ಬೆಂಗಳೂರು: ರಾಜ್ಯದ ರೈತರು ಕೃಷಿ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇಂತಹ ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರ ನೀಡುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗ ರೂಪಿಸಿರುವ ಇ-ಸ್ಯಾಪ್ (e-SAP) (ಅಂದರೆ ಇ-ಸಲ್ಯೂಷನ್ಸ್ ಅಗೆನೆಸ್ಟ್ ಅಗ್ರಿಕಲ್ಟರ್ ಫೆಸ್ಟ್) ತಂತ್ರಾಂಶವನ್ನು ಈಗ ಕೃಷಿ ಇಲಾಖೆ ಬಳಸುತ್ತಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳಿಗೆ ಸಂಬಂಧಿಸಿದಂತೆ ರೈತರು ಎದುರಿಸುವ ಕೀಟಬಾಧೆ, ರೋಗ, ಪೋಷಕಾಂಶ ನಿರ್ವಹಣೆಯ ಕುರಿತು ತಂತ್ರಜ್ಞಾನದ ಮೂಲಕ ನಿಖರವಾದ ಸಲಹೆ ನೀಡಲಾಗುತ್ತದೆ.
ಇ-ಸ್ಯಾಪ್ (ಕೃಷಿ ಕೀಟಗಳ ವಿರುದ್ಧ ಎಲೆಕ್ಟ್ರಾನಿಕ್ ಪರಿಹಾರಗಳು) ಬೆಳೆ ಆರೋಗ್ಯ ನಿರ್ವಹಣೆಯಲ್ಲಿ ಐಸಿಟಿ ಅಪ್ಲಿಕೇಶನ್, ಕೀಟಗಳು, ರೋಗಗಳು ಮತ್ತು ಪೌಷ್ಠಿಕಾಂಶದ ಕೊರತೆ ಮತ್ತು ತೋಟಗಾರಿಕೆ ಬೆಳೆಗಳ ಕಳೆಗಳಿಗೆ ಸಂಬಂಧಿಸಿದ ಕ್ಷೇತ್ರ ಗುರುತಿಸುವಿಕೆ ಪ್ರಮಾಣ ಮತ್ತು ತೀವ್ರತೆ ಆಧಾರಿತ ಸಲಹೆಗೆ ಅಪ್ಲಿಕೇಶನ್ ಸಹಾಯ ಮಾಡುತ್ತದೆ. ಬೆಳೆ ಆರೋಗ್ಯ ನಿರ್ವಹಣೆಗೆ ಸಂಬಂಧಿಸಿದಂತೆ ತೋಟಗಾರಿಕೆಯಲ್ಲಿನ ಎಲ್ಲಾ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುತ್ತದೆ. ಇದು ಆಫ್ಲೈನ್ ಅಪ್ಲಿಕೇಶನ್ ಆಗಿದ್ದು, ಇದು ತಜ್ಞರ ಸಂಪರ್ಕವನ್ನು ಸ್ಥಾಪಿಸುತ್ತದೆ ಮತ್ತು ತ್ವರಿತ ನಿರ್ಧಾರ ಬೆಂಬಲಕ್ಕಾಗಿ ಮಲ್ಟಿಮೀಡಿಯಾದಲ್ಲಿ ನೈಜ ಸಮಯದ ವರದಿಗಳನ್ನು ನೀಡುತ್ತದೆ.
ಬೇಸಾಯ ಸಂಬಂಧಿತ ಸಮಸ್ಯೆಗಳಿಂದಾಗಿ ಇಳುವರಿ ಕುಸಿಯುವುದರಿಂದ ಆರ್ಥಿಕ ನಷ್ಟವಾಗಿ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಆಪ್ನಲ್ಲಿ ರೈತರ ಸಮಸ್ಯೆಗಳನ್ನು ಅಪ್ಲೋಡ್ ಮಾಡಿ ತಾಂತ್ರಿಕ ಪರಿಹಾರ ನೀಡುವ ಮೂಲಕ ನಷ್ಟ ತಡೆಯಲು ಸರ್ಕಾರ ಕ್ರಮವಹಿಸಲಿದೆ ಎನ್ನುತ್ತಾರೆ ಅಧಿಕಾರಿಗಳು.
ಇ-ಸ್ಯಾಪ್ ಆಪ್ ಮೂಲಕ ಸಣ್ಣ ಪ್ರಮಾಣದಲ್ಲಿ ಉದ್ಯೋಗದ ಸೃಷ್ಟಿಗೂ ಅವಕಾಶ ಇದೆ. ಕೃಷಿ ಪದವೀಧರರು, ಡಿಪ್ಲೊಮಾ ಪಡೆದವರಿಗೆ ಈ ಆಪ್ ಬಳಕೆ ಮಾಡಲು ಅನುಮತಿ ನೀಡಲಾಗುತ್ತದೆ. ಅಲ್ಲದೇ ಕೃಷಿ ಪರಿಕರ ವಿತರಕರು ಹಾಗೂ ಮಾರಾಟಗಾರರು ಅನುಮತಿ ಪಡೆಯಬಹುದು. ಅವರನ್ನು ನೋಂದಾಯಿತ ಕೃಷಿ ವೃತ್ತಿಗಾರರು ಎಂದು ಕರೆಯಲಾಗುತ್ತದೆ. ಎಷ್ಟು ಜನರನ್ನು ನೇಮಕ ಮಾಡಬೇಕೆಂಬುದಕ್ಕೆ ಗುರಿ ಎಂಬುದು ಇಲ್ಲ. ಅವರು ರೈತರಿಂದ ಸೇವಾ ಶುಲ್ಕ ಪಡೆಯಬಹುದು. ಸೇವಾ ಶುಲ್ಕ ಎಷ್ಟು ಇರಬೇಕು ಎಂಬುದನ್ನು ನಿರ್ಧಾರ ಮಾಡಲು ಕೃಷಿ ಆಯುಕ್ತರ ಅಧ್ಯಕ್ಷತೆಯಲ್ಲಿ ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ.
ಇ-ಸ್ಯಾಪ್ ಆಪ್ ಸಾರ್ವಜನಿಕವಾಗಿ ಲಭ್ಯವಾಗುವುದಿಲ್ಲ. ಇಲಾಖೆ ಹಾಗೂ ಕೃಷಿ ವೃತ್ತಿಗಾರರಿಗೆ ಮಾತ್ರ ಇದು ಲಭ್ಯವಾಗುತ್ತದೆ. ಸಾರ್ವಜನಿಕವಾಗಿ ದೊರೆತರೆ ದುರುಪಯೋಗವಾಗುವ ಸಾಧ್ಯತೆ ಇದೆ. ಹಾಗಾಗಿ, ಇದು ಹೊರಗೆ ಎಲ್ಲೂ ಸಿಗುವುದಿಲ್ಲ. 2012 ರಲ್ಲಿಯೇ ಇದನ್ನು ತಯಾರಿಸಲಾಗಿದೆ. 2017 ರಲ್ಲಿಯೇ ರಾಜ್ಯ ಸರ್ಕಾರ ಇದರ ಬಳಕೆಗೆ ನಿರ್ಧಾರ ಮಾಡಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿಯೇ ಆಪ್ ಬಳಕೆ ಸಂಬಂಧ ಪ್ರಸ್ತಾಪ ಮಾಡಿದ್ದಾರೆ.
ಕೃಷಿ ಇಲಾಖೆ ಸಹ ಪ್ರಾಯೋಗಕವಾಗಿ ಬಳಕೆ ಮಾಡಿದ್ದು, ಕೃಷಿ ಹಾಗೂ ಸಂಬಂಧಿತ ಬೆಳೆಗಳಲ್ಲಿ ಕಂಡುಬಂದಿರುವ ಅಥವಾ ಕಂಡುಬರಬಹುದಾದ ಕೀಟ, ರೋಗ, ಕಳೆ, ಪೋಷಕಾಂಶ ಕೊರತೆ ತೊಡಕುಗಳಿಗೆ ಇ-ಸ್ಯಾಪ್ ತಂತ್ರಜ್ಞಾನ ಜಾರಿಗೊಂಡಿದ್ದು, ರಾಜ್ಯದಲ್ಲಿ ಇ-ಸ್ಯಾಪ್ 54,889 ರೈತರಿಗೆ 92,782 ವಿವಿಧ ತಾಂತ್ರಿಕ ಸಲಹಾ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಕೃಷಿ ಇಲಾಖೆಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಳೆಗಳ ಬಗ್ಗೆ ಮಾಹಿತಿ: ಈ ಆ್ಯಪ್ನಲ್ಲಿ 49 ಬೆಳೆಗಳಿಗೆ ಸಂಬಂಧಿಸಿದ ಮಾಹಿತಿ, ಸಲಹೆ ಸಿಗಲಿದೆ. ಆ್ಯಪ್ನಲ್ಲಿ ರೈತರ ಸಮಸ್ಯೆಗಳ ಬಗ್ಗೆ ತಾಂತ್ರಿಕ ತಜ್ಞರು ವಿಜ್ಞಾನಿಗಳನ್ನು ಸಂರ್ಪಸಿಯೂ ಪರಿಹಾರ ನೀಡಲಾಗುತ್ತದೆ. ಕೀಟ ತಜ್ಞ, ರೋಗ ತಜ್ಞ ಹಾಗೂ ಬೇಸಾಯ ತಜ್ಞರಿಂದ ಮಾಹಿತಿ ಸಿಗಲಿದೆ. ರೈತ ಸಂಪರ್ಕ ಕೇಂದ್ರಗಳನ್ನು ಹಾಗೂ ರಾಜ್ಯದಲ್ಲಿರುವ 224 ಸಂಚಾರಿ ಸಸ್ಯ ಪ್ರಯೋಗಾಲಯಗಳಿಗೂ ಈ ಆಪ್ ಬಳಸಲು ಅನುಮತಿ ನೀಡಲಾಗುತ್ತದೆ. ಅದರಿಂದಲೂ ರೈತರು ಎದುರಿಸುವ ಸಮಸ್ಯೆಗಳಿಗೆ ನೆರವಾಗಲಿದೆ. ಸಲಹೆ ನೀಡುವುದು ಮಾತ್ರವಲ್ಲ, ಯಾವ ರೈತರಿಗೆ ಏನು ಸಲಹೆ ನೀಡಲಾಗಿದೆ ಎಂಬ ಬಗ್ಗೆಯೂ ಇಲಾಖೆಗೆ ವರದಿ ಬರಲಿದೆ.
'ಕೃಷಿ ಹಾಗೂ ಸಂಬಂಧಿತ ಬೆಳೆಗಳಲ್ಲಿ ಕಂಡುಬಂದಿರುವ ಅಥವಾ ಕಂಡುಬರಬಹುದಾದ ಕೀಟ, ರೋಗ, ಕಳೆ, ಪೋಷಕಾಂಶ ಕೊರತೆ ತೊಡಕುಗಳಿಗೆ ಇ-ಸ್ಯಾಪ್ ತಂತ್ರಜ್ಞಾನ ಬಳಕೆಗೆ ಮುಂದಾಗಿದ್ದು, ಇದರಿಂದ ರೈತರಿಗೆ ಅನುಕೂಲವಾಗಲಿದೆ. ಜೊತೆಗೆ ಉದ್ಯೊಗ ಸೃಷ್ಟಿಗೂ ಅನುಕೂಲವಾಗಲಿದೆ' ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಓದಿ: ಹೊಸ ರಾಡಾರ್ ಇಮೇಜಿಂಗ್ ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು: ಆಕಾಶದತ್ತ ಭಾರತದ ಕಣ್ಣು