ತುಮಕೂರು : ಜಾತಿ ವ್ಯವಸ್ಥೆ ಎಂಬುದು ನಿಂತ ನೀರಿದ್ದಂತೆ, ಅದಕ್ಕೆ ಚಲನೆ ಇಲ್ಲ. ಆರ್ಥಿಕ ಚಟುವಟಿಕೆ ಇದ್ದಾಗ ಮಾತ್ರ ಅದಕ್ಕೆ ಚಲನೆ ಸಿಗುತ್ತದೆ. ಅದು ಬರಬೇಕಾದ್ರೆ ಶಿಕ್ಷಣ ಸಿಗಬೇಕು. ಶಿಕ್ಷಣದಿಂದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಶಕ್ತಿ ಬರುತ್ತದೆ. ಇದರಿಂದ ಜಾತ್ಯತೀತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಗರದಲ್ಲಿ ಕುರುಬ ಸಾಂಸ್ಕೃತಿಕ ಪರಿಷತ್ ಹಾಗೂ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕುರುಬ ಸಮಾಜದ ಸಾಂಸ್ಕೃತಿಕ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಕುರುಬ ಸಮುದಾಯದ ಸಂಸ್ಕೃತಿ ದರ್ಶನ ಮಾಲೆಯ 31 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಸಿಎಂ ಮಾತನಾಡಿದರು.
ಬಸವಣ್ಣನವರು 12ನೇ ಶತಮಾನದಲ್ಲಿಯೇ ಅನುಭವ ಮಂಟಪ ಮಾಡಿದರು. ಇವತ್ತು ನೀವು ಚರ್ಚೆಗೆ ಸೇರಿರುವಂತೆ ಅವತ್ತೇ ಚರ್ಚೆ ಮಾಡುತ್ತಿದ್ದರು. ಅವತ್ತೇ ಪಾರ್ಲಿಮೆಂಟ್, ಅಸೆಂಬ್ಲಿ, ಕೌನ್ಸಿಲ್ಗಳು ಪ್ರಾರಂಭವಾಗಿದ್ದವು. ಪ್ರಜಾಪ್ರಭುತ್ವ ಅವತ್ತೇ ಪ್ರಾರಂಭವಾಗಿತ್ತು. ಚರ್ಚೆಯಾಗಬೇಕು, ಅದಕ್ಕೆ ಪರಿಹಾರ ಸಿಗಬೇಕು. ಪರಿಹಾರ ಸಿಗಬೇಕಾದ್ರೆ ಜಾರಿಯಾಗಬೇಕು. ಅದಕ್ಕೆ ಬಸವಾದಿ ಶರಣರನ್ನು ನುಡಿದಂತೆ ನಡೆದರು ಎಂದು ಕರೆಯುತ್ತೇವೆ ಎಂದರು.
ಪ್ರಗತಿಪರ ವಿಚಾರಗಳಿಗೆ ಅಡ್ಡಿ ಆತಂಕಗಳು ಬಂದೇ ಬರುತ್ತವೆ. ವಿಚಾರಗಳ ಜೊತೆ ನಾವು ನಿಲ್ಲದೇ ಹೋದ್ರೆ ಪ್ರಗತಿಪರ ವಿಚಾರಗಳು ಜಯ ಕಾಣಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.
ಶೂದ್ರರ ಮೇಲೆ ಕತೆಗಳನ್ನು ಕಟ್ಟುತ್ತಾರೆ : ಕಾಳಿದಾಸನ ನಾಲಿಗೆ ಮೇಲೆ ಅಕ್ಷರ ಬರೆದಿದ್ದಕ್ಕೆ ವಿದ್ಯಾವಂತನಾದರು ಹಾಗೂ ವಾಲ್ಮೀಕಿ ಒಬ್ಬ ದರೋಡೆಕೋರನಾಗಿದ್ದರು, ತಪಸ್ಸು ಮಾಡಿದ ನಂತರ ಅವರ ಮೇಲೆ ಹುತ್ತ ಬೆಳೆಯಿತು ಎಂಬುದೆಲ್ಲಾ ಸುಳ್ಳು. ಶೂದ್ರರು, ದಲಿತರು ಬುದ್ಧಿವಂತರಾದ್ರೆ ಅವರ ಮೇಲೆ ಇಂತಹ ಕಥೆಗಳನ್ನು ಕಟ್ಟುತ್ತಾರೆ ಎಂದು ತಿಳಿಸಿದರು.
ದೇಶದಲ್ಲಿ ಸಂವಿಧಾನ ರಚನೆ ಆಗದಿದ್ದಿದ್ದರೆ ಈ ರೀತಿಯ ಶಿಕ್ಷಣ ಲಭಿಸುತ್ತಿರಲಿಲ್ಲ. ಮನುಸ್ಮೃತಿ ಕಾರಣದಿಂದ ಜಾತಿ ಅಸಮಾನತೆ, ಜಾತಿ ಶೋಷಣೆ, ಜಾತಿ ದೌರ್ಜನ್ಯ ಹೆಚ್ಚಾಯಿತು. ಬೇರೆ ಯಾವುದೇ ಕಾರಣದಿಂದ ಅಸಮಾನತೆ ನಿರ್ಮಾಣ ಆಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಪಟ್ಟಭದ್ರರು ಹಿಂದಿನ ಜನ್ಮ ಕರ್ಮ ಎಂದು ನಂಬಿಸಿ ಜನರನ್ನು ವಂಚಿಸಿದರು. ವೈಜ್ಞಾನಿಕವಾಗಿ ಮತ್ತು ವೈಚಾರಿಕವಾಗಿ ಯೋಚನೆ ಮಾಡಿ ಪರಿಸ್ಥಿತಿ ಬದಲಾವಣೆ ಮಾಡಲು ಬಿಡುವುದಿಲ್ಲ. ಅದಕ್ಕೆ ಬಸವಣ್ಣನವರು ಕರ್ಮ ಸಿದ್ಧಾಂತವನ್ನು ತಿರಸ್ಕಾರ ಮಾಡಿ ಅಂತಾ ಕರೆ ನೀಡಿದ್ದರು ಎಂದರು.
ಕರ್ಮ ಸಿದ್ಧಾಂತವನ್ನು ತಿರಸ್ಕಾರ ಮಾಡಿಯೇ ಇಲ್ಲ : ಬಹಳ ಜನ ವಿದ್ಯಾವಂತರು ಕರ್ಮ ಸಿದ್ಧಾಂತವನ್ನು ತಿರಸ್ಕಾರ ಮಾಡಿಯೇ ಇಲ್ಲ. ನಿಮ್ಮಲ್ಲಿ ಎಷ್ಟು ಜನ ಕರ್ಮ ಸಿದ್ಧಾಂತ ತಿರಸ್ಕರಿಸಿದ್ದೀರೋ ಗೊತ್ತಿಲ್ಲ. ನನ್ನ ಹಣೆಬರಹ ಸ್ವಾಮಿ ಎಂದು ಹೇಳುತ್ತಾರೆ. ಅಲ್ಲದೆ ಬ್ರಹ್ಮ ಲಿಖಿತ ಎಂದು ಹೇಳುತ್ತಾರೆ ಎಂದು ಲೇವಡಿ ಮಾಡಿದರು.
ಬಹಳ ಜನರ ವೈದ್ಯರು, ಇಂಜಿನಿಯರ್ಗಳು ಈ ರೀತಿ ಕರ್ಮ ಸಿದ್ಧಾಂತವನ್ನು ನಂಬಿದ್ದಾರೆ. ಹೀಗಾಗಿ ಇವೆಲ್ಲ ತೊಡೆದುಹಾಕುವ ಸಾಹಿತ್ಯ ಸಂಸ್ಕೃತಿ ಬರಬೇಕಿದೆ. ನೋವನ್ನು ಅನುಭವಿಸಿರುವವರು ಇಂತಹ ಸಾಹಿತ್ಯವನ್ನು ಬರೆಯಬೇಕು. ಪಟ್ಟಭದ್ರ ಹಿತಾಸಕ್ತಿಗಳು ಬರೆಯುವುದಿಲ್ಲ. ಬಸವಣ್ಣ ಒಬ್ಬರೇ ಕರ್ಮ ಸಿದ್ಧಾಂತವನ್ನು ಧಿಕ್ಕರಿಸಿದ್ದರು. ಇಂತಹ ವೈಜ್ಞಾನಿಕ, ವೈಚಾರಿಕ ಚಿಂತನೆ ಬರಬೇಕು ಎಂದು ಪ್ರತಿಪಾದಿಸಿದರು.
ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೇನೆ: ಕುರುಬರು, ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರು, ಬಡವರು ಯಾಕೆ ಹಿಂದುಳಿದಿದ್ದಾರೆ. ಅಕ್ಕಿ ಕೊಡುವ ಕಾರ್ಯಕ್ರಮ ನನ್ನ ಅನುಭವದಿಂದ ರೂಪಿಸಿದೆ. ನನ್ನ ಮನೆಯ ಪಕ್ಕದಲ್ಲಿ ಸವಿತಾ ಸಮಾಜದವರು ತುತ್ತು ಅನ್ನಕ್ಕೆ ನಮ್ಮ ಮನೆ ಬಳಿ ಬರುತ್ತಿದ್ದರು. ನನ್ನ ಅಮ್ಮ ಬೇಜಾರು ಮಾಡಿಕೊಂಡು ಕೊಡುತ್ತಿದ್ದರು. ನಾನು ಕಣ್ಣಾರೆ ಅದನ್ನು ಕಂಡಿದ್ದೆ. ಹೀಗಾಗಿ, ಯಾರೇ ಆದರೂ ತುತ್ತು ಅನ್ನಕ್ಕೂ ಬೇರೆಯವರ ಮನೆ ಮುಂದೆ ನಿಲ್ಲಬಾರದು. ಅವರ ಮನೆಯಲ್ಲಿಯೇ ಅನ್ನ ಬೇಯಿಸಿ ತಿನ್ನಬೇಕು ಎಂದು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ : ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿಯನ್ನು ಯಾರೂ ವಿರೋಧಿಸಿಲ್ಲ: ಸಿಎಂ ಸಿದ್ದರಾಮಯ್ಯ - CM SIDDARAMAIAH