ಚಾಮರಾಜನಗರ: "ಮಲೆ ಮಹದೇಶ್ವರ ಬೆಟ್ಟ ಇನ್ನು ಮುಂದೆ ಪಾನ ಮುಕ್ತ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ವಜ್ರಮಲೆ ಸಮೀಪ ನಡೆದ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿ, "ಇಲ್ಲಿಯವರೆಗೂ ಬೆಟ್ಟದಲ್ಲಿ, ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮಾರಾಟ ಮುಕ್ತ ಇತ್ತು. ಇನ್ನು ಮುಂದೆ ಹೊರಗಿನಿಂದ ತರುವುದಕ್ಕೂ ತಡೆ ಹಾಕಬೇಕು" ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮತ್ತು ಪ್ರಾಧಿಕಾರದ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.
"ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಆಗುವುದನ್ನು ಸಂಪೂರ್ಣ ತಡೆಯಬೇಕು. ಆರೋಪಿಯೊಬ್ಬ ಗಡಿಪಾರು ಆದರೂ ಅಕ್ರಮ ಮಾರಾಟ ಮಾಡುತ್ತಿರುವುದನ್ನು ಅಧಿಕಾರಿಗಳಿಂದ ತಿಳಿದ ಸಿಎಂ ಆತನ ವಿರುದ್ಧ ತಕ್ಷಣ ಕಠಿಣ ಕಾನೂನಿನ ಅಡಿ ಕ್ರಮ ತೆಗೆದುಕೊಳ್ಳುವಂತೆ" ಸೂಚಿಸಿದರು.

ಈ ಮಧ್ಯೆ ಹಿಂದಿನ ಪ್ರಾಧಿಕಾರದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಒಂದೂವರೆ ವರ್ಷದಿಂದ ಜಾರಿ ಆಗದೇ ಇರುವುದಕ್ಕೆ ಮುಖ್ಯಮಂತ್ರಿಗಳು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಘು ಅವರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಪ್ರಾಧಿಕಾರದ ಕೆಲಸ ಕಾರ್ಯಗಳು, ಕಾಮಗಾರಿಗಳು ಸೂಕ್ತವಾಗಿ, ವೇಗವಾಗಿ ನಡೆಯಲು ಒಬ್ಬ ಎಇಇಯನ್ನು ಪ್ರಾಧಿಕಾರಕ್ಕೆ ನೇಮಿಸಲು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ್ ಅವರಿಗೆ ಸೂಚಿಸಿದರು.
66 ಕಾರ್ಮಿಕ ಕುಟುಂಬಗಳಿಗೆ ನೂತನ ಮನೆ: ಪ್ರಾಧಿಕಾರದಲ್ಲಿ ಕೆಲಸ ಮಾಡುವ 66 ಕಾರ್ಮಿಕ ಕುಟುಂಬಗಳಿಗೆ ತಲಾ 20 ಲಕ್ಷ ವೆಚ್ಚದಲ್ಲಿ, ಒಟ್ಟು 12-13 ಕೋಟಿ ವೆಚ್ಚದಲ್ಲಿ ಆದಷ್ಟು ಬೇಗ ನೂತನ ಮನೆ ಕಟ್ಟಿಸಿ ಕೊಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಲಾಡು ಪ್ರಸಾದಕ್ಕೆ ನಂದಿನಿ ತುಪ್ಪ ಬಳಕೆಗೆ ನಿರ್ಧಾರ: ಮಲೆ ಮಹದೇಶ್ವರ ಬೆಟ್ಟದ ಲಾಡು ಪ್ರಸಾದಕ್ಕೆ ತಿರುಪತಿ ದೇವಸ್ಥಾನದ ಮಾದರಿಯಲ್ಲಿ ನಂದಿನಿ ತುಪ್ಪ ಬಳಸಿ, ಪ್ರಸಾದದ ಗುಣಮಟ್ಟವನ್ನು ಇನ್ನಷ್ಟು ಉನ್ನತೀಕರಿಸುವುದು. ಮುಂದಿನ ದಿನಗಳಲ್ಲಿ 100 ಗ್ರಾಂ ತೂಕದ ಲಾಡು ಪ್ರಸಾದವನ್ನು ಕೇವಲ 35 ರೂಪಾಯಿಗೆ ವಿತರಿಸುವ ಬಗ್ಗೆ ಸಭೆ ನಿರ್ಣಯಿಸಿದೆ.
ಇದನ್ನೂ ಓದಿ: 3,647 ಕೋಟಿ ವೆಚ್ಚದ ಯೋಜನೆಗಳಿಗೆ ಸಂಪುಟ ಅಸ್ತು: ಉಗ್ರವಾದ ಕಿತ್ತು ಹಾಕಲು ದೇಶವೇ ಒಂದಾಗಿ ನಿಲ್ಲುವಂತೆ ಸಿಎಂ ಕರೆ