ಬೆಂಗಳೂರು: ದೇಶದ ಬೇರೆ ನಗರಗಳಿಗೆ ಹೋಲಿಸಿದರೆ ಪ್ರಸ್ತಕ ಸಾಲಿನ ಮೂರು ತಿಂಗಳಲ್ಲಿ ರಾಜಧಾನಿಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಈ ಮೂಲಕ ರಾಷ್ಟ್ರದಲ್ಲೇ ಅತ್ಯಂತ ಸುರಕ್ಷಿತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಯೂನಿವರ್ಸಿಟಿ ಆಫ್ ಹೈದರಾಬಾದ್ ನಡೆಸಿದ ಸರ್ವೇಯಲ್ಲಿ ಬೆಂಗಳೂರು ಅತಂತ್ಯ ಸುರಕ್ಷಿತ ನಗರ ಎಂದು ಬಿರುದು ಪಡೆದುಕೊಂಡಿದ್ದರೆ, ಕೋಲ್ಕತ್ತಾ ಅಸುರಕ್ಷಿತ ನಗರ ಎಂಬ ಕುಖ್ಯಾತಿಗೆ ಭಾಜನವಾಗಿದೆ ಎಂದು ಆಂಗ್ಲ ಪತ್ರಿಕೆಯಲ್ಲಿ ಬಂದಿರುವ ವರದಿ ಆಧರಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಮೂರು ತಿಂಗಳಲ್ಲಿ ಅಪರಾಧ ಪ್ರಕರಣ ಕಡಿಮೆ: ಹಿಂದಿನ ವರ್ಷಗಳಿಗೆ ಹೋಲಿಸಿದರೆ 2025ರ ಮೊದಲ ಮೂರು ತಿಂಗಳಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿದೆ. ಕಳೆದ ವರ್ಷ ದಾಖಲಾಗಿದ್ದ ಪ್ರಕರಣಗಳಿಗೂ ಹಾಗೂ ಈ ವರ್ಷ ವರದಿಯಾದ ಕೇಸ್ ತುಲನೆ ಮಾಡಿದಾಗ ಒಟ್ಟಾರೆ ಶೇ.12ರಷ್ಟು ಇಳಿಕೆಯಾಗಿರುವುದು ಕಂಡುಬಂದಿದೆ.
ಸೈಬರ್ ವಂಚನೆ ಪ್ರಕರಣಗಳಲ್ಲೂ ಇಳಿಕೆ: ಕಳೆದ ವರ್ಷಕ್ಕಿಂತ ಸೈಬರ್ ವಂಚನೆ ಪ್ರಕರಣಗಳಲ್ಲಿ 39% ರಷ್ಟು ಕಡಿಮೆಯಾಗಿದೆ. 2023ರ ಮೊದಲ ಮೂರು ತಿಂಗಳಲ್ಲಿ 3,588, ಅದರಂತೆ 2024ರಲ್ಲಿ 4,679, 2025ರಲ್ಲಿ 2,838 ಸೈಬರ್ ಪ್ರಕರಣ ದಾಖಲಾಗಿದ್ದವು. ಇನ್ನು ಡಕಾಯಿತಿ ಪ್ರಕರಣಗಳಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಶೇ.71ರಷ್ಟು ಕಡಿಮೆಯಾದರೆ, ರಾಬರಿ ಪ್ರಕರಣಗಳಲ್ಲಿ ಶೇ.73ರಷ್ಟು ತಗ್ಗಿದೆ. ಸರಗಳ್ಳತನ ಪ್ರಕರಣಗಳಲ್ಲಿ ಶೇ.57ರಷ್ಟು ಹಾಗೂ ರಾತ್ರಿ ಕಳವು ಪ್ರಕರಣಗಳಲ್ಲಿ ಶೇ.41ರಷ್ಟು ಇಳಿಕೆಯಾಗಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ದೇಶದಲ್ಲಿ ಬೆಂಗಳೂರು ಸುರಕ್ಷಿತ ತಾಣ ಎಂದು ಹೆಸರು ಬರಲು ಅಪರಾಧ ಪ್ರಕರಣಗಳ ಸಂಖ್ಯೆ ಇಳಿಕೆಯು ಪ್ರಮುಖ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಇದನ್ನೂ ಓದಿ: 9 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ನೈಜೀರಿಯಾ ಪ್ರಜೆಗೆ 15 ವರ್ಷ ಜೈಲು ಶಿಕ್ಷೆ!
ಇದನ್ನೂ ಓದಿ: ಇಂಡೋ-ಪಾಕ್ ಉದ್ವಿಗ್ನತೆ ಸೈಬರ್ ವಂಚಕರಿಗೆ ಅನುಕೂಲವಾಗಬಹುದು: ಪೊಲೀಸ್ ಆಯುಕ್ತರ ಎಚ್ಚರಿಕೆ