ಬಾಗಲಕೋಟೆ: ರಾಜ್ಯದಲ್ಲಿ ಜನ ವಿರೋಧಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಾಗಲಕೋಟೆಯಲ್ಲಿ ಬಿಜೆಪಿ ವತಿಯಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುರುವಾರ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ಅವರು, ಮುಸ್ಲಿಂರ ಓಲೈಕೆ ಮಾಡುವ ಉದ್ದೇಶದಿಂದ ಸರ್ಕಾರಿ ಗುತ್ತಿಗೆಯಲ್ಲಿ ಶೇ.4ರಷ್ಟು ಅಲ್ಪಸಂಖ್ಯಾತರಿಗೆ ಮೀಸಲು ನೀಡಲಾಗಿದೆ. ಅದೇ ರೀತಿ ಮುಸ್ಲಿಮರಿಗಷ್ಟೇ ಹಲವು ಸೌಲಭ್ಯಗಳನ್ನು ನೀಡುವ ಮೂಲಕ ಹಿಂದುಗಳಿಗೆ ಅಪಮಾನ ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯನವರಿಗೆ ಬಡವರು, ರೈತರು, ನೇಕಾರರು, ಶೋಷಿತರು, ದಲಿತರ ಕಣ್ಣೀರು ಕಾಣುತ್ತಿಲ್ಲ. ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿದೆ. ಗೋಹತ್ಯೆ ಪ್ರಕರಣಗಳು ದ್ವಿಗುಣಗೊಂಡಿವೆ. ಜಾತಿ ಸಮೀಕ್ಷಾ ಹೆಸರಿನಲ್ಲಿ ಬ್ರಿಟೀಷರಂತೆ ಸಮಾಜವನ್ನು ಒಡೆದಾಳುವ ನೀತಿ ಅನುರಿಸಲಾಗುತ್ತಿದೆ. ನಿಜಕ್ಕೂ ಈ ಸರ್ಕಾರಕ್ಕೆ ದಪ್ಪ ಚರ್ಮ ಇದೆ. ಹೀಗಾಗಿ ಜನ ತಕ್ಕ ಪಾಠ ಕಲಿಸಬೇಕು ಎಂದು ಗುಡುಗಿದರು.
ಈ ಹಿಂದೆ ವೀರಶೈವ ಲಿಂಗಾಯತ ಧರ್ಮವನ್ನು ಬೇರೆ ಬೇರೆ ಮಾಡಿ ಹುಳಿ ಹಿಂಡುವ ಕೆಲಸ ನಡೆಸಲಾಯಿತು. ಈಗ ಮುಸ್ಲಿಂರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ಮೂಲಕ ಒಂದು ಧರ್ಮಕ್ಕೆ ಅನ್ಯಾಯ ಮಾಡುವ ಕೆಲಸ ಮಾಡುತ್ತಿದೆ. ಮುಸ್ಲಿಂ ಹೆಣ್ಣುಮಕ್ಕಳ ಮದುವೆ, ಶಿಕ್ಷಣಕ್ಕೆ ಹಣ ಕೊಡುವ ಸರ್ಕಾರ, ಹಿಂದೂ ಹೆಣ್ಣುಮಕ್ಕಳ ಬಗ್ಗೆ ಚಿಂತಿಸುತ್ತಿಲ್ಲ. ರೈತರು, ನೇಕಾರರು ರಾಜ್ಯದ ಕಣ್ಣು ಇದ್ದಂತೆ. ಅವರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಡೀಸೆಲ್ 5.50ರೂ., ಪೆಟ್ರೋಲ್ 3.50ರೂ. ಹೆಚ್ಚಳ ಮಾಡಿದೆ. ಬೆಲೆ ಏರಿಕೆಯಿಂದ ಜನರು ತತ್ತರಿದ್ದಾರೆ. ದಿನದಿಂದ ದಿನಕ್ಕೆ ಮರಣ ಶಾಸನ ಬರೆದು ರಾಜ್ಯದ ಜನರ ನೆಮ್ಮದಿ ಕೆಡಿಸುತ್ತಿದೆ. ಬಾಗಲಕೋಟೆ ನಗರದಲ್ಲಿ ಬಹುದಿನಗಳಿಂದ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಸ್ಥಾಪನೆಗೆ ಅವಕಾಶ ನೀಡುತ್ತಿಲ್ಲ. ನಾವು ಪಾಕಿಸ್ತಾನಲ್ಲಿದ್ದೇವೆ ಅಂತ ಮಾಡಿದ್ದೀರಾ ಎಂದು ಜಿಲ್ಲಾಡಳಿತ, ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿಕಾರಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಬೆಳಗಿನ ಹಾಲಿನಿಂದ ಹಿಡಿದು ರಾತ್ರಿ ಆಲ್ಕೋಹಾಲ್ ವರೆಗೆ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಜನರಲ್ಲಿ ಆಕ್ರೋಶದ ಮನೆ ಮಾಡಿದೆ. ಯಾವಾಗ ಈ ಸರ್ಕಾರ ಹೋಗುತ್ತೆ ಅಂತ ಶಾಪ ಹಾಕುತ್ತಿದ್ದಾರೆ. ನಮ್ಮ ಸರ್ಕಾರ ಎಸ್ಪಿ, ಎಸ್ಪಿ ಮೀಸಲಾತಿ ಹೆಚ್ಚಳ ಮಾಡಿತು. ಆದರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ ಅನ್ಯಾಯ ಮಾಡಿದ್ದೀರಿ. ವೀರಣ್ಣ ಚರಂತಿಮಠಗೆ ಮೋಸ ಮಾಡಿದಿರಿ ಎಂದರು.
ಸಿಎಂ ಸಿದ್ದರಾಮಯ್ಯ ಸಂಡೇ ಲಾಯರ್ ಆಗಿದ್ದು, ಪ್ರಿಯಾಂಕ್ ಖರ್ಗೆ ಅವರ ಮಾತು ಕೇಳಿ ಸುಳ್ಳು ಹೇಳುತ್ತಿದ್ದಾರೆ. ಅಂಬೇಡ್ಕರ್ ಸೋಲಿಸಿದ್ದು ಸಾವರ್ಕರ್ ಅಲ್ಲ. ಕಾಂಗ್ರೆಸ್ ಎನ್ನುವುದು ಜನರಿಗೆ ಗೊತ್ತಿದೆ. ಮತ್ಯಾಕೆ ನಾಟಕ ಮಾಡುತ್ತೀರಿ ಅಂತ ಟೀಕಿಸಿದರು.
ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ, ಬೆಲೆ ಏರಿಕೆ, ದುರಾಡಳಿತಕ್ಕೆ ಜನರು ಬೇಸತ್ತು ಹೋಗಿದ್ದಾರೆ. ನಮ್ಮ ಸರ್ಕಾರ ಇದ್ದಾಗ 40 ಪರ್ಸೆಂಟ್ ಅಂತ ಟೀಕೆ ಮಾಡಿದ್ದರು. ಒಂದೇ ಒಂದು ದಾಖಲೆಯಲ್ಲಿ ನಿರೂಪಿಸಲು ಸಾಧ್ಯವಾಗಲಿಲ್ಲ. ಆಯೋಗದ ವರದಿಯಲ್ಲಿಯೂ ಇದು ಉಲ್ಲೇಖವಾಗಿದೆ. ಇಂದು ಸಿಎಂ ಸಲಹೆಗಾರ ಬಸವರಾಜ ರಾಯರೆಡ್ಡಿ ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1 ಅಂತ ಹೇಳಿದ್ದಾರೆ. ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ. ಈ ಹಿಂದೆ ಅರ್ಕಾವತಿ ಹಗರಣದಲ್ಲಿ ಕಾಂಗ್ರೆಸ್ ಪಾತ್ರವಿದೆ ಅಂತ ದಾಖಲೆ ಸಮೇತ ಸಿಕ್ಕಿಬಿದ್ದಿದೆ. ಇಂದು ಮುಡಾ ಹಗರಣ ಸಾಕ್ಷಿಯಾಗಿದೆ. ಇಂತಹ ಕೆಟ್ಟ ಸರ್ಕಾರವನ್ನು ಕರ್ನಾಟಕ ಜನರ ಎಂದಿಗೂ ಕಂಡಿಲ್ಲ. ನವೆಂಬರ್, ಡಿಸೆಂಬರ್ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಟೈಮ್ ಬಾಂಬ ಇಟ್ಟಿದ್ದಾರೆ. ಕಾದು ನೋಡಿ ಎಂದು ಹೇಳಿದರು.
ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಬಾದಾಮಿಯಲ್ಲಿ ಸಿದ್ದರಾಮಯ್ಯನವರಿಗೆ ರಾಜಕೀಯ ಪುನರ್ ಜನ್ಮ ನೀಡಲಾಯಿತು. ಆದರೆ, ಬಾಗಲಕೋಟೆ ಜಿಲ್ಲೆಗೆ ಅವರ ಕೊಡುಗೆ ಶೂನ್ಯ. ಎಷ್ಟು ವರ್ಷ ಅಧಿಕಾರ ನಡೆಸಿದ್ದೇವೆ ಎನ್ನುವುದು ಮುಖ್ಯವಲ್ಲ. ಅಧಕಾರದಲ್ಲಿದ್ದಾಗ ಏನು ಮಾಡಿದ್ದೇವೆ ಎನ್ನುವುದು ಮುಖ್ಯ. ಮುಸ್ಲಿಂರಲ್ಲಿ ಬಡವರು, ದಲಿತರು, ಶೋಷಿತರಿದ್ದಾರೆ. ಅವರ ಪರವಾಗಿ ಧ್ವನಿ ಎತ್ತಿದ್ದರೆ ಅಹಿಂದ ನಾಯಕ ಅಂತ ನಾನು ಒಪ್ಪಿಕೊಳ್ಳುತ್ತಿದ್ದೆ. ಆದರೆ, ಸಿಎಂ ಸಿದ್ದರಾಮಯ್ಯ ಬಹುಸಂಖ್ಯಾತ ಹಿಂದುಗಳನ್ನು ಒಡೆದಾಳುವ ಮೂಲಕ ತಾವೊಬ್ಬ ಬ್ರಿಟೀಷ್ ಅಂತ ತೋರಿಸಿಕೊಟ್ಟಿದ್ದಾರೆ. ಮಹಾನ್ ಮೋಸಗಾರ ಅಂತ ಕಿಡಿಕಾರಿದರು.
ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡರ್, ಮಾಜಿ ಸಚಿವ ಶ್ರೀರಾಮಲು ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಬಿ.ವೈ. ವಿಜಯೇಂದ್ರ ಅವರಿಗೆ ಕುರಬ ಸಮಾಜದಿಂದ ಟಗರಿನ ಮರಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಸರಸ್ವತಿ ಮೂರ್ತಿ ನೀಡಿ ಸನ್ಮಾನಿಸಿದರು. ಅಲ್ಲದೆ, ರಾಜ್ಯಮಟ್ಟದ ನಾಯಕರು ಬಾರಕೋಲು ಹಿಡಿದು ವೇದಿಕೆ ಮೇಲೆ ಬೀಸಿದ್ದು ಗಮನ ಸೆಳೆಯಿತಿ.
ಬಿಜೆಪಿ ರಾಜ್ಯ ಘಟಕದಿಂದ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆಗೆ ಭಾರೀ ಬೆಂಬಲ ವ್ಯಕ್ತವಾಗಿತ್ತು. ಸಾವಿರಾರು ಕಾರ್ಯಕರ್ತರು, ರಾಜ್ಯಮಟ್ಟದ ನಾಯಕರು ಭಾಗವಹಿಸಿ ಸಿಎಂ ಸಿದ್ದರಾಮಯ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್ ವೃತ್ತದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಯಿತು. ನಂತರ ಕೃಷ್ಣಾ ಟಾಕೀಜ್, ವಲ್ಲಭಬಾಯಿ ಚೌಕ್, ಎಂ.ಜಿ. ರಸ್ತೆ, ಬಸವೇಶ್ವರ್ ವೃತ್ತ ಮೂಲಕ ಹೊಳೇ ಆಂಜನೇಯ ದೇವಸ್ಥಾನ ತಲುಪಿ ಸಭೆಯಾಗಿ ಮಾರ್ಪಟ್ಟಿತು. ನಂತರ ಬಿಜೆಪಿ ನಾಯಕರು ರಾಜ್ಯ ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಪಿ. ಹೆಚ್. ಪೂಜಾರ, ಎನ್. ರವಿಕುಮಾರ್, ಶಾಸಕರಾದ ಜಗದೀಶ್ ಗುಡಗುಂಟಿ, ಹರೀಶ್ ಪೂಂಜಾ, ಮಾಜಿ ಶಾಸಕರಾದ ಹರತಾಳು ಹಾಲಪ್ಪ, ಎ.ಎಸ್.ಪಾಟೀಲ್ ನಡಹಳ್ಳಿ, ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಶ್ರೀಕಾಂತ ಕುಲಕರ್ಣಿ, ಪಿ.ರಾಜೀವ್, ಎಂ.ಕೆ.ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಇತರರು ಇದ್ದರು.
ಇದನ್ನೂ ಓದಿ: ರಾಜ್ಯ ಸರ್ಕಾರದ ಜಾತಿಗಣತಿಯನ್ನು ಜೈನ ಸಮಾಜ ಒಪ್ಪುವುದಿಲ್ಲ: ಗುಣಧರನಂದಿ ಮಹಾರಾಜರು - GUNADHARANANDI MAHARAJ