ಬೆಂಗಳೂರು: ಬೆಂಗಳೂರು-ಮಂಗಳೂರು ಪ್ರಯಾಣಿಸುವ ಪ್ರಯಾಣಿಕರಿಗೆ ಗುಡ್ ನ್ಯೂಸ್. ಅತಿ ಶೀಘ್ರದಲ್ಲಿ ಮಂಗಳೂರು-ಬೆಂಗಳೂರು ನಡುವೆ ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರಯಾಣಿಸುವ ಬಹುನಿರೀಕ್ಷಿತ ಹೈಸ್ಪೀಡ್ ಎಕ್ಸ್ಪ್ರೆಸ್ ಕಾರಿಡಾರ್ ಯೋಜನೆ ಕಾರ್ಯರೂಪಕ್ಕೆ ಬರುವ ಕಾಲ ಸನ್ನಿಹಿತವಾಗಿದೆ.
ಬೆಂಗಳೂರು-ಮಂಗಳೂರು ಹೈಸ್ಪೀಡ್ ಎಕ್ಸ್ಪ್ರೆಸ್ ಕಾರಿಡಾರ್. ಬಹುನಿರೀಕ್ಷಿತ ಮಹತ್ವದ ಯೋಜನೆಯಾಗಿದೆ. ರಾಜಧಾನಿ ಬೆಂಗಳೂರನ್ನು ಬಂದರು ಜಿಲ್ಲೆ ಮಂಗಳೂರಿಗೆ ಸಂಪರ್ಕಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಎಲ್ಲಾ ಋತುವಿನಲ್ಲೂ ಸಂಚಾರ ಸಾಧ್ಯವಾಗುವ ಈ ಹೈಸ್ಪೀಡ್ ಎಕ್ಸ್ಪ್ರೆಸ್ ಕಾರಿಡಾರ್ ಮೂಲಕ ಬೆಂಗಳೂರು ಮತ್ತು ಮಂಗಳೂರು ನಡುವಿನ ಸಂಚಾರ ಅವಧಿ ಕಡಿತವಾಗಲಿದೆ. ಯಾವುದೇ ಅಡೆತಡೆ ಇಲ್ಲದೇ ವಾಹನಗಳ ಸಂಚಾರಕ್ಕಾಗಿ ಹೈಸ್ಪೀಡ್ ಎಕ್ಸ್ಪ್ರೆಸ್ ಕಾರಿಡಾರ್ ಯೋಜನೆಯನ್ನು ರೂಪಿಸಲಾಗುತ್ತಿದೆ.
ಶೀಘ್ರ ಡಿಪಿಆರ್ ತಯಾರಿಸುವ ಕಾರ್ಯ ಆರಂಭ: ರಾಷ್ಟ್ರೀಯ ಹೆದ್ದಾರಿ ಸಚಿವಾಲಯದಿಂದ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಶೀಘ್ರದಲ್ಲೇ ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸುವ ಕಾರ್ಯ ಪ್ರಾರಂಭವಾಗಲಿದೆ. ಕಳೆದ ವರ್ಷ ಜುಲೈನಲ್ಲಿ ಡಿಪಿಆರ್ ತಾಯಾರಿಸಲು ಸಲಹಾ ಸಂಸ್ಥೆಯ ಆಯ್ಕೆಗಾಗಿ ಬಿಡ್ ಆಹ್ವಾನಿಸಿತ್ತು. ನವೆಂಬರ್ 4ರಂದು ಬಿಡ್ ಹಾಕಲು ಅಂತಿಮ ದಿನವಾಗಿತ್ತು. ಒಟ್ಟು 9 ಸಂಸ್ಥೆಗಳು ತಾಂತ್ರಿಕ ಬಿಡ್ ಸಲ್ಲಿಸಿದ್ದವು. ಇದೀಗ ಡಿಪಿಆರ್ ಸಿದ್ಧಪಡಿಸಲು ಸಂಸ್ಥೆಯನ್ನು ಅಂತಿಮಗೊಳಿಸಲಾಗಿದೆ.
ಇದೀಗ ಮಂಗಳೂರು-ಬೆಂಗಳೂರು ನಡುವೆ ಅತ್ಯಂತ ವೇಗದ ಕಾರಿಡಾರ್ ರಸ್ತೆ ನಿರ್ಮಾಣದ ಕುರಿತಂತೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಂದ ಪತ್ರ ಬಂದಿದ್ದು, ಈ ಯೋಜನೆಯ ಕುರಿತು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವುದಕ್ಕೆ ಕಳೆದ ಏ.30ರಂದು ಗುತ್ತಿಗೆ ನೀಡಲಾಗಿದೆ. ಈ DPR ಸಿದ್ಧಪಡಿಸಲು ಸುಮಾರು 18 ತಿಂಗಳು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
335 ಕಿ.ಮೀ. 4-8 ಪಥಗಳ ಎಕ್ಸ್ಪ್ರೆಸ್ ಕಾರಿಡಾರ್: ಈ ಬಹುನಿರೀಕ್ಷಿತ ಕಾರಿಡಾರ್ 335 ಕಿ.ಮೀ. ಅಂತರ ಹೊಂದಲಿದ್ದು, 4ರಿಂದ 8 ಪಥಗಳನ್ನು ಹೊಂದುವ ನಿರೀಕ್ಷೆ ಇದೆ. ಹಾಸನ ಮೂಲಕ ಹಾದು ಹೋಗುವ ಈ ಎಕ್ಸ್ಪ್ರೆಸ್ ಕಾರಿಡಾರ್ ಕ್ಲಿಷ್ಟಕರ ಪಶ್ಚಿಮ ಘಟ್ಟ ಪರ್ವತ ಶ್ರೇಣಿ ಮುಖೇನ ನಿರ್ಮಾಣವಾಗಲಿದೆ. ಈ ಹೈ ಸ್ಪೀಡ್ ಎಕ್ಸ್ಪ್ರೆಸ್ ಕಾರಿಡಾರ್ ನಿಂದ ಬೆಂಗಳೂರು-ಮಂಗಳೂರು ಪ್ರಯಾಣ ಅವಧಿ 3-4 ತಾಸು ಕಡಿತವಾಗುವ ನಿರೀಕ್ಷೆ ಇದೆ. 2027ರ ಅಂತ್ಯಕ್ಕೆ ಕಾರಿಡಾರ್ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.
ಸದ್ಯ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ಸುಮಾರು 416 ಕಿಲೋ ಮೀಟರ್ ಉದ್ದ ಹೊಂದಿದ್ದು, ಸುಮಾರು 7-8 ತಾಸಿನ ಪ್ರಯಾಣ ಅವಧಿ ತೆಗೆದುಕೊಳ್ಳುತ್ತದೆ. ಜೊತೆಗೆ ಎನ್ ಹೆಚ್ 75 ಮಳೆಗಾಲದಲ್ಲಿ ಆಗಾಗ್ಗೆ ಭೂ ಕುಸಿತಗಳಿಂದ ಬಾಧಿತವಾಗಿದ್ದು, ಪದೇ ಪದೆ ರಸ್ತೆ ಸಂಚಾರ ಸ್ಥಗಿತಗಳಿಗೆ ಕಾರಣವಾಗಿದೆ. ಇದರಿಂದ ಮಂಗಳೂರು-ಬೆಂಗಳೂರು ಮಧ್ಯದ ಪ್ರಮುಖ ಸಂಪರ್ಕ ಕೊಂಡಿ ಇಲ್ಲದಂತಾಗುತ್ತದೆ. ಆ ಮೂಲಕ ಬಂದರು ಜಿಲ್ಲೆ ಜೊತೆ ಸಂಪರ್ಕವೇ ಕಡಿತವಾಗುತ್ತದೆ.
ಈ ಹೆದ್ದಾರಿ ಪಥ ನಿರ್ಮಾಣವಾದರೆ ಎರಡು ಮಹಾನಗರಗಳ ನಡುವಿನ ಸಾರಿಗೆ ಮೂಲಸೌಕರ್ಯ ಮತ್ತಷ್ಟು ಮೇಲ್ದರ್ಜೆಗೇರಲಿದೆ. ಸುಧಾರಿತ ಮಾರ್ಗದಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಜೊತೆಗೆ ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣದ ಸಮಯ ಬಹಳ ಕಡಿಮೆ ಮಾಡುತ್ತದೆ ಮತ್ತು ಕರ್ನಾಟಕದ ಪ್ರಮುಖ ನಗರಗಳ ನಡುವೆ ಸುರಕ್ಷಿತ, ಹೆಚ್ಚು ಪರಿಣಾಮಕಾರಿ ಹಾಗೂ ಮಳೆಗಾಲ ಸೇರಿದಂತೆ ಸರ್ವ ಋತುವಿಗೂ ಅಬಾಧಿತವಾಗಿರುವ ಸಂಪರ್ಕ ವ್ಯವಸ್ಥೆ ಕಲ್ಪಿಸಲಿದೆ.
ಶಿರಾಡಿ ಘಾಟಿ ರಸ್ತೆ ಹಾಗೂ ರೈಲು ಮಾರ್ಗಕ್ಕೆ ಸಂಯೋಜಿತ ಡಿಪಿಆರ್: ಇದೇ ವೇಳೆ ಶಿರಾಡಿ ಘಾಟಿಯಲ್ಲಿ ಪ್ರತ್ಯೇಕ ರೈಲು ಮಾರ್ಗ ನಿರ್ಮಿಸಲು ರೈಲ್ವೇ ಇಲಾಖೆ ಕೂಡಾ ಡಿಪಿಆರ್ ಸಿದ್ದಪಡಿಸಲು ಮುಂದಾಗಿದೆ. ಪಶ್ಚಿಮ ಘಟ್ಟ ತಪ್ಪಲಿನಲ್ಲಿರುವ ಶಿರಾಡಿ ಘಾಟ್ ಸೂಕ್ಷ್ಮ ಪರಿಸರ ವಲಯದಲ್ಲಿರುವುದರಿಂದ ಇಲ್ಲಿ ರಸ್ತೆ ಮತ್ತು ರೈಲು ಮಾರ್ಗವನ್ನು ಸಮಾನಾಂತರವಾಗಿ ಅಭಿವೃದ್ದಿಸುವ ಸಾಧ್ಯತೆಗಳ ಬಗ್ಗೆ ಅನ್ವೇಷಿಸಲು ರೈಲ್ವೆ ಮಂಡಳಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ದ ಜಂಟಿ ಸಮಿತಿಯೊಂದನ್ನು ರಚಿಸುವಂತೆ ಮನವಿ ಮಾಡಲಾಗಿದೆ. ಸಂಯೋಜಿತ ಯೋಜನೆ ರೂಪಿಸುವುದರಿಂದ ಅರಣ್ಯ ಮತ್ತು ಪರಿಸರ ಇಲಾಖೆಗಳ ಅನುಮೋದನೆ ಪಡೆಯುವುದು ಸುಲಭವಾಗಲಿದೆ ಎಂದು ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ.