ಮೈಸೂರು: "ಕಾಂಗ್ರೆಸ್ಸೇ ಒಂದು ಹನಿಟ್ರ್ಯಾಪ್ ಕಂಪನಿ. ಹನಿಟ್ರ್ಯಾಪ್ ಜೊತೆ ಫೋನ್ ಟ್ಯಾಪ್ ಕೂಡ ಮಾಡಲಾಗುತ್ತಿದೆ. ಆದರೆ ಇವುಗಳ್ಯಾವುದರ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿಲ್ಲ. ಸಿಎಂ ಅವರೇ ಯಾವುದಾದರೂ ಟ್ರ್ಯಾಪ್ಗೆ ಒಳಗಾಗಿದ್ದಾರೋ ಎನ್ನುವ ಅನುಮಾನವಿದೆ" ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷ ಒಳಗಿರುವವರ ವಿರುದ್ಧ ಕೆಲಸ ಮಾಡುತ್ತಿದೆ. ಅವರನ್ನೇ ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಮಾಡುತ್ತಿದೆ" ಎಂದು ದೂರಿದರು.
"ಡಿಸಿಎಂ ಡಿಕೆಶಿ ಮುಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿಕೆ ನೀಡಿ, ಈಗ ಅದನ್ನು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಇದೊಂದು ವಿಪರ್ಯಾಸ. ಇದರ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ, ನಿಲ್ಲಿಸುವುದಿಲ್ಲ" ಎಂದು ತಿಳಿಸಿದರು.
ಯತ್ನಾಳ್ ಇತಿಮಿತಿಯಲ್ಲಿರಬೇಕಿತ್ತು: "ಯತ್ನಾಳ್ ನಮ್ಮ ಪಕ್ಷದ ಎತ್ತರದ ನಾಯಕರು. ಹೈಕಮಾಂಡ್ನಿಂದ ಏನು ಆದೇಶ ಬರುತ್ತದೆ, ಅದರ ಪ್ರಕಾರ ನಾವು ನಡೆಯುವವರು. ಮುಖಂಡರು ಯಾರು ಮುಖ್ಯವಲ್ಲ. ಕಾರ್ಯಕರ್ತರೇ ಮುಖ್ಯ ನಮ್ಮ ಪಕ್ಷಕ್ಕೆ. ಹೈಕಮಾಂಡ್ ಆದೇಶವನ್ನು ಮೀರುವುದಿಲ್ಲ. ಉಚ್ಚಾಟನೆ ಅನಿವಾರ್ಯ. ಒಪ್ಪಲೇಬೇಕು. ಇದು ಆಗಬಾರದಿತ್ತು, ಯತ್ನಾಳ್ ಇತಿಮಿತಿಯಲ್ಲಿ ಹೋಗಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ" ಎಂದು ಹೇಳಿದರು.
"ವಿರೋಧ ಪಕ್ಷಗಳ ಬದಲು ನಮ್ಮ ಪಕ್ಷವನ್ನೇ ವಿರೋಧಿಸಿದ ಕಾರಣ ಅವರಿಗೆ ಈ ರೀತಿಯಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಶಿಸ್ತಿನ ಪಕ್ಷ ಅಂತೀವಿ, ಯಾಕೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡಿಲ್ಲ, ಅನ್ನುವ ಪ್ರಶ್ನೆಗಳಿಗೆ ಹೈಕಮಾಂಡ್ ಉತ್ತರವಾಗಿ ಕ್ರಮ ಜರುಗಿಸಿದೆ. ಅವರು ನಮ್ಮ ಪಕ್ಷದಿಂದ ಹೊರಗಡೆ ಹೋಗುವ ಪರಿಸ್ಥಿತಿ ಉದ್ಭವವಾಗಿದೆ. ಪಕ್ಷ ನಮಗೆ ಅನಿರ್ವಾರ್ಯ, ಪಕ್ಷ ನಮಗಿಂತ ದೊಡ್ಡದು" ಎಂದು ಯತ್ನಾಳ್ ಉಚ್ಚಾಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಕಾಂಗ್ರೆಸ್ ವಂಚಕರ ಸಂತೆ: "ಕಾಂಗ್ರೆಸ್ ಪಕ್ಷ ಇರುವುದೇ ಏರಿಸುವುದಕ್ಕೆ. ಏರಿಸಿ ಏರಿಸಿ ಅವರೇ ಈಗ ಇಳಿಯುವ ಪರಿಸ್ಥಿತಿಗೆ ಬಂದಿದ್ದಾರೆ. ಡೀಸೆಲ್, ಪೆಟ್ರೋಲ್, ಸ್ಟಾಂಪ್ ಡ್ಯೂಟಿ, ಹಾಲಿನ ದರ ಎಲ್ಲವನ್ನೂ ಏರಿಸಿದ್ದಾರೆ. ಪ್ರಣಾಳಿಕೆಯಲ್ಲಿ ದರ ಏರಿಸುವುದಿಲ್ಲ ಎಂದು ಘೋಷಣೆ ಮಾಡಿ, ಈಗ ಏರಿಸುತ್ತಿದ್ದಾರೆ. 39 ಸಾವಿರ ಕೋಟಿ sc/stಗೆ ಮೀಸಲಿಟ್ಟ ಹಣವನ್ನು ತಿಂದು ಹಾಕಿದ್ದಾರೆ. ಕಾಂಗ್ರೆಸ್ ಅಂದರೆ ವಂಚಕರ ಸಂತೆ" ಎಂದು ಕಿಡಿಕಾರಿದರು.
ಕಾಂಗ್ರೆಸ್ ಕುರ್ಚಿಗೂ-ಕುಮಾರಸ್ವಾಮಿಗೂ ಏನು ಸಂಬಂಧ?: ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, "ಅವರಿಬ್ಬರ ಭೇಟಿ ರಹಸ್ಯದ ಬಗ್ಗೆ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಕುರ್ಚಿಗೂ-ಕುಮಾರಸ್ವಾಮಿಗೂ ಏನು ಸಂಬಂಧ?. ಅಲ್ಲಿ ಕುರ್ಚಿ ಬಿದ್ರೆ ಕುಮಾರಸ್ವಾಮಿ ಹೋಗಿ ಕುರ್ಚಿ ಹಿಡಿದುಕೊಡುವುದಕ್ಕೆ ಆಗುತ್ತಾ, ಕುಮಾರಸ್ವಾಮಿ ಅವರೇ ಉತ್ತರ ಕೊಡಬೇಕು" ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ : ಯತ್ನಾಳ್ ಉಚ್ಚಾಟನೆ ನಂತರ ಪರ - ವಿರೋಧ ಚರ್ಚೆ; ಕೆಲವೆಡೆ ರಸ್ತೆ ತಡೆದು ಪ್ರತಿಭಟನೆ