ಬೆಂಗಳೂರು: ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 6,57,660 ಕೋಟಿ ರೂ ಹೂಡಿಕೆಗೆ 115 ಒಡಂಬಡಿಕೆಗಳನ್ನು (MoU) ಮಾಡಿಕೊಳ್ಳಲಾಗಿದ್ದು, ಇದರಿಂದ ರಾಜ್ಯದಲ್ಲಿ ಸುಮಾರು 2,32,771 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ತಮ್ಮ ಎರಡು ವರ್ಷಗಳ ಸಾಧನೆ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಗಳಲ್ಲಿ 906 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ ಸುಮಾರು 1,13,200 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, 2,23,982 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ ಎಂದರು.
ಫೆಬ್ರವರಿ 2025ರ ಮಾಹೆಯಲ್ಲಿ “ಇನ್ವೆಸ್ಟ್ ಕರ್ನಾಟಕ - 2025” ಅನ್ನು ಆಯೋಜಿಸಲಾಗಿದ್ದು, ಇದರಲ್ಲಿ ಒಟ್ಟು 3,250 ಉದ್ದಿಮೆದಾರರು ಭಾಗವಹಿಸಿದ್ದು, ಒಟ್ಟು 98 ಕಂಪನಿಗಳೊಂದಿಗೆ 6,23,970 ಕೋಟಿ ರೂ. ಹೂಡಿಕೆಯ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಹಾಗೂ 4,03,533 ಕೋಟಿ ರೂ. ಹೂಡಿಕೆ ಮಾಡಲು 1101 ಕಂಪನಿಗಳು ಸಂಬಂಧಿಸಿದ ವಿವಿಧ ಸಮಿತಿಗಳಿಂದ ಅನುಮೋದನೆ ಪಡೆದಿರುತ್ತಾರೆ ಎಂದು ಹೇಳಿದರು.
ಈ ಯೋಜನೆಗಳಿಂದ ಅಂದಾಜು 6 ಲಕ್ಷ ಉದ್ಯೋಗ ಸೃಜನೆ ನಿರೀಕ್ಷಿಸಲಾಗಿದೆ. ಇವುಗಳಲ್ಲಿ ಶೇ.75 ರಷ್ಟು ಬೆಂಗಳೂರಿನ ಹೊರಗೆ, ಆ ಪೈಕಿ ಶೇ. 45ರಷ್ಟು ಉತ್ತರ ಕರ್ನಾಟಕ ಭಾಗದಲ್ಲಿವೆ. ರಾಜ್ಯದಲ್ಲಿ ರೂ.7.50 ಲಕ್ಷ ಕೋಟಿ ಹೂಡಿಕೆಗಳನ್ನು ಆಕರ್ಷಿಸಲು ಹಾಗೂ 20 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದೊಂದಿಗೆ ಹೊಸ ಕೈಗಾರಿಕಾ ನೀತಿ 2025-30 ಹೊರತರಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ 2023-24ನೇ ಸಾಲಿನಲ್ಲಿ 54,427 ಕೋಟಿ ರೂ. ವಿದೇಶಿ ಹೂಡಿಕೆ ಆಕರ್ಷಿಸಿ, ದೇಶದಲ್ಲಿ 3ನೇ ಸ್ಥಾನದಲ್ಲಿದ್ದು ಹಾಗೂ 2024-25ನೇ ಸಾಲಿನಲ್ಲಿ 56,030 ಕೋಟಿ ರೂ. ವಿದೇಶಿ ಹೂಡಿಕೆ ಆರ್ಕಷಿಸುವುದರೊಂದಿಗೆ ದೇಶದಲ್ಲಿ 2ನೇ ಸ್ಥಾನದಲ್ಲಿದೆ. 2023-24ನೇ ಸಾಲಿನಲ್ಲಿ ರಾಜ್ಯವು 166,545 Mn USD ರಫ್ತು ಮಾಡುವುದರೊಂದಿಗೆ ಒಟ್ಟಾರೆ ರಫ್ತಿನಲ್ಲಿ 1ನೇ ಸ್ಥಾನದಲ್ಲಿದೆ. ಸೇವಾ ವಲಯಗಳಲ್ಲಿ 1,39,914 Mn USD ರಫ್ತು ಮಾಡುವುದರೊಂದಿಗೆ 1ನೇ ಸ್ಥಾನ ಹಾಗೂ ಸರಕು ರಫ್ತಿನಲ್ಲಿ 26,631 Mn USD ರಫ್ತು ಮಾಡುವುದರೊಂದಿಗೆ 4ನೇ ಸ್ಥಾನದಲ್ಲಿದೆ ಎಂದರು.
ಪ್ರಮುಖ ಹೂಡಿಕೆಗಳು ಯಾವುವು?: ಫಾಕ್ಸ್ ಕಾನ್ ಕಂಪನಿಯಿಂದ 22,000 ಕೋಟಿ ರೂ. ಈ ಕಂಪನಿಯು ತೈವಾನಿನಿಂದ ಹೊರಗೆ ಇದೇ ಮೊದಲ ಬಾರಿಗೆ ಅತ್ಯಂತ ಬೃಹತ್ತಾದ ಮೊಬೈಲ್ ಫೋನ್ ತಯಾರಿಕಾ ಘಟಕ ಸ್ಥಾಪಿಸಿದ್ದು, ಸದ್ಯದಲ್ಲೇ ಉತ್ಪಾದನೆ ಆರಂಭಿಸಲಿದೆ. ಇಲ್ಲಿ ಪ್ರತೀವರ್ಷ 20 ಮಿಲಿಯನ್ (2 ಕೋಟಿ) ಮೊಬೈಲ್ ಫೋನ್ಗಳನ್ನು ತಯಾರಿಸಲಾಗುವುದು ಎಂದು ಮಾಹಿತಿ ನೀಡಿದರು.
ಎನ್ಎಕ್ಸ್ಪಿ ಸೆಮಿಕಂಡಕ್ಟರ್ಸ್ ನಿಂದ 1 ಬಿಲಿಯನ್ ಡಾಲರ್ ಹೂಡಿಕೆ, ಟೊಯೋಟಾ ಕಿರ್ಲೋಸ್ಕರ್ ಕಂಪನಿಯಿಂದ 3,700 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಸಂವರ್ಧನ ಮದರ್ಸನ್ ಕಂಪನಿಯಿಂದ 3,700 ಕೋಟಿ ರೂ. ಹೂಡಿಕೆ ಮೂಲಕ ಎಲೆಕ್ಟ್ರಾನಿಕ್ ಬಿಡಿ ಭಾಗಗಳನ್ನು ಉತ್ಪಾದಿಸಲಿದೆ. ಸನ್ಸೇರಾ ಕಂಪನಿಯಿಂದ 2,150 ಕೋಟಿ ರೂ. ಆಟೋಮೋಟೀವ್ ಮತ್ತು ನಾನ್ ಆಟೋಮೋಟೀವ್ ಬಿಡಿಭಾಗಗಳ ಉತ್ಪಾದನೆ, ಜಿಂದಾಲ್ ಎನರ್ಜಿ ಕಂಪನಿಯಿಂದ 4,960 ಕೋಟಿ ರೂ ಹೂಡಲಿದ್ದು, 600 ಮೆಗಾವ್ಯಾಟ್ ಪವನ ವಿದ್ಯುತ್ ಉತ್ಪಾದನಾ ಸ್ಥಾವರ ಸ್ಥಾಪನೆಯ ಉದ್ದೇಶ ಹೊಂದಿದೆ ಎಂದರು.
ಟಾಟಾ ಸಮೂಹದಿಂದ 3,330 ಕೋಟಿ ಹೂಡಿಕೆ. ದೇವನಹಳ್ಳಿಯಲ್ಲಿ ಏರ್ ಇಂಡಿಯಾ 1,300 ಕೋಟಿ ಹೂಡಿಕೆಯಲ್ಲಿ ಎಂಆರ್ಒ ಸೌಲಭ್ಯ ಇರಲಿದೆ. ಹೀರೋ ಎನರ್ಜೀಸ್ ಮೂಲಕ 11,000 ಕೋಟಿ ಹೂಡಿಕೆ ಮಾಡಲು ಒಪ್ಪಿಗೆ ನೀಡಿದೆ. ಭಾರತೀಯ ಅನಿಲ ಪ್ರಾಧಿಕಾರವು ರಾಜ್ಯದಲ್ಲಿ 1,000 ಮೆಗಾವ್ಯಾಟ್ ಸಾಮರ್ಥ್ಯದ ರೆನ್ಯೂಬಲ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದ್ದು, 5,000 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಒಡಂಬಡಿಕೆ ಆಗಿದೆ ಎಂದರು.
ನದಿ ಮೂಲಗಳಿಂದ ನೀರು: ಇಂಡಸ್ಟ್ರಿಯಲ್ ಏರಿಯಾಗಳಿಗೆ ನದಿ ಮೂಲಗಳಿಂದ ನೀರು ಒದಗಿಸಲು 3,600 ಕೋಟಿ ರೂ. ಮೊತ್ತದ ಸಮಗ್ರ ಯೋಜನೆ ರೂಪಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಫಾರ್ಮಾ ಪಾರ್ಕ್, ವಿಜಯಪುರದಲ್ಲಿ ಸೋಲಾರ್ ಸೆಲ್ ಪಾರ್ಕ್, ಚಿತ್ರದುರ್ಗದಲ್ಲಿ ಡ್ರೋನ್ ಪಾರ್ಕ್, ಡಾಬಸಪೇಟೆಗೆ ಸಮೀಪದ ಹನುಮಂತಪುರದಲ್ಲಿ ಮೆಗಾ ಲಾಜಿಸ್ಟಿಕ್ಸ್ ಪಾರ್ಕ್, ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯಲ್ಲಿ ಡೀಪ್-ಟೆಕ್ ಪಾರ್ಕ್, ಹುಬ್ಬಳ್ಳಿಯಲ್ಲಿ 200 ಎಕರೆ ಜಾಗದಲ್ಲಿ ಸ್ಟಾರ್ಟಪ್ ಪಾರ್ಕ್, ಬಳ್ಳಾರಿ ಜಿಲ್ಲೆಯ ಸಂಜೀವರಾಯನಕೋಟೆಯಲ್ಲಿ 154 ಎಕರೆಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪಿಸಲಾಗುವುದು ಎಂದರು.
ಹುಬ್ಬಳ್ಳಿ, ಬೆಳಗಾವಿ ಅಂತಾರಾಷ್ಟ್ರೀಯ ಏರ್ಪೋರ್ಟ್ಗೆ ಕ್ರಮ: ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿ ಮೇಲ್ದರ್ಜೆಗೇರಿಸುವ ಉದ್ದೇಶ ಇದೆ. ಇದಕ್ಕೆ ಕೇಂದ್ರಕ್ಕೆ ಸದ್ಯದಲ್ಲೇ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರ ಕರ್ನಾಟಕದ ಎಲ್ಲ ದಿಕ್ಕುಗಳಲ್ಲೂ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಆದ್ಯತೆ ನೀಡಿದೆ. ಇದರಿಂದ ಪ್ರವಾಸೋದ್ಯಮ, ಶೈಕ್ಷಣಿಕ ಚಟುವಟಿಕೆಗಳು, ವಾಣಿಜ್ಯ ವಹಿವಾಟು, ಕೃಷಿ ಉತ್ಪನ್ನಗಳ ಸಾಗಾಟ ಇವೆಲ್ಲವೂ ಸುಗಮವಾಗಲಿದೆ. ಕೆಎಸ್ಐಐಡಿಸಿ ಮೂಲಕವೇ ರಾಜ್ಯದ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಹಾಗೂ ನಿರ್ವಹಣೆ ಮಾಡುವ ಚಾರಿತ್ರಿಕ ನಿರ್ಧಾರದೊಂದಿಗೆ ಬೊಕ್ಕಸಕ್ಕೆ ಹೊಸ ಸಂಪನ್ಮೂಲ ಸೃಷ್ಟಿಸುವ ಉದ್ದೇಶವನ್ನೂ ಇರಿಸಿಕೊಳ್ಳಲಾಗಿದೆ. ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಸ್ಥಳ ಆಯ್ಕೆ ಕುರಿತ ವರದಿ ಬರಬೇಕಾಗಿದೆ. ಅದರ ನಂತರ ಕಾರ್ಯಸಾಧ್ಯತಾ ಅಧ್ಯಯನ ಮಾಡಿಸಿ, ಅಂತಿಮಗೊಳಿಸಲಾಗುವುದು ಎಂದರು.
ಹೊಸ ಜಾತಿ ಸಮೀಕ್ಷೆ ಅನಿವಾರ್ಯ: ಮರು ಜಾತಿ ಸಮೀಕ್ಷೆ ವಿಚಾರವಾಗಿ ಪ್ರತಿಕ್ರಿಯಿಸಿ, ಹಿಂದುಳಿದ ವರ್ಗಗಳ ಕಾಯ್ದೆ ಪ್ರಕಾರ ಹತ್ತು ವರ್ಷಕ್ಮೊಮ್ಮೆ ಸಮೀಕ್ಷೆ ನಡೆಸಬೇಕು. ಹೀಗಾಗಿ ಹೊಸ ಸಮೀಕ್ಷೆ ಮಾಡುವ ಅನಿವಾರ್ಯತೆ ಇದೆ. ಈಗಿರುವ ಜಾತಿ ಗಣತಿ 10 ವರ್ಷ ಹಳೆಯದ್ದಾಗಿದೆ. ಅದನ್ನು ಕಾನೂನಾತ್ಮಕವಾಗಿ ಚಾಲೆಂಜ್ ಮಾಡುವ ಸಾಧ್ಯತೆ ಇತ್ತು. ಹಾಗಾಗಿ ಮರು ಸಮೀಕ್ಷೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುತ್ತಿದೆ. ಅದು ಯಾವ ಜಾತಿ ಎಷ್ಟು ಸಂಖ್ಯೆ ಎಂದು ಮಾತ್ರ ತಿಳಿಸಲಿದೆ. ನಾವು ನಡೆಸುವ ಸಮೀಕ್ಷೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೇಂದ್ರದ ಗಣತಿಯಲ್ಲಿ ಇರುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಹೊಸ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಸಂಪುಟ ತೀರ್ಮಾನ; ಸಮೀಕ್ಷೆ ಮುಗಿಸಲು 90 ದಿನಗಳ ಗಡುವು
ಇದನ್ನೂ ಓದಿ: ಜಾತಿ ಜನಗಣತಿ ಮರು ಸರ್ವೇ: ಸಚಿವರು ಹೇಳುವುದೇನು?