ವಿಜಯನಗರ: ಖಾಸಗಿ ಬಸ್ನಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ ಅರಸೀಕೆರೆ ಠಾಣೆಯ ಪೊಲೀಸರು ಚಾಲಕ ಹಾಗೂ ಕಂಡಕ್ಟರ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಕೊಟ್ಟೂರು ತಾಲೂಕಿನ ಅಲಬೂರಿನ ಚಾಲಕ ಪ್ರಕಾಶ ಮಡಿವಾಳ, ಡಗ್ಗಿ ಬಸಾಪುರ ಗ್ರಾಮದ ರಾಜಶೇಖರ ಮತ್ತು ಅರಸೀಕೆರೆಯ ಬಾರಿಕರ ಸುರೇಶ್ ಬಂಧಿತ ಆರೋಪಿಗಳು.
ಮೂವರು ಆರೋಪಿಗಳು ಖಾಸಗಿ ಬಸ್ನಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದು, ಸಂತ್ರಸ್ತೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಅರಸೀಕೆರೆ ಠಾಣಾ ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಮಹಿಳೆ ನೀಡಿದ ದೂರಿನ ವಿವರ: "ಮಂಗಳವಾರ ಪಕ್ಕದ ಗ್ರಾಮವೊಂದರಲ್ಲಿ ನಡೆಯುತ್ತಿದ್ದ ಜಾತ್ರೆ ಮುಗಿಸಿಕೊಂಡು ನಾನು ಮಕ್ಕಳೊಂದಿಗೆ ಯಾವುದೋ ಖಾಸಗಿ ಬಸ್ನಲ್ಲಿ ರಾತ್ರಿ ಸುಮಾರು 8:45 ಗಂಟೆಗೆ ಮನೆಗೆ ತೆರಳುತ್ತಿದ್ದೆವು. ಬಸ್ ಹತ್ತಿದ್ದ 8-10 ಜನ ಪ್ರಯಾಣಿಕರು ಮುಂದಿನ ನಿಲ್ದಾಣ ಬರುತ್ತಿದ್ದಂತೆ ಇಳಿದು ಹೋದರು. ನಮ್ಮನ್ನು ಬಿಟ್ಟು ಬಸ್ನಲ್ಲಿ ಬೇರೆ ಪ್ರಯಾಣಿಕರು ಇರಲಿಲ್ಲ. ಮಕ್ಕಳೊಂದಿಗೆ ಒಬ್ಬಂಟಿ ಮಹಿಳೆ ಇರುವುದನ್ನು ಚಾಲಕ, ಕಂಡಕ್ಟರ್ ಸೇರಿದಂತೆ ಮೂವರು ಆರೋಪಿಗಳು ಗಮನಿಸಿದ್ದಾರೆ. ಚಲಿಸುತ್ತಿದ್ದ ಬಸ್ ಅನ್ನು ಇದ್ದಕ್ಕಿದ್ದಂತೆ ರಸ್ತೆ ಮಧ್ಯ ನಿಲ್ಲಿಸಿದ ಚಾಲಕ, ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮತ್ತಿಬ್ಬರು ಕೃತ್ಯಕ್ಕೆ ಸಹಾಯ ಮಾಡುತ್ತಿದ್ದರು. ನಿನಗೆ ಎಷ್ಟು ಹಣ ಬೇಕು ಕೇಳು ಕೊಡುತ್ತೇವೆ ಅಂತೆಲ್ಲ ಅವಾಚ್ಯವಾಗಿ ಬೈದಾಡಿ ಅಸಭ್ಯವಾಗಿ ವರ್ತಿಸಿದರು. ಚಾಲಕ ನನ್ನ ಮೇಲೆ ಕೈ ಹಾಕಿ ಬಟ್ಟೆ ಹರಿದು ಎಳೆದಾಡಿ ಮಾನಕ್ಕೆ ಕುಂದುಂಟು ಮಾಡಿದ್ದಾರೆ. ಅಲ್ಲದೇ ನೀನು ಬಾರದಿದ್ದರೆ ನಿನ್ನನ್ನು ಹೊಡೆದು ಸಾಯಿಸುತ್ತೇವೆ ಅಂತೆಲ್ಲ ಬೆದರಿಕೆ ಹಾಕಿದ್ದಾರೆ. ಭಯದಲ್ಲಿ ಮಕ್ಕಳು ಹಾಗೂ ನಾನು ಚೀರಾಡುವುದನ್ನು ಕೇಳಿಸಿಕೊಂಡ ಬೈಕ್ ಸವಾರರು ಬಸ್ ಒಳಗೆ ಪ್ರವೇಶಿಸಿದಾಗ, ನನ್ನ ಪರಿಸ್ಥಿತಿ ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಘಟನೆ ಬಳಿಕ ಬಸ್ ಚಾಲಕ ಸೇರಿ ಮೂವರು ಪರಾರಿಯಾಗಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ. ಈ ದೂರಿನನ್ವಯ ಪ್ರಕರಣ ದಾಖಲಾಗಿದೆ. ಬಸ್ ಜಪ್ತಿ ಮಾಡಿ, ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ" ಎಂದು ಪೊಲೀಸರು ತಿಳಿಸಿದ್ದಾರೆ.