ಬೆಂಗಳೂರು: ಅಂತಾರಾಷ್ಟ್ರೀಯ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಇಬ್ಬರು ಬಿಎಂಟಿಸಿ ಉದ್ಯೋಗಿಗಳು ಹಾಗೂ ಬಸ್ನಲ್ಲಿ ನಡೆಯುತ್ತಿದ್ದ ಮೊಬೈಲ್ ಕಳ್ಳತನ ತಡೆಯುವಲ್ಲಿ ಯಶಸ್ವಿಯಾಗಿದ್ದ ಬಿಎಂಟಿಸಿ ನಿರ್ವಾಹಕಿಗೆ ಸಂಸ್ಥೆ ಕಡೆಯಿಂದ ಸನ್ಮಾನ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಿಎಂಟಿಸಿ ಸಿಬ್ಬಂದಿಯನ್ನು ಸನ್ಮಾನಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಕಬಡ್ಡಿಯಲ್ಲಿ ಮಿಂಚಿದ ಬಿಎಂಟಿಸಿ ಸಿಬ್ಬಂದಿ: ಕತಾರ್ ಅಂತಾರಾಷ್ಟ್ರೀಯ ಕಬಡ್ಡಿ ಚಾಂಪಿಯನ್ಶಿಪ್ 2025 ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಇಬ್ಬರು ಬಿಎಂಟಿಸಿ ಉದ್ಯೋಗಿಗಳಾದ ವಿನಯ್ಕುಮಾರ್ ವಿ. ಹಾಗೂ ಶಶಿಧರ್ ವಿ.ಡಿ. ಅವರನ್ನು ಗೌರವಿಸಲಾಯಿತು. ದೋಹಾದಲ್ಲಿ ಇತ್ತೀಚೆಗೆ ನಡೆದ ಈ ಪಂದ್ಯಾವಳಿಯಲ್ಲಿ ಭಾರತ, ಕತಾರ್, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಪಾಕಿಸ್ತಾನದ ತಂಡಗಳು ಭಾಗವಹಿಸಿದ್ದವು. ಫೈನಲ್ನಲ್ಲಿ ಕತಾರ್ ಅನ್ನು 19-12 ಅಂತರದಿಂದ ಸೋಲಿಸಿ ಭಾರತ ತಂಡವು ವಿಜಯಶಾಲಿಯಾಗಿತ್ತು.

''ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ನಮ್ಮ ಬಿಎಂಟಿಸಿ ಉದ್ಯೋಗಿಗಳ ಬಗ್ಗೆ ನಮಗೆ ತುಂಬಾ ಹೆಮ್ಮೆಯಿದೆ. ಅವರ ಸಾಧನೆಯು ದೇಶಕ್ಕೆ ಗೌರವ ತರುವುದಲ್ಲದೇ, ನಮ್ಮ ಸಿಬ್ಬಂದಿ ಎಲ್ಲ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ಮಾಡಲು ಪ್ರೇರಣೆಯಾಗಿದೆ” ಎಂದು ಸಚಿವ ರಾಮಲಿಂಗಾರೆಡ್ಡಿ ಪ್ರಶಂಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹಸಿ ತ್ಯಾಜ್ಯದಿಂದ ಬಯೋ ಗ್ಯಾಸ್ ಉತ್ಪತ್ತಿ : ಹು-ಧಾ ಮಹಾನಗರ ಪಾಲಿಕೆಗೆ ಇದರಿಂದ ಏನೆಲ್ಲ ಲಾಭ?
ಧೈರ್ಯಶಾಲಿ ಕಂಡಕ್ಟರ್ಗೆ ಪ್ರಶಂಸೆ: ಇದೇ ವೇಳೆ, ಬಸ್ನಲ್ಲಿ ಕಳ್ಳತನ ತಡೆಗಟ್ಟುವಲ್ಲಿ ಜಾಗರೂಕತೆ ಮತ್ತು ತ್ವರಿತ ಕ್ರಮ ವಹಿಸಿದ್ದ ಬಿಎಂಟಿಸಿ ಕಂಡಕ್ಟರ್ ಮುನಿರತ್ನಮ್ಮ ಮತ್ತು ಚಾಲಕ ಕುಮಾರ್ ಎ.ಎಂ. ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ಮೊಬೈಲ್ ಕಳ್ಳತನ ತಡೆದ ಸಿಬ್ಬಂದಿ: ಮಾರ್ಚ್ 10ರಂದು, ಕೆಬಿಎಸ್ನಿಂದ ವಿಜಯಪುರಕ್ಕೆ ಬಸ್ ಪ್ರಯಾಣ ಮಾಡುವಾಗ, ಮುನಿರತ್ನಮ್ಮ ಅವರು ಮಹಿಳೆಯೊಬ್ಬಳು ಸಹ ಪ್ರಯಾಣಿಕರಿಂದ ಮೊಬೈಲ್ ಫೋನ್ ಕದಿಯಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ್ದರು. ತಕ್ಷಣ ಪ್ರಯಾಣಿಕರನ್ನು ಎಚ್ಚರಿಸಿದ ಅವರು, ಬಸ್ ಅನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯಲು ಚಾಲಕನಿಗೆ ಸೂಚಿಸಿದ್ದರು. ಶಂಕಿತ ಆರೋಪಿಯನ್ನು ಯಲಹಂಕ ಪೊಲೀಸರ ವಶಕ್ಕೆ ನೀಡಲಾಗಿತ್ತು. ಪ್ರಯಾಣಿಕರ ಸುರಕ್ಷತೆಗೆ ಸಮರ್ಪಣೆ ತೋರಿದ ಬಿಎಂಟಿಸಿ ಸಿಬ್ಬಂದಿಗೆ ಇದೀಗ ಅರ್ಹ ಮನ್ನಣೆ ಸಿಕ್ಕಂತಾಗಿದೆ.
ಇದನ್ನೂ ಓದಿ: ಬೆಂಗಳೂರು: ಉತ್ತಮ ಸಾರಿಗೆ ಸೇವೆ ನೀಡಲು 5 ಸಂಚಾರಿ ದುರಸ್ತಿ ವಾಹನಗಳ ನಿಯೋಜಿಸಿದ ಬಿಎಂಟಿಸಿ