ವಿಶೇಷ ವರದಿ: ಸಿದ್ದನಗೌಡ.ಎಸ್.ಪಾಟೀಲ್
ಬೆಳಗಾವಿ: ಜಗಜ್ಯೋತಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಲ್ಯಾಣ ಕ್ರಾಂತಿ ಜಗತ್ತಿನ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದಿದೆ. ಈ ಕ್ರಾಂತಿಗೆ ಶರಣೆ ಕಲ್ಯಾಣಮ್ಮ ಕೂಡ ಕಾರಣೀಕರ್ತರು. ವಚನ ಸಾಹಿತ್ಯದ ಉಳಿವಿಗಾಗಿ ತನ್ನ ಜೀವವನ್ನೇ ಬಲಿದಾನಗೈದ ಈ ಮಹಾತಾಯಿಯ ಐಕ್ಯಸ್ಥಳ ಅವಸಾನದ ಅಂಚಿಗೆ ತಲುಪಿದೆ.
ಶರಣ ಸಮಗಾರ ಹರಳಯ್ಯನವರ ಧರ್ಮಪತ್ನಿಯೇ ಕಲ್ಯಾಣಮ್ಮ. 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದ ಅನುಭವ ಮಂಟಪದಲ್ಲಿದ್ದ 770 ಅಮರಗಣಂಗಳಲ್ಲಿ ಈ ದಂಪತಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಶ್ರೇಷ್ಠ ವಚನಕಾರ್ತಿಯಾಗಿ, ಮಹಿಳಾ ಕುಲದ ಪ್ರತೀಕವಾಗಿ ಕಲ್ಯಾಣದಲ್ಲಿ ಇವರು ಮನೆ ಮಾತಾಗಿದ್ದರು.
ಈಗಿನ ಕಲಬುರಗಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಸಗರ ಎಂಬ ಗ್ರಾಮದಲ್ಲಿ ತಮ್ಮ ಕುಲಕಸುಬು ಪಾದರಕ್ಷೆ ತಯಾರಿಸುವ ಕಾಯಕ ಮಾಡಿಕೊಂಡಿದ್ದ ಶರಣರಾದ ಹರಳಯ್ಯ ಮತ್ತು ಕಲ್ಯಾಣಮ್ಮ ಅವರನ್ನು ಬಸವಣ್ಣನವರ ಸಾಮಾಜಿಕ ಕ್ರಾಂತಿ, ಕಾಯಕದ ಬಗೆಗಿನ ಗೌರವ ಕಲ್ಯಾಣದ ಕಡೆಗೆ ಸೆಳೆಯಿತು. 12ನೇ ಶತಮಾನದಲ್ಲಿ ಪಾದರಕ್ಷೆ ತಯಾರಿಸುವ ಕಸುಬು ಮಾಡುವವರನ್ನು ಕೀಳಾಗಿ ಕಾಣುತ್ತಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಳವರ್ಗದ ಜನರ ಮೇಲಿನ ಬಸವಣ್ಣನವರ ಕಾಳಜಿ ಮತ್ತು ಪ್ರೀತಿ ಬಸವಣ್ಣನವರ ಮೇಲಿನ ಗೌರವವನ್ನು ಹೆಚ್ಚಿಸಿತ್ತು.
ತೊಡೆ ಚರ್ಮದಿಂದ ಚಪ್ಪಲಿ: ಹರಳಯ್ಯನವರು ತಮ್ಮ ಬಲ ತೊಡೆಯ ಚರ್ಮ, ಕಲ್ಯಾಣಮ್ಮ ತಮ್ಮ ಎಡ ತೊಡೆಯ ಚರ್ಮದಿಂದ ಚೆಂದದ ಚಮ್ಮಾವುಗೆ (ಪಾದರಕ್ಷೆ) ತಯಾರಿಸಿ ಬಸವಣ್ಣನವರಿಗೆ ನೀಡಲು ಬಂದರು. ಇದರಿಂದ ಬಸವಣ್ಣನವರು ಬಹಳಷ್ಟು ದುಃಖಿತಗೊಂಡರು. ಅಲ್ಲದೇ ಆ ಪಾದರಕ್ಷೆಗಳನ್ನು ಮೆಟ್ಟದೆ ತಮ್ಮ ತಲೆಯ ಮೇಲಿಟ್ಟುಕೊಂಡು ನಿಮ್ಮ ಶರಣರ ಚಮ್ಮಾವುಗೆಗೆ ಪೃಥ್ವಿ ಸಮಬಾರದು, ಸರಿಯಲ್ಲಾ ನೋಡಾ ಕೂಡಲಸಂಗಮದೇವಾ ನಿಮ್ಮ ಶರಣರ ಚಮ್ಮಾವುಗೆಗೆ ಎಂದು ಇಂತಹ ಪವಿತ್ರ ಶರಣರ ಚರ್ಮದಿಂದ ತಯಾರಿಸಿದ ಪಾದರಕ್ಷೆ ತೊಡಲು ನಾನು ಯೋಗ್ಯನಲ್ಲ ಎಂದಿದ್ದರು ಎಂದು ಇತಿಹಾಸದಲ್ಲಿ ದಾಖಲಾಗಿದೆ.
ಹರಳಯ್ಯ ಮತ್ತು ಕಲ್ಯಾಣಮ್ಮ ದಂಪತಿ ಪುತ್ರ ಶೀಲವಂತನಿಗೂ ಬ್ರಾಹ್ಮಣ ಸಮಾಜದ ಮಧುವರಸನ ಪುತ್ರಿ ಲಾವಣ್ಯವತಿಗೂ ಬಸವಣ್ಣನವರು ಮದುವೆ ಮಾಡಿಸುತ್ತಾರೆ. ಇದು ಕಲ್ಯಾಣದಲ್ಲಿ ದೊಡ್ಡ ಕ್ರಾಂತಿಗೆ ಮುನ್ನುಡಿ ಬರೆಯುತ್ತದೆ. ಎರಡು ಕುಟುಂಬಗಳು ಪರಸ್ಪರ ಒಪ್ಪಿಕೊಂಡ ಲಿಂಗಾಯತ ಧರ್ಮೀಯರ ಮದುವೆ ಇದಾಗಿರುತ್ತದೆ. ಆದರೆ, ಪಟ್ಟಭದ್ರರು ಇದನ್ನು ಅಂತರ್ಜಾತಿ ವಿವಾಹವೆಂದು ಗುಲ್ಲೆಬ್ಬಿಸಿ ಕ್ರಾಂತಿ ನಡೆಯುವಂತೆ ಮಾಡುತ್ತಾರೆ. ಸಾವಿರಾರು ಶರಣರ ಹತ್ಯಾಕಾಂಡವೇ ನಡೆಯಲು ಕಾರಣವಾಯಿತು.
ಕಂಡ ಕಂಡಲ್ಲಿ ಶರಣರ ಕಗ್ಗೊಲೆ: ಶೀಲವಂತ ಮತ್ತು ಲಾವಣ್ಯವತಿ ಅವರ ಮದುವೆ ಸಂಪ್ರದಾಯವಾದಿಗಳ ಕಣ್ಣು ಕೆಂಪಾಗಿಸಿತು. ಬಿಜ್ಜಳನಿಗೆ ಚಾಡಿ ಚುಂಚಿದರು. ಇದರಿಂದ ಮಧುವರಸ ಮತ್ತು ಹರಳಯ್ಯನವರ ಕಣ್ಣು ಕೀಳಿಸಿ, ಎಳೆ ಹೂಟೆ ಶಿಕ್ಷೆಯನ್ನು ಬಿಜ್ಜಳ ರಾಜ ನೀಡುತ್ತಾನೆ. ಪರಿಣಾಮ ಶರಣರ ಹತ್ಯೆಗಳು ನಡೆದು, ಕಲ್ಯಾಣದ ರಸ್ತೆಗಳಲ್ಲಿ ರಕ್ತದ ಕೋಡಿಯೇ ಹರಿಯಿತು. ಕಂಡ ಕಂಡಲ್ಲಿ ಶರಣರ ಕಗ್ಗೊಲೆಗಳು ನಡೆದವು. ವಚನ ಸಾಹಿತ್ಯ ನಾಶ ಪಡಿಸಲು ಶುರು ಮಾಡಿದರು. ಅಲ್ಲಿಂದ ಶರಣರು ವಚನಗಳ ಕಟ್ಟುಗಳನ್ನು ತಲೆಯ ಮೇಲೆ ಹೊತ್ತು ವಚನಗಳ ಸಂಕ್ಷಣೆಗೆ ಕಲ್ಯಾಣದಿಂದ ಚದುರಿದರು ಎನ್ನುತ್ತಾರೆ ಇತಿಹಾಸಕಾರರು.

ಹೀಗೆ ಕಲ್ಯಾಣದಲ್ಲಿ ತನ್ನ ಪತಿಯನ್ನು ಕಳೆದುಕೊಂಡ ಶರಣೆ ಕಲ್ಯಾಣಮ್ಮ ವಚನ ಸಾಹಿತ್ಯದ ಉಳಿವಿಗಾಗಿ ಬಸವಣ್ಣನವರ ಸಹೋದರಿ ಅಕ್ಕನಾಗಮ್ಮನವರ ನೇತೃತ್ವದಲ್ಲಿ ಬರುತ್ತಿದ್ದರು. ಈ ವೇಳೆ ಇಂದಿನ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಕಲ್ಯಾಣಮ್ಮ ಐಕ್ಯರಾಗುತ್ತಾರೆ. ಇಂದು ಆ ಐಕ್ಯಸ್ಥಳ ಆಗಲೋ, ಈಗಲೋ ಬೀಳುವ ದುಸ್ಥಿತಿಯಲ್ಲಿದೆ. ಹೆಂಚು, ಕಿಟಕಿಗಳು ಒಡೆದು ಹೋಗಿದ್ದು, ಗೋಡೆಗಳು ಕುಸಿಯುವ ಸ್ಥಿತಿಯಲ್ಲಿವೆ. ಒಳಗೆ ಕಲ್ಯಾಣಮ್ಮನವರ ಮೂರ್ತಿಯೂ ಹಳೆಯದಾಗಿದೆ. ಜೀರ್ಣೋದ್ಧಾರ ಸಂಬಂಧ ಗ್ರಾಮಸ್ಥರು ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ.
1978ರ ನವೆಂಬರ್ 14ರಂದು ಕಲ್ಲು, ಮಣ್ಣು, ಕಟ್ಟಿಗೆಯಿಂದ ಕಲ್ಯಾಣಮ್ಮ ಅವರ ಐಕ್ಯಸ್ಥಳ ನಿರ್ಮಿಸಲಾಗಿತ್ತು. ಅದರ ವೀಕ್ಷಣೆಗೆ ರಾಜ್ಯ, ಹೊರ ರಾಜ್ಯಗಳಿಂದಲೂ ಜನರು ಬರುತ್ತಾರೆ. ಆದರೆ, ಹೀಗೆ ಬಂದವರಿಗೆ ಇಲ್ಲಿನ ದುಸ್ಥಿತಿ ಕಂಡು ತೀವ್ರ ನಿರಾಸೆ ಆಗುತ್ತಿದೆ. ಅಲ್ಲದೇ ತೀವ್ರ ಬೇಸರ ಹೊರ ಹಾಕುತ್ತಿದ್ದಾರೆ.
ಈಟಿವಿ ಭಾರತದ ಪ್ರತಿನಿಧಿ ಜೊತೆಗೆ ಮಾತನಾಡಿದ ಶಿಕ್ಷಕ ಮಹಾಂತೇಶ ತೋರಣಗಟ್ಟಿ, "ವಿಶ್ವಗುರು ಬಸವಣ್ಣನವರು ಕಲ್ಯಾಣದಲ್ಲಿ ಆರಂಭಿಸಿದ ಸಮಾಜೋಧಾರ್ಮಿಕ ಚಳುವಳಿಯಲ್ಲಿ ಕಲ್ಯಾಣಮ್ಮ ಕೂಡ ಪ್ರಮುಖ ಪಾತ್ರ ವಹಿಸಿದವರು. ಇನ್ನು ಕಲ್ಯಾಣ ಕ್ರಾಂತಿಗೆ ಹರಳಯ್ಯ ಮತ್ತು ಕಲ್ಯಾಣಮ್ಮ ದಂಪತಿ ಕೂಡ ಕಾರಣವಾಗಿದ್ದಾರೆ. ಕಲ್ಯಾಣ ಕ್ರಾಂತಿ ಎಂದರೆ ಮಾನವ ಹಕ್ಕುಗಳಿಗಾಗಿ ನಡೆದ ಚಳುವಳಿ. ಅದೇ ರೀತಿ ಅಕ್ಕ ನಾಗಮ್ಮನವರ ಜೊತೆಯಾಗಿ ಕಲ್ಯಾಣಮ್ಮನವರು ವಚನ ಸಾಹಿತ್ಯದ ಉಳಿವಿಗೆ ಹೋರಾಡಿದ ದಿಟ್ಟ ಹೋರಾಟಗಾರ್ತಿ ಕೂಡ ಆಗಿದ್ದರು" ಎಂದರು.
"ಇತ್ತಿಚೆಗೆ ವಚನ ಸಾಹಿತ್ಯ, ಶರಣರ ಕ್ಷೇತ್ರಗಳ ಅಧ್ಯಯನ ಹೆಚ್ಚಾಗಿದೆ. ಆ ನಿಟ್ಟಿನಲ್ಲಿ ತಿಗಡಿಯಲ್ಲಿರುವ ಕಲ್ಯಾಣಮ್ಮನವರ ಐಕ್ಯಸ್ಥಳ ಶಿಥಿಲಾವಸ್ಥೆಯಲ್ಲಿದೆ. ಅಲ್ಲಿಗೆ ಹೋಗಲು ಸರಿಯಾದ ರಸ್ತೆ ಇಲ್ಲ. ಬೆಳೆಗಳ ನಡುವೆ ಹೊಲದಲ್ಲಿ ದಾಟಿ ಹೋಗಬೇಕಿದೆ. ಹಾಗಾಗಿ, ಸರ್ಕಾರ ಇತ್ತ ಗಮನ ಹರಿಸಿ ಜೀರ್ಣೋದ್ಧಾರ ಕೈಗೊಳ್ಳಬೇಕು. ಈ ಮೂಲಕ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ಅನುಯಾಯಿಗಳಿಗೆ ನ್ಯಾಯ ದೊರಕಿಸಿಕೊಟ್ಟಂತೆ ಆಗುತ್ತದೆ" ಎಂದು ಅವರು ಹೇಳಿದರು.

ಐಕ್ಯಸ್ಥಳದ ಅರ್ಚಕ ಬಸಪ್ಪ ರಾಮಕೆ ಮಾತನಾಡಿ, "ಕಲ್ಯಾಣಮ್ಮ ಅವರು ಕಲ್ಲೂರಿನಲ್ಲಿ ದೇಹ ಬಿಟ್ಟರು. ಬಳಿಕ ಅಲ್ಲಿಂದ ಅವರ ಮೃತದೇಹವನ್ನು ತಿಗಡಿ ಗ್ರಾಮದ ಸದ್ಯ ಹಿರೇಮಠದ ಜಾಗದಲ್ಲಿ ಸಮಾಧಿ ಮಾಡಲಾಗಿದೆ. ನಮ್ಮ ಪೂರ್ವಜರ ಕಾಲದಿಂದಲೂ ಇಲ್ಲಿ ಪೂಜೆ ಮಾಡುತ್ತಾ ಬಂದಿದ್ದೇವೆ. ಸದ್ಯಕ್ಕೆ ಇದು ಸಂಪೂರ್ಣವಾಗಿ ಹಾಳಾಗಿದೆ. ಇದನ್ನು ಅಭಿವೃದ್ಧಿ ಪಡಿಸುವಂತೆ ಕೇಳಿದರೆ ಅಧಿಕಾರಿಗಳು ಕುಂಟು ನೆಪ ಹೇಳುತ್ತಿದ್ದಾರೆ. ಹಳೆ ಕಟ್ಟಡ ತೆರವುಗಳಿಸಿ, ಹೊಸ ಕಟ್ಟಡ ಕಟ್ಟಬೇಕು. ಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕು. ವೀಕ್ಷಣೆಗೆ ಬರುವ ಪ್ರವಾಸಿಗರು ಮತ್ತು ಶರಣರಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು" ಎಂದು ಒತ್ತಾಯಿಸಿದರು.
ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅವರನ್ನು ಈಟಿವಿ ಭಾರತದ ಪ್ರತಿನಿಧಿ ಸಂಪರ್ಕಿಸಿದಾಗ, "ಕಲ್ಯಾಣಮ್ಮನವರ ಐಕ್ಯಸ್ಥಳ ಜಾಗ ಖಾಸಗಿ ಒಡೆತನದಲ್ಲಿದೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಐಕ್ಯಸ್ಥಳದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುತ್ತೇವೆ. ಶೀಘ್ರವೇ ಅದನ್ನು ಕಾರ್ಯರೂಪಕ್ಕೆ ತರಲಾಗುವುದು" ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ್ ಮಾತನಾಡಿ, "ಸ್ಥಳೀಯ ಶಾಸಕರು ಪ್ರಸ್ತಾವನೆ ಕಳಿಸಿದರೆ ಪ್ರವಾಸೋದ್ಯಮ ಇಲಾಖೆಯಡಿ ಕಲ್ಯಾಣಮ್ಮನವರ ಐಕ್ಯಸ್ಥಳದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುತ್ತೇವೆ. ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುತ್ತೇವೆ" ಎಂದರು.
ಇದನ್ನೂ ಓದಿ: ಕಾಂಞಂಗಾಡ್-ಕಾಣಿಯೂರು ರೈಲ್ವೇ ಮಾರ್ಗ ನಿರ್ಮಾಣ: ಶಾಸಕ ಅಶೋಕ್ ರೈ ಭೇಟಿಯಾದ ಕೇರಳ ನಿಯೋಗ