ಬೆಂಗಳೂರು: ಪ್ರಿಯಾಂಕ್ ಖರ್ಗೆಯವರೇ ನನ್ನನ್ನು ಕೆಣಕಬೇಡಿ. ನನ್ನನ್ನು ಕೆಣಕಿದ್ರೆ ನಾನು ನಿಮ್ಮನ್ನು ಕುಟುಕದೇ ಬಿಡುವವನಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿದ ಅವರು, ನನಗೆ ಆಗಿರುವ ಹಕ್ಕುಚ್ಯುತಿಗೆ ಪರಿಹಾರ ಕೊಡುವಂತೆ ಸಭಾಪತಿಯವರಿಗೆ ಮನವಿ ಮಾಡಿದ್ದೇನೆ. ಅವರ ಅನುಪಸ್ಥಿತಿಯಲ್ಲಿ ಆಪ್ತ ಸಹಾಯಕರಿಗೆ ಕೊಟ್ಟಿದ್ದೇವೆ. ದೂರವಾಣಿ ಮೂಲಕ ತಿಳಿಸಿದಾಗ ತಕ್ಷಣವೇ ಕ್ರಮದ ಭರವಸೆ ಕೊಟ್ಟಿದ್ದಾರೆ. ಆನೆ ಹೋಗುವಾಗ ನಾಯಿ ಬೊಗಳಿದ್ರೆ ಅನ್ನೋ ಗಾದೆ ಮಾತು ವಿವಾದ ಆಗಿತ್ತು. ಅದಕ್ಕಾಗಿ ಒಬ್ಬ ಸಚಿವರು ಮೈಮೇಲೆ ಎಳೆದುಕೊಂಡಿದ್ರು. ನಾನು ಅದಕ್ಕೆ ವಿಷಾದ ಕೂಡ ವ್ಯಕ್ತಪಡಿಸಿದ್ದೇನೆ. ಆದರೂ ಕೂಡ ಆ ಸಚಿವರು ಆ ರೀತಿ ಹೇಳಿದ್ರೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕಾ ಅಂದಿದ್ದಾರೆ. ಅಂದರೆ ಅವರು ದಾಳಿ ಸರಿ ಎಂದು ಒಪ್ಪಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಿರೋಧ ಪಕ್ಷದ ನಾಯಕನ ಸ್ಥಾನ, ಪ್ರಜಾಪ್ರಭುತ್ವದಲ್ಲಿ ಕಾವಲು ನಾಯಿ ಇದ್ದಂತೆ ಅಂದಿದ್ದಾರೆ ಹಿರಿಯರು. ಹಾಗಿದ್ದರೆ ಇದನ್ನು ನಾನು ನಾಯಿ ಅಂತಾ ಹೇಳೋಕೆ ಆಗುತ್ತದಾ?. ದೇಶದ ಪ್ರಧಾನಿ ಗಳನ್ನು ವಿಷಸರ್ಪ ಅಂದ್ರಲ್ಲ ಇದು ಅಪಾದನೆಯಾ ಗಾದೆಯಾ?. ಇದನ್ನು ಹೇಳಿದ್ರೆ ಕೆಲವರು ದಲಿತರ ದಲಿತರ ನಡುವೆ ಜಗಳ ಅಂತಾ ವ್ಯಾಖ್ಯಾನ ಮಾಡ್ತಾರೆ. ಇದು ದಲಿತರ ಪ್ರಶ್ನೆ ಅಲ್ಲ, ನನ್ನ ಹುಟ್ಟು ಆಕಸ್ಮಿಕ, ನಾನು ದಲಿತ, ನೀವು ದಲಿತರಾಗಿದ್ದೀರಿ ಅದು ಬೇರೆ ಪ್ರಶ್ನೆ. ರಾಜಕಾರಣ ಬಂದಾಗ ನಾವು ನಿಮ್ಮ ಬಗ್ಗೆ ಮಾತಾಡಬೇಕು, ನೀವು ನಮ್ಮ ಬಗ್ಗೆ ಮಾತಾಡಬೇಕು. ಆದರೆ ಅದು ಬಿಟ್ಟು ಜಾತಿ ನಿಂದನೆ ಸರಿಯಾದುದಲ್ಲ ಎಂದು ಕಿಡಿ ಕಾರಿದರು.
ನಾಯಿ ಎಂಬ ಮಾತ್ರಕ್ಕೆ ಅದು ಪ್ರಾಣಿ ಇರಬಹುದು. ನಾಯಿ ಅಂದರೆ ನಾರಾಯಣ, ನನ್ನ ಹೆಸರು ನಾರಾಯಣಸ್ವಾಮಿನೇ. ಆದರೆ ವಿಷ ಸರ್ಪ ಅಂದರೆ ಏನು? ಅದನ್ನು ಪ್ರಧಾನಿಗಳಿಗೆ ಹೇಳೋದು ಸರಿನಾ. ನಿಮ್ಮ ಉದ್ಧಟತನ, ದರ್ಪ ಬೇಡ, ಪದೇ ಪದೇ ನನ್ನನ್ನು ಚಡ್ಡಿ ಅಂದರೆ, ನಿಮಗೆ ಚಡ್ಡಿ ಇಲ್ಲವಾ? ಮೊದಲು ನಿಮ್ಮ ಚೆಡ್ಡಿ ಭದ್ರಪಡಿಸಿಕೊಳ್ಳಿ. ನಿಮ್ಮ ಉದ್ದಟತನದಲ್ಲೇ ನೀವು ಅಂತ್ಯರಾಗುತ್ತೀರಿ. ನಾಳೆ ನಾನು, ರಾಜ್ಯಾಧ್ಯಕ್ಷರು ಕಲ್ಬುರ್ಗಿಗೆ ಹೋಗುತ್ತೇವೆ. ಕಲ್ಬುರ್ಗಿ ಚಲೋದಲ್ಲಿ ನಾವೆಲ್ಲರೂ ಭಾಗಿಯಾಗಿ, ನಡೆದಿದ್ದೇನು ಅನ್ನೋದನ್ನು ಜನರಿಗೆ ಹೇಳುತ್ತೇವೆ. ಜೀವ ಬೆದರಿಕೆ ಹಾಕಬಹುದು, ಆದರೆ ನಾನು ಹೆದರುವನಲ್ಲ. ಆಗಿದ್ದು ಆಗಲಿ, ನಮ್ಮ ಕಾರ್ಯಕರ್ತರು ನಿಮಗೆ ಉತ್ತರ ಕೊಡ್ತಾರೆ. ನಮ್ಮ ಕಾರ್ಯಕರ್ತರು ರೌಢಿಗಳಲ್ಲ, ದೇಶ ಭಕ್ತರು. ಗೂಂಡಾಗಿರಿ ಮಾಡಿರುವ ನಿಮಗೆ ಕಾನೂನು ಉತ್ತರ ಕೊಡುತ್ತದೆ ಎಂದರು.
ಸಭಾಪತಿಗೆ ಹಕ್ಕುಚ್ಯುತಿ ದೂರು: ಛಲವಾದಿ ನಾರಾಯಣಸ್ವಾಮಿ ಸಭಾಪತಿ ಕಚೇರಿಗೆ ತೆರಳಿ ಹಕ್ಕುಚ್ಯುತಿ ಮಂಡಿಸಿ ಮನವಿ ಪತ್ರವನ್ನು ಸಲ್ಲಿಸಿದರು. ತಮ್ಮ ದೂರಿನಲ್ಲಿ 21.05.2025 ರಂದು ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನಡೆದ ತಿರಂಗಾ ಯಾತ್ರೆಯ ಸಂದರ್ಭದಲ್ಲಿ ಭಾರತೀಯ ಸೈನಿಕರ ಗೌರವಾರ್ಥವಾಗಿ ಆಯೋಜಿಸಲಾದ "ಆಪರೇಷನ್ ಸಿಂಧೂರ" ಕಾರ್ಯಕ್ರಮದ ಅಂಗವಾಗಿ ನನ್ನ ಅಧಿಕೃತ ಭೇಟಿಯ ಸಂದರ್ಭದಲ್ಲಿ ನನ್ನ ಹಕ್ಕುಚ್ಯುತಿ ಆಗಿರುವುದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ನನ್ನ ಪೂರ್ವ ನಿರ್ಧಾರಿತ ಪ್ರವಾಸ ಕಾರ್ಯಕ್ರಮದಂತೆ, 21.05.2025 ರಂದು ಮಧ್ಯಾಹ್ನ 03.30ಕ್ಕೆ ಕಲಬುರಗಿ ನಗರದಿಂದ ಚಿತ್ತಾಪುರದ ಸರ್ಕಾರಿ ಅತಿಥಿ ಗೃಹಕ್ಕೆ ಆಗಮಿಸಿದ್ದೆ. ನನ್ನ ಆಗಮನದ ಸ್ವಲ್ಪ ಸಮಯದಲ್ಲೇ ಕೆಲವು ಕಾಂಗ್ರೆಸ್ ಕಾರ್ಯಕರ್ತರೆಂದು, ರಾಜಕೀಯ ಪ್ರೇರಿತ ಗುಂಡಾಗಳು ಅಲ್ಲಿ ಜಮಾಯಿಸಿ ನನ್ನನ್ನು ಕೀಳು ಮಟ್ಟದ ಪದಗಳಿಂದ ಹಾಗೂ ಇನ್ನಿತರ ಶಬ್ದಗಳನ್ನು ಬಳಸುತ್ತಾ, ನಿಂದಿಸುತ್ತಾ ಘೋಷಣೆಗಳನ್ನು ಕೂಗಿ ಮುಖ್ಯದ್ವಾರದ ಎದುರು ಪ್ರತಿಭಟನೆಯನ್ನು ನಡೆಸಿದರು ಎಂದು ವಿವರಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸದ ಹಾಗೂ ನನ್ನ ಕರೆಗೆ ಸರಿಯಾಗಿ ಸ್ಪಂದಿಸದ ಕಲಬುರಗಿ ಎಸ್ಪಿ ಅಡುರು ಶ್ರೀನಿವಾಸುಲು ಹಾಗೂ ಸ್ಥಳದಲ್ಲಿದ್ದ ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣನವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐಗಳಾದ ಚಂದ್ರಶೇಖರ ತಿಗಡಿ, ನಟರಾಜ ಲಾಡ, ಪಿಎಐಗಳಾದ ಶ್ರೀಶೈಲ್ ಅಂಬಾಟಿ, ತಿಮ್ಮಯ್ಯ, ಚಂದ್ರಕಾಂತ ಮಕಾಲೆ, ಶೀಲಾದೇವಿ ಹಾಗೂ ಇನ್ನುಳಿದ ಡಿವೈಎಸ್ಪಿಗಳು, ಸಿಪಿಐಗಳು ಮತ್ತು ಪಿಎಸ್ಐಗಳು ಸ್ಥಳದಲ್ಲಿ ಹಾಜರಿದ್ದರೂ ಸಹ ರಾತ್ರಿ 07.38 ರ ಸುಮಾರಿಗೆ ಆ ಗುಂಪು ಬಲವಂತವಾಗಿ ಸರ್ಕ್ಯೂಟ್ ಹೌಸ್ ಆವರಣಕ್ಕೆ ನುಗ್ಗಿ. ನನ್ನ ಅಧಿಕೃತ ಸರ್ಕಾರಿ ವಾಹನ (ಸಂಖ್ಯೆ: ಕೆಎ 01 ಬಿಎ 1999) ಮೇಲೆ ನೀಲಿ ಬಣ್ಣ ಎರಚಿ ವಾಹನವನ್ನು ಜಖಂಗೊಳಿಸಿದರು. ನನ್ನ ಮೇಲೆ ಹಲ್ಲೆ ಯತ್ನಕ್ಕೆ ಪ್ರಯತ್ನಿಸಿ ಪದೇ ಪದೇ ಅತ್ಯಂತ ಕೀಳು ಮಟ್ಟದ ಭಾಷೆಯನ್ನು ಬಳಸಿ ಅವಮಾನವನ್ನೂ ಮಾಡಿ ಜೀವ ಬೆದರಿಕೆ ಹಾಕಿದರು ಎಂದು ತಿಳಿಸಿದ್ದಾರೆ.
ಇದನ್ನು ಪೊಲೀಸರು ಮೂಕವಿಸ್ಮಿತರಂತೆ ಸುಮ್ಮನೆ ನೋಡುತ್ತಾ ಕಾಲಕಳೆಯುತ್ತಿದ್ದರು ಹಾಗೂ ಸ್ಥಳದಲ್ಲಿ ಹಾಜರಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, DYSPಗಳು ಮತ್ತು ಪೊಲೀಸ್ ಇನ್ಸ್ ಪೆಕ್ಟರ್ಗಳಿಗೆ ಪದೇ ಪದೆ ದೂರವಾಣಿ ಕರೆಗಳು ಬರುತ್ತಿದ್ದವು. ಪೊಲೀಸರಿಗೆ ದೂರವಾಣಿಯಲ್ಲಿ ಬರುವ ಸೂಚನೆಗಳ ಪ್ರಕಾರ ಅವರು ವರ್ತಿಸುತ್ತಿದ್ದರು. ನಾನು ಆ ಅತಿಥಿ ಗೃಹದಲ್ಲಿ ಸುಮಾರು ಆರು ಗಂಟೆಗಳಿಗೂ ಹೆಚ್ಚು ಕಾಲ ಸಿಕ್ಕಿಹಾಕಿಕೊಂಡು, ಸೂಕ್ತ ರಕ್ಷಣೆಯಿಲ್ಲದೇ ಅಕ್ರಮ ಬಂಧನದಲ್ಲಿ ನನ್ನನ್ನು ಉಳಿಸಿ ನನ್ನ ಹಕ್ಕಿಗೆ ಚ್ಯುತಿ ತಂದಿರುತ್ತಾರೆ ಎಂದಿದ್ದಾರೆ.
ಈ ಘಟನೆ ವಿರೋಧಪಕ್ಷದ ನಾಯಕನಾಗಿ ನನ್ನ ಸ್ಥಾನಮಾನ ಹಾಗೂ ಗೌರವಕ್ಕೆ ಧಕ್ಕೆಯಾಗುವಂತಹದು ಮಾತ್ರವಲ್ಲದೆ, ರಾಜ್ಯದ ಚುನಾಯಿತ ಪ್ರತಿನಿಧಿಗಳಿಗೆ ನೀಡಲಾಗುವ ಗೌರವ ಮತ್ತು ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ಪ್ರತಿಭಟನೆ ನಡೆಸಲು ಅವರಿಗೆ ಅನುಮತಿ ನೀಡಿದವರು ಯಾರು?. ಅವರು ಕಲ್ಲು, ದೊಣ್ಣೆ, ಬಣ್ಣ, ಮೊಟ್ಟೆ. ಟೊಮ್ಯಾಟೋ ಇತ್ಯಾದಿ ವಸ್ತುಗಳನ್ನು ತಂದಿರುವುದು ಪೊಲೀಸರ ಗಮನಕ್ಕೆ ಬಂದಿರಲಿಲ್ಲವೇ?. ಪ್ರತಿಭಟನೆ ನಡೆಸಲು ಅವರಿಗೆ ಕುಮ್ಮಕು, ನೀಡಿದವರು ಯಾರು?. ಹಾಗೂ ರಾತ್ರಿ ಸುಮಾರು 09.30 ಗಂಟೆಯ ಸಮಯದಲ್ಲಿ ಸರ್ಕಾರಿ ವಸತಿ ಗೃಹದಿಂದ ಹೊರಬರುವ ಸಮಯದಲ್ಲಿ ಪೊಲೀಸರ ಸಮ್ಮುಖದಲ್ಲಿಯೇ ಪ್ರತಿಭಟನಾ ನಿರತ ಗೂಂಡಾಗಳು ನಮ್ಮ ಕಾರಿನ ಕಲ್ಲುಗಳನ್ನು ತೂರಿರುತ್ತಾರೆ ಎಂದು ಆರೋಪಿಸಿದ್ದಾರೆ.
ಹೀಗಾಗಿ, ಈ ಅಪರಾಧಕರ ಮತ್ತು ಅವಮಾನಕಾರಿ ಕೃತ್ಯದಲ್ಲಿ ಭಾಗವಹಿಸಿ ನನ್ನ ಹಕ್ಕಿಗೆ ಚ್ಯುತಿ ಬರುವ ರೀತಿಯಲ್ಲಿ ಕಲಬುರಗಿ ಎಸ್ಪಿ ಅಡುರು ಶ್ರೀನಿವಾಸುಲು ಹಾಗೂ ಸ್ಥಳದಲ್ಲಿದ್ದ ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣನವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐಗಳಾದ ಚಂದ್ರಶೇಖರ ತಿಗಡಿ, ನಟರಾಜ ಲಾಡೆ, ಪಿಎಐಗಳಾದ ಶ್ರೀಶೈಲ್ ಅಂಬಾಟಿ, ತಿಮ್ಮಯ್ಯ, ಚಂದ್ರಕಾಂತ ಮೆಕಾಲೆ, ಶೀಲಾದೇವಿ ಹಾಗೂ ಇನ್ನುಳಿದ ಡಿವೈಎಸ್ ಪಿಗಳು, ಸಿಪಿಐಗಳು ಮತ್ತು ಪಿಎಸ್ಐಗಳು ಕರ್ತವ್ಯ ನಿರ್ವಹಿಸಿದ್ದಾರೆ. ಆದಕಾರಣ ನನ್ನ ಹಕ್ಕಿಗೆ ಚ್ಯುತಿ ಬರುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿರುವ ಹಾಗೂ ನನ್ನ ಭದ್ರತೆಯಲ್ಲಿ ಲೋಪವೆಸಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕೋರಿದ್ದಾರೆ.