ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿಯ ಕಾಲ್ತುಳಿತ ದುರಂತಕ್ಕೆ ರಾಜ್ಯ ಸರ್ಕಾರದ ವೈಫಲ್ಯ ಕಾರಣವೆಂದ ಬಿಜೆಪಿ ನಾಯಕರು, ಇಂದು ವಿಧಾನಸೌಧ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. 11 ಜನರನ್ನು ಬಲಿ ತೆಗೆದುಕೊಂಡ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ, ಅಶ್ವಥ್ ನಾರಾಯಣ್, ಗೋವಿಂದ ಕಾರಜೋಳ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಸರ್ಕಾರದ ವಿರುದ್ಧ ಭಿತ್ತಿಪತ್ರಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿ ಸಿಎಂ, ಡಿಸಿಎಂ ರಾಜೀನಾಮೆ ಕೊಡಬೇಕು ಎಂದು ಘೋಷಣೆ ಕೂಗಿದರು.
ಇದೇ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, "ಇದು ದರಿದ್ರ ಸರ್ಕಾರ. ನಾವಿಲ್ಲಿ 40 ಜನ ಪ್ರತಿಭಟನೆ ಮಾಡುತ್ತಿದ್ದೇವೆ. ಪೊಲೀಸರು 150 ಜನ ಬಂದಿದ್ದಾರೆ, ಗನ್ಗಳನ್ನು ತಂದಿದ್ದಾರೆ. ನಮ್ಮ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಮುಂದಾಗಿದೆ, ನಮ್ಮನ್ನು ಬಂಧಿಸಬಹುದು. ವಿಸ್ಕಿ ಬಾಟಲಿ, ಆರ್ಸಿಬಿ ಪ್ರಮೋಷನ್ಗೆ ವಿಧಾನಸೌಧ ಕಾರ್ಯಕ್ರಮ ಮಾಡಿದ್ದಾರೆ. ಸಿಎಂ, ಡಿಸಿಎಂ, ಆರ್ಸಿಬಿ ಅಂದ್ರೆ Real Culprits of Bangalore. ಪೊಲೀಸರ ರಕ್ಷಣೆ ಯಾರು ಮಾಡ್ತಾರೆ?. ನಾವು ಪೊಲೀಸರ ಜತೆ ನಿಲ್ತೇವೆ. ಈ ಪ್ರಕರಣದಲ್ಲಿ ಪೊಲೀಸರ ಪರ ನಮ್ಮ ಹೋರಾಟ. ದುರಂತದಲ್ಲಿ ಪೊಲೀಸರ ಪಾತ್ರ ಇಲ್ಲ. ವಿಧಾಸೌಧ ಡಿಸಿಪಿ ಕ್ಲೀನಾಗಿ ಪತ್ರ ಬರೆದಿದ್ದಾರೆ. ಸಿಬ್ಬಂದಿ ಇಲ್ಲ ಅಂದ್ರೂ ಹೇಗೆ ಕಾರ್ಯಕ್ರಮ ಮಾಡಿದ್ರಿ" ಎಂದು ಪ್ರಶ್ನಿಸಿದರು.
"ಒಬ್ಬ ಪೊಲೀಸ್ ಅಧಿಕಾರಿ ಆಗಲ್ಲ ಅಂದ್ಮೇಲೂ ನೀನು ಹೇಗಯ್ಯ ಕಾರ್ಯಕ್ರಮ ಮಾಡಿದೆ?. ಯಾವ ಕಾನೂನು ಅಡಿ ಕಾರ್ಯಕ್ರಮ ಮಾಡಿದೆ?" ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ ಅವರು, "ಸಿ.ಟಿ.ರವಿ ತಪ್ಪೇ ಮಾಡಿಲ್ಲ. ಏನೂ ಮಾತಾಡದಿದ್ರೂ ಅವ್ರನ್ನು ಕ್ವಾರಿ, ಇಟ್ಟಿಗೆ ಫ್ಯಾಕ್ಟರಿ, ಕಬ್ಬಿನ ಗದ್ದೆ ಎಲ್ಲ ಸುತ್ತಿಸಿದ್ರಿ. ಈಗ ನೀವು 11 ಜನರ ಮರ್ಡರ್ ಮಾಡಿದ್ದೀರಿ?. ನಿಮ್ಮನ್ನು ಯಾವ ಕಬ್ಬಿನ ಗದ್ದೆಗೆ ಕರ್ಕೊಂಡ್ ಹೋಗಬೇಕು ಹೇಳಿ. ಮೊದಲ ಸಾವು ಸಂಜೆ 3.15ಕ್ಕೆ ಆಯ್ತು. ಇವರು ಕಾರ್ಯಕ್ರಮ ಮಾಡಿದ್ದು ಸಂಜೆ 4.30ಕ್ಕೆ. ಸಂಜೆ 6ಕ್ಕೆ ಡಿಸಿಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗ್ತಾರೆ. ಅಲ್ಲಿ ರಘು ದಿಕ್ಷೀತ್ ಕಾರ್ಯಕ್ರಮ ಇತ್ತು. ನಂತರ ಒಂದು ಕೋಟಿ ಮೌಲ್ಯದ ಪಟಾಕಿ ಹೊಡೀತಾರೆ. ಮಾನವೀಯತೆ ಇಲ್ವಾ? ನಿಮಗೆ ಜ್ಞಾನ ಇಲ್ವಾ?" ಎಂದು ಟೀಕಿಸಿದರು.
ರಾಜ್ಯಪಾಲರನ್ನು ಭೇಟಿಯಾಗುತ್ತೇವೆ: "ಪೊಲೀಸರು ಸಾವಿನ ಬಗ್ಗೆ ಹೇಳಲಿಲ್ಲ ಅಂತಾರೆ ಸಿಎಂ. ನಿಮ್ಮ ಅಧಿಕಾರಿಗಳು ಮಣ್ಣು ತಿಂತಿದ್ರಾ?. ಟಿವಿಗಳಲ್ಲಿ ಕ್ಷಣ ಕ್ಷಣಕ್ಕೂ ನ್ಯೂಸ್ ಬರುತ್ತಿತ್ತಲ್ಲ?. ಈ ಸರ್ಕಾರ ವಜಾ ಆದ್ರೆ ಮಾತ್ರ ಸತ್ತವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಸತ್ತವರು ಹುತಾತ್ಮರು, ಹೆಣಗಳಲ್ಲ. ನೀವು ಕರೆದ್ರಿ, ಅವರನ್ನು ಆಹ್ವಾನಿಸಿ ಸಾಯಿಸಿದ್ರಿ. ನಾಳೆ ರಾಜ್ಯಪಾಲರನ್ನು ಭೇಟಿ ಮಾಡ್ತೇವೆ. ಸರ್ಕಾರದ ವಜಾ ಆಗ್ರಹಿಸಿ ರಾಜ್ಯಪಾಲರಿಗೆ ದೂರು ನೀಡುತ್ತೇವೆ" ಎಂದರು.

"ಕಾಲ್ತುಳಿತದ ಘಟನೆಗೆ ಮುನ್ನ ಪೊಲೀಸರು ನೀಡಿದ ಸೂಚನೆಗಳನ್ನು ಕಾಂಗ್ರೆಸ್ ಸರ್ಕಾರ ಉಲ್ಲಂಘಿಸಿದೆ. ಈ ಮೂಲಕ ಸರ್ಕಾರವೇ ಕಾನೂನು ಮೀರಿದೆ. ಸಿಎಂ ಹಾಗೂ ಡಿಸಿಎಂ ನಡುವಿನ ತಿಕ್ಕಾಟದಿಂದ ನಡೆದ ವಿಜಯೋತ್ಸವಕ್ಕೆ 11 ಮಂದಿ ಸಾವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಶಕ್ತಿಗಳ ತಿಕ್ಕಾಟ ಇಲ್ಲದಿದ್ದರೆ ವಿದ್ಯಾರ್ಥಿಗಳು ಸಾಯುತ್ತಿರಲಿಲ್ಲ. ಅವರ ಕುಟುಂಬದವರಿಗೆ ಸಾಂತ್ವನ ಹೇಳಬೇಕಿದ್ದವರು ಕಪ್ಗೆ ಮುತ್ತಿಡುತ್ತಿದ್ದರು. ಮಧ್ಯಾಹ್ನವೇ ಮೊದಲ ಸಾವಾದಾಗ ಪೊಲೀಸರು ಮಾಹಿತಿ ನೀಡಿದ್ದರು. ಕಾರ್ಯಕ್ರಮ ಆರಂಭವಾದಾಗಲೇ 8 ಮಕ್ಕಳು ಸತ್ತಿದ್ದರು. ಆ ನಂತರವೂ ಕಾರ್ಯಕ್ರಮ ಮಾಡುತ್ತಾರೆಂದರೆ ಇವರೆಲ್ಲರೂ ಕಟುಕ, ಕಲ್ಲಿನ ಹೃದಯದವರು" ಎಂದು ಸುದ್ದಿಗೋಷ್ಠಿಯಲ್ಲಿ ಅಶೋಕ್ ದೂರಿದರು.
ವಿಶೇಷ ಅಧಿವೇಶನ ಕರೆಯಲಿ: "ಸರ್ಕಾರ ತನ್ನ ತಪ್ಪಿಟ್ಕೊಂಡು ಕೆಎಸ್ಸಿಎ, ಆರ್ಸಿಬಿ, ಪೊಲೀಸರ ಮೇಲೆ ತಪ್ಪು ಹೊರಿಸಿದೆ. ಕಂಡಲ್ಲಿ ಜೀವ ತೆಗೆದುಕೊಳ್ಳುವ ಸರ್ಕಾರ ಇದು. ಅಮಾಯಕರು, ಸಾರ್ವಜನಿಕರು, ಬಾಣಂತಿಯರು, ರೈತರು, ಹಿಂದೂ ಕಾರ್ಯಕರ್ತರ ಜೀವ ತೆಗೆದುಕೊಳ್ಳುವ ಸರ್ಕಾರ ಇದು" ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದರು.
"ಸಿಎಂ, ಡಿಸಿಎಂ, ಗೃಹ ಸಚಿವರು ಜವಾಬ್ದಾರಿ ತೆಗೆದುಕೊಳ್ಳಬೇಕು. ಈ ಮೂವರೂ ರಾಜೀನಾಮೆ ಕೊಡಬೇಕು. ಕೇಸ್ ಇವರ ಮೇಲೂ ದಾಖಲಾಗಬೇಕು. ವಿಶೇಷ ಅಧಿವೇಶನ ಕರೆಯಲಿ ಸರ್ಕಾರ" ಎಂದು ಒತ್ತಾಯಿಸಿದರು.
ಕಾಂಗ್ರೆಸ್ನವರು ಸೀಳು ನಾಯಿಗಳು: "ಆರ್ಸಿಬಿ ಕಪ್ ಗೆದ್ದಿರೋ ಕ್ರೆಡಿಟ್ ತಗೊಳ್ಳೋ ಹಪಾಹಪಿಗೆ ಸರ್ಕಾರ ಬಿದ್ದಿತ್ತು. ಕಪ್ ಗೆದ್ದಿದ್ದು ಆರ್ಸಿಬಿ, ಕಪ್ಗೆ ಮುತ್ತಿಟ್ಟು ಚಿಪ್ಪು ತೆಗೆದುಕೊಂಡ್ರಿ. ಪೊಲೀಸ್ ಇಲಾಖೆ ಭದ್ರತೆ ಕೊಡಕ್ಕಾಗಲ್ಲ ಅಂದಿದೆ. ಆದ್ರೂ ಜನರನ್ನು ಕರೆಸಿ ಈ ರೀತಿ ಮಾಡಿದ್ದಾರೆ. ಇದನ್ನೇ ಜೋಷಿಯವರು ನಿನ್ನೆ ಕೇಳಿದ್ದು. ಪ್ರಹ್ಲಾದ್ ಜೋಷಿಯವರಿಗೆ ಸಿಎಂ ಟೆರರಿಸ್ಟ್ ಅಂದ್ರು. ನಿಜವಾದ ಟೆರರಿಸ್ಟ್ ಸಿದ್ದರಾಮಯ್ಯ. ಕಾಂಗ್ರೆಸ್ನವರು ಸೀಳು ನಾಯಿಗಳು" ಎಂದು ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದರು.
"ಬಹಿರಂಗವಾಗಿ ಹೇಳ್ತೀನಿ ನೀವು ಸೀಳು ನಾಯಿಗಳು. ನಾಚಿಕೆ ಆಗಬೇಕು, ಮಾರ್ಯಾದೆ ಇಲ್ಲ. ಲೂಟಿ ಮಾಡೋರು. ಮೇಲ್ನೋಟಕ್ಕೆ ಕಮೀಷನರ್ ತಪ್ಪು ಅಂತ ಅಮಾನತು ಮಾಡಿದ್ರಿ. ಆದ್ರೆ ಕೆಳನೋಟ ಏನು?. ಕೆಳನೋಟನೂ ನೋಡಬೇಕಿತ್ತಲ್ಲ?. ಹೋಮ್ ಮಿನಿಸ್ಟರ್ ವರ್ಕ್ ಫ್ರಂ ಹೋಮ್ ಮಾಡ್ತಾರೆ. ದುರಂತ ಸರ್ಕಾರದ ಸ್ವಯಂ ಕೃತ ಅಪರಾಧ. ಪ್ರಯಾಗ್ ರಾಜ್ ಕಾಲ್ತುಳಿತ, ಪಹಲ್ಗಾಮ್ ಬಗ್ಗೆ ಮಾತಾಡ್ತೀರಿ, ಅವು ಅನಾಹುತಗಳು. ಆದ್ರೆ ನಿಮ್ಮದು ಸ್ವಯಂಕೃತ ಅಪರಾಧ. ಈ ಸರ್ಕಾರ ತಲೆ ಹೊಡೆಯುವ ಸರ್ಕಾರ, ಯಾರ ತಲೆ ಯಾವಾಗ ಹೊಡೆಯುತ್ತೋ ಗೊತ್ತಿಲ್ಲ. ಸಿಎಂ, ಡಿಸಿಎಂ, ಗೃಹ ಸಚಿವರ ತಲೆದಂಡ ಆಗಬೇಕು. ಇವರು ನಂಬರ್ ಒನ್, ಟು, ತ್ರೀ ಆರೋಪಿಗಳು" ಎಂದು ಆಗ್ರಹಿಸಿದರು.
ಆರ್ಸಿಬಿಯಲ್ಲಿ ಬಂಡವಾಳ ಹೂಡಿದ್ದರಾ?: "ಆರ್ಸಿಬಿಯಲ್ಲಿ ಸಿಎಂ, ಡಿಸಿಎಂ ಬಂಡವಾಳ ಹೂಡಿದ್ದಾರಾ?. ಪೊಲೀಸರು ಲಿಖಿತವಾಗಿ ಹೇಳಿದ್ರು ವಿಜಯೋತ್ಸವ ಯಾಕೆ ಮಾಡಿದ್ರಿ?. ಕಮೀಷನರ್ ಅನುಮತಿ ಕೊಟ್ಟಿದ್ರಾ?. ಗಾಯಾಳುಗಳನ್ನು ಹೊತ್ಕೊಂಡಿದ್ದವರು ಪೊಲೀಸರು. ನೀವೆಲ್ಲಿ ಹೋಗಿದ್ರಿ, ಒಬ್ರು ಮಸಾಲೆ ದೋಸೆ ತಿನ್ನೋಕ್ಕೆ, ಇನ್ನೊಬ್ರು ಕಪ್ಗೆ ಮುತ್ತು ಕೊಡಲು ಹೋಗಿದ್ರಿ. ನಿಮ್ಮಿಬ್ಬರ ನಡುವೆ ಕ್ರೆಡಿಟ್ ವಾರ್ ನಡೀತಿದೆ. ದುರಂತದ ನ್ಯಾಯಾಂಗ ತನಿಖೆ ಆಗಬೇಕು. ನಿಮ್ಮ ಮೇಲೆ ಎಫ್ಐಆರ್ ಬುಕ್ ಆಗಬೇಕು" ಎಂದು ಸಿ.ಟಿ.ರವಿ ಆಗ್ರಹಿಸಿದರು.
"ನಿಮಗೆ ಮಾನ ಮರ್ಯಾದೆ, ನೈತಿಕತೆ ಇದ್ದಿದ್ರೆ ಇಷ್ಟೊತ್ತಿಗೆ ರಾಜೀನಾಮೆ ಕೊಡುತ್ತಿದ್ರಿ. ಮೂರನೇ ತಾರೀಕು ಪತ್ರ ಬರೀತೀರಿ, ಮ್ಯಾಚ್ ನಡೆಯೋ ಮುನ್ನ ಗೆಲ್ಲೋದು ಹೇಗೆ ಗೊತ್ತಿತ್ತು?. ಮ್ಯಾಚ್ ಫಿಕ್ಸಿಂಗ್ ಆಗಿತ್ತಾ?. ಸಮಾಧಿ ಮೇಲೆ ತಂದೆ ಅಳೋದನ್ನು ನೋಡಿದ್ರಾ?. ಅವರ ರೋದನೆ ಕಾಣ್ಲಿಲ್ವಾ?. ಸ್ವತಂತ್ರ ನ್ಯಾಯಾಂಗ ತನಿಖೆ ನಡೆಯಬೇಕು. ಎ1, ಎ2 ಸಿಎಂ, ಡಿಸಿಎಂ ಆಗಬೇಕು, ಇಬ್ಬರೂ ರಾಜೀನಾಮೆ ಕೊಡಬೇಕು" ಎಂದು ಒತ್ತಾಯಿಸಿದರು.
ಇದನ್ನೂ ಓದಿ: 'ಆತುರದ ಕಾರ್ಯಕ್ರಮದಿಂದ ಭದ್ರತಾ ಕರ್ತವ್ಯಕ್ಕೆ ತೊಂದರೆ ಸಾಧ್ಯತೆ': RCB ಕಾರ್ಯಕ್ರಮಕ್ಕೂ ಮುನ್ನ ಸರ್ಕಾರಕ್ಕೆ ಡಿಸಿಪಿ ಪತ್ರ
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ದುರಂತ, ಸಂತ್ರಸ್ತರ ಪರಿಹಾರದಲ್ಲಿ ಹೆಚ್ಚಳ: 25 ಲಕ್ಷ ರೂಗೆ ಹೆಚ್ಚಿಸಿ ಆದೇಶ