ಬೆಂಗಳೂರು: ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಪುತ್ರನ ಹಸ್ತಕ್ಷೇಪ ಆರೋಪ ಆಧಾರರಹಿತ ಎಂದು ಸಚಿವ ಬೋಸರಾಜು ಸ್ಪಷ್ಟಪಡಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, "ಇದರಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ. ಇದು ಆಧಾರರಹಿತ ಆರೋಪ. ಯಾರು ಹಸ್ತಕ್ಷೇಪ ಮಾಡಿದ್ದಾರೆ ಎಂದು ಹೇಳಲಿ. ಗುತ್ತಿಗೆದಾರರ ಬಿಲ್ ಬಿಡುಗಡೆಗಾಗಿ ಎಲ್ಒಸಿ ವ್ಯವಸ್ಥೆಯನ್ನು ನಾವು ಮಾಡಿಯೇ ಇಲ್ಲ. ಒಂದು ರೂಪಾಯಿನೂ ಆ ರೀತಿ ಆಗಿಲ್ಲ. ಗುತ್ತಿಗೆದಾರರು ಬಂದು ಸಾಬೀತು ಮಾಡಲಿ. ಗುತ್ತಿಗೆದಾರರ ಆರೋಪ ನಿರಾಧಾರ. ಲೋಪವಾಗಿದ್ದರೆ ನಾನೇ ಜವಾಬ್ದಾರ. ತಪ್ಪಿದ್ದರೆ ತಕ್ಷಣವೇ ನಾವು ಕ್ರಮ ಕೈಗೊಳ್ಳುತ್ತೇವೆ. ಪ್ರತಿಯೊಂದು ಪಾರದರ್ಶಕವಾಗಿಟ್ಟಿದ್ದೇವೆ. ಮೂರು ತಿಂಗಳಿಗೊಮ್ಮೆ ನಮಗೆ ಹಣ ಬರುತ್ತದೆ. ಹಣ ಬರುತ್ತಲೇ ನಾವು ಬಾಕಿ ಬಿಲ್ ಕ್ಲಿಯರ್ ಮಾಡುತ್ತಿದ್ದೇವೆ. ಬಹಳ ಪಾರದರ್ಶಕತೆ ಕಾಯ್ದುಕೊಂಡಿದ್ದೇವೆ" ಎಂದರು.
ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು; "ಗುತ್ತಿಗೆದಾರರ ಸಂಘಟನೆ ಭೇಟಿ ಮಾಡಿ, ನಮ್ಮ ಬಳಿ ಬಾಕಿ ಬಿಲ್ಸ್ ಬಗ್ಗೆ ಚರ್ಚೆ ಮಾಡಿದ್ದರು. ಮಾರ್ಚ್ನಲ್ಲಿ ಸಭೆ ಕರೆಯೋಕೆ ಮುಂದಾಗಿದ್ದೆ. ಅಷ್ಟರೊಳಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಆರೋಪಿಸಿದ್ದರು. ಮಾಧ್ಯಮಗಳು ಇದರ ಬಗ್ಗೆ ಪ್ರಶ್ನೆ ಮಾಡಿದ್ದರು. ನಿನ್ನೆ ಗುತ್ತಿಗೆದಾರರ ಸಂಘದ ಜೊತೆ ಸಭೆ ನಡೆಸಿದ್ದೇನೆ. ಮಾರ್ಚ್, ಡಿಸೆಂಬರ್ನಲ್ಲಿ ಎಷ್ಟು ಪಾವತಿ ಆಗಿದೆ, ಫೆಬ್ರವರಿಯಲ್ಲಿ ಎಷ್ಟು ಬಾಕಿ ಇದೆ. ಇದರ ಬಗ್ಗೆ ಎಲ್ಲವನ್ನೂ ಅವರಿಗೆ ತಿಳಿಸಿದ್ದೇವೆ. ಅವರು ಅದಕ್ಕೆ ಒಪ್ಪಿಕೊಂಡಿದ್ದಾರೆ" ಎಂದು ಹೇಳಿದರು.
"ಹಿಂದಿನ ಸರ್ಕಾರ 12,493 ಕೋಟಿ ಬಿಲ್ ಬಾಕಿ ಇಟ್ಟಿತ್ತು. ಅವರು ಕೇವಲ 1,665 ಕೋಟಿ ಬಾಕಿ ಬಿಲ್ನ ಹಣ ಪಾವತಿಸಿದ್ದರು. ನಾವು ಬಂದ ಮೇಲೆ ಬಿಲ್ ರಿಲೀಸ್ ಮಾಡಿದ್ದೇವೆ. ಸಣ್ಣ ಗುತ್ತಿಗೆದಾರರ ಬಿಲ್ ರಿಲೀಸ್ ಮಾಡಿದ್ದೇವೆ. 636 ಗುತ್ತಿಗೆದಾರರಿಗೆ ಬಿಲ್ ಪಾವತಿಸಿದ್ದೇವೆ. 50 ಲಕ್ಷದೊಳಗಿರುವ ಬಿಲ್ ಕ್ಲಿಯರ್ ಮಾಡಿದ್ದೇವೆ. ಈ ಬಾರಿಯೂ ಸಣ್ಣ ಗುತ್ತಿಗೆದಾರರ ಬಿಲ್ ಕ್ಲಿಯರ್ಗೆ ಚಿಂತನೆ ಮಾಡಲಾಗಿದೆ. ವಿಭಾಗವಾರು ಮಾಹಿತಿ ತರಿಸಿಕೊಂಡಿದ್ದೆವು. ಅದರಲ್ಲಿ 921 ಕೋಟಿ ಹಣ ಕ್ಲಿಯರ್ ಮಾಡಿದ್ದೇವೆ. ಫೆಬ್ರವರಿ 28ವರೆಗಿನ ಪೆಂಡಿಂಗ್ ಬಿಲ್ ಮಾಹಿತಿ ತೆಗೆದುಕೊಂಡಿದ್ದೇವೆ. 601 ಕೋಟಿ ರೂ. ಬಿಲ್ ಇದೆ. ಇದರಲ್ಲಿ 200 ಕೋಟಿ ರೂ. ಹಣಕಾಸು ಇಲಾಖೆಯಿಂದ ಬಂದಿದೆ. ಈ ಬಿಲ್ ಹಣವನ್ನು ಕ್ಲಿಯರ್ ಮಾಡಬಹುದು. ಬಂದಿರುವ ಹಣದಲ್ಲಿ ವರ್ಕ್ ವೈಸ್ ಕೊಡುತ್ತಿದ್ದೇವೆ" ಎಂದು ಮಾಹಿತಿ ನೀಡಿದರು.
’ನಾವು ಹೆಚ್ಚು ಬಿಲ್ ಬಾಕಿ ಉಳಿಸಿಕೊಂಡಿಲ್ಲ’: "ನಾವು ಹೆಚ್ಚು ಬಿಲ್ ಪೆಂಡಿಂಗ್ ಇಟ್ಟಿಲ್ಲ. 17 ಏಜೆನ್ಸಿಗಳ 861 ಕೋಟಿ ರೂ. ಬಿಲ್ ಪೆಂಡಿಂಗ್ ಇದೆ. ಇದರಲ್ಲಿ ಹಣ ನೋಡಿಕೊಂಡು ಕ್ಲಿಯರ್ ಮಾಡುತ್ತಿದ್ದೇವೆ. 10 ಕೋಟಿ ಬಿಲ್ ಇದ್ದರೆ, ಆ ಪೈಕಿ 2 ಕೋಟಿ ರೂ. ಪಾವತಿಸಿದ್ದೇವೆ. 5 ಕೋಟಿ ಬಿಲ್ ಇದ್ದರೆ, 1 ಕೋಟಿ ಕೊಟ್ಟಿದ್ದೇವೆ. 50 ಲಕ್ಷ ಬಿಲ್ ಇದ್ದರೆ 10 ಲಕ್ಷ ಹಣ ಕೊಟ್ಟಿದ್ದೇವೆ. ನಾವು ಸಿಸ್ಟಂ ಡೆವಲಪ್ ಮಾಡಿ ಕೊಡುತ್ತಿದ್ದೇವೆ. ಯಾವುದೇ ಬಿಲ್ಗಳನ್ನು ನಾವು ಉಳಿಸಿಕೊಳ್ಳುತ್ತಿಲ್ಲ. ಹಣ ಬಂದಂತೆ ನಾವು ಕ್ಲಿಯರ್ ಮಾಡುತ್ತಿದ್ದೇವೆ. ಯಾವುದೇ ಲೋಪದೋಷ ಇದ್ದರೆ ಬಂದು ಕೇಳಲಿ. ತಪ್ಪಿದ್ದರೆ ನಾನು ಕೂಡಲೇ ಅಮಾನತು ಮಾಡುತ್ತೇನೆ. ಏನಾದರೂ ಅನುಮಾನ ಇದ್ದರೆ ಬಂದು ಕೇಳಲಿ" ಎಂದು ತಿಳಿಸಿದರು.
ನಾವು ಸರಿಪಡಿಸಿಕೊಳ್ಳುತ್ತೇವೆ: "ಸಲಹೆ ಕೊಡುವುದಿದ್ದರೆ ಕೊಡಲಿ. ನಾವು ಅವೆಲ್ಲವನ್ನೂ ಸರಿಪಡಿಸಿಕೊಳ್ಳುತ್ತೇವೆ. ಹಳೆ ಕೆಲಸಕ್ಕೆ ಕ್ಲಿಯರ್ ಮಾಡಲು 6 ವರ್ಷ ಬೇಕು. ನಾವು ಎಲ್ಲರಿಗೆ ಸಿಗಲಿ ಅಂತ ಮಾಡಿದ್ದೇವೆ. ಸಿಎಂ ಏನು ಸೂಚನೆ ಕೊಡುತ್ತಾರೆ, ಅದನ್ನು ಮಾಡುತ್ತೇವೆ. ಬಹಳ ದಿನ ಪೆಂಡಿಂಗ್ ಇದ್ದರೆ ಸರಿಪಡಿಸೋಣ. ಹಣ ರಿಲೀಸ್ ಆದಂತೆ ಅದನ್ನು ಬಗೆಹರಿಸೋಣ" ಎಂದು ಭರವಸೆ ನೀಡಿದರು.
ಗಂಗಾಕಲ್ಯಾಣ ಯೋಜನೆ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿ, "5,000 ಬೋರ್ವೆಲ್ ಹಾಕಿಸಿದ್ದೇವೆ. ಒಂದು ರೂ. ಕೂಡ ಫಲಾನುಭವಿಗಳ ಕಡೆಯಿಂದ ಖರ್ಚಾಗಲ್ಲ. ನಾವೇ ಹಾಕಿಸಿ ಎಲ್ಲಾ ಮಾಡಿಕೊಡುತ್ತೇವೆ. ಇದರಿಂದ 431 ಕೋಟಿ ಹಣ ಖರ್ಚಾಗಿದೆ. ಬಿಲ್ ಮಾಡಿಸಿದರೆ ಒಬ್ಬನಿಗೇ ಹೋಗುತ್ತದೆ. ಉಳಿದವರಿಗೆ ಹಣ ಸಿಗುವುದಿಲ್ಲ. ಅದಕ್ಕೆ ನಾವು ಕೆಲ ಮಾರ್ಪಾಡು ಮಾಡಿದ್ದೇವೆ. ಎಲ್ಲರಿಗೆ ಅವಕಾಶ ಸಿಗಲಿ. ಎಲ್ಲರಿಗೆ ಬಿಲ್ ಹೋಗಲಿ ಎಂದು ಮಾಡಿದ್ದೇವೆ" ಎಂದರು.
ಇದನ್ನೂ ಓದಿ: ಕಮಿಷನ್ ಕೊಟ್ಟರೂ ಅಧಿಕಾರಿಗಳು ಬಾಕಿ ಹಣ ಬಿಡುಗಡೆ ಮಾಡ್ತಿಲ್ಲ: ಹಾವೇರಿ ಗುತ್ತಿಗೆದಾರರ ಸಂಘ ಆರೋಪ