ಮೈಸೂರು: ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಮೀಪದ ಹೈದರಾಲಿ ರಸ್ತೆಯ ಪಕ್ಕದಲ್ಲಿದ್ದ 40 ಮರಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಇನ್ನಿತರರ ವಿರುದ್ಧ ಸೂಕ್ತ ಕ್ರಮಕ್ಕೆ ಕೋರಿ ಬೆಂಗಳೂರು ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಲಾಗಿದೆ ಎಂದು ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನು ಮೋಹನ್ ತಿಳಿಸಿದ್ದಾರೆ.
ಮೈಸೂರು ಅರಣ್ಯ ಉಪ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜು, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಹಾಗೂ ನಜರ್ಬಾದ್ ಠಾಣೆಯ ಇನ್ಸ್ಪೆಕ್ಟರ್ ಮಹದೇವಸ್ವಾಮಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಭಾನು ಮೋಹನ್ ಹೇಳಿದರು.
ಕಳೆದ ಮಾ.20ರಂದು ಪಾಲಿಕೆ ರಸ್ತೆಯನ್ನು 30 ಮೀಟರ್ ಅಗಲೀಕರಿಸಬೇಕೆಂದು ಸಲ್ಲಿಸಿದ ಆಧಾರದ ಮೇಲೆ ಮಾ.25ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿ 40 ಮರಗಳ ಕಟಾವಿಗೆ ಆದೇಶ ಮಾಡಿದ್ದಾರೆ. ಈ ಕುರಿತು ತಾವು ಏ.11ರಂದು ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ತಕರಾರು ಅರ್ಜಿ ಸಲ್ಲಿಸಿದ್ದೇವೆ ಎಂದರು.
ಈ ಮಧ್ಯೆ ಹೇಗಾದರೂ ಮರ ಕಡಿಯಬೇಕೆಂಬ ಉದ್ದೇಶದಿಂದ ಏ.13ರ ಭಾನುವಾರ ರಜಾ ದಿನದಂದು ಆಯುಕ್ತ ಶೇಖ್ ತನ್ವೀರ್ ಆಸೀಫ್ ಕಡೆಯವರು ಎಂದು ಹೇಳಿಕೊಳ್ಳುವ ಸೈಯದ್ ಮೊಹಮ್ಮದ್, ನಾಸೀರ್, ಶರೀಫ್ ಹಾಗೂ ಇತರೆ ಕೆಲ ವ್ಯಕ್ತಿಗಳು ಯಾವುದೇ ಕಾರ್ಯಾದೇಶ ಇಲ್ಲದೇ ರಾತ್ರೋರಾತ್ರಿ ಕಳ್ಳರಂತೆ ಆರೋಗ್ಯಕರವಾಗಿದ್ದ 40 ಮರಗಳನ್ನು 2 ಜೆಸಿಬಿ, 2 ಲಾರಿ, 1 ಗೂಡ್ಸ್ ಆಟೋ, 2 ಪೆಟ್ರೋಲ್ ಗರಗಸ ಬಳಸಿಕೊಂಡು ಕಟಾವು ಮಾಡಿ ಕಳ್ಳ ಸಾಗಣೆ ಮಾಡುತ್ತಿದ್ದರು ಎಂದು ದೂರಿದರು. ಇವರನ್ನು ತಾವೆಲ್ಲ ಮಾಲು ಸಮೇತ ಹಿಡಿದುಕೊಟ್ಟಾಗ ಇನ್ಸ್ಪೆಕ್ಟರ್ ಮಹದೇವಸ್ವಾಮಿ ಕ್ರಮ ಕೈಗೊಳ್ಳುವ ಬದಲು ರಕ್ಷಣೆ ನೀಡಿ ಮಾಲು ಸಾಗಿಸಲು ನೆರವಾಗಿದ್ದಾರೆ. ಹೀಗಾಗಿ ಇವರೆಲ್ಲರ ವಿರುದ್ಧ ಕ್ರಮಕ್ಕಾಗಿ ದೂರು ನೀಡಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲ ವಿ.ರವಿಕುಮಾರ್, ಪರಿಸರವಾದಿ ಆದರ್ಶ್ ಅರಸ್ ಇದ್ದರು.
ಇದನ್ನೂ ಓದಿ: 40 ಮರ ಕಡಿದ ಪ್ರಕರಣ: ವರದಿ ನೀಡುವಂತೆ ಸಚಿವ ಈಶ್ವರ್ ಖಂಡ್ರೆ ಸೂಚನೆ - TREE FELLING CASE