ಬೆಂಗಳೂರು: ಸಂಘ, ಸಂಸ್ಥೆ ರಚಿಸಿಕೊಂಡು ಏತ ನೀರಾವರಿ ವ್ಯವಸ್ಥೆಯ ಮೂಲಕ ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರಿಗೂ ಸಬ್ಸಿಡಿ(ಕೃಷಿ ವಿದ್ಯುತ್ ದರಪಟ್ಟಿ ಪ್ರೋತ್ಸಾಹಧನ) ವಿಸ್ತರಿಸುವ ಕುರಿತು ಮುಂದಿನ 6 ತಿಂಗಳಲ್ಲಿ ಕಾನೂನು ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಇಂದು ಸೂಚನೆ ನೀಡಿದೆ.
ಸಂಘದ ಮೂಲಕ ಬಳಸುವ ವಿದ್ಯುತ್ ನಿಗದಿತ ಮಿತಿ ಮೀರುತ್ತದೆ ಎಂಬ ಕಾರಣಕ್ಕಾಗಿ ಸಬ್ಸಿಡಿ ನಿರಾಕರಿಸುವ ರಾಜ್ಯ ಸರ್ಕಾರದ 2008ರ ಸೆಪ್ಟೆಂಬರ್ 4ರ ಆದೇಶ ರದ್ದು ಕೋರಿ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ್ ನೀರು ಬಳಕೆದಾರರ ಸಂಘ ಮತ್ತು ರವಳನಥ್ ಏತ ನೀರು ಬಳಕೆದಾರರ ಸಂಘ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ಧ ಧಾರವಾಡ ಪೀಠ ಈ ಆದೇಶ ನೀಡಿದೆ. ಇದೇ ವೇಳೆ, ಕೊರೋನಾ ಸೇರಿ ಮತ್ತಿತರ ಕಾರಣಗಳಿಂದ ವಿದ್ಯುತ್ ಬಾಕಿ ಪಾವತಿಸುವ ಸಂಬಂಧ ಹೊರಡಿಸಿರುವ ಡಿಮ್ಯಾಂಡ್ ನೋಟಿಸ್ ರದ್ದುಪಡಿಸಲು ನಿರಾಕರಿಸಿದೆ.
ವಿದ್ಯುತ್ ಸಬ್ಸಿಡಿ ವಿಚಾರದಲ್ಲಿ ರೈತ ಸಂಘಗಳು ವ್ಯಕ್ತಿಗತ ರೈತರಿಗೆ ಸಮನಾಗಿ ಕಾಣುವ ಸಂಬಂಧ ರಾಜ್ಯ ಸರ್ಕಾರ, ಹೆಸ್ಕಾಂ ಸೇರಿದಂತೆ ಸಕ್ಷಮ ಪ್ರಾಧಿಕಾರಗಳು ಪರಿಶೀಲಿಸಿ, ಮರು ಪರಿಗಣಿಸಿ ಹಾಲಿ ಇರುವ ನೀತಿಯ ಚೌಕಟ್ಟನ್ನು ತಿದ್ದುಪಡಿ ಮಾಡಬೇಕು. ರೈತ ಸಂಘಗಳಿಗೆ ಕೃಷಿ ಸಬ್ಸಿಡಿ ವಿಸ್ತರಿಸುವ ಸಂಬಂಧ ಆರು ತಿಂಗಳಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು. ಪರಿಷ್ಕೃತ ಚೌಕಟ್ಟಿನ ಬಳಿಕ ವಿದ್ಯುತ್ ಸಬ್ಸಿಡಿ ನೀಡುವ ಸಂಬಂಧ ಅರ್ಜಿದಾರರು ವಿಸ್ತೃತ ಮನವಿ ಸಲ್ಲಿಸಬಹುದು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ರೈತರು ಕ್ಷಮತೆ ಮತ್ತು ಸುಸ್ಥಿರತೆ ಹೆಚ್ಚಿಸಲು ಸೊಸೈಟಿ ಮಾಡಿಕೊಂಡಿದ್ದು, ಅವರನ್ನು ದಂಡಿಸುವುದು ಸಮರ್ಥನೀಯವಲ್ಲ. ಪ್ರತಿಯೊಬ್ಬ ರೈತನ ತಲಾದಾಯ ವಿದ್ಯುತ್ ಬಳಕೆ (ಪರ್ಕ್ಯಾಪಿಟಾ ಕನ್ಸಮ್ಷನ್), ಭೂಮಿ ಮಾಲೀಕತ್ವ ಅಥವಾ ಪ್ರತಿಯೊಬ್ಬ ಸದಸ್ಯರ ಸರಾಸರಿ ವಿದ್ಯುತ್ ಬಳಕೆಯನ್ನು ಆಧರಿಸಿ ನೋಂದಾಯಿತ ರೈತ ಸೊಸೈಟಿಗಳಿಗೆ ವಿದ್ಯುತ್ ಬಳಕೆಗೆ ಸಂಬಂಧಿಸಿದ ಪ್ರೋತ್ಸಾಹಧನ ನೀಡುವ ಸಂಬಂಧ ಹಾಲಿ ಇರುವ ನೀತಿಯನ್ನು ಪರಿಶೀಲಿಸಿ ಅದಕ್ಕೆ ತಿದ್ದುಪಡಿ ಮಾಡಬೇಕು ಎಂದು ಪೀಠ ಹೇಳಿದೆ.
ಸಂಘದಲ್ಲಿರುವ ರೈತರ ವಿದ್ಯುತ್ ಬಳಕೆಯು ನಿಗದಿತ ವಿದ್ಯುತ್ ಬಳಕೆದಾರರಗಿಂತ ಹೆಚ್ಚಾಗಿದೆ ಎಂಬ ಕಾರಣಕ್ಕೆ ಪ್ರೋತ್ಸಾಹಧನ ನಿರಾಕರಿಸುವುದು ಅಸಾಂವಿಧಾನಿಕ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಶ್ರೀಮಂತ (ತಾತ್ಯಾ) ಪಾಟೀಲ್ ನೀರು ಬಳಕೆದಾರರ ಸಂಘ ಮತ್ತು ರವಳನಥ್ ಏತ ನೀರು ಬಳಕೆದಾರರ ಸಂಘಗಳು ಹೆಸ್ಕಾಂನ ನೋಂದಾಯಿತ ಗ್ರಾಹಕರಾಗಿದ್ದು, ಏತ ನೀರಾವರಿ ಯೋಜನೆ/ಏತ ನೀರಾವರಿ ಸೊಸೈಟಿ ಅನ್ವಯ ಅವರಿಗೆ 90 ಎಚ್ಪಿ ಹಾಗೂ 100 ಎಚ್ಪಿ ವಿದ್ಯುತ್ ಮಂಜೂರು ಮಾಡಲಾಗಿತ್ತು. ಇದರ ಭಾಗವಾಗಿ ಅರ್ಜಿದಾರರು ಅಥಣಿಯ ಪಾರ್ಥನಹಳ್ಳಿ ಮತ್ತು ಮಧಭಾವಿಯಲ್ಲಿ ಅಂದಾಜು 5,79,65,417 ರೂಪಾಯಿ ವೆಚ್ಚದಲ್ಲಿ ಕ್ರಮವಾಗಿ 200 ಮತ್ತು 103 ಎಕರೆಗೆ ನೀರುಣಿಸಲು ಕೃಷ್ಣಾ ನದಿಗೆ ಏತ ನೀರಾವರಿ ಯೋಜನೆ ಜಾರಿ ಮಾಡಿದ್ದರು.
ಈ ಯೋಜನೆಗೆ ವಿದ್ಯುತ್ ಸಬ್ಸಿಡಿ ನೀಡುವುದಕ್ಕೆ ಹೆಸ್ಕಾಂ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರ ಸಂಘಗಳು, ವ್ಯಕ್ತಿಗತ ಐಪಿ ಸೆಟ್ ಹೊಂದಿರುವವರು ಒಂದಕ್ಕಿಂತ ಹೆಚ್ಚಿಗೆ ಐಪಿಗೆ ಸಬ್ಸಿಡಿ ಪಡೆಯುತ್ತಿದ್ದರೂ ಸೊಸೈಟಿ ರೂಪಿಸಿ ಅದರ ಮೂಲಕ ವ್ಯವಸ್ಥೆ ಮಾಡಿಕೊಂಡಿರುವವರಿಗೆ ಸಬ್ಸಿಡಿ ವಿಸ್ತರಿಸಿಲ್ಲ. ಆದ್ದರಿಂದ ಸಬ್ಸಿಡಿ ಒದಗಿಸಬೇಕು ಎಂದು ಕೋರಿದ್ದರು.
ಇದನ್ನೂ ಓದಿ: ವಿಕಲಚೇತನರ ನೇಮಕಾತಿ ವೇಳೆ ಕ್ರಿಯಾತ್ಮತೆಯನ್ನೂ ಮೌಲ್ಯಮಾಪನ ಮಾಡಬೇಕು: ಹೈಕೋರ್ಟ್ - HIGH COURT