ವರದಿ: ಸಿದ್ದನಗೌಡ ಪಾಟೀಲ್
ಬೆಳಗಾವಿ: ಮಹಾ ಮಾನವತಾವಾದಿ, ವಿಶ್ವಗುರು, ಕರ್ನಾಟಕ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ರಾಜ್ಯ ಸರ್ಕಾರ ಈ ಬಾರಿ ವಿಶೇಷವಾಗಿ ಆಚರಿಸುತ್ತಿದೆ. ರಾಜ್ಯಾದ್ಯಂತ ಸಂಚರಿಸುತ್ತಿರುವ "ಅನುಭವ ಮಂಟಪ-ಬಸವಾದಿ ಶರಣರ ವೈಭವ ರಥಯಾತ್ರೆ"ಯು ಸರ್ವಧರ್ಮಗಳ ಸಾರವನ್ನು ಸಾರುತ್ತಿದೆ. ಈ ರಥಯಾತ್ರೆ ಕುರಿತು ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ.
ವಿಶ್ವಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಸಂಗಮದಲ್ಲಿ ರಾಜ್ಯ ಸರ್ಕಾರವು ಇದೇ ಏ.29, 30ರಂದು "ಬಸವ ಜಯಂತಿ" ಕಾರ್ಯಕ್ರಮವನ್ನು "ಸರ್ವ ಧರ್ಮ ಸಂಸತ್ತಿನ" ಹೆಸರಿನಲ್ಲಿ ವಿಜೃಂಭಣೆಯಿಂದ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ "ಅನುಭವ ಮಂಟಪ ಬಸವಾದಿ ಶರಣರ ವೈಭವ" ರಥಯಾತ್ರೆಗೆ ಏ.17ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ರಥಯಾತ್ರೆಗೆ ಬಸವಾನುಯಾಯಿಗಳು ಸೇರಿ ಸರ್ವ ಧರ್ಮಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಕಡೆ ಅದ್ಧೂರಿ ಸ್ವಾಗತ ಸಿಕ್ಕಿದೆ.
ಏನಿದರ ವಿಶೇಷತೆ?: ಅನುಭವ-ಮಂಟಪ ಮಾದರಿ ರಥದಲ್ಲಿ ಆಸೀನರಾಗಿರುವ ಭಂಗಿಯಲ್ಲಿರುವ ಬಸವೇಶ್ವರ ಪ್ರತಿಮೆ, ಮುಂಭಾಗದಲ್ಲಿ ಭಗವಾನ್ ಬುದ್ಧ, ಏಸು ಕ್ರಿಸ್ತ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಶಿವಶರಣೆ ಅಕ್ಕ ಮಹಾದೇವಿ, ಸಂತ ಶಿಶುನಾಳ ಶರೀಫ, ಗುರುನಾನಕ, ಭಗವಾನ ಮಹಾವೀರ, ನಾರಾಯಣ ಗುರುಗಳ ಮೂರ್ತಿಗಳು ಅನುಭವ ಮಂಟಪ ಮಾದರಿಗೆ ಮೆರಗು ಕೊಟ್ಟಿವೆ.
ತಯಾರಿಸಿದ್ದು ಹೇಗೆ?: ಬೆಂಗಳೂರಿನ "ಶಾರ್ಜಾ ಮಿಡಿಯಾ ಸೊಲ್ಯೂಷನ್ಸ್" ಎಂಬ ಕಂಪನಿ ಈ ರಥಯಾತ್ರೆ ತಯಾರಿಸುವ ಜವಾಬ್ದಾರಿ ಹೊತ್ತಿತ್ತು. ಸುಮಾರು 25 ಕಲಾವಿದರು, 10 ದಿನ ಹಗಲು, ರಾತ್ರಿ ಎನ್ನದೇ ಶ್ರಮವಹಿಸಿದ್ದಾರೆ. ಬಸವೇಶ್ವರ ಮೂರ್ತಿ 7.5 ಅಡಿ ಎತ್ತರವಿದ್ದರೆ, 5 ಅಡಿ ಅಂಬೇಡ್ಕರ್ ಪುತ್ಥಳಿ, ಇನ್ನುಳಿದ ಮಹಾಪುರುಷರ ಪ್ರತಿಮೆಗಳು 3 ಅಡಿ ಎತ್ತರ ಇವೆ. ರಥವು 30 ಅಡಿ ಉದ್ದ, 10 ಅಡಿ ಅಗಲ ಗಾತ್ರ ಇದೆ. ಅಶೋಕ ಲೇಲ್ಯಾಂಡ್ ಲಾರಿಯನ್ನೇ ರಥವಾಗಿ ಮಾರ್ಪಡಿಸಲಾಗಿದೆ.

ಶರಣರ ಭಾವಚಿತ್ರಗಳು: ರಥದ ಒಂದು ಭಾಗದಲ್ಲಿ ವಚನ ಪಿತಾಮಹ ಫ.ಗು.ಹಳಕಟ್ಟಿ, ರೆವರೆಂಡ್ ಉತ್ತಂಗಿ ಚನ್ನಪ್ಪ, ಕರ್ನಾಟಕ ಗಾಂಧಿ ಹರ್ಡೇಕರ್ ಮಂಜಪ್ಪ, ಶರಣ ಉರಿಲಿಂಗ ಪೆದ್ದಿ ಅವರ ಭಾವಚಿತ್ರಗಳಿದ್ದರೆ, ಮತ್ತೊಂದು ಭಾಗದಲ್ಲಿ ಶರಣರಾದ ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಮಾದಾರ ಧೂಳಯ್ಯ, ಮಾದಾರ ಚನ್ನಯ್ಯ ಅವರ ಭಾವಚಿತ್ರಗಳು ಗಮನ ಸೆಳೆಯುತ್ತಿವೆ.
ಒಟ್ಟು 1,177 ಕಿ.ಮೀ. ಸಂಚಾರ: ಬೆಂಗಳೂರಿಂದ ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಬೀದರ್, ಕಲಬುರಗಿ, ಗದಗ, ಧಾರವಾಡ, ವಿಜಯಪುರ, ಬೆಳಗಾವಿ ಮಾರ್ಗವಾಗಿ ಬಾಗಲಕೋಟೆ ಸೇರಿ 16 ಜಿಲ್ಲೆಗಳಲ್ಲಿ ಒಟ್ಟು 1,177 ಕಿ.ಮೀ. ಸಂಚರಿಸಿ, ಏ.29ಕ್ಕೆ ಕೂಡಲ ಸಂಗಮಕ್ಕೆ ಬಂದು ತಲುಪಲಿದೆ.

ಸುವರ್ಣ ಕರ್ನಾಟಕ ಸಂಭ್ರಮ ಹಿನ್ನೆಲೆಯಲ್ಲಿ "ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ" ರೂಪಕ ತಯಾರಿಸಿದ್ದೇವು. ಇದು ಎಲ್ಲರನ್ನು ಆಕರ್ಷಿಸಿತ್ತು. ಹಾಗಾಗಿ, ರಾಜ್ಯ ಸರ್ಕಾರ ನಮ್ಮ ಕಂಪನಿಗೆ ಅನುಭವ ಮಂಟಪ ಮಾದರಿ ನಿರ್ಮಾಣಕ್ಕೂ ಅವಕಾಶ ಕೊಟ್ಟರು. ಶ್ರದ್ಧೆ ಮತ್ತು ನಿಷ್ಠೆಯಿಂದ ಅತ್ಯಾಕರ್ಷಕವಾಗಿ ರೂಪಕ ತಯಾರಿಸಿದ್ದೇವೆ. ಎಲ್ಲಾ ಕಡೆ ಪ್ರಶಂಸೆ ವ್ಯಕ್ತವಾಗಿದ್ದು, ತುಂಬಾ ಖಷಿಯಾಗುತ್ತಿದೆ ಎಂದು "ಶಾರ್ಜಾ ಮಿಡಿಯಾ ಸೊಲ್ಯೂಷನ್ಸ್" ಮುಖ್ಯಸ್ಥ ಡಿ.ಸನತಕುಮಾರ ಹರ್ಷ ವ್ಯಕ್ತಪಡಿಸಿದರು.
ಡಾ.ಅಲ್ಲಮ್ಮಪ್ರಭು ಸ್ವಾಮೀಜಿ ಹರ್ಷ: ಈಟಿವಿ ಭಾರತ ಜೊತೆಗೆ ಮಾತನಾಡಿದ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಕರ್ನಾಟಕ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಅಷ್ಟಕ್ಕೇ ಸಿಮೀತಗೊಳಿಸದೇ ಬಸವೇಶ್ವರರ ವಿಚಾರಧಾರೆ, ಸಿದ್ಧಾಂತಗಳು ನಾಡಿನ ಜನರ ಮನೆ, ಮನಗಳಿಗೆ ತಲುಪಿಸುವ ಸಂಕಲ್ಪ ತೊಟ್ಟಿದೆ ಎಂದರು.

ಆ ನಿಟ್ಟಿನಲ್ಲಿ ಬಸವ ಜಯಂತಿ ನಿಮಿತ್ತ ಅನುಭವ ಮಂಟಪ ರಥಯಾತ್ರೆ ಹೊರಡಿಸಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ರಥಯಾತ್ರೆಯಲ್ಲಿ ಬಸವಣ್ಣನವರ ಪ್ರತಿಮೆ ಅಷ್ಟೇ ಅಲ್ಲದೇ ಸರ್ವ ಧರ್ಮಗಳ ಗುರುಗಳ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿರುವುದು ವಿಶೇಷ. ಈ ಮೂಲಕ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವುದನ್ನು ನಿರೂಪಿಸಲಾಗಿದೆ. ಇದನ್ನು ಪ್ರತಿವರ್ಷವೂ ನಡೆಸಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಬಸವಾದಿ ಶರಣರ ವಿಚಾರಗಳ ಅವಶ್ಯಕತೆ ಇದೆ ಎಂದು ಹೇಳಿದರು.
ಇದನ್ನೂ ಓದಿ: ಬೆಳಗಾವಿಗೆ ಆಗಮಿಸಿದ ಅನುಭವ ಮಂಟಪ ಶರಣರ ವೈಭವ ರಥಯಾತ್ರೆ
ಇದನ್ನೂ ಓದಿ: ಬೆಳಗಾವಿಯಲ್ಲಿ ಅದ್ಧೂರಿ ಬಸವ ಜಯಂತಿ: ಎಲ್ಲಾ ಬಸವಪರ ಸಂಘಟನೆಗಳು ಒಟ್ಟಾಗಿ ಆಚರಣೆ: ಲಿಂಗಾಯತ ಮುಖಂಡರ ನಿರ್ಧಾರ