ಶಿವಮೊಗ್ಗ: ಉತ್ತರ ಪತ್ರಿಕೆ ಮರು ಮೌಲ್ಯಮಾಪನದ ಬಳಿಕ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿಯ ವಾಗ್ದೇವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಅವರು ವಿಜ್ಞಾನ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಇತ್ತೀಚೆಗೆ ಪಿಯುಸಿ ಫಲಿತಾಂಶ ಪ್ರಕಟಗೊಂಡಾಗ ದೀಕ್ಷಾಗೆ 600ಕ್ಕೆ 599 ಅಂಕಗಳು ಬಂದಿದ್ದವು. ಬಳಿಕ ಅವರು ತಮ್ಮ ಉತ್ತರ ಪತ್ರಿಕೆಯ ನಕಲು ಪ್ರತಿಗಳನ್ನು ಪಡೆದು ಪರಿಶೀಲಿಸಿದಾಗ ರಸಾಯನಶಾಸ್ತ್ರ ವಿಷಯಕ್ಕೆ 99 ಅಂಕಗಳಿದ್ದವು. ಇದನ್ನು ಗಮನಿಸಿದ ದೀಕ್ಷಾ ಹಾಗೂ ಪೋಷಕರು ಮರು ಎಣಿಕೆಗೆ ಅರ್ಜಿ ಹಾಕಿದ್ದರು. ಇದೀಗ ಮರು ಮೌಲ್ಯಮಾಪನದ ನಂತರ ರಸಾಯನಶಾಸ್ತ್ರಕ್ಕೂ ಇತರ ಎಲ್ಲ ವಿಷಯಗಳಂತೆ 100ಕ್ಕೆ 100 ಅಂಕ ಪಡೆದಿದ್ದಾರೆ. ಇದರೊಂದಿಗೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅವರಿಗೆ ರಾಜ್ಯಕ್ಕೆ ಅಗ್ರಸ್ಥಾನ ಸಿಕ್ಕಿದೆ.
ದೀಕ್ಷಾ ತಂದೆ ರಾಘವೇಂದ್ರ ಕಲ್ಕೂರ್ ಅವರು ತೀರ್ಥಹಳ್ಳಿ ತಾಲೂಕು ಮೇಗರವಳ್ಳಿಯಲ್ಲಿ ಶಿಕ್ಷಕರಾಗಿದ್ದಾರೆ. ತಾಯಿಯೂ ಕೂಡ ಉಷಾ ತೀರ್ಥಹಳ್ಳಿ ಪಟ್ಟಣದ ಬಾಲಕಿಯರ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ದೀಕ್ಷಾ ತೀರ್ಥಹಳ್ಳಿಯ ಬೆಟ್ಟಮಕ್ಕಿಯ ಸಹ್ಯಾದ್ರಿ ಹೈಸ್ಕೂಲ್ನಲ್ಲಿ ಓದಿರುವ ದೀಕ್ಷಾ ರಾಜ್ಯಕ್ಕೆ ಟಾಪರ್ ಅಗಿರುವುದರಿಂದ ಕುಟುಂಬದಲ್ಲಿ ಸಂತಸ ಮನೆಮಾಡಿದೆ.
ದೀಕ್ಷಾ ಹೇಳುವುದೇನು? ಈ ಕುರಿತು ಈಟಿವಿ ಭಾರತ ಜೊತೆ ದೂರವಾಣಿಯಲ್ಲಿ ಮಾತನಾಡಿದ ದೀಕ್ಷಾ, ''ನನಗೆ ಪಿಯುಸಿಯಲ್ಲಿ 599 ಅಂಕ ಬಂದಾಗ ತುಂಬ ಸಂತೋಷವಾಗಿತ್ತು. ನಂತರ ಪೋಷಕರ ಸಲಹೆ ಮೇರೆಗೆ ಉತ್ತರ ಪತ್ರಿಕೆಯ ನಕಲು ತೆಗೆಸಿದೆ. ಆಗ ರಸಾಯನಶಾಸ್ತ್ರ ಉತ್ತರ ಪತ್ರಿಕೆಯ ಮೊದಲ ಪುಟದಲ್ಲಿಯೇ ಒಂದು ಅಂಕ ಮಿಸ್ ಆಗಿತ್ತು. ಇದರಿಂದ ಮರು ಎಣಿಕೆಗೆ ಹಾಕಿದಾಗ ಆ ಒಂದು ಅಂಕವೂ ಬಂತು. ಇದರಿಂದ ನನಗೆ ರಸಾಯನಶಾಸ್ತ್ರದಲ್ಲೂ 100ಕ್ಕೆ ನೂರು ಅಂಕ ಬಂದಿದೆ. ಇದರಿಂದ ನನಗೆ ಒಟ್ಟಾರೆ 600ಕ್ಕೆ 600 ಅಂಕಗಳು ಲಭಿಸಿವೆ. ಈಗ ನನಗೆ ತುಂಬಾ ಸಂತೋಷವಾಗಿದೆ'' ಎಂದು ಖುಷಿಯನ್ನು ಹಂಚಿಕೊಂಡರು.
ಇದನ್ನೂ ಓದಿ: ಪ್ರತಿ ಕ್ವಿಂಟಾಲ್ಗೆ ₹2445 ದರದಲ್ಲಿ ರೈತರಿಂದ ಹಸಿಶುಂಠಿ ಖರೀದಿ: ಶಿವಮೊಗ್ಗ ಜಿಲ್ಲಾಧಿಕಾರಿ