ಬೆಳಗಾವಿ: ವಿಡಿಯೋ ಕಾಲ್ ಮಾಡಿ, 'ನಿಮ್ಮ ಫೋಟೋ ಐಡಿ ಬಳಸಿಕೊಂಡು ಸೈಬರ್ ವಂಚನೆ ಎಸಗಲಾಗಿದೆ' ಎಂದ ಸೈಬರ್ ವಂಚಕರ ಬೆದರಿಕೆಗೆ ಹೆದರಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ರಾತ್ರಿ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ. ನಿವೃತ್ತ ರೈಲ್ವೆ ಉದ್ಯೋಗಿ ಡಿಯಾಗೋ ನಜರತ್ (83) ಹಾಗೂ ಪಾವಿಯಾ ನಜರತ್ (79) ಆತ್ಮಹತ್ಯೆ ಮಾಡಿಕೊಂಡ ದಂಪತಿ.
ಸ್ವಸಹಾಯ ಸಂಘದ ಮಹಿಳೆ ವೃದ್ಧ ದಂಪತಿ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನಂದಗಡ ಠಾಣೆ ಪೊಲೀಸರು ಭೇಟಿ ನೀಡಿ, ಬಿಮ್ಸ್ನಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಕಳೆದ ಕೆಲ ತಿಂಗಳಿಂದ ಸೈಬರ್ ಖದೀಮರು ವೃದ್ಧ ದಂಪತಿ ಬೆನ್ನು ಬಿದ್ದಿದ್ದರು. ಪೊಲೀಸರೆಂದು ಹೇಳಿಕೊಂಡ ವಂಚಕರು ನಿಮ್ಮ ಫೋಟೋ ಐಡಿ ಬಳಸಿಕೊಂಡು ಕೆಲವರು ವಂಚನೆ ಎಸಗಿದ್ದಾರೆ ಎಂದು ಬೆದರಿಕೆ ಹಾಕಿದ್ದರು. ಇದರಿಂದ ಭಯಗೊಂಡ ದಂಪತಿಯು ಆಗಾಗ್ಗೆ ವಂಚಕರ ಖಾತೆಗೆ ಸುಮಾರು 50 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದರು. ಅಷ್ಟಾದರೂ, ಮತ್ತಷ್ಟು ಹಣ ನೀಡುವಂತೆ ವಂಚಕರು ಪೀಡಿಸಲು ಶುರು ಮಾಡಿದ್ದರು. ಖದೀಮರ ಕಿರಿಕಿರಿಗೆ ಬೇಸತ್ತು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ಮಾಹಿತಿ: ಮರಣೋತ್ತರ ಪರೀಕ್ಷೆಗೆ ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ ವೇಳೆ ಪರಿಶೀಲಿಸಿದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾಧ್ಯಮದವರ ಜೊತೆಗೆ ಮಾತನಾಡಿ, ''ನಿನ್ನೆ ದಿನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಸ್ಥಳದಲ್ಲಿ ಡೆತ್ನೋಟ್ ಕೂಡ ಸಿಕ್ಕಿದೆ. ನಿಮ್ಮ(ದಂಪತಿಯ) ಫೋಟೋ ಐಡಿ ಬಳಸಿ ಬೇರೆಯವರು ಸೈಬರ್ ವಂಚನೆ ಮಾಡಿದ್ದಾರೆ ಎಂದು ಕರೆ ಬಂದಿದೆ. ಇದಾದ ಬಳಿಕ ಮತ್ತೊಬ್ಬ ವ್ಯಕ್ತಿಗೆ ಕರೆ ವರ್ಗಾವಣೆ ಮಾಡಿದ್ದಾರೆ. ಇವರ ನಡುವೆ ಏನು ಮಾತುಕತೆ ಆಗಿದೆ ಎಂಬುದು ಗೊತ್ತಿಲ್ಲ. ಸೈಬರ್ ವಂಚನೆ ಸರಿಪಡಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ, ಸೈಬರ್ ವಂಚಕರಿಗೆ ಹಲವು ಸಲ ದಂಪತಿ ಸುಮಾರು 50 ಲಕ್ಷ ರೂ. ಹಣ ಹಾಕಿದ್ದಾರೆ. ಇದಾದ ಬಳಿಕ ಮೊನ್ನೆ ದಂಪತಿ ಹಣ ಹಾಕಿದವರಿಗೆ ಕರೆ ಮಾಡಿದ್ದಾರೆ. ಆದರೆ ಅವರು ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೆಸೇಜ್ ಹಾಕಿದ್ದಾರೆ. ಇದಾದ, ಬಳಿಕ ಕರೆ ಸ್ವೀಕರಿಸದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ'' ಎಂದರು.
ಕೂಡಲೇ ಪೊಲೀಸರನ್ನು ಸಂಪರ್ಕಿಸಿ: ''ಸೈಬರ್ ವಂಚನೆಗೆ ಒಳಗಾದ ತಕ್ಷಣ ಜನರು ಪೊಲೀಸರನ್ನು ಕೂಡಲೇ ಸಂಪರ್ಕಿಸಿದರೆ ಮುಂದೆ ಆಗುವ ಅನಾಹುತ ತಪ್ಪಿಸಬಹುದು. ನಾವು ಕೂಡ ಬಹಳಷ್ಟು ಜಾಗೃತಿ ಮೂಡಿಸುತ್ತಿದ್ದೇವೆ. ಈ ರೀತಿ ಪ್ರಾಣ ಕಳೆದುಕೊಂಡರೆ ಏನೂ ಸಾಧಿಸಲು ಆಗಲ್ಲ. ಅದೇ ರೀತಿ ಅಪರಾಧಿಗಳಿಗೆ ಮತ್ತಷ್ಟು ಸಹಾಯ ಮಾಡಿದಂತೆ ಆಗುತ್ತದೆ. ಈ ಪ್ರಕರಣದಲ್ಲಿ ಅದು ಆಗದೇ ಇರುವುದು ನೋವು ತಂದಿದೆ'' ಎಂದು ಎಸ್ಪಿ ಗುಳೇದ ಬೇಸರ ಹೊರಹಾಕಿದರು.
ಇದನ್ನೂ ಓದಿ: ಆನ್ಲೈನ್ ಬೆಟ್ಟಿಂಗ್ ಸಾಲದ ಸುಳಿ; ಮೈಸೂರಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಮಹಾರಾಷ್ಟ್ರದಲ್ಲಿ ರೈಲ್ವೇ ಇಲಾಖೆಯಲ್ಲಿ ಸರ್ಕಾರಿ ನೌಕರರಾಗಿ ಕೆಲಸ ಮಾಡಿದ್ದಾರೆ. 22 ವರ್ಷಗಳ ಹಿಂದೆ ನಿವೃತ್ತಿಯಾಗಿ ಬೀಡಿಗೆ ಬಂದು ಇಬ್ಬರೂ ನೆಲೆಸಿದ್ದರು. ಅವರಿಗೆ ಮಕ್ಕಳು ಇರಲಿಲ್ಲ. ಮನೆಯಲ್ಲಿ ಇಬ್ಬರೇ ಇರುತ್ತಿದ್ದರು. ಸೈಬರ್ ಅಪರಾಧದಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಡೆತ್ನೋಟ್ ಆಧರಿಸಿ ಕೇಸ್ ಹಾಕಿದ್ದೇವೆ. ಪ್ರಕರಣವನ್ನು ಜಿಲ್ಲಾ ಸೈಬರ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ'' ಎಂದು ಎಸ್ಪಿ ತಿಳಿಸಿದರು.
ಯಾರ ಮುಂದೆಯೂ ಹೇಳಿಕೊಂಡಿರಲಿಲ್ಲ: ಬೀಡಿ ಗ್ರಾಮದ ನಿವಾಸಿ ಆರೋಗ್ಯಪ್ಪ ಪಾದನಕಟ್ಟಿ ಮಾತನಾಡಿ, ''ನಿನ್ನೆ ರಾತ್ರಿ 7.30ರ ಸುಮಾರಿಗೆ ನಮಗೆ ಸುದ್ದಿ ಗೊತ್ತಾಯಿತು. ಒಂದು ಮೃತದೇಹ ಮನೆಯ ಒಳಗಡೆ, ಮತ್ತೊಂದು ಮೃತದೇಹ ನೀರಿನ ಟ್ಯಾಂಕ್ನಲ್ಲಿ ಪತ್ತೆಯಾಗಿದೆ. ಪೊಲೀಸರು ಬಂದು ಪರಿಶೀಲಿಸಿದಾಗ ಮೃತದೇಹಕ್ಕೆ ಗಾಯಗಳಾಗಿದ್ದು, ಸ್ಥಳದಲ್ಲಿ ಚಾಕು ಇತ್ತು. ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಡೆತ್ನೋಟ್ ಕೂಡ ಪತ್ತೆಯಾಗಿದೆ. ಆದರೆ, ಸೈಬರ್ ವಂಚಕರಿಂದ ತಮಗೆ ತೊಂದರೆ ಆಗುತ್ತಿದೆ ಅಂತಾ ಅವರು ಯಾರ ಮುಂದೆಯೂ ಹೇಳಿಕೊಂಡಿರಲಿಲ್ಲ. ಜನವರಿ 10ರಿಂದಲೂ ಫೋನ್ ಮಾಡಿ ತೊಂದರೆ ಕೊಡುತ್ತಿದ್ದರು ಎಂದು ತಿಳಿದುಬಂದಿದೆ. ಅವರ ಸಾವಿಗೆ ಪೊಲೀಸರು ನ್ಯಾಯ ಕೊಡಿಸಬೇಕು'' ಎಂದು ಒತ್ತಾಯಿಸಿದರು.
ಇದನ್ನೂ ಓದಿ: ವೈದ್ಯ ಸೇರಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ ; ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ