ಬೆಂಗಳೂರು : ಸಿಬಿಐ ಅಧಿಕಾರಿ ಅಂತಾ ಸುಳ್ಳು ಮಾಹಿತಿ ನೀಡಿ ಕೊರಿಯರ್ಲ್ಲಿ ಡ್ರಗ್ಸ್ ತರಿಸಿಕೊಂಡಿದ್ದೀರ ಎಂಬುದಾಗಿ ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿ 5.80 ಲಕ್ಷ ಹಣ ಪಡೆದು ವಂಚಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ತಮಿಳುನಾಡು ಮೂಲದ ಶಿಕ್ಷಕನೊಬ್ಬನಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ತಮಿಳುನಾಡಿನ ತಿರುವರೂರ್ ನಿವಾಸಿ ಕೆ.ಅರುವೊಳ್ಳಿ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಅರ್ಜಿದಾರರ ವಿರುದ್ಧದ ಅಪರಾಧ ಪ್ರಕರಣಗಳಿಗೆ ಗರಿಷ್ಠ ಏಳು ವರ್ಷ ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಅರ್ಜಿದಾರನಿಗೆ ಕ್ರಿಮಿನಲ್ ಹಿನ್ನೆಲೆಯೂ ಇಲ್ಲ. ಅರ್ಜಿದಾರ ಶಾಲಾ ಶಿಕ್ಷಕನಾಗಿದ್ದಾರೆ. ತನಿಖೆಯೂ ಪೂರ್ಣಗೊಂಡು, ದೋಷಾರೋಪ ಪಟ್ಟಿಯೂ ಸಲ್ಲಿಕೆಯಾಗಿದೆ. ಬಂಧನದಲ್ಲಿ ಮುಂದುವರಿಯುವ ಅಗತ್ಯವಿಲ್ಲ. ಆದ್ದರಿಂದ ಜಾಮೀನು ನೀಡಲಾಗುತ್ತಿದೆ ಎಂದು ಪೀಠ ಹೇಳಿದೆ.
ಜತೆಗೆ, ಒಂದು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ನೀಡಬೇಕು. ಅಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು. ಪ್ರಾಸಿಕ್ಯೂಷನ್ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಭವಿಷ್ಯದಲ್ಲಿ ಇದೇ ಮಾದರಿಯ ಪ್ರಕರಣದಲ್ಲಿ ಭಾಗಿಯಾಗಬಾರದು ಎಂದು ಷರತ್ತು ವಿಧಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಮಂಗಳೂರು ಮೂಲದ ಚಂದನ್ ಉಪ್ಪಿನ್ ಎಂಬುವರಿಗೆ ಆಕಾಶ್ ಶರ್ಮಾ ಎಂಬ ಹೆಸರಿನಲ್ಲಿ ಆ.6ರಂದು ಮಧ್ಯಾಹ್ನ 12 ಗಂಟೆಗೆ ನನಗೆ ಮೊಬೈಲ್ ಕರೆ ಮಾಡಿ, ತಾನು ಫೆಡೆಕ್ಸ್ ಕೊರಿಯರ್ ಮುಂಬೈ ಬ್ರಾಂಚ್ನಿಂದ ಮಾತನಾಡುತ್ತಿದ್ದೇನೆ. ನಿಮಗೆ ಮುಂಬೈ ಕಸ್ಟಮ್ಸ್ನಲ್ಲಿ ಪಾರ್ಸೆಲ್ ಇದ್ದು, ಅದು ರಿಜೆಕ್ಟ್ ಆಗಿರುತ್ತದೆ. ಕಾರಣ ಅದರಲ್ಲಿ ಅಕ್ರಮವಾಗಿ ಪಾಸ್ಪೋರ್ಟ್ ಮತ್ತು ಡ್ರಗ್ಸ್ ಇರುತ್ತದೆ ಎಂದು ಬೆದರಿಕೆ ಹಾಕಿದ್ದರು.
ಅಲ್ಲದೆ, ನಂತರ ಮತ್ತೊಂದು ನಂಬರ್ನಿಂದ ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮಾಡಿ, ನಾವು ಸಿಬಿಐ ಅಧಿಕಾರಿಯಾಗಿದ್ದೇವೆ. ನಿಮ್ಮನ್ನು ಮಾನಿಟರ್ ಮಾಡಬೇಕಾಗುತ್ತದೆ. ಆ 7ರಂದು ಮಧ್ಯಾಹ್ನ 3 ಗಂಟೆಗೆ ನಿಮ್ಮ ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿರುತ್ತದೆ. ಅದರಲ್ಲಿ ಹಣವನ್ನು ನಮ್ಮ ಆರ್ಬಿಐ ರಿಜಿಸ್ಟರ್ ಸಿಬಿಐ ಅಕೌಂಟ್ಗೆ ಹಾಕಿ. ಅಲ್ಲಿ ಸೇಫ್ ಆಗಿರುತ್ತದೆ. 6 ಗಂಟೆಗೆ ಬಳಿಕ ನಿಮ್ಮ ಹಣವನ್ನು ವಾಪಸ್ ನಿಮ್ಮ ಅಕೌಂಟ್ಗೆ ಹಾಕುತ್ತೇವೆ ಎಂದು ನಂಬಿಸಿದ್ದರು.
ಅಲ್ಲದೆ, ಬ್ಯಾಂಕ್ ಖಾತೆಗೆ 5.80 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ನಂತರ ಹಣ ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿ ಅರ್ಜಿದಾರರು 2024ರ ಆ.8ರಂದು ದೂರು ನೀಡಿದ್ದರು.
ಪ್ರಕರಣ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ 318(4), 308(2) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66(ಡಿ) ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು, ತಮಿಳುನಾಡಿನಿಂದ ನ.8ರಂದು ಆರೋಪಿಯನ್ನು ಬಂಧಿಸಿದ್ದರು.
ಅ ಅಧೀನ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಫೆಮಾ ಉಲ್ಲಂಘನೆ: ಗೂಗಲ್ ಇಂಡಿಯಾಗೆ ಇಡಿ ಜಡಿದಿದ್ದ 5.25 ಕೋಟಿ ರೂ.ಗಳ ದಂಡದ ಠೇವಣಿ ಆದೇಶಕ್ಕಿದ್ದ ತಡೆಯಾಜ್ಞೆ ರದ್ದು