ವಿಶೇಷ ವರದಿ: ಕಿರಣ್ ಕುಮಾರ್ ಎಸ್ .ಇ
ಶಿವಮೊಗ್ಗ: ಜೋಗ ಜಲಪಾತದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ 185 ಕೋಟಿ ರೂ ಕಾಮಗಾರಿ ಪ್ರಾರಂಭಿಸಿದೆ. ಈ ಕಾಮಗಾರಿಗಳನ್ನು ಶಂಕರ ನಾರಾಯಣ ಕನ್ಸ್ಟ್ರಕ್ಷನ್ ಕಂಪನಿ ನಡೆಸುತ್ತಿದೆ. ಕಂಪನಿಯು 2015 ನವೆಂಬರ್ಗೆ ಕಾಮಗಾರಿ ಮುಗಿಸಬೇಕಿತ್ತು. ಆದರೆ, ಈಗ ಹೆಚ್ಚುವರಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಜೋಗ ಅಭಿವೃದ್ಧಿ ಕಾಮಗಾರಿ ಮುಂದಿನ ವರ್ಷದೊಳಗೆ ಮುಕ್ತಾಯವಾಗುವ ನೀರಿಕ್ಷೆ ಇದೆ.
ಜಗತ್ತಿನ ಅದ್ಬುತ ಜಲಪಾತಗಳಲ್ಲಿ ಜೋಗ ಕೂಡ ಒಂದು. ಜೋಗ ಜೋಗ ಜಲಪಾತವನ್ನು ನೋಡಿದ ಪ್ರತಿ ಬಾರಿ ಹೊಸ ಅನುಭವ ನೀಡುವುದರಲ್ಲಿ ಅನುಮಾನವೇ ಇಲ್ಲ. ಜೋಗ ಜಲಪಾತವನ್ನು ಮುಂದೆ ನಿಂತು ನೋಡಿದರೆ ಒಂದು ರೀತಿ ಕಂಡರೆ, ಉತ್ತರ ಕನ್ನಡದ ಬ್ರಿಟೀಷ್ ಬಂಗ್ಲೆ ಭಾಗದಿಂದ ನೋಡಿದರೆ ಮತ್ತೊಂದು ರೀತಿ ಕಾಣುತ್ತದೆ. ಇಂತಹ ಜೋಗ ಜಲಪಾತವನ್ನು ಕಣ್ತುಂಬಿಕೊಳ್ಳಲು ದೇಶ - ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಹೆಚ್ಚು ಮೂಲಭೂತ ಸೌಲಭ್ಯವನ್ನು ಒದಗಿಸಲು ಮತ್ತು ಹತ್ತಿರದಿಂದ ಜಲಪಾತ ವೀಕ್ಷಣೆಗೆ ಅನುವಾಗುವಂತೆ ಮಾಡಲು ವಿವಿಧ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ 185 ಕೋಟಿ ರೂ ಅನುದಾನ ಮಂಜೂರು ಮಾಡಿದೆ.
ಜೋಗ ಜಲಪಾತದ ಸಮಗ್ರ ಅಭಿವೃದ್ಧಿಯಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತವು ಶರಾವತಿ ನದಿಯಿಂದ ಸೃಷ್ಟಿಯಾಗಿದೆ. ಜೋಗ ಜಲಪಾತ 253 ಮೀಟರ್ ಎತ್ತರದಿಂದ ಧುಮ್ಮಿಕ್ಕುತ್ತದೆ. ಶರಾವತಿ ನದಿ ಜಲಪಾತದ ರಾಜ, ರಾಣಿ, ರೋರರ್, ರಾಕೆಟ್ ಎಂದು ಕವಲುಗಳಲ್ಲಿ ಹರಿದು ಗೇರುಸೂಪ್ಪಿಯ ಮೂಲಕ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಕೇವಲ 135 ಕಿ.ಮಿ ದೂರ ಹರಿದು ಸಮುದ್ರ ಸೇರುವ ಶರಾವತಿ ನದಿಯು ಜೋಗ ಜಲಪಾತ ಸೃಷ್ಟಿಸಿ ವಿದ್ಯುತ್ ಉತ್ಪಾದನೆಗೆ ಕಾರಣಗಿದ್ದು, ಮೂಲಕ ನಾಡಿಗೆ ಬೆಳಕು ನೀಡುತ್ತಿದೆ.

ಜೋಗದ ಸೊಬಗನ್ನು ಮತ್ತಷ್ಟು ಹೆಚ್ಚಿಸಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜೋಗದ ಸಮಗ್ರ ಅಭಿವೃದ್ಧಿಗೆ 185 ಕೋಟಿ ರೂ ಮೀಸಲಿಟ್ಟಿದ್ದರು. ಈಗ ಅಭಿವೃದ್ದಿ ಕಾಮಗಾರಿ ಶೇ.85 ರಷ್ಟು ಪೂರ್ಣಗೊಂಡಿದೆ. ಕಾಮಗಾರಿಯು 2024ರ ನವೆಂಬರ್ ಅಂತ್ಯಕ್ಕೆ ಕಾಮಗಾರಿ ಮುಕ್ತಾಯವಾಗಬೇಕಿತ್ತು. ಆದರೆ, ಮಳೆಯ ಕಾರಣದಿಂದ ಕಾಮಗಾರಿ ಮುಗಿಸಲು 2025ರ ನವೆಂಬರ್ ವರೆಗೂ ಕಾಲಾವಕಾಶ ನೀಡಬೇಕೆಂದು ಗುತ್ತಿಗೆ ಪಡೆದ ಕಂಪನಿಯು ಕೇಳಿತ್ತು. ಇದೀಗ ರಾಜ್ಯ ಸರ್ಕಾರ, ಹಣ ಬಿಡುಗಡೆ ಮಾಡಿದ್ದರಿಂದ ಕಾಮಗಾರಿ ಕೆಲಸ ಭರದಿಂದ ಸಾಗುತ್ತಿದೆ.

ಜೋಗ ಜಲಪಾತದ ಬಳಿ ನಡೆಯುತ್ತಿರುವ ಕಾಮಗಾರಿಗಳೇನು?: ಜೋಗ ಜಲಪಾತಕ್ಕೆ ಪ್ರವೇಶ ದ್ವಾರ. ಅಲ್ಲಿಂದ ವಾಕಿಂಗ್ ಪಾಥ್ ಮೂಲಕ ನಡೆದುಕೊಂಡು ಹೋಗಿದರೆ ಒಂದು ಬ್ರಿಡ್ಜ್ ಸಿಗಲಿದ್ದು, ಅಲ್ಲಿಂದ ಜೋಗ ವೀಕ್ಷಣೆಗಿರುವ ಗೋಪುರ ತಲುಪಬಹುದು. ಇಲ್ಲಿ ಮೊದಲು ಶಾಪಿಂಗ್ ಮಾಡಲು ಮಳಿಗೆ ಸಿಗುತ್ತದೆ. ಶಾಪಿಂಗ್ ಮಳಿಗೆಯಿಂದ ಜೋಗವನ್ನು ಹತ್ತಿರದಿಂದ ನೋಡಲು ಗ್ಯಾಲರಿಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ಪ್ರವಾಸಿಗರು ಹತ್ತಿರದಿಂದ ಜೋಗದ ಸೊಬಗನ್ನು ಆಸ್ವಾದಿಸಬಹುದು.

ಇದರ ಜೊತೆಗೆ ಮಕ್ಕಳ ಉದ್ಯಾನವನ, ಉಪಹಾರ, ವಿಶ್ರಾಂತಿ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಜೋಗದ ಸಿರಿಯನ್ನು ನೋಡಲು ರೋಪ್ ವೇ ಅನ್ನು ಮಾಡಲಾಗುತ್ತಿದೆ. ಜೋಗದ ಮುಂಭಾಗದಿಂದ ಬ್ರಿಟೀಷ್ ಬಂಗ್ಲೆ ಬಳಿ ತನಕ ರೋಪ್ ವೇ ನಿರ್ಮಾಣ ಮಾಡಲಾಗುತ್ತದೆ. ಇನ್ನು ಪ್ರವಾಸಿಗರಿಗೆ ತಲಕಳಲೆ ಡ್ಯಾಂನಲ್ಲಿ ಬೋಟಿಂಗ್, ವಾಟರ್ ಸ್ಪೋರ್ಟ್ ನಂತಹ ಜಲಕ್ರೀಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಜೋಗಕ್ಕೆ ಬಂದವರು ಎರಡು ದಿನ ಇಲ್ಲೆ ಉಳಿಯುವಂತೆ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಜೋಗದಲ್ಲಿ ಸುಮಾರು 80 ಕೊಠಡಿ ಒಳಗೊಂಡ ಒಂದು ಸ್ಟಾರ್ ಹೋಟೆಲ್ ನಿರ್ಮಾಣ ಮಾಡಲಾಗುತ್ತಿದೆ. ಇನ್ನೂ ಪ್ರವಾಸಿಗರು ಜೋಗವನ್ನು ನೋಡಲು ಬಂದಾಗ ಅವರ ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಮೊದಲನೇ ಹಂತದ ಕಾಮಗಾರಿಯಲ್ಲಿ ವೀಕ್ಷಣಾ ಗೋಪುರ, ವಾಣಿಜ್ಯ ಮಳಿಗೆಗಳು, ವಾಕಿಂಗ್ ಪಾಥ್, ಪ್ರವಾಸಿಗರು ನಿಂತು ಜಲಪಾತ ನೋಡಲು ಸಣ್ಣ ಸಣ್ಣ ಗುಡಿಸಲು ನಿರ್ಮಾಣ ಮಾಡಲಾಗಿದೆ. ಪ್ರವೇಶ ದ್ವಾರದಲ್ಲಿಯೇ ಟಿಕೆಟ್ ಕೌಂಟರ್, ಒಳ ಪ್ರವೇಶಕ್ಕೆ ಒಂದು ದಾರಿ, ಜಲಪಾತ ವೀಕ್ಷಿಸಿ ವಾಪಸ್ ಆಗಲು ಮತ್ತೊಂದು ದಾರಿ ಮಾಡಲಾಗಿದೆ. ಈ ಎಲ್ಲ ಕಾಮಗಾರಿಗಳು ಶೇ.95 ರಷ್ಟು ಪೂರ್ಣಗೊಂಡಿವೆ. ಬಣ್ಣ ಬಳಿಯುವ ಕೆಲಸ ಮಾತ್ರ ಬಾಕಿ ಇದೆ.

ಎರಡನೇ ಹಂತದ ಕಾಮಗಾರಿ: ಎರಡನೇ ಹಂತದ ಕಾಮಗಾರಿ ಪ್ರಾರಂಭವಾಗಿದೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ಸರ್ಕಾರವು ಪಿಪಿಪಿ ಮಾದರಿಯಲ್ಲಿ ಕೇಬಲ್ ಕಾರ್ ಹಾಗೂ ಸ್ಟಾರ್ ಹೋಟೆಲ್ ನಿರ್ಮಿಸಲಾಗುತ್ತಿದೆ. ಈ ಎರಡು ಕಾಮಗಾರಿ ಕೆಸಲವನ್ನು ಭೂಮಿಪುತ್ರ ಕಂಪನಿಯು ವಹಿಸಿಕೊಂಡಿದೆ. ಇದಕ್ಕೆ ಸರ್ಕಾರ ಹಾಗೂ ಭೂಮಿಪುತ್ರ ಕಂಪನಿಗಳೆರಡು ಒಪ್ಪಂದವನ್ನು ಮಾಡಿಕೊಂಡಿವೆ. ಇದಲ್ಲದೇ ಜೋಗ ಜಲಪಾತ ವೀಕ್ಷಣೆಗೆ ರೂಪ್ ವೇ ಕಾಮಗಾರಿ, ವಿಶಾಲವಾದ ಪಾರ್ಕಿಂಗ್, ರೈನ್ ಡ್ಯಾನ್ಸ್, ನೀರಿನ ಕಾರಂಜಿ, ಗ್ಲಾಸ್ ಹೌಸ್ ನಿರ್ಮಾಣ , ಉದ್ಯಾನವನ, ಜಾಯಿಂಟ್ ವೀಲ್ ಹಾಗೂ ಜೋಗ ಜಲಪಾತ ಸೇರಿದಂತೆ ವಿದ್ಯುತ್ ಉತ್ಪಾದನೆಯ ಸಮಗ್ರ ಮಾಹಿತಿಯುಳ್ಳ ಒಂದು ಮ್ಯೂಸಿಯಂ ನಿರ್ಮಾಣ ಮಾಡಲಾಗುತ್ತಿದೆ. ಜೋಗದ ಕೆಳ ಭಾಗಕ್ಕೆ ಇಳಿದು ಮೇಲಕ್ಕೆ ಹತ್ತಲು ಅವಕಾಶ ಮಾಡಿಕೊಡುವ ಯೋಜನೆ ಇದೆ.
ಜೋಗದ ಅಭಿವೃದ್ದಿಯ ಕುರಿತು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಜೋಗದಲ್ಲಿ ಕೆಆರ್ಎಸ್ ಮಾದರಿಯ ಉದ್ಯಾನವನ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಜೋಗಕ್ಕೆ ವರ್ಷವಿಡೀ ಪ್ರವಾಸಿಗರು ಆಗಮಿಸುವಂತೆ ಮಾಡಲು ಯೋಜನೆ ರೂಪಿಸಲಾಗಿದೆ. ಜಾಯಿಂಟ್ ವೀಲ್ ಮಾಡಲು ಸೂಚಿಸಿದ್ದೇನೆ. ಕೇಬಲ್ ಕಾರು ವ್ಯವಸ್ಥೆ ಮಾಡಲು ಶಾಸಕರಿಗೆ ಸೂಚಿಸಿದ್ದೇನೆ. ಜೋಗದಲ್ಲಿ ರಾತ್ರಿ ಸಹ ಪ್ರವಾಸಿಗರು ಆಗಮಿಸಿದಾಗ ಹಣದ ಹರಿವು ಹೆಚ್ಚಾಗುತ್ತದೆ. ಇಲ್ಲಿ ಕಾಮಗಾರಿ ವೇಗ ಪಡೆದುಕೊಳ್ಳಬೇಕಿದೆ. ಜೋಗದ ಕಾಮಗಾರಿಯು ಹಣದ ಕೊರತೆಯಿಂದ ಮಂದಗತಿಯಿಂದ ನಡೆಯುತ್ತಿದೆ. ಆದರೆ ಈಗ ಹಣದ ಕೊರತೆ ಇಲ್ಲ. ಮುಂದಿನ 9 ತಿಂಗಳ ಒಳಗೆ ಕಾಮಗಾರಿ ಮುಗಿಸಬೇಕೆಂದು ಸೂಚಿಸಿದ್ದೇನೆ. ಜೋಗದ ಕೆಳ ಭಾಗಕ್ಕೆ ಹೋಗಲು ಅವಕಾಶ ಕಲ್ಪಿಸಲಾಗುವುದು ಎಂದರು.
ಜೋಗದಲ್ಲಿ 6 ಹಂತದಲ್ಲಿ ನೀರನ್ನು ಮೇಲತ್ತಲಾಗುತ್ತಿದೆ. ರಾಜ್ಯದಲ್ಲಿ ಜಲ ವಿದ್ಯುತ್ ಹೆಚ್ಚು ಉತ್ಪಾದನೆ ಮಾಡಲಾಗುತ್ತಿದೆ. ಇದರಿಂದ ಮಕ್ಕಳಿಗೆ ಒಂದು ಮಾಹಿತಿ ಸಿಗುವಂತೆ ಮಾಡಲು ಸೂಚನೆ ನೀಡಲಾಗಿದೆ. ಜೋಗದ ವಿದ್ಯುತ್ ಉತ್ಪಾದನೆ ಕುರಿತು ಮಾಹಿತಿ ಸಿಗಬೇಕೆಂದು ನಮ್ಮ ಬಯಕೆಯಾಗಿದೆ. 183 ಕೋಟಿ ಕಾಮಗಾರಿಯಾಗಿದೆ. ಈಗ 75 ಕೋಟಿ ಹಣ ಬಂದಿದೆ. ಇಲ್ಲಿ ರೈನ್ ಡ್ಯಾನ್ಸ್. ಕಾರಂಜಿ, ಗ್ಲಾಸ್ ಹೌಸ್ ನಿರ್ಮಾಣ ಮಾಡಲಾಗುತ್ತಿದೆ. ರೂಪ್ ವೇ ಮಾಡುವುದು ಬಂಗಾರಪ್ಪನವರ ಕನಸು, ಅದನ್ನು ನನಸು ಮಾಡಲಾಗುತ್ತಿದೆ ಎಂದು ಹೇಳಿದರು.
20 ಎಕರೆ ಜಾಗ ಕಂದಾಯ ಇಲಾಖೆಗೆ ಇದೆ. ತಳಕಳಲೆ ಡ್ಯಾಂನ ಕೆಳಗೆ ಕೆಆರ್ಎಸ್ ಮಾದರಿ ಉದ್ಯಾನವನ ಮಾಡಲು ಯೋಜನೆ ಇದೆ. ಹಣದ ಕೂರತೆ ಇಲ್ಲ. ಜೋಗವನ್ನು ಪ್ರಪಂಚದಲ್ಲಿ ಗುರುತಿಸುವಂತೆ ಮಾಡುವ ಯೋಜನೆ ಇದೆ. ಕುಡಿಯುವ ನೀರು. ಶೌಚಾಲಯದ ವ್ಯವಸ್ಥೆ ಮಾಡಲಾಗುವುದು. ಫಾಲ್ಸ್ನಲ್ಲಿ ಲೈಟಿಂಗ್ಸ್ ವ್ಯವಸ್ಥೆ ಮಾಡುವ ಉದ್ದೇಶವಿದೆ. ವಿದ್ಯುತ್ ಉತ್ಪಾದನೆ ಮಾಡುವ ಕುರಿತು ಮಾಹಿತಿ ಒಳಗೊಂಡ ಒಂದು ಮ್ಯೂಸಿಯಂ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರವಾಸಿಗ ಡಾ.ನಿಖತ್ ಈಟಿವಿ ಭಾರತ ಜೊತೆಗೆ ಮಾತನಾಡಿ, ನಾವು ಇದೇ ಮೊದಲ ಬಾರಿಗೆ ಜೋಗ ವೀಕ್ಷಣೆಗೆ ಆಗಮಿಸಿದ್ದೇವೆ. ಜಲಪಾತ ನೋಡಿ ತುಂಬಾ ಖುಷಿಯಾಗಿದೆ. ಅಲ್ಲದೆ ಇಲ್ಲಿನ ಅಭಿವೃದ್ಧಿ ನೋಡಿ ಸಂತಸವಾಯಿತು. ಮತ್ತೊಮ್ಮೆ ಮಳೆಗಾಲದಲ್ಲಿ ಬಂದು ಜೋಗ ಜಲಪಾತ ನೋಡುತ್ತೇವೆ ಎಂದರು.
ಪ್ರವಾಸಿಗರಾದ ನಾಗವೇಣಿ ಮಾತನಾಡಿ, ಮಳೆಗಾಲದಲ್ಲಿ ಜೋಗದಲ್ಲಿ ನೀರು ಬಿಳುವುದನ್ನು ನೋಡಲು ಆಗಲ್ಲ. ಈಗ ತುಂಬಾ ಚೆನ್ನಾಗಿ ಕಾಣುತ್ತಿದೆ. ಹಾಗೇ ಇಲ್ಲಿನ ಅಭಿವೃದ್ದಿ ಸಹ ಭರದಿಂದ ನಡೆಯುತ್ತಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಪಾಕ್ ವಿರುದ್ಧ ಹೋರಾಡಲು ಸಿದ್ಧ: ಸರ್ಕಾರದ ಬುಲಾವ್ಗಾಗಿ ಕಾಯುತ್ತಿದ್ದಾರೆ 570 ಮಾಜಿ ಯೋಧರು
ಇದನ್ನೂ ಓದಿ: ಶಿವಮೊಗ್ಗ: ಭದ್ರಾ ನಾಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಜಿಂಕೆಮರಿ ರಕ್ಷಣೆ