ನನ್ನನ್ನು ಸಂಪುಟದಿಂದ ವಜಾ ಮಾಡಿರುವ ಹಿಂದೆ ದೊಡ್ಡ ಷಡ್ಯಂತ್ರ ಇದೆ: ಕೆ.ಎನ್.ರಾಜಣ್ಣ
ಸಚಿವ ಸಂಪುಟದಿಂದ ವಜಾ ಮಾಡಿದ ಬೆನ್ನಲ್ಲೇ ಕೆ ಎನ್ ರಾಜಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತನಾಡಿದರು.

Published : August 11, 2025 at 8:58 PM IST
ಬೆಂಗಳೂರು: ನನ್ನನ್ನು ಸಂಪುಟದಿಂದ ವಜಾ ಮಾಡಿರುವ ಹಿಂದೆ ದೊಡ್ಡ ಷಡ್ಯಂತ್ರ, ಪಿತೂರಿ ಇದೆ ಎಂದು ಪದಚ್ಯುತ ಸಚಿವ ಕೆ.ಎನ್.ರಾಜಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಎಲ್ಲರಿಗೂ ಸಂಜೆಯ ನಮಸ್ಕಾರ ಮಾಜಿ ಸಚಿವನಾಗಿ ಮಾತಾಡುತ್ತಿದ್ದೇನೆ. ಮಾಜಿ ಸಚಿವ ಎಂದು ಕರೆಸಿಕೊಳ್ಳಲು ನನಗೆ ಸಂತೋಷ ಇದೆ. ಈ ಪಿತೂರಿ ಹಿಂದೆ ಯಾರು ಯಾರು ಇದ್ದಾರೆ?, ಏನೇನು ನಡೆದಿದೆ?. ಎಲ್ಲೆಲ್ಲಿ ನಡೆದಿದೆ?. ಎಲ್ಲೆಲ್ಲಿ ಯಾವ ಮುಖಂಡರ ಜೊತೆ ಏನೇನು ನಡೆದಿದೆ ಎಂಬ ಬಗ್ಗೆ ಎಲ್ಲವನ್ನೂ ಕಾಲ ಬಂದಾಗ ತಿಳಿಸುತ್ತೇನೆ' ಎಂದು ಹೇಳಿದರು.
ನಮ್ಮ ನಾಯಕರಾದ ರಾಹುಲ್ ಗಾಂಧಿ, ವೇಣುಗೋಪಾಲ್, ನಮ್ಮ ಅಧ್ಯಕ್ಷರಿಗೆ ತಪ್ಪು ಗ್ರಹಿಕೆ ಆಗಿದೆ ಎಂಬುದು ನನ್ನ ಅನಿಸಿಕೆ. ಆ ತಪ್ಪು ಗ್ರಹಿಕೆ ನಿವಾರಣೆ ಮಾಡಲು ಹೈಕಮಾಂಡ್ ನಾಯಕರ ಭೇಟಿಗೆ ದೆಹಲಿಗೆ ಹೋಗುತ್ತೇನೆ. ತಪ್ಪು ಗ್ರಹಿಕೆಯನ್ನು ನಿವಾರಣೆ ಮಾಡಲು ಪ್ರಯತ್ನ ಮಾಡುತ್ತೇನೆ. ನಾವು ಏನೇ ಮಾತನಾಡಿದರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಿದ್ದೇವೆ. ರಾಹುಲ್ ಗಾಂಧಿ ಅವರು ಈ ದೇಶದ ನಾಯಕರು. ಅವರು ಮಾಡಿದ ಮತಗಳ್ಳತನದ ಹೋರಾಟಕ್ಕೆ ನಮ್ನೆಲ್ಲರ ಬೆಂಬಲ ಇದೆ. ಅವರ ಮಾರ್ಗದರ್ಶನದಂತೆ ನಾವು ಮುಂದೆ ನಡೆದುಕೊಳ್ಳುತ್ತೇವೆ ಎಂದರು.
ನನ್ನನ್ನು ಸಚಿವನನ್ನಾಗಿ ಮಾಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ನಾನು ಧನ್ಯವಾದ ಅರ್ಪಿಸಿದ್ದೇನೆ. ಸಚಿವ ಸತೀಶ್ ಜಾರಕಿಹೊಳಿ, ಚೆಲುವರಾಯಸ್ವಾಮಿ, ಸುಧಾಕರ್ ಎಲ್ಲರೂ ಹೋಗಿ ಸಿಎಂ ಅವರನ್ನು ಭೇಟಿಯಾಗಿದ್ದೇವೆ. ನನ್ನನ್ನು ಸಂಪುಟದಿಂದ ಕೈ ಬಿಡಬೇಕು ಎಂಬುದು ಹೈಕಮಾಂಡ್ ಸೂಚನೆಯಾಗಿತ್ತು. ಅದರಂತೆ ಸಿಎಂ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅದರಂತೆ ಸಂಪುಟದಿಂದ ನನ್ನನ್ನು ಕೈ ಬಿಡಲಾಗಿದೆ. ಇದು ಪಕ್ಷದ ತೀರ್ಮಾನವಾಗಿದೆ. ಅದನ್ನು ಈ ಸಂದರ್ಭದಲ್ಲಿ ಪ್ರಶ್ನೆ ಮಾಡುವುದು ಸಾಧುವಲ್ಲ ಎಂದು ತಿಳಿಸಿದರು.
ಪಕ್ಷಕ್ಕೆ ಮುಜುಗರ ಮಾಡಬಾರದು ಎಂಬ ದೃಷ್ಡಿಯಿಂದ ನಾನು ಹೆಚ್ಚಿನ ವಿವರಣೆಯನ್ನು ಹೇಳಲು ಹೋಗುವುದಿಲ್ಲ. ರಾಹುಲ್ ಗಾಂಧಿ ಈ ದೇಶದ ನಾಯಕ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವೆ. ಮುಂದೆ ಎಲ್ಲವನ್ನೂ ಸರಿಯಾಗಿ ತಿಳಿಸುವೆ ಎಂದು ಪ್ರತಿಕ್ರಿಯೆ ನೀಡಿದರು.
ಸಂಪುಟದಿಂದ ರಾಜಣ್ಣ ವಜಾ: ಮತಗಳ್ಳತನ ಆರೋಪದ ವಿರುದ್ಧ ವ್ಯತಿರಿಕ್ತ ಹೇಳಿಕೆ ನೀಡಿದ್ದ ಸಚಿವ ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ಇಂದು ಪದಚ್ಯುತಿಗೊಳಿಸಲಾಗಿದೆ.
ಇತ್ತೀಚೆಗೆ ತುಮಕೂರಿನಲ್ಲಿ ಮಾತನಾಡಿದ್ದ ಕೆ.ಎನ್.ರಾಜಣ್ಣ, ವೋಟರ್ ಲಿಸ್ಟ್ ಯಾವ ಕಾಲದಲ್ಲಿ ಮಾಡಿದ್ದು? ನಮ್ಮದೇ ಸರ್ಕಾರ ಇರುವಾಗ ಮಾಡಿರೋದು ಅಲ್ವಾ? ಆವಾಗ ಎಲ್ಲಾ ಕಣ್ಮುಚ್ಚಿ ಕುಳಿತಿದ್ರಾ?. ಮತಪಟ್ಟಿ ಅಕ್ರಮಗಳು ನಡೆದಿರುವುದು ಸತ್ಯ. ಆದರೆ, ಆ ಅಕ್ರಮಗಳು ನಮ್ಮ ಕಣ್ಮುಂದೆನೆ ನಡೆದಿದ್ದಲ್ಲ. ನಮಗೆ ಅವಮಾನ ಆಗಬೇಕು. ನಾವು ನೋಡಿಕೊಳ್ಳಲಿಲ್ಲವಲ್ಲ ಅಂತ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಕಾಂಗ್ರೆಸ್ಗೆ ತೀವ್ರ ಮುಜುಗರ ಉಂಟಾಗಿತ್ತು.
ಇದನ್ನೂ ಓದಿ: ಮತಗಳ್ಳತನ ಕುರಿತು ವ್ಯತಿರಿಕ್ತ ಹೇಳಿಕೆ; ಸಂಪುಟದಿಂದ ಸಚಿವ ಕೆ.ಎನ್ ರಾಜಣ್ಣ ವಜಾ
ಇದನ್ನೂ ಓದಿ: ಸಚಿವ ಸ್ಥಾನದಿಂದ ರಾಜಣ್ಣ ವಜಾ ಆಗಿರುವುದು ನನ್ನ ಮನಸ್ಸಿಗೂ ನೋವುಂಟು ಮಾಡಿದೆ: ಡಿಸಿಎಂ

