ETV Bharat / state

ಬೆಳಗಾವಿ: ಸ್ವಂತ ಬಸವಾಶ್ರಮ, ಬಸವಮಂಟಪಕ್ಕೆ ಉಚಿತ ಜಾಗ ದೇಣಿಗೆ: ಬಸವತತ್ವಕ್ಕೆ ಇಡೀ ಕುಟುಂಬ ಮೀಸಲು! - BASAVA JAYANTHI 2025

ಕಳೆದ ಎರಡು ದಶಕಗಳಿಂದ ಈ ಇಡೀ ಕುಟುಂಬ ಬಸವತತ್ವ, ವಚನ ಸಾಹಿತ್ಯ ಪ್ರಚಾರಕ್ಕಾಗಿ ತನು, ಮನ, ಧನದಿಂದ ತೊಡಗಿಸಿಕೊಂಡಿದೆ.

Belagavi Gudasa Family
ಬೆಳಗಾವಿಯ ಗುಡಸ ಪರಿವಾರ (ETV Bharat)
author img

By ETV Bharat Karnataka Team

Published : April 30, 2025 at 7:58 AM IST

4 Min Read

ವಿಶೇಷ ವರದಿ: ಸಿದ್ದನಗೌಡ ಪಾಟೀಲ​

ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲೊಂದು ಕುಟುಂಬ ಬಸವಸೇವೆಗೆ ಪಣ ತೊಟ್ಟಿದೆ. ಕುಟುಂಬದ ಎಲ್ಲಾ ಸದಸ್ಯರು ಅಪ್ಪಟ ಬಸವತತ್ವ ನಿಷ್ಠರು. ಬಸವ ಮಂಟಪಕ್ಕೆ ಉಚಿತ ಜಾಗ, ವಚನಸಾಹಿತ್ಯ-ಲಿಂಗಾಯತ ಧರ್ಮ ಪ್ರಚಾರಕ್ಕೆ ಈ ಕುಟುಂಬ 2 ದಶಕಗಳಿಂದ ತನು-ಮನ-ಧನದಿಂದ ಸೇವಾ ಕೈಂಕರ್ಯ ಮಾಡುತ್ತಾ ಬಂದಿದೆ.

ಕುಟುಂಬವು ಬಸವಾಶ್ರಮವನ್ನು ಸ್ಥಾಪಿಸಿದ್ದು,‌ ಪ್ರತಿ ಲಿಂಗಾಯತರ ಮನೆಗಳು ಮಹಾಮನೆಗಳಾಗಬೇಕು ಎಂಬ ಬಸವಣ್ಣನವರ ಸಂಕಲ್ಪವನ್ನು ಸಾಕಾರಗೊಳಿಸಿದೆ. ಹಾಗಾದ್ರೆ, ಆ ಕುಟುಂಬ ಯಾವುದು? ಹೇಗಿದೆ ಅವರ ಸೇವೆ? ಬಸವ ಜಯಂತಿಯ ದಿನ ಇಲ್ಲಿದೆ 'ಈಟಿವಿ ಭಾರತ'ದ ವಿಶೇಷ ವರದಿ.

ಬಸವತತ್ವಕ್ಕೆ ಇಡೀ ಕುಟುಂಬ ಮೀಸಲು (ETV Bharat)

ವಿಶ್ವಗುರು ಬಸವಣ್ಣನವರ ಸೇವೆ: ಬಸವಣ್ಣನೇ ತಾಯಿ, ಬಸವಣ್ಣನೇ ತಂದೆ, ಬಸವಣ್ಣನೇ ಪರಮಬಂಧುವೆನಗೆ ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ ಎಂಬ ಶಿವಯೋಗಿ ಸಿದ್ಧರಾಮೇಶ್ವರರ ವಚನದಂತೆ ಬಸವಣ್ಣನವರನ್ನೇ ಉಸಿರಾಗಿಸಿಕೊಂಡಿದೆ ಬೆಳಗಾವಿಯ ಗುಡಸ ಪರಿವಾರ. ಮೂಲತಃ ಹುಕ್ಕೇರಿ ತಾಲ್ಲೂಕಿನ ಬಸ್ಸಾಪುರ ಗ್ರಾಮದ ಈ ಕುಟುಂಬ ಸದ್ಯ ಬೆಳಗಾವಿಯಲ್ಲಿ ನೆಲೆಸಿದೆ. ವ್ಯಾಪಾರಿ ಕುಟುಂಬದ ಹಿನ್ನೆಲೆ ಹೊಂದಿರುವ ಇವರು ಸತ್ಯಶುದ್ಧ ಕಾಯಕದ ಜೊತೆಗೆ ವಿಶ್ವಗುರು ಬಸವಣ್ಣನವರ ಸೇವೆ ಮಾಡುತ್ತಾ ಇತರರಿಗೂ ಮಾದರಿಯಾಗಿದ್ದಾರೆ.

ಮಹಿಳೆಯರು, ಚಿಕ್ಕ ಮಕ್ಕಳಿಂದಲೂ ಇಷ್ಟಲಿಂಗ ದೀಕ್ಷೆ: ಹೌದು, ಗುಡಸ ಕುಟುಂಬದಲ್ಲಿ 54 ಜನ ಸದಸ್ಯರಿದ್ದಾರೆ. ಎಲ್ಲರೂ ಬೇರೆ ಬೇರೆ ಮನೆಗಳಲ್ಲಿ ವಾಸವಿದ್ದರೂ ಕೂಡ ಬಸವತತ್ವದ ಪ್ರಸಾರಕ್ಕೆ ಒಟ್ಟಾಗಿಯೇ ಸೇವೆ ಸಲ್ಲಿಸುತ್ತಾರೆ. ಕೂಡಲಸಂಗಮದ ಬಸವಧರ್ಮ ಪೀಠದ ಪ್ರಪ್ರಥಮ ಮಹಿಳಾ ಜಗದ್ಗುರು ಲಿಂಗೈಕ್ಯ ಡಾ.ಮಾತೆ ಮಹಾದೇವಿ ಅವರ ಪ್ರಭಾವದಿಂದ ಬಸವತತ್ವ ನಿಷ್ಠರಾಗಿ ಇವರು ಹೊರ ಹೊಮ್ಮಿದ್ದಾರೆ. ಇವರ ಮನೆಯ ಎಲ್ಲಾ ಪುರುಷರು, ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಕೂಡ ಇಷ್ಟಲಿಂಗ ದೀಕ್ಷೆ ಪಡೆದಿದ್ದು, ಶರಣಧರ್ಮವನ್ನೇ ಉಸಿರಾಗಿಸಿಕೊಂಡಿದ್ದಾರೆ. ಬಸವಾದಿ ಶರಣರ ಕುರಿತು ಎಲ್ಲಿಯೇ ಅನುಭಾವಗೋಷ್ಠಿ, ಉಪನ್ಯಾಸಗಳು ಇದ್ದರೆ ಅಲ್ಲಿ ಗುಡಸ ಕುಟುಂಬದ ಹಾಜರಿ ಇರುತ್ತದೆ. ಆ ಕಾರ್ಯಕ್ರಮದಲ್ಲಿ ಅಕ್ಷರ, ಅನ್ನ ದಾಸೋಹದ ಜೊತೆಗೆ ಆರ್ಥಿಕ‌ ನೆರವು ನೀಡುವ ಮೂಲಕ ಮಹಾನ್ ದಾಸೋಹಿಗಳಾಗಿ ಮನೆ ಮಾತಾಗಿದ್ದಾರೆ.

Basava Mantapa
ಬಸವ ಮಂಟಪ (ETV Bharat)

ಬೆಳಗಾವಿ ಮಹಾಂತೇಶ ನಗರದಲ್ಲಿ ಬಸವ ಮಂಟಪ ನಿರ್ಮಾಣಕ್ಕೆ 4 ಗುಂಟೆ ಜಾಗವನ್ನು ಉಚಿತವಾಗಿ ಗುಡಸ ಪರಿವಾರ ನೀಡಿದೆ. ಆ ಜಾಗದಲ್ಲಿ ಲಿಂಗೈಕ್ಯ ಶಿವಬಾಯವ್ವ ಮತ್ತು‌ ಬಸವಣ್ಣೆವ್ವ ಗುಡಸ ಅವರ ಸ್ಮರಣಾರ್ಥ ಸುಂದರ ಬಸವ ಮಂಟಪ ತಲೆ ಎತ್ತಿದ್ದು, ನಿತ್ಯವೂ ಇಲ್ಲಿ ಶರಣರ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.

ಗುರು ಬಸವಾಶ್ರಮ ನಿರ್ಮಾಣ: ಅಲ್ಲದೇ ತಮ್ಮ ಸ್ವಗ್ರಾಮ ಬಸ್ಸಾಪುರ ಸಮೀಪದ ಜಮೀನಿನಲ್ಲಿ ಗುಡಸ ಕುಟುಂಬದ ಹಿರಿಯ ಶಂಕರ ಗುಡಸ ಅವರು 48 ಲಕ್ಷ ರೂ. ವ್ಯಯಿಸಿ ಗುರು ಬಸವಾಶ್ರಮವನ್ನೆ ನಿರ್ಮಿಸಿದ್ದಾರೆ. ಮಠ-ಮಾನ್ಯಗಳು ಮಾಡಬೇಕಾದ ಕೆಲಸವನ್ನು ಈ ಕುಟುಂಬ ಮಾಡುತ್ತಿರುವುದು ಬಸವಾನುಯಾಯಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Belagavi Gudasa Family
ಬೆಳಗಾವಿಯ ಗುಡಸ ಪರಿವಾರ (ETV Bharat)

ಇಡೀ ಕುಟುಂಬ ಬಸವತತ್ವ ಪ್ರಸಾರಕ್ಕೆ ಕಂಕಣಬದ್ಧ: ಈಟಿವಿ ಭಾರತ ಜೊತೆಗೆ ಮಾತನಾಡಿದ ಆನಂದ ಗುಡಸ, "ಮೊದಲು ನಮ್ಮ ಮನೆಯಲ್ಲಿ ವರಶಂಕರ, ಅಯ್ಯಪ್ಪ ಸೇರಿ ನಾನಾ ದೇವರ ಪೂಜೆ ಮಾಡುತ್ತಿದ್ದೆವು‌. 1996ರಲ್ಲಿ ಬೆಳಗಾವಿ ಕೆಎಲ್ಇ ಸಂಸ್ಥೆಯ ಗಿಲಗಿಂಚಿ-ಅರಟಾಳ ಶಾಲೆಯಲ್ಲಿ ರಾಷ್ಟ್ರೀಯ ಬಸವದಳದಿಂದ ನಡೆಯುತ್ತಿದ್ದ ಪ್ರಾರ್ಥನೆಯಲ್ಲಿ ಪಾಲ್ಗೊಂಡೆ. ಬಳಿಕ ಪ್ರತಿವಾರ ಹೋಗಲು ಶುರು ಮಾಡಿದೆ. ನನ್ನ ಜೊತೆಗೆ ನಮ್ಮ ಸಹೋದರ ಮಹಾಂತೇಶ ಬಂದ. ಮನೆಯಲ್ಲಿ ಎಲ್ಲಾ ಸದಸ್ಯರ ದೇವರ ಜಗುಲಿ ಬೇರೆಯಾದರೆ, ನನ್ನದು ಬೇರೆಯಾಯಿತು. ಕ್ರಮೇಣವಾಗಿ ಎಲ್ಲರ ಮನಪರಿವರ್ತಿಸಿ ಬಸವತತ್ವದ ಕಡೆ ಹೊರಳುವಂತೆ ಮಾಡಿದೆವು. ಈಗ ನಮ್ಮ ಕಣಕಣದಲ್ಲೂ ಧರ್ಮಗುರು ಬಸವಣ್ಣನವರೇ ತುಂಬಿಕೊಂಡಿದ್ದಾರೆ. ಎಲ್ಲರೂ ಇಷ್ಟಲಿಂಗಧಾರಿಗಳಾಗಿ, ಏಕದೇವೋಪಾಸಕರಾದೆವು. ವಚನ ಸಾಹಿತ್ಯದ ಬಗ್ಗೆ ತಿಳಿದುಕೊಂಡೆವು. ಈಗ ಇಡೀ ಕುಟುಂಬ ಬಸವತತ್ವ ಪ್ರಸಾರಕ್ಕೆ ಕಂಕಣಬದ್ಧರಾಗಿದ್ದೇವೆ" ಎಂದು ವಿವರಿಸಿದರು.

"ನಾನು 14 ವರ್ಷ ಅಯ್ಯಪ್ಪಸ್ವಾಮಿ ಆಗಿದ್ದೆ. ನಮ್ಮ ಅಣ್ಣನ ಮಕ್ಕಳನ್ನು ನೋಡಿ ನಾನು ಪರಿವರ್ತನೆ ಆಗಿದ್ದೇನೆ. ದೇವರ ಪರಿಕಲ್ಪನೆ, ಧರ್ಮಗುರು ಬಸವಣ್ಣನವರ ಮೇಲಿನ ಅಭಿಮಾನ ಡಾ.ಮಾತೆ ಮಹಾದೇವಿ ಅವರಿಂದ ಕಲಿತೆವು. ನಮ್ಮ ರಕ್ತದ ಕಣ ಕಣದಲ್ಲೂ ಬಸವಣ್ಣ, ಶರಣರೇ ತುಂಬಿಕೊಂಡಿದ್ದಾರೆ. ಬಸವತತ್ವದ ಕಾರ್ಯಕ್ರಮಗಳಲ್ಲಿ ನಮ್ಮ ಮನೆಯ ಕನಿಷ್ಠ 4 ಸದಸ್ಯರಾದರೂ ಹೋಗಿ, ನಮ್ಮ ಕೈಲಾದ ಸೇವೆ‌ ಸಲ್ಲಿಸುತ್ತೇವೆ" ಎನ್ನುತ್ತಾರೆ ಶಂಕರ ಗುಡಸ.

Basava Mantapa
ಬಸವ ಮಂಟಪ (ETV Bharat)

ಪ್ರತಿ ಅಮಾವಾಸ್ಯೆಗೆ ಶರಣ ಸತ್ಸಂಗ: "ಗ್ರಾಮೀಣ ಭಾಗದಲ್ಲಿ ಬಸವತತ್ವ ಪ್ರಸಾರಕ್ಕೆ ಬಸ್ಸಾಪುರದಲ್ಲಿ 30 ಎಕರೆ ಜಮೀ‌ನು ಖರೀದಿಸಿದ್ದೇನೆ. ಅಲ್ಲಿ 48 ಲಕ್ಷ ರೂ. ಖರ್ಚು ಮಾಡಿ ಬಸವಾಶ್ರಮ ಕಟ್ಟಿದ್ದೇನೆ.‌ ಪ್ರತಿ ಅಮಾವಾಸ್ಯೆಗೆ ಶರಣ ಸತ್ಸಂಗ ಮಾಡುತ್ತೇವೆ. ನಮ್ಮ ಹೊಲಕ್ಕೆ ಕೆಲಸಕ್ಕೆ ಬರುವ ಕಾಯಕಜೀವಿಗಳು ಒಂದೊಂದು ವಚನ ವಿಶ್ಲೇಷಣೆ ಮಾಡುವ ಮಟ್ಟಿಗೆ ತಯಾರು ಮಾಡಿದ್ದೇವೆ. ಶರಣ ಸಂಸ್ಕಾರ ಶಿಬಿರ, ವಚನ ಗಾಯನ ಸ್ಪರ್ಧೆ ಏರ್ಪಡಿಸುತ್ತೇವೆ. ನಮ್ಮ ಮನೆಯ ಹೆಣ್ಣು ಮಕ್ಕಳು ಕೂಡ ಪ್ರವಚನ ಹೇಳುವಷ್ಟು ಜ್ಞಾನ ಬೆಳೆಸಿಕೊಂಡಿದ್ದಾರೆ. ನನ್ನ ದೊಡ್ಡ ಮಗಳು ನಾಡಿನ ವಿವಿಧೆಡೆ ಉಪನ್ಯಾಸ ನೀಡಿ ಬಂದಿದ್ದಾಳೆ. ನಮ್ಮ‌ ಮನೆಯ ಸಣ್ಣ ಮಕ್ಕಳನ್ನು ಎಬ್ಬಿಸಿ ಕೇಳಿದರೂ ಬಸವಣ್ಣ ಮತ್ತು ಶರಣರ ಬಗ್ಗೆ ಅರ್ಧ ಗಂಟೆ ಮಾತಾಡುತ್ತಾರೆ. ಪ್ರತಿ‌ದಿನ ಬೆಳಗ್ಗೆ ಲಿಂಗಪೂಜೆ ಆದ ನಂತರವೇ ಎಲ್ಲರೂ ಪ್ರಸಾದ ಸ್ವೀಕರಿಸುವುದು ಕಡ್ಡಾಯ" ಎಂದು ಶಂಕರ ಗುಡಸ ಹೇಳಿದರು.

ಶರಣಮೇಳಕ್ಕೆ ಉಚಿತ ತರಕಾರಿ: ಮಹಾಂತೇಶ ಗುಡಸ ಮಾತನಾಡಿ, "ಸಂಕ್ರಾಂತಿಗೆ ಕೂಡಲಸಂಗಮದಲ್ಲಿ ನಡೆಯುವ ಶರಣಮೇಳಕ್ಕೆ ಒಂದು ಲಾರಿ ತರಕಾರಿಯನ್ನು ಉಚಿತವಾಗಿ ಕಳಿಸುತ್ತೇವೆ. ಜೊತೆಗೆ 1998ರಿಂದ ನಮ್ಮ ಮನೆಗಳನ್ನು ಕೀಲಿ ಹಾಕಿ, ಎಲ್ಲರೂ ಆ ಮೇಳದಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸುತ್ತೇವೆ. ಅದೇ ರೀತಿ ಸ್ಮಶಾನ ಸ್ವಚ್ಛತೆ, ಮನೆ ಮನೆಗೆ ಬಸವಜ್ಯೋತಿ, ಬಸವತತ್ವದ ಪ್ರಕಾರ ಮದುವೆ, ಸೀಮಂತ, ಅಂತ್ಯಕ್ರಿಯೆ ಸೇರಿ ಮತ್ತಿತರ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತೇವೆ. 32 ಲಕ್ಷ ರೂ. ಖರ್ಚು ಮಾಡಿ ಎಸಿ ಶವ ವಾಹನ ಖರೀದಿಸುತ್ತಿದ್ದೇವೆ" ಎಂದು ತಿಳಿಸಿದರು.

"ಆನಂದ ಅವರಿಂದ ಇಡೀ ಗುಡಸ ಮನೆತನ ಪರಿವರ್ತನೆ ಆಯಿತು. ಬಸವಾದಿ‌ ಶರಣರ ಸಂಕಲ್ಪದಂತೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ನಮಗೆ ಪ್ರಾರ್ಥಿಸಲು ಜಾಗ ಇರಲಿಲ್ಲ. ಆ ಸಂದರ್ಭದಲ್ಲಿ ಅವರಿಗೆ ಸೇರಿದ 4 ಗುಂಟೆ ಜಾಗವನ್ನು ಉಚಿತವಾಗಿ ರಾಷ್ಟ್ರೀಯ ಬಸವದಳಕ್ಕೆ ಕೊಟ್ಟರು. ಈಗ ಇಲ್ಲಿ ನಿರಂತರವಾಗಿ ಬಸವ ಧರ್ಮದ ಚಟುವಟಿಕೆಗಳು ನಡೆಯುತ್ತಿವೆ. ಹೀಗೆ ಇಡೀ ಸಮಾಜಕ್ಕೆ ಇವರು ಮಾದರಿಯಾಗಿದ್ದಾರೆ" ಎನ್ನುತ್ತಾರೆ ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ಅಶೋಕ ಬೆಂಡಿಗೇರಿ.

ಶೀಲಾ ಗುಡಸ ಮಾತನಾಡಿ, "ಗುಡಸ ಮನೆತನಕ್ಕೆ ನಾನು ಸೊಸೆಯಾಗಿ ಬಂದಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ. ಯಾಕೆಂದರೆ ನಮ್ಮಲ್ಲಿನ ಬಸವತತ್ವ ಗುರುತಿಸಿ ಎಲ್ಲರೂ ಪ್ರೀತಿಯಿಂದ ಗೌರವಿಸುತ್ತಾರೆ. ಕಲ್ಯಾಣ ಪರ್ವ, ಶರಣಮೇಳ, ಗಣಮೇಳ ಸೇರಿ ಶರಣರ ಕಾರ್ಯಕ್ರಮಗಳಲ್ಲಿ ನಾವು ಭಾಗವಹಿಸುತ್ತೇವೆ. ಹಗಲು-ರಾತ್ರಿ ಎನ್ನದೇ ಬಸವತತ್ವಕ್ಕೆ ನಾವು ನಮ್ಮ ಜೀವವನ್ನೆ‌ ಮುಡಿಪಿಟ್ಟಿದ್ದೇವೆ" ಎಂದು ಹೇಳಿದರು.

ಇವರ ಸೇವೆ ಎಲ್ಲರಿಗೂ ಮಾದರಿ: ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, "ಮಠ-ಮಾನ್ಯಗಳು ಸಾಮಾಜಿಕ, ಧಾರ್ಮಿಕವಾಗಿ ಸೇವೆಗೈಯ್ಯುವುದು ಸಾಮಾನ್ಯ.‌ ಆದರೆ, ಗುಡಸ ಪರಿವಾರ ಬಸವತತ್ವ ಪ್ರಚಾರಕ್ಕೆ ಮೀಸಲಾಗಿದೆ. ಶರಣ ಸಂಸ್ಕಾರವನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡಿದ್ದಾರೆ. ಅದೇ ರೀತಿ ಬಸವಾದಿ ಶರಣರ ವಿಚಾರಗಳ ಅನುಷ್ಠಾನದಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ. ಬಸವಾಶ್ರಮವನ್ನು ಸ್ಥಾಪಿಸಿದ್ದಾರೆ. ವಚನಾಧಾರಿತ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸುತ್ತಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಲ್ಲಿಸುತ್ತಿರುವ ಸೇವೆ ಎಲ್ಲರಿಗೂ ಮಾದರಿ" ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಅದ್ಧೂರಿ‌ ಬಸವ ಜಯಂತಿ: ಎಲ್ಲಾ ಬಸವಪರ ಸಂಘಟನೆಗಳು ಒಟ್ಟಾಗಿ ಆಚರಣೆ: ಲಿಂಗಾಯತ ಮುಖಂಡರ ನಿರ್ಧಾರ

ವಿಶೇಷ ವರದಿ: ಸಿದ್ದನಗೌಡ ಪಾಟೀಲ​

ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲೊಂದು ಕುಟುಂಬ ಬಸವಸೇವೆಗೆ ಪಣ ತೊಟ್ಟಿದೆ. ಕುಟುಂಬದ ಎಲ್ಲಾ ಸದಸ್ಯರು ಅಪ್ಪಟ ಬಸವತತ್ವ ನಿಷ್ಠರು. ಬಸವ ಮಂಟಪಕ್ಕೆ ಉಚಿತ ಜಾಗ, ವಚನಸಾಹಿತ್ಯ-ಲಿಂಗಾಯತ ಧರ್ಮ ಪ್ರಚಾರಕ್ಕೆ ಈ ಕುಟುಂಬ 2 ದಶಕಗಳಿಂದ ತನು-ಮನ-ಧನದಿಂದ ಸೇವಾ ಕೈಂಕರ್ಯ ಮಾಡುತ್ತಾ ಬಂದಿದೆ.

ಕುಟುಂಬವು ಬಸವಾಶ್ರಮವನ್ನು ಸ್ಥಾಪಿಸಿದ್ದು,‌ ಪ್ರತಿ ಲಿಂಗಾಯತರ ಮನೆಗಳು ಮಹಾಮನೆಗಳಾಗಬೇಕು ಎಂಬ ಬಸವಣ್ಣನವರ ಸಂಕಲ್ಪವನ್ನು ಸಾಕಾರಗೊಳಿಸಿದೆ. ಹಾಗಾದ್ರೆ, ಆ ಕುಟುಂಬ ಯಾವುದು? ಹೇಗಿದೆ ಅವರ ಸೇವೆ? ಬಸವ ಜಯಂತಿಯ ದಿನ ಇಲ್ಲಿದೆ 'ಈಟಿವಿ ಭಾರತ'ದ ವಿಶೇಷ ವರದಿ.

ಬಸವತತ್ವಕ್ಕೆ ಇಡೀ ಕುಟುಂಬ ಮೀಸಲು (ETV Bharat)

ವಿಶ್ವಗುರು ಬಸವಣ್ಣನವರ ಸೇವೆ: ಬಸವಣ್ಣನೇ ತಾಯಿ, ಬಸವಣ್ಣನೇ ತಂದೆ, ಬಸವಣ್ಣನೇ ಪರಮಬಂಧುವೆನಗೆ ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ ಎಂಬ ಶಿವಯೋಗಿ ಸಿದ್ಧರಾಮೇಶ್ವರರ ವಚನದಂತೆ ಬಸವಣ್ಣನವರನ್ನೇ ಉಸಿರಾಗಿಸಿಕೊಂಡಿದೆ ಬೆಳಗಾವಿಯ ಗುಡಸ ಪರಿವಾರ. ಮೂಲತಃ ಹುಕ್ಕೇರಿ ತಾಲ್ಲೂಕಿನ ಬಸ್ಸಾಪುರ ಗ್ರಾಮದ ಈ ಕುಟುಂಬ ಸದ್ಯ ಬೆಳಗಾವಿಯಲ್ಲಿ ನೆಲೆಸಿದೆ. ವ್ಯಾಪಾರಿ ಕುಟುಂಬದ ಹಿನ್ನೆಲೆ ಹೊಂದಿರುವ ಇವರು ಸತ್ಯಶುದ್ಧ ಕಾಯಕದ ಜೊತೆಗೆ ವಿಶ್ವಗುರು ಬಸವಣ್ಣನವರ ಸೇವೆ ಮಾಡುತ್ತಾ ಇತರರಿಗೂ ಮಾದರಿಯಾಗಿದ್ದಾರೆ.

ಮಹಿಳೆಯರು, ಚಿಕ್ಕ ಮಕ್ಕಳಿಂದಲೂ ಇಷ್ಟಲಿಂಗ ದೀಕ್ಷೆ: ಹೌದು, ಗುಡಸ ಕುಟುಂಬದಲ್ಲಿ 54 ಜನ ಸದಸ್ಯರಿದ್ದಾರೆ. ಎಲ್ಲರೂ ಬೇರೆ ಬೇರೆ ಮನೆಗಳಲ್ಲಿ ವಾಸವಿದ್ದರೂ ಕೂಡ ಬಸವತತ್ವದ ಪ್ರಸಾರಕ್ಕೆ ಒಟ್ಟಾಗಿಯೇ ಸೇವೆ ಸಲ್ಲಿಸುತ್ತಾರೆ. ಕೂಡಲಸಂಗಮದ ಬಸವಧರ್ಮ ಪೀಠದ ಪ್ರಪ್ರಥಮ ಮಹಿಳಾ ಜಗದ್ಗುರು ಲಿಂಗೈಕ್ಯ ಡಾ.ಮಾತೆ ಮಹಾದೇವಿ ಅವರ ಪ್ರಭಾವದಿಂದ ಬಸವತತ್ವ ನಿಷ್ಠರಾಗಿ ಇವರು ಹೊರ ಹೊಮ್ಮಿದ್ದಾರೆ. ಇವರ ಮನೆಯ ಎಲ್ಲಾ ಪುರುಷರು, ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಕೂಡ ಇಷ್ಟಲಿಂಗ ದೀಕ್ಷೆ ಪಡೆದಿದ್ದು, ಶರಣಧರ್ಮವನ್ನೇ ಉಸಿರಾಗಿಸಿಕೊಂಡಿದ್ದಾರೆ. ಬಸವಾದಿ ಶರಣರ ಕುರಿತು ಎಲ್ಲಿಯೇ ಅನುಭಾವಗೋಷ್ಠಿ, ಉಪನ್ಯಾಸಗಳು ಇದ್ದರೆ ಅಲ್ಲಿ ಗುಡಸ ಕುಟುಂಬದ ಹಾಜರಿ ಇರುತ್ತದೆ. ಆ ಕಾರ್ಯಕ್ರಮದಲ್ಲಿ ಅಕ್ಷರ, ಅನ್ನ ದಾಸೋಹದ ಜೊತೆಗೆ ಆರ್ಥಿಕ‌ ನೆರವು ನೀಡುವ ಮೂಲಕ ಮಹಾನ್ ದಾಸೋಹಿಗಳಾಗಿ ಮನೆ ಮಾತಾಗಿದ್ದಾರೆ.

Basava Mantapa
ಬಸವ ಮಂಟಪ (ETV Bharat)

ಬೆಳಗಾವಿ ಮಹಾಂತೇಶ ನಗರದಲ್ಲಿ ಬಸವ ಮಂಟಪ ನಿರ್ಮಾಣಕ್ಕೆ 4 ಗುಂಟೆ ಜಾಗವನ್ನು ಉಚಿತವಾಗಿ ಗುಡಸ ಪರಿವಾರ ನೀಡಿದೆ. ಆ ಜಾಗದಲ್ಲಿ ಲಿಂಗೈಕ್ಯ ಶಿವಬಾಯವ್ವ ಮತ್ತು‌ ಬಸವಣ್ಣೆವ್ವ ಗುಡಸ ಅವರ ಸ್ಮರಣಾರ್ಥ ಸುಂದರ ಬಸವ ಮಂಟಪ ತಲೆ ಎತ್ತಿದ್ದು, ನಿತ್ಯವೂ ಇಲ್ಲಿ ಶರಣರ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.

ಗುರು ಬಸವಾಶ್ರಮ ನಿರ್ಮಾಣ: ಅಲ್ಲದೇ ತಮ್ಮ ಸ್ವಗ್ರಾಮ ಬಸ್ಸಾಪುರ ಸಮೀಪದ ಜಮೀನಿನಲ್ಲಿ ಗುಡಸ ಕುಟುಂಬದ ಹಿರಿಯ ಶಂಕರ ಗುಡಸ ಅವರು 48 ಲಕ್ಷ ರೂ. ವ್ಯಯಿಸಿ ಗುರು ಬಸವಾಶ್ರಮವನ್ನೆ ನಿರ್ಮಿಸಿದ್ದಾರೆ. ಮಠ-ಮಾನ್ಯಗಳು ಮಾಡಬೇಕಾದ ಕೆಲಸವನ್ನು ಈ ಕುಟುಂಬ ಮಾಡುತ್ತಿರುವುದು ಬಸವಾನುಯಾಯಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Belagavi Gudasa Family
ಬೆಳಗಾವಿಯ ಗುಡಸ ಪರಿವಾರ (ETV Bharat)

ಇಡೀ ಕುಟುಂಬ ಬಸವತತ್ವ ಪ್ರಸಾರಕ್ಕೆ ಕಂಕಣಬದ್ಧ: ಈಟಿವಿ ಭಾರತ ಜೊತೆಗೆ ಮಾತನಾಡಿದ ಆನಂದ ಗುಡಸ, "ಮೊದಲು ನಮ್ಮ ಮನೆಯಲ್ಲಿ ವರಶಂಕರ, ಅಯ್ಯಪ್ಪ ಸೇರಿ ನಾನಾ ದೇವರ ಪೂಜೆ ಮಾಡುತ್ತಿದ್ದೆವು‌. 1996ರಲ್ಲಿ ಬೆಳಗಾವಿ ಕೆಎಲ್ಇ ಸಂಸ್ಥೆಯ ಗಿಲಗಿಂಚಿ-ಅರಟಾಳ ಶಾಲೆಯಲ್ಲಿ ರಾಷ್ಟ್ರೀಯ ಬಸವದಳದಿಂದ ನಡೆಯುತ್ತಿದ್ದ ಪ್ರಾರ್ಥನೆಯಲ್ಲಿ ಪಾಲ್ಗೊಂಡೆ. ಬಳಿಕ ಪ್ರತಿವಾರ ಹೋಗಲು ಶುರು ಮಾಡಿದೆ. ನನ್ನ ಜೊತೆಗೆ ನಮ್ಮ ಸಹೋದರ ಮಹಾಂತೇಶ ಬಂದ. ಮನೆಯಲ್ಲಿ ಎಲ್ಲಾ ಸದಸ್ಯರ ದೇವರ ಜಗುಲಿ ಬೇರೆಯಾದರೆ, ನನ್ನದು ಬೇರೆಯಾಯಿತು. ಕ್ರಮೇಣವಾಗಿ ಎಲ್ಲರ ಮನಪರಿವರ್ತಿಸಿ ಬಸವತತ್ವದ ಕಡೆ ಹೊರಳುವಂತೆ ಮಾಡಿದೆವು. ಈಗ ನಮ್ಮ ಕಣಕಣದಲ್ಲೂ ಧರ್ಮಗುರು ಬಸವಣ್ಣನವರೇ ತುಂಬಿಕೊಂಡಿದ್ದಾರೆ. ಎಲ್ಲರೂ ಇಷ್ಟಲಿಂಗಧಾರಿಗಳಾಗಿ, ಏಕದೇವೋಪಾಸಕರಾದೆವು. ವಚನ ಸಾಹಿತ್ಯದ ಬಗ್ಗೆ ತಿಳಿದುಕೊಂಡೆವು. ಈಗ ಇಡೀ ಕುಟುಂಬ ಬಸವತತ್ವ ಪ್ರಸಾರಕ್ಕೆ ಕಂಕಣಬದ್ಧರಾಗಿದ್ದೇವೆ" ಎಂದು ವಿವರಿಸಿದರು.

"ನಾನು 14 ವರ್ಷ ಅಯ್ಯಪ್ಪಸ್ವಾಮಿ ಆಗಿದ್ದೆ. ನಮ್ಮ ಅಣ್ಣನ ಮಕ್ಕಳನ್ನು ನೋಡಿ ನಾನು ಪರಿವರ್ತನೆ ಆಗಿದ್ದೇನೆ. ದೇವರ ಪರಿಕಲ್ಪನೆ, ಧರ್ಮಗುರು ಬಸವಣ್ಣನವರ ಮೇಲಿನ ಅಭಿಮಾನ ಡಾ.ಮಾತೆ ಮಹಾದೇವಿ ಅವರಿಂದ ಕಲಿತೆವು. ನಮ್ಮ ರಕ್ತದ ಕಣ ಕಣದಲ್ಲೂ ಬಸವಣ್ಣ, ಶರಣರೇ ತುಂಬಿಕೊಂಡಿದ್ದಾರೆ. ಬಸವತತ್ವದ ಕಾರ್ಯಕ್ರಮಗಳಲ್ಲಿ ನಮ್ಮ ಮನೆಯ ಕನಿಷ್ಠ 4 ಸದಸ್ಯರಾದರೂ ಹೋಗಿ, ನಮ್ಮ ಕೈಲಾದ ಸೇವೆ‌ ಸಲ್ಲಿಸುತ್ತೇವೆ" ಎನ್ನುತ್ತಾರೆ ಶಂಕರ ಗುಡಸ.

Basava Mantapa
ಬಸವ ಮಂಟಪ (ETV Bharat)

ಪ್ರತಿ ಅಮಾವಾಸ್ಯೆಗೆ ಶರಣ ಸತ್ಸಂಗ: "ಗ್ರಾಮೀಣ ಭಾಗದಲ್ಲಿ ಬಸವತತ್ವ ಪ್ರಸಾರಕ್ಕೆ ಬಸ್ಸಾಪುರದಲ್ಲಿ 30 ಎಕರೆ ಜಮೀ‌ನು ಖರೀದಿಸಿದ್ದೇನೆ. ಅಲ್ಲಿ 48 ಲಕ್ಷ ರೂ. ಖರ್ಚು ಮಾಡಿ ಬಸವಾಶ್ರಮ ಕಟ್ಟಿದ್ದೇನೆ.‌ ಪ್ರತಿ ಅಮಾವಾಸ್ಯೆಗೆ ಶರಣ ಸತ್ಸಂಗ ಮಾಡುತ್ತೇವೆ. ನಮ್ಮ ಹೊಲಕ್ಕೆ ಕೆಲಸಕ್ಕೆ ಬರುವ ಕಾಯಕಜೀವಿಗಳು ಒಂದೊಂದು ವಚನ ವಿಶ್ಲೇಷಣೆ ಮಾಡುವ ಮಟ್ಟಿಗೆ ತಯಾರು ಮಾಡಿದ್ದೇವೆ. ಶರಣ ಸಂಸ್ಕಾರ ಶಿಬಿರ, ವಚನ ಗಾಯನ ಸ್ಪರ್ಧೆ ಏರ್ಪಡಿಸುತ್ತೇವೆ. ನಮ್ಮ ಮನೆಯ ಹೆಣ್ಣು ಮಕ್ಕಳು ಕೂಡ ಪ್ರವಚನ ಹೇಳುವಷ್ಟು ಜ್ಞಾನ ಬೆಳೆಸಿಕೊಂಡಿದ್ದಾರೆ. ನನ್ನ ದೊಡ್ಡ ಮಗಳು ನಾಡಿನ ವಿವಿಧೆಡೆ ಉಪನ್ಯಾಸ ನೀಡಿ ಬಂದಿದ್ದಾಳೆ. ನಮ್ಮ‌ ಮನೆಯ ಸಣ್ಣ ಮಕ್ಕಳನ್ನು ಎಬ್ಬಿಸಿ ಕೇಳಿದರೂ ಬಸವಣ್ಣ ಮತ್ತು ಶರಣರ ಬಗ್ಗೆ ಅರ್ಧ ಗಂಟೆ ಮಾತಾಡುತ್ತಾರೆ. ಪ್ರತಿ‌ದಿನ ಬೆಳಗ್ಗೆ ಲಿಂಗಪೂಜೆ ಆದ ನಂತರವೇ ಎಲ್ಲರೂ ಪ್ರಸಾದ ಸ್ವೀಕರಿಸುವುದು ಕಡ್ಡಾಯ" ಎಂದು ಶಂಕರ ಗುಡಸ ಹೇಳಿದರು.

ಶರಣಮೇಳಕ್ಕೆ ಉಚಿತ ತರಕಾರಿ: ಮಹಾಂತೇಶ ಗುಡಸ ಮಾತನಾಡಿ, "ಸಂಕ್ರಾಂತಿಗೆ ಕೂಡಲಸಂಗಮದಲ್ಲಿ ನಡೆಯುವ ಶರಣಮೇಳಕ್ಕೆ ಒಂದು ಲಾರಿ ತರಕಾರಿಯನ್ನು ಉಚಿತವಾಗಿ ಕಳಿಸುತ್ತೇವೆ. ಜೊತೆಗೆ 1998ರಿಂದ ನಮ್ಮ ಮನೆಗಳನ್ನು ಕೀಲಿ ಹಾಕಿ, ಎಲ್ಲರೂ ಆ ಮೇಳದಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸುತ್ತೇವೆ. ಅದೇ ರೀತಿ ಸ್ಮಶಾನ ಸ್ವಚ್ಛತೆ, ಮನೆ ಮನೆಗೆ ಬಸವಜ್ಯೋತಿ, ಬಸವತತ್ವದ ಪ್ರಕಾರ ಮದುವೆ, ಸೀಮಂತ, ಅಂತ್ಯಕ್ರಿಯೆ ಸೇರಿ ಮತ್ತಿತರ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತೇವೆ. 32 ಲಕ್ಷ ರೂ. ಖರ್ಚು ಮಾಡಿ ಎಸಿ ಶವ ವಾಹನ ಖರೀದಿಸುತ್ತಿದ್ದೇವೆ" ಎಂದು ತಿಳಿಸಿದರು.

"ಆನಂದ ಅವರಿಂದ ಇಡೀ ಗುಡಸ ಮನೆತನ ಪರಿವರ್ತನೆ ಆಯಿತು. ಬಸವಾದಿ‌ ಶರಣರ ಸಂಕಲ್ಪದಂತೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ನಮಗೆ ಪ್ರಾರ್ಥಿಸಲು ಜಾಗ ಇರಲಿಲ್ಲ. ಆ ಸಂದರ್ಭದಲ್ಲಿ ಅವರಿಗೆ ಸೇರಿದ 4 ಗುಂಟೆ ಜಾಗವನ್ನು ಉಚಿತವಾಗಿ ರಾಷ್ಟ್ರೀಯ ಬಸವದಳಕ್ಕೆ ಕೊಟ್ಟರು. ಈಗ ಇಲ್ಲಿ ನಿರಂತರವಾಗಿ ಬಸವ ಧರ್ಮದ ಚಟುವಟಿಕೆಗಳು ನಡೆಯುತ್ತಿವೆ. ಹೀಗೆ ಇಡೀ ಸಮಾಜಕ್ಕೆ ಇವರು ಮಾದರಿಯಾಗಿದ್ದಾರೆ" ಎನ್ನುತ್ತಾರೆ ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ಅಶೋಕ ಬೆಂಡಿಗೇರಿ.

ಶೀಲಾ ಗುಡಸ ಮಾತನಾಡಿ, "ಗುಡಸ ಮನೆತನಕ್ಕೆ ನಾನು ಸೊಸೆಯಾಗಿ ಬಂದಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ. ಯಾಕೆಂದರೆ ನಮ್ಮಲ್ಲಿನ ಬಸವತತ್ವ ಗುರುತಿಸಿ ಎಲ್ಲರೂ ಪ್ರೀತಿಯಿಂದ ಗೌರವಿಸುತ್ತಾರೆ. ಕಲ್ಯಾಣ ಪರ್ವ, ಶರಣಮೇಳ, ಗಣಮೇಳ ಸೇರಿ ಶರಣರ ಕಾರ್ಯಕ್ರಮಗಳಲ್ಲಿ ನಾವು ಭಾಗವಹಿಸುತ್ತೇವೆ. ಹಗಲು-ರಾತ್ರಿ ಎನ್ನದೇ ಬಸವತತ್ವಕ್ಕೆ ನಾವು ನಮ್ಮ ಜೀವವನ್ನೆ‌ ಮುಡಿಪಿಟ್ಟಿದ್ದೇವೆ" ಎಂದು ಹೇಳಿದರು.

ಇವರ ಸೇವೆ ಎಲ್ಲರಿಗೂ ಮಾದರಿ: ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, "ಮಠ-ಮಾನ್ಯಗಳು ಸಾಮಾಜಿಕ, ಧಾರ್ಮಿಕವಾಗಿ ಸೇವೆಗೈಯ್ಯುವುದು ಸಾಮಾನ್ಯ.‌ ಆದರೆ, ಗುಡಸ ಪರಿವಾರ ಬಸವತತ್ವ ಪ್ರಚಾರಕ್ಕೆ ಮೀಸಲಾಗಿದೆ. ಶರಣ ಸಂಸ್ಕಾರವನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡಿದ್ದಾರೆ. ಅದೇ ರೀತಿ ಬಸವಾದಿ ಶರಣರ ವಿಚಾರಗಳ ಅನುಷ್ಠಾನದಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ. ಬಸವಾಶ್ರಮವನ್ನು ಸ್ಥಾಪಿಸಿದ್ದಾರೆ. ವಚನಾಧಾರಿತ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸುತ್ತಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಲ್ಲಿಸುತ್ತಿರುವ ಸೇವೆ ಎಲ್ಲರಿಗೂ ಮಾದರಿ" ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಅದ್ಧೂರಿ‌ ಬಸವ ಜಯಂತಿ: ಎಲ್ಲಾ ಬಸವಪರ ಸಂಘಟನೆಗಳು ಒಟ್ಟಾಗಿ ಆಚರಣೆ: ಲಿಂಗಾಯತ ಮುಖಂಡರ ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.