ್ಲಾ ಸರ್ವೇಕ್ಷಣಾಧಿಕಾರಿ ಜಿ.ಡಿ.ರಾಘವನ್ ಮಾತನಾಡಿದ್ದು, "ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಹಾಗೂ ಅಪಾರ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಜಾಗೃತ ಕೋಶ ಎಂಬ ಒಟ್ಟು ಎರಡು ಸಮಿತಿಗಳಿವೆ. ಈ ಎರಡು ಸಮಿತಿಗಳಿಂದ ಜಿಲ್ಲೆಯಲ್ಲಿ ತಂಬಾಕಿಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ. ಸಿಗರೇಟ್ ಮತ್ತು ಇತರೆ ತಂಬಾಕು ವಸ್ತುಗಳ ನಿಯಂತ್ರಣ ಕಾಯ್ದೆ 2003 ಇದನ್ನು ಜಾರಿ ಮಾಡುತ್ತಿದ್ದೇವೆ. ಹಾಗೂ ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಪೊಕ್ಟೋಪೊ ಕಾಯ್ದೆ ಅಡಿಯಲ್ಲಿ ಸೆಕ್ಷನ್ 4, 5, 6ಎ, 6ಬಿ ಮತ್ತು 7 ಕಾಯ್ದೆಗಳಿವೆ. ಈ ಕಾಯ್ದೆಗಳು ಎಲ್ಲಿ ಉಲ್ಲಂಘನೆ ಆಗುತ್ತಿವೆಯೋ ಅಲ್ಲಿ ದಂಡ ವಿಧಿಸುತ್ತೇವೆ. ದಂಡ ಕಟ್ಟಲಿಲ್ಲ ಎಂದರೆ ಎಫ್ಐಆರ್ ಮಾಡುತ್ತೇವೆ" ಎಂದು ತಿಳಿಸಿದರು.
ರೈತರ ಆರೋಗ್ಯದ ಮೇಲೆ ದುಷ್ಪರಿಣಾಮ, ರೈತರಲ್ಲಿ ಜಾಗೃತಿ: "ಜಿಲ್ಲೆಯಲ್ಲಿ ತಂಬಾಕು ಎಲ್ಲೆಲ್ಲಿ ಬೆಳೆಯುತ್ತಾರೆ ಎಂದು ರೈತರನ್ನು ಗುರುತಿಸಿ, ಅವರು ತಂಬಾಕು ಬೆಳೆ ಬೆಳೆಯುವ ವೇಳೆ ಹಾಗೂ ಸಂಸ್ಕರಣೆ ಮಾಡುವ ವೇಳೆ ಆಗುವ ಸಮಸ್ಯೆ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕೆಂದು ಸರ್ಕಾರದಿಂದ ಸುತ್ತೋಲೆ ರವಾನೆಯಾಗಿತ್ತು. ತಂಬಾಕು ಬೆಳೆಯುವವರಿಗೆ ಪರ್ಯಾಯ ಬೆಳೆ ಬೆಳೆಯುವಂತೆ ಜಾಗೃತಿ ಮೂಡಿಸಬೇಕೆಂಬುದು ಸರ್ಕಾರದ ಸುತ್ತೋಲೆಯ ಪ್ರಮುಖ ಉದ್ದೇಶ ಆಗಿತ್ತು. 2018-19ರಲ್ಲಿ ಹೊನ್ನಾಳಿ, ನ್ಯಾಮತಿ ತಾಲೂಕುಗಳಲ್ಲಿ 50-60 ಜನ ರೈತರು ತಂಬಾಕು ಬೆಳೆಯುತ್ತಿದ್ದರು. ಸಾಗುವಳಿ ಮಾಡುತ್ತಿದ್ದರು ಎಂಬ ಮಾಹಿತಿ ಆಧರಿಸಿದ ಅಧಿಕಾರಿಗಳ ತಂಡ 2019ರಲ್ಲಿ ಆಯಾಯ ಗ್ರಾಮ ಪಂಚಾಯತಿಗಳ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ, ಜಾಗೃತಿ ಮೂಡಿಸಲಾಗಿತ್ತು. ಜಾಗೃತಿ ಮೂಡಿಸಿದಕ್ಕಾಗಿ ಇದೀಗ 5-6 ಜನ ರೈತರು ಮಾತ್ರ ಜಿಲ್ಲೆಯಲ್ಲಿ ತಂಬಾಕು ಬೆಳೆಯುತ್ತಿದ್ದಾರೆ" ಎಂದು ಹೇಳಿದರು.

ತಂಬಾಕು ಬೆಳೆಯಿಂದಾಗುವ ದುಷ್ಪರಿಣಾಮವೇನು?: "ತಂಬಾಕು ಬೆಳೆಯುವ ವೇಳೆ, ತಂಬಾಕು ಬೆಳೆದು ಪ್ಯಾಕಿಂಗ್ ಮಾಡುವಾಗ, ಸಂಸ್ಕರಣೆ ಮಾಡಿ ಸಾಗಾಣಿಕೆ ಮಾಡುವಾಗ ತಂಬಾಕಿನಿಂದ ರೈತರಿಗೆ, ಕೂಲಿಕಾರ್ಮಿಕರ ದೇಹದ ಮೇಲೆ ಹಾಗೂ ಭೂಮಿಯ ಮಣ್ಣಿನ ಮೇಲೆ ದುಷ್ಪರಿಣಾಮ ಬೀರಲಿದೆ. ಉಸಿರಾಟದ ತೊಂದರೆ, ಶ್ವಾಸಕೋಶದ ಸೋಂಕು, ಅಲರ್ಜಿ, ಅಸ್ತಮ, ದಮ್ಮು, ಉಬ್ಬಸಾ ಎದುರಾಗಲಿದೆ. ಇನ್ನು ಇದನ್ನು ಸಂಸ್ಕರಣೆ ಮಾಡುವ ವೇಳೆ ಸಿಓಪಿಡಿ (ಕ್ರಾನಿಕ್ ಅಬಸ್ಟ್ರ್ಯಾಕ್ಟಿವ್ ಪುಲ್ಮೋನರಿ ಡಿಸೀಸ್) (Chronic Obstructive Pulmonary Disease)ಯಂತಹ ಕೆಲವು ದುಷ್ಪರಿಣಾಮ ಉಂಟಾಗಲಿದೆ" ಎಂದರು.
ತಂಬಾಕು ಬೆಳೆದ್ರೆ ನೆಲಕಚ್ಚಲಿದೆ ಮಣ್ಣಿನ ಫಲವತ್ತತೆ: "ದೀರ್ಘಾವದಿಯವರೆಗೆ ತಂಬಾಕು ಬೆಳೆಯುವುದರಿಂದಾಗಿ ಭೂಮಿಯ ಫಲವತ್ತತ್ತೆ ನೆಲಕಚ್ಚಲಿದೆ. ಈ ವಿಚಾರ ರೈತರಿಗೆ ತಿಳಿದಿಲ್ಲ. ಮಣ್ಣಿನ ಫಲವತ್ತತೆ ಕೂಡ ಕಡಿಮೆ ಆಗಲಿದೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಇದರ ಬಗ್ಗೆ ಕೃಷಿ, ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಮನವರಿಕೆ ಮಾಡಿದ್ದೇವೆ. ಗೊದಾಮಿನಲ್ಲಿ ದಾಸ್ತಾನು ಮಾಡಿ ತಂಬಾಕು ಇಟ್ಟಾಗ ಫಂಗಸ್ (ಶಿಲೀಂದ್ರ)ಗಳು ಅಟ್ಯಾಕ್ ಆಗುವ ಸಂಭವ ಹೆಚ್ಚಿರುತ್ತದೆ. ಉತ್ಪಾದನೆ ಮಾಡುವ ವೇಳೆ ಕಾರ್ಮಿಕರು ಹಾಗೂ ರೈತರು ಅನಾರೋಗ್ಯಕ್ಕೆ ತುತ್ತಾಗಲಿದ್ದಾರೆ" ಎಂದು ತಿಳಿಸಿದರು.
"ಹೊನ್ನಾಳಿ, ನ್ಯಾಮತಿ ತಾಲೂಕಿನಲ್ಲಿ ತಂಬಾಕು ಬೆಳೆಗಾರರು ಕಡಿಮೆ ಆಗಿದ್ದಾರೆ. ಒಟ್ಟು 50-60 ರಷ್ಟಿದ್ದ ಬೆಳೆಗಾರರು 2021-22 ರಲ್ಲಿ ಕೇವಲ 16 ಜನರಿದ್ದರು. ಇದೀಗ 2024-25ರಲ್ಲಿ 5-6 ಜನ ಮಾತ್ರ ರೈತರು ತಂಬಾಕು ಬೆಳೆಯುತ್ತಿದ್ದಾರೆ. ಇದನ್ನ ಬೆಳೆಯಲು ಲೈಸೆನ್ಸ್ ಕೊಡುತ್ತಾರೆ. ಇದಕ್ಕೆ 16 ಸಾವಿರ ಹಣ ನೀಡುತ್ತಿದ್ದೇವೆ. ಈ ಪರವಾನಿಗೆ ಮುಗಿದ ನಂತರ ಬೇರೆ ಬೆಳೆ ಬೆಳೆಯುತ್ತೇವೆ ಎಂದು ರೈತರು ಹೇಳುತ್ತಿದ್ದಾರೆ" ಎಂದರು.
"ರಾಗಿ, ಭತ್ತ, ಮೆಕ್ಕೆಜೋಳವಾದರೆ ಅವುಗಳನ್ನ ತಕ್ಷಣವೇ ಗೋಣಿ ಚೀಲದಲ್ಲಿ ಸ್ಟಾಕ್ ಮಾಡಿ ನಂತರ ಎಪಿಎಂಸಿಗಳಲ್ಲಿ ಸ್ಟಾಕ್ ಮಾಡುತ್ತಿರುತ್ತಾರೆ. ತಂಬಾಕಿನ ವಿಚಾರದಲ್ಲಿ ಇದರಲ್ಲಿ ನಿಕೋಟಿನ್ ಎಂಬ ಡ್ರಗ್ ಇರುತ್ತದೆ. ತಂಬಾಕು ಎಲೆಗಳನ್ನ ಸುಟ್ಟಾಗ ನೇರವಾಗಿ ಶ್ವಾಸಕೋಶದ ಒಳಗೆ ಹೋಗುತ್ತದೆ. ಅಲ್ಲದೆ ಸಂಸ್ಕರಣೆ, ಪ್ಯಾಕಿಂಗ್ ಮಾಡುವ ವೇಳೆ ಜನರಿಗೆ, ರೈತರಿಗೆ ಆರೋಗ್ಯದ ಸಮಸ್ಯೆ ಉಂಟಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ. 2018-19ರಲ್ಲಿ ಸುತ್ತೋಲೆ ಬರುವ ತನಕ ಇದರ ಬಗ್ಗೆ ರೈತರಿಗೆ ಗೊತ್ತಿರಲಿಲ್ಲ, ನಾವುಗಳು ಹೇಳಿದ ಮೇಲೆ ಜಾಗೃತಿ ಮೂಡಿಸಿದ ಬಳಿಕ ಶೇ. 90% ರಷ್ಟು ರೈತರು ತಂಬಾಕು ಬೆಳೆಯುವುದು ಕಡಿಮೆ ಮಾಡಿದ್ದಾರೆ" ಎಂದು ಹೇಳಿದರು.

"ಜಗಳೂರು ಭಾಗದಲ್ಲಿ ತಂಬಾಕು ಬೆಳೆಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಎಲ್ಲಿ ಯಾವ ಭಾಗದಲ್ಲಿ ಬೆಳೆಯುತ್ತಾರೆ ಎಂದು ತಿಳಿದು ಸ್ಥಳೀಯ ತಾಲೂಕು ಆರೋಗ್ಯಾಧಿಕಾರಿಗೆ ಮಾಹಿತಿ ಕೊಟ್ಟಿದ್ದೇವೆ. ಇದರ ಬಗ್ಗೆ ಅಪಾರ ಜಿಲ್ಲಾಧಿಕಾರಿ ಅವರಿಗೆ ತ್ರೈಮಾಸಿಕ ಸಭೆಯಲ್ಲಿ ಮಾಹಿತಿ ಕೊಟ್ಟಿದ್ದೇವೆ. ಜಗಳೂರು ತಾಲೂಕಿನಲ್ಲಿ ಎಲ್ಲಿ ಬೆಳೆಯುತ್ತಾರೆ, ಅಲ್ಲಿ ಜಾಗೃತಿ ಮೂಡಿಸಿ ಪರ್ಯಾಯ ಬೆಳೆಗಳನ್ನು ಬೆಳಯುವಂತೆ ಜಾಗೃತಿ ಮೂಡಿಸುತ್ತೇವೆ. ಇದು ಕೊನೆ ಬೆಳೆ ಆಗಿರಬೇಕು ಎಂದು ನಿರ್ದೇಶನ ಕೊಡಲಿದ್ದೇವೆ" ಎಂದರು.
ತಂಬಾಕು ಬೆಳೆಯುವ ರೈತರು ಹೇಳುವುದೇನು?: ಈ ಬಗ್ಗೆ ಈಟಿವಿ ಭಾರತ ಜೊತೆ ದೂರವಾಣಿಯಲ್ಲಿ ನ್ಯಾಮತಿಯ ರೈತ ಷಣ್ಮುಖಪ್ಪ ಮಾತನಾಡಿದ್ದು, "ಕೆಜಿಗೆ 340-330 ದರ ಇದೆ, ಒಳ್ಳೆ ದರ ಸಿಗುತ್ತಿದೆ. ಆದ್ದರಿಂದ, ಒಟ್ಟು 6 ಎಕರೆಯಲ್ಲಿ ತಂಬಾಕು ಬೆಳಯುತ್ತಿದ್ದೇನೆ. ಒಳ್ಳೆ ದರ ಸಿಗುವ ಕಾರಣ ಬೆಳೆಯುವುದನ್ನು ಬಿಡಲಾಗುತ್ತಿಲ್ಲ. ತಂಬಾಕು ಬೆಳೆಯುವುದರಿಂದ ಆರೋಗ್ಯ ಸಮಸ್ಯೆ ಆಗುತ್ತದೆ ಎಂಬುದು ನಮಗಂತೂ ಗೊತ್ತೇ ಇಲ್ಲ. 15 ವರ್ಷಗಳಿಂದ ತಂಬಾಕು ಬೆಳೆಯುತ್ತಿದ್ದೇನೆ. ಆರೋಗ್ಯದ ಸಮಸ್ಯೆ ಆಗುತ್ತದೆ ಎಂದು ಕೆಲವರು ಹೇಳಿದಕ್ಕಾಗಿ ಸ್ವಲ್ಪ ದಿನಗಳ ಕಾಲ ತಂಬಾಕು ಬೆಳೆಯನ್ನು ಬೆಳೆಯುವುದನ್ನು ಬಿಟ್ಟಿದ್ದೆ. ಇದೀಗ ಒಳ್ಳೆ ಬೆಲೆ ಸಿಗುತ್ತಿರುವುದರಿಂದಾಗಿ ಮತ್ತೆ ಬೆಳೆಯುವುದನ್ನು ಆರಂಭಿಸಿದ್ದೇನೆ'' ಎಂದು ಹೇಳಿದರು.
ಇದನ್ನೂ ಓದಿ: ಯೂಟ್ಯೂಬ್ ನೋಡಿ ಬಯಲು ಸೀಮೆಯಲ್ಲಿ ಸೇಬು ಬೆಳೆದ ರೈತ: ಇಲ್ಲಿ ಇಸ್ರೇಲಿ ಆ್ಯಪಲ್ ಕೂಡ ಲಭ್ಯ - APPLE CROP IN DAVANAGERE