ಮಂಗಳೂರು (ದಕ್ಷಿಣ ಕನ್ನಡ) : ನಗರದ ಅಡ್ಯಾರ್ನ ಷಾ ಗಾರ್ಡನ್ನಲ್ಲಿ ಶುಕ್ರವಾರ ನಡೆದಿದ್ದ ವಕ್ಫ್ ತಿದ್ದುಪಡಿ ವಿರೋಧಿ ಬೃಹತ್ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸ್ ಕರ್ತವ್ಯ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಪಡಿಸಿರುವ ಮೂವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಕೃಷ್ಣಾಪುರ ನಿವಾಸಿ ಜಲೀಲ್, ವಲಚ್ಚಿಲ್ ನಿವಾಸಿ ಫಝಲ್ ಮತ್ತು ಮೊಹಮ್ಮದ್ ಹನೀಫ್ ನೌಫಾಲ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಶುಕ್ರವಾರ ಸಂಜೆ 4.30ರ ಸುಮಾರಿಗೆ ಕೆಲವು ಪ್ರತಿಭಟನಾಕಾರರಿಂದ ರಸ್ತೆ ತಡೆದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ವೇಳೆ ಪೊಲೀಸರು ಮನವಿ ಮಾಡಿದರೂ ಉದ್ದೇಶಪೂರ್ವಕವಾಗಿ ರಸ್ತೆ ಬಂದ್ ಮಾಡಿ ಅಡ್ಡಿಪಡಿಸಲಾಗಿತ್ತು. ತುರ್ತು ವಾಹನಗಳ ಸಂಚಾರಕ್ಕೂ ಪ್ರತಿಭಟನೆ ಹೆಸರಿನಲ್ಲಿ ತಡೆಯೊಡ್ಡಲಾಗಿತ್ತು. ತಡೆಯಲು ಬಂದ ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿರುವ ಆರೋಪ ಕೇಳಿ ಬಂದಿತ್ತು.
ಸರಾಗವಾಗಿ ವಾಹನ ಸಂಚಾರವಿದ್ದರೂ ರಸ್ತೆ ತಡೆದು ಪ್ರತಿಭಟಿಸಿ ಸಮಸ್ಯೆ ಸೃಷ್ಟಿಸಲಾಗಿತ್ತು. ಈ ಬಗ್ಗೆ ಇರುವ ವಿಡಿಯೋ ದೃಶ್ಯಗಳು ಹಾಗೂ ಪೊಲೀಸ್ ಸಿಬ್ಬಂದಿ ದೂರಿನ ಹಿನ್ನೆಲೆಯಲ್ಲಿ ಮೂವರ ಮೇಲೆ ಎಫ್ಐಆರ್ ದಾಖಲಾಗಿದೆ. ಸದ್ಯ ವಿಡಿಯೋ ಫೂಟೇಜ್ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಇದನ್ನೂ ಓದಿ : ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ - PROTEST AGAINST WAQF BILL