ಮೈಸೂರು: ಹೈದರಾಲಿ ರಸ್ತೆಯ ಅಗಲೀಕರಣಕ್ಕೆ 40 ಮರಗಳ ಕಟಾವು ಮಾಡಿರುವ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮೈಸೂರಿನ ಅರಣ್ಯಾಧಿಕಾರಿಗಳಿಂದ ವರದಿ ಕೇಳಿದ್ದಾರೆ.
ಈ ಸಂಬಂಧ ಸಿಸಿಎಫ್ ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸಿ 7 ದಿನಗಳೊಳಗಾಗಿ ವರದಿ ಸಲ್ಲಿಸುವಂತೆಯೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಅರಣ್ಯ ಪಡೆ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

ಮೈಸೂರಿನ ಹೈದರಾಲಿ ರಸ್ತೆಯಲ್ಲಿ ಅನಗತ್ಯವಾಗಿ 40 ಬೃಹತ್ ಮರಗಳನ್ನು ಕಡಿದುರುಳಿಸಲಾಗಿದೆ. ಇದಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿರುವುದು ಸೂಕ್ತವಲ್ಲ. ಅಲ್ಲದೇ ರಸ್ತೆಯ ಅಗಲೀಕರಣ ಮಾಡುವ ಅಗತ್ಯವೇ ಇರಲಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಏ.19ರಂದು ಸಂಜೆ ಸಾವಿರಾರು ವೃಕ್ಷಪ್ರಿಯರು, ಪರಿಸರಪ್ರೇಮಿಗಳು ಮರ ಕಡಿದ ಜಾಗದಲ್ಲಿ ಮೇಣದ ಬತ್ತಿ ಹಿಡಿದು ಮೌನ ಪ್ರತಿಭಟನೆ ಮಾಡಿ ಮರಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಇಡೀ ವಿಶ್ವ ಎದುರಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ವೃಕ್ಷ ಸಂರಕ್ಷಣೆ ಇಲಾಖೆಯ ಕರ್ತವ್ಯವಾಗಿದೆ. ಜೀವನವೂ ಇರಬೇಕು, ಜೀವನೋಪಾಯವೂ ನಡೆಯಬೇಕು. ಅಭಿವೃದ್ಧಿಯೂ ಆಗಬೇಕು. ಪ್ರಕೃತಿ ಪರಿಸರವೂ ಉಳಿಯಬೇಕು. ಈ ರೀತಿ ಸಮತೋಲಿತವಾಗಿ ಕ್ರಮ ವಹಿಸುವುದು ಇಂದಿನ ಅಗತ್ಯವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಹೈದರಾಲಿ ರಸ್ತೆಯ ಅಗಲೀಕರಣದ ಅಗತ್ಯ ಇತ್ತೇ?. ಮರ ಕಡಿಯುವ ಅಗತ್ಯವಿತ್ತೇ?. ಮರ ಕಡಿತಲೆಗೆ ನಿಯಮಾನುಸಾರ ಕ್ರಮ ವಹಿಸಲಾಗಿದೆಯೇ? ಎಂಬ ಬಗ್ಗೆ ಸಿಸಿಎಫ್ ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಮರ ಕಡಿದ ಸ್ಥಳದಲ್ಲಿ ವನದೇವಿಗೆ ಶ್ರದ್ಧಾಂಜಲಿ: ಮರಗಳನ್ನು ಹನನ ಮಾಡಿರುವ ಕೃತ್ಯವನ್ನು ಖಂಡಿಸಿ, ಟೀಂ ಮೈಸೂರು ತಂಡದವರು ಭಾನುವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು. ತಂಡದ ಮನೋಹರ್ ಅವರು ಮರ ತನ್ನನ್ನು ಕಡಿದಾಗ ವೇದಿಸುತ್ತಿರುವ ಹಾಗೂ ಇದಕ್ಕೆ ಕಾರಣರಾದ ಕಾರ್ಯಾಂಗ ಹಾಗೂ ಶಾಸಕಾಂಗವನ್ನು ತಮ್ಮ ಕೈ ಕುಂಚದ ಮುಖಾಂತರ ರಸ್ತೆಯಲ್ಲಿ ಚಿತ್ರಬಿಡಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ನಂತರ ತಂಡದ ಗೋಕುಲ್ ಗೋವರ್ಧನ್ ಮಾತನಾಡಿ, "ಪರಿಸರಪ್ರೇಮಿಗಳು ಅಭಿವೃದ್ಧಿಯ ವಿರೋಧಿಗಳಲ್ಲ, ಪರಿಸರ ಸಂರಕ್ಷಣೆಯೊಂದಿಗೆ ಅಭಿವೃದ್ಧಿ ಮಾಡಿ ಎನ್ನುವುದು ನಮ್ಮ ಆಗ್ರಹ. ಇಲ್ಲಿ ರಸ್ತೆ ವಿಸ್ತರಣೆಯನ್ನು ಮರಗಳನ್ನು ಉಳಿಸಿಕೊಂಡು ಮಾಡಬಹುದಿತ್ತು. ಆದರೆ, ನಿಮಗೆ ಪರಿಸರದ ಬಗ್ಗೆ ಕಾಳಜಿ ಇಲ್ಲ" ಎಂದು ಕಿಡಿಕಾರಿದರು.
"ನಗರದಲ್ಲಿ ಅನೇಕ ರಸ್ತೆಗಳು ವಿಸ್ತರಣೆ ಆಗಬೇಕಿದೆ. ಆದರೆ, ಅಧಿಕಾರಿಗಳು ಅವುಗಳನ್ನು ಮಾಡುವುದಿಲ್ಲ. ಹೈದರಾಲಿ ರಸ್ತೆಯಲ್ಲಿದ್ದ ಮರಗಳನ್ನು ಕಡಿಯುವ ಮೂಲಕ ಮರಗಳಲ್ಲಿ ಆಶ್ರಯ ಪಡೆದಿದ್ದ ಪಕ್ಷಿಗಳ ಮೇಲೆ ಗದಾಪ್ರಹಾರ ಮಾಡಲಾಗಿದೆ. ಮುಂದಾದರೂ ಅಧಿಕಾರಿಗಳು ಈ ಪರಿಸರ ಸಂರಕ್ಷಿಸಿ ಅಭಿವೃದ್ಧಿ ಮಾಡಿ" ಎಂದು ಆಗ್ರಹಿಸಿದರು.
ಆದಿತ್ಯ ಆಸ್ಪತ್ರೆಯ ಡಾ.ಚಂದ್ರಶೇಖರ್ ಮಾತನಾಡಿ, "ಈ ರೀತಿಯಲ್ಲಿ ಮರಗಳ ಮಾರಣಹೋಮ ಮಾಡಿರುವುದು ಸರಿಯಲ್ಲ. ತಂತ್ರಜ್ಞಾನ ಬಳಸಿ ಅವುಗಳನ್ನು ಸಂರಕ್ಷಿಸಬಹುದಿತ್ತು. ಆದರೆ, ಅಧಿಕಾರಿಗಳು ಯಾವುದೋ ಒತ್ತಡಕ್ಕೆ ಮಣಿದು ಈ ರೀತಿ ಮಾಡಿರುವುದು ಸರಿಯಲ್ಲ" ಎಂದು ಖಂಡಿಸಿದರು.
ಇದನ್ನೂ ಓದಿ: ಬೆಲೆ ಏರಿಕೆ: ಖಾಲಿ ಗ್ಯಾಸ್ ಸಿಲಿಂಡರ್ ತಂದು ವಾಟಾಳ್ ನಾಗರಾಜ್ ಪ್ರತಿಭಟನೆ - VATAL NAGARAJ