ಶ್ರವಣಬೆಳಗೊಳ(ಹಾಸನ): ಜೈನ ಧರ್ಮದ 22ನೇ ತೀರ್ಥಂಕರ ಭಗವಾನ್ ಶ್ರೀ ನೇಮಿನಾಥರ ವಾರ್ಷಿಕ ಮಹಾ ರಥೋತ್ಸವ ಶನಿವಾರ ಶ್ರವಣಬೆಳಗೊಳದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಶ್ರೀಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಬೆಳಗ್ಗೆಯಿಂದಲೇ ಭಂಡಾರ ಬಸದಿಯಲ್ಲಿ ಪೂಜಾ ವಿಧಿ, ವಿಧಾನಗಳು ನಡೆದವು. ನಂತರ ನೇಮಿನಾಥ ತೀರ್ಥಂಕರರ ಮೂರ್ತಿಯನ್ನು ಮೆರವಣಿಗೆ ಮೂಲಕ ಮಹಾರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಜೈನ ಮಠದ ಮುಂಭಾಗದಲ್ಲಿ ಅಲಂಕರಿಸಿದ ಮಹಾರಥದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ನಂತರ ಶ್ರೀಗಳು ರಥಕ್ಕೆ ಪೂಜೆ ಸಲ್ಲಿಸಿ ಈಡುಗಾಯಿ ಒಡೆದು, ಫಲ-ಪುಷ್ಪಗಳನ್ನು ಸಮರ್ಪಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥದಲ್ಲಿದ್ದ ತೀರ್ಥಂಕರರ ಮೂರ್ತಿಗೆ ಹೂವು, ಹಣ್ಣುಗಳಿಂದ ಭಕ್ತರು ಪೂಜೆ ನೆರವೇರಿಸಿದರು. ರಥದ ಕಳಸಕ್ಕೆ ಬಾಳೆಹಣ್ಣು ಮುಂತಾದ ಫಲಗಳನ್ನು ಎಸೆದು, ಜಯಘೋಷ ಕೂಗುತ್ತಾ ರಥಯಾತ್ರೆಯಲ್ಲಿ ಸಾಗಿದರು. ವಿವಿಧ ಮಂಗಳವಾದ್ಯಗಳು, ಕಲಾತಂಡಗಳು ಮೆರುಗು ನೀಡಿದವು.
ಚೈತ್ರಮಾಸದ ಆರಂಭದಿಂದಲೇ ಶ್ರೀಮಠದಲ್ಲಿ ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು. ಕ್ಷೇತ್ರದ ಸುತ್ತಮುತ್ತಲಿನ ಗ್ರಾಮಗಳ ಜಿನಾಲಯಗಳಲ್ಲಿ, ಬೆಳಗೂಳದಲ್ಲಿರುವ ಧರ್ಮಚಕ್ರದಲ್ಲಿ ವಿಶೇಷ ಪೂಜೆ, ಆರಾಧನೆಗಳು ಜರುಗಿದವು. ಗರ್ಭಾವತರಣ ಕಲ್ಯಾಣ, ಜನ್ಮ ಕಲ್ಯಾಣ, ಪರಿನಿಷ್ಕ್ರಮಣ ಕಲ್ಯಾಣ, ಬಾಹುಬಲಿ ಸ್ವಾಮಿಯ 1039ನೇ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯಕ್ರಮ, ಜನ್ಮಾಭಿಷೇಕ, ವರ್ಧಂತಿ ಉತ್ಸವ, ಧರ್ಮ ಸಿಂಹಾಸನ ಪೂಜೆ, ಮಹಾವೀರ ಬಾಲಲೀಲಾ ಮಹೋತ್ಸವ ಜರುಗಿತು.
ಏ.10ರಂದು 2618ನೇ ಮಹಾವೀರ ಜಯಂತಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದ್ದರು.
5 ದಿನದ ಬದಲಿಗೆ 15 ದಿನ ಆಚರಣೆ: ಈ ಹಿಂದೆ ಭಟ್ಟಾರಕ ಸ್ವಾಮೀಜಿ, 5 ದಿನದ ಕಾರ್ಯಕ್ರಮವಾಗಿ ಆಚರಣೆ ಮಾಡುತ್ತಿದ್ದರು. ಈಗ ಹೊಸದಾಗಿ ಬಂದಿರುವ ಅಭಿನವ ಭಟ್ಟಾರಕ ಸ್ವಾಮೀಜಿಯವರು ಧಾರ್ಮಿಕ ಕಾರ್ಯಕ್ರಮವನ್ನು 15 ದಿನಗಳ ಕಾಲ ಆಚರಣೆ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದಿದ್ದಾರೆ.
ಎರಡು ಬಾರಿ ರಥೋತ್ಸವ: ಏ.12ರಂದು ಮಹಾರಥಯಾತ್ರಾ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು. ಸಾಮಾನ್ಯವಾಗಿ ರಥೋತ್ಸವ ಎಂದರೆ, 9ರಿಂದ ಮಧ್ಯಾಹ್ನದೊಳಗೆ ನೆರವೇರುವುದು ಸಾಮಾನ್ಯ. ಆದರೆ, ಶ್ರವಣಬೆಳಗೊಳದ ರಥೋತ್ಸವದಲ್ಲಿ ಎರಡು ಬಾರಿ ರಥ ಎಳೆಯಲಾಗುತ್ತದೆ.
ಮುಂಜಾನೆ ಶ್ರೀಮಠದ ವತಿಯಿಂದ ಮಡಿ ರಥೋತ್ಸವ ನೆರವೇರಿದರೆ, ಸಂಜೆ ಸುತ್ತಮುತ್ತಲಿನ ಗ್ರಾಮಸ್ಥರು ಎಲ್ಲರೂ ಒಂದಾಗಿ, ಮತ್ತೆ ಮೈಲಿಗೆ ರಥೋತ್ಸವ ಎಂದು ಎಳೆಯಲಾಗುತ್ತದೆ. ಸಂಜೆ ಸುತ್ತಮುತ್ತಲಿನ ಗ್ರಾಮಸ್ಥರಷ್ಟೆಯಲ್ಲದೇ, ಹೊರಗಿನಿಂದಲೂ ಜಾತ್ರೆಗೆ ಆಗಮಿಸುತ್ತಾರೆ. ರಾತ್ರಿ ಮತ್ತೆ ಬಾಹುಬಲಿ ಮೂರ್ತಿಯನ್ನು ಚಿಕ್ಕರಥದಲ್ಲಿ ಕುಳ್ಳಿರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ರಥವನ್ನು ಎಳೆಯುವ ಮೂಲಕ ಉತ್ಸವ ಮಾಡಲಾಗುತ್ತದೆ.
ಇಂದು ತೆಪ್ಪೋತ್ಸವ: 2,300 ವರ್ಷಗಳ ಇತಿಹಾಸ, ಪರಂಪರೆಯ ಧಾರ್ಮಿಕ ಕ್ಷೇತ್ರವಾಗಿರುವ ಶ್ರವಣಬೆಳಗೊಳದಲ್ಲಿ ಪ್ರಥಮ ಸಾಮ್ರಾಟ ಚಂದ್ರಗುಪ್ತ ಮೌರ್ಯ ಮತ್ತು ಆಚಾರ್ಯ ಭದ್ರಬಾಹು, ಸಾವಿರಾರು ತ್ಯಾಗಿಗಳ ತಪೋಭೂಮಿ, ಸಲ್ಲೇಖನ ಸಮಾಧಿಸ್ಥಳ ಆಗಿರುವುದರಿಂದ ಇದೊಂದು ಅಪೂರ್ವ ಸಾಧನೆಯ ಪವಿತ್ರ ಕ್ಷೇತ್ರವಾಗಿದೆ.
ದಕ್ಷಿಣ ಭಾರತದಲ್ಲಿ ರಥೋತ್ಸವ, ಜಾತ್ರೆಗಳು ನಿರಂತರವಾಗಿ ನಡೆಯುತ್ತಿದ್ದು, ಧರ್ಮ ಪ್ರಭಾವನೆಯಿಂದ ಜನತೆಯಲ್ಲಿ ಸದಾ ಜಾಗೃತಿ ಮೂಡುತ್ತದೆ. ಜಾತ್ರಾ ಮಹೋತ್ಸವವು ಕೇವಲ ಕ್ಷೇತ್ರ, ಮಠಗಳಿಗೆ ಸೀಮಿತವಾಗದೇ ಪ್ರತಿಯೊಂದೂ ಸಮುದಾಯದವರು ಪಾಲ್ಗೊಂಡು ಆಚರಿಸುವ ದೊಡ್ಡ ಸಂಸ್ಕೃತಿಯ ಹಬ್ಬವಾಗಿದೆ.
ಉತ್ತರ ಭಾರತದವರು ಮಹಾಕುಂಭಮೇಳವನ್ನು ಹೇಗೆ ಆಚರಿಸುತ್ತಾರೋ ಅದೇ ರೀತಿಯಲ್ಲಿ 12 ವರ್ಷಕ್ಕೊಮ್ಮೆ ದಕ್ಷಿಣ ಭಾರತದಲ್ಲಿ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ನೆರವೇರುತ್ತದೆ. ಇಂದು ಏ.13ರಂದು ಬಾಹುಬಲಿ ಸ್ವಾಮಿಗೆ ಪಾದ ಪೂಜೆ, ಮಠದ ಸಮೀಪದಲ್ಲಿರುವ ಭಂಡಾರ ಬಸದಿಯಲ್ಲಿ 24 ತೀರ್ಥಂಕರರಿಗೆ ಮಸ್ತಕಾಭಿಷೇಕ ಜರುಗಲಿದೆ. ರಾತ್ರಿ ದೊಡ್ಡ ಕಲ್ಯಾಣಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ತೆಪ್ಪೋತ್ಸವ ಮಧ್ಯರಾತ್ರಿಯ ತನಕ ಜರುಗುತ್ತದೆ ಹಾಗೂ ಏ.14ರಂದು ಮಹಾ ಶಿಲ್ಪಿಗೌರವ ಕಾರ್ಯಕ್ರಮ ನಡೆಯಲಿದೆ.
ಮಹಾರಥೋತ್ಸವದಲ್ಲಿ ಆಚಾರ್ಯ ಶ್ರೀ ಪ್ರಸನ್ನ ಸಾಗರ ಮಹರಾಜ್, ಸಂಘಸ್ಥ ತ್ಯಾಗಿಗಳು, ಮಾತಾಜಿಯವರು, ಹೊಂಬುಜ ಜೈನ ಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಮೈಸೂರಿನ ಕನಕಗಿರಿ ಜೈನ ಮಠದ ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಆರತಿಪುರದ ಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿ, ಶಾಸಕ ಸಿ.ಎನ್.ಬಾಲಕೃಷ್ಣ ಮತ್ತು ಸ್ಥಳೀಯ ಮುಖಂಡರು ಭಾಗವಹಿಸಿದ್ದರು. ಮಹಾರಥೋತ್ಸವಕ್ಕೆ ಈ ಬಾರಿ 40ರಿಂದ 50 ಸಾವಿರ ಮಂದಿ ಆಗಮಿಸಿದ್ದರು.
ಇದನ್ನೂ ಓದಿ: ಹಂಪಿ ವಿರೂಪಾಕ್ಷ, ಪಂಪಾಂಬಿಕೆ ದೇವಿ ಮಹಾರಥೋತ್ಸವ; ಚಂದ್ರಮೌಳೇಶ್ವರ ಸಣ್ಣ ರಥೋತ್ಸವ
ಇದನ್ನೂ ಓದಿ: ವಿಜೃಂಭಣೆಯಿಂದ ಪ್ರಾರಂಭವಾದ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವ