ವಿಶೇಷ ವರದಿ - ಕಿರಣ್ ಕುಮಾರ್
ಶಿವಮೊಗ್ಗ: ಹಿಂದೆಲ್ಲಾ ತೆಂಗಿನ ಮರಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಕೆಂಪು ಮೂತಿ ಹುಳುಗಳು ಈಗ ಅಡಿಕೆ ಮರಗಳನ್ನೂ ಕಾಡಲಾರಂಭಿಸಿವೆ. ಕೆಂಪು ಮೂತಿ ಹುಳು ಅಥವಾ ಕೀಟ ಬಾಧೆಯು ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ಹಾಗೂ ಶಿಕಾರಿಪುರ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ರೈತರಿಗೆ ಮತ್ತೊಂದು ಸಮಸ್ಯೆಯನ್ನುಂಟು ಮಾಡಿದೆ.
ಇಲ್ಲಿನ 4ರಿಂದ 5 ವರ್ಷದ ಅಡಿಕೆ ತೋಟಗಳಲ್ಲಿ ಹುಳುಗಳ ಕಾಟ ಹೆಚ್ಚಾಗಿದೆ. ಕೀಟ ಬಾಧೆಯಿಂದ ಮರಗಳು ದುರ್ಬಲಗೊಂಡು ನೆಲಕ್ಕುರುಳುತ್ತಿವೆ. ಇದರಿಂದ ಹಲವು ವರ್ಷಗಳ ಕಾಲ ಅಡಿಕೆ ಮರಗಳನ್ನು ಮಕ್ಕಳಂತೆ ಸಾಕಿದ ರೈತಾಪಿ ವರ್ಗಕ್ಕೆ ತುಂಬಲಾರದ ನಷ್ಟವಾಗುತ್ತಿದೆ. ಗೊಬ್ಬರ, ಮಣ್ಣು ಸೇರಿದಂತೆ ಇತರೆ ಕೆಲಸಗಳಿಗೆ ರೈತರು ಲಕ್ಷಾಂತರ ರೂ. ಖರ್ಚು ಮಾಡಿರುತ್ತಾರೆ. ಆದರೆ, ಇನ್ನೇನು ಎರಡು ವರ್ಷದಲ್ಲಿ ಫಸಲು ಕೈಸೇರುವ ನಿರೀಕ್ಷೆಯಲ್ಲಿರುವಾಗಲೇ ರೈತರು ತಮ್ಮ ಕಣ್ಣುಮುಂದೆಯೇ ಅಡಿಕೆ ಗಿಡಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ಈ ಕೀಟವು ಒಳಗಿನಿಂದಲೇ ಮರವನ್ನು ತಿಂದು ಹಾಕುತ್ತದೆ. ಇದರಿಂದ ರೈತರು ಮತ್ತೆ ಹೊಸ ಗಿಡವನ್ನೇ ನೆಟ್ಟು, ಅದಕ್ಕೆ ಮತ್ತೆ ಅದರ ಪೋಷಣೆ ಮಾಡಬೇಕಾಗುತ್ತದೆ. ಬೆಳೆಗಾಗಿ ಪುನಃ 10 ವರ್ಷಗಳವರೆಗೆ ಕಾಯಬೇಕಾಗುತ್ತದೆ. ಕೀಟದಿಂದಾಗಿ ಕೃಷಿಕರ ಪರಿಶ್ರಮವೆಲ್ಲವೂ ಮಣ್ಣುಪಾಲಾಗುತ್ತಿದೆ.

ಕೆಂಪು ಮೂತಿ ಹುಳು ಬಾಧೆಯ ಲಕ್ಷಣಗಳು: ಕೆಂಪು ಮೂತಿ ಹುಳದ ರೋಗಕ್ಕೆ ತುತ್ತಾದ ಅಡಿಕೆ ಮರದ ಲಕ್ಷಣಗಳೆಂದರೆ, ಆರಂಭದಲ್ಲಿ ಅದರ ಗರಿಗಳು ಹಳದಿ ಬಣ್ಣಕ್ಕೆ ತಿರುಗಿ, ಬಾಡಿರುವಂತೆ ಕಾಣಿಸುತ್ತದೆ. ಕಾಂಡದ ಭಾಗದಲ್ಲಿ ರಂಧ್ರಗಳಾಗಿ ಕಂದು ಬಣ್ಣದ ದ್ರವ ಹೊರಬರುತ್ತಿರುತ್ತದೆ. ತೀವ್ರ ಬಾಧಿತ ಮರಗಳಲ್ಲಿ ಕಾಂಡದ ಭಾಗದಲ್ಲಿ ನಾರಿನ ಅಂಶವೂ ಹೊರಬರುತ್ತದೆ. ಅಂತಹ ಮರಗಳನ್ನು ಸೀಳಿ ನೋಡಿದರೆ, ಅದರಲ್ಲಿ ವಿವಿಧ ಹಂತದ ಹುಳುಗಳನ್ನು ಕಾಣಬಹುದು. ಇದರಿಂದ ಬೆಳವಣಿಗೆಯೂ ಕುಂಠಿತವಾಗುವುದಲ್ಲದೆ, ತೀವ್ರ ಹಾನಿಗೊಳಗಾದ ಮರಗಳು ಗಾಳಿ, ಮಳೆಗೆ ಧರೆಗುರುಳುತ್ತವೆ.
ನಿರ್ವಹಣಾ ಕ್ರಮಗಳು: ಹುಳು ಇರುವ ಕಡೆ ಮರಕ್ಕೆ ಒಂದು ರಂಧ್ರ ಕೊರೆದು, ಅದಕ್ಕೆ 4 ಮಿಲಿ ಲೀಟರ್ ಕ್ಲೊರಾಂಟ್ರಾನಿಲಿಪ್ರೋಲ್ 18.5 ಎಸ್ಸಿ ಅಥವಾ 4 ಮಿ.ಲೀ ಇಂಡಾಕ್ಸಾಕಾರ್ಬ್ 14.5 ಎಸ್ಸಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸುರಿಯಬೇಕು. ಸುಳಿಯಲ್ಲಿರುವ ರಂಧ್ರಕ್ಕೂ ಕೂಡ ಅದನ್ನು ಹಾಕಬೇಕು. ಇದರಿಂದ ಹುಳುಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಸಂಶೋಧಕರು ತಿಳಿಸುತ್ತಾರೆ.

ಜೊತೆಗೆ, ಶೇ.5ರಷ್ಟು ಮೆಲಾಥಿಯಾನ್ ಪುಡಿ ಹಾಗೂ ಮರಳನ್ನು ಸಮಾನ ಪ್ರಮಾಣದಲ್ಲಿ ಬೆರೆಯಿಸಿ, ಏಪ್ರಿಲ್–ಮೇ ಹಾಗೂ ಸೆಪ್ಟೆಂಬರ್–ಅಕ್ಟೋಬರ್ ತಿಂಗಳುಗಳಲ್ಲಿ ಮರದ ಎಲೆಯ ಸಂದುಗಳಲ್ಲಿ ಹಾಕಬೇಕು. ಅಲ್ಲದೆ, ಯಾವುದೇ ಮರಗಳ ಕಾಂಡದಲ್ಲಿ ಗಾಯಗಳಾಗದಂತೆ ಎಚ್ಚರ ವಹಿಸಬೇಕು. ಗಾಯಗಳಾಗಿದ್ದರೆ 5.0 ಮಿ.ಲೀ. ಕ್ಲೋರೋಫೈರಿಫಾಸ್ 20 ಇಸಿಯನ್ನು ಸಂದುಗಳಲ್ಲಿ ಹಾಕಿ, ಮಣ್ಣಿನ ಮಿಶ್ರಣದಿಂದ ಮುಚ್ಚಬೇಕು. ಕ್ಲೊರಾಂಟ್ರಾನಿಲಿಪ್ರೋಲ್ 18.5 ಎಸ್ಸಿ (2 ಮಿ.ಲೀ.+500 ಮಿ.ಲೀ. ನೀರು) ಅಥವಾ ಇಂಡಾಕ್ಸಾಕಾರ್ಬ್ 77.78 ಎಸ್ಸಿಯನ್ನು (2 ಮಿ.ಲೀ.+500 ಮಿ.ಲೀ. ನೀರು) ಬೇರುಗಳ ಮೂಲಕ ಕೊಡಬೇಕು. ಪ್ರತಿ ಹೆಕ್ಟೇರ್ಗೆ ಒಂದರಂತೆ ಮೋಹಕ ಬಲೆಯನ್ನು ಇಡಬೇಕು ಮತ್ತು 6 ತಿಂಗಳಿಗೊಮ್ಮೆ ಲ್ಯೂರ್ ಅನ್ನು ಬದಲಾಯಿಸಿದರೆ ಕೀಟಗಳ ಬಾಧೆಯನ್ನು ತಪ್ಪಿಸಬಹುದು ಎನ್ನುತ್ತಾರೆ ಸಂಶೋಧಕರು.

ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ನಾಗರಾಜ ಅಡಿವೆಪ್ಪ ಅವರು ಕೆಂಪು ಮೂತಿ ಕೀಟದ ಬಾಧೆಯ ಕುರಿತು ಮಾಹಿತಿ ನೀಡುತ್ತ, ''ಅಡಿಕೆ ಮತ್ತು ತೆಂಗಿನ ಮರಕ್ಕೆ ಕೆಂಪು ಮೂತಿ ಹುಳುಗಳ ಕಾಟ ಜಾಸ್ತಿಯಾಗಿದೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ. ಈ ಕೀಟವು ಹೊಸದೇನಲ್ಲ, ಇದು ಮೊದಲಿನಿಂದಲೂ ಇದೆ. ಕೀಟದಿಂದಾಗಿ ಅಡಿಕೆ ಬೆಳೆಗಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ'' ಎಂದು ತಿಳಿಸಿದರು.
ನಿರ್ವಹಣೆ ಇಲ್ಲದ ತೋಟಗಳಲ್ಲಿ ಹೆಚ್ಚಿನ ಹಾವಳಿ: ''ರೈತರು ಸಾಗುವಳಿ ಮಾಡುವಾಗ ಇರಬಹುದು ಅಥವಾ ಇತರೆ ಕೆಲಸ ಮಾಡುವ ಸಂದರ್ಭದಲ್ಲಿ ಅಡಿಕೆ ಸಸಿ, ಮರದ ಕಾಂಡಕ್ಕೆ ಗಾಯಗಳಾದರೆ, ಈ ಕೀಟವು ಅದರ ಮೂಲಕ ಮರದೊಳಗೆ ಪ್ರವೇಶಿಸುತ್ತದೆ. ತೋಟಗಳ ನಿರ್ವಹಣೆ ಹಾಗೂ ಅಡಕೆ ಮರಗಳ ಸರಿಯಾದ ನಿರ್ವಹಣೆ ಇರದಿರುವ ಕಡೆಗಳಲ್ಲಿ ಈ ಕೀಟಗಳ ಹಾವಳಿ ಹೆಚ್ಚಾಗಿರುತ್ತದೆ. ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ಹಾಗೂ ಶಿಕಾರಿಪುರದ ಕೆಲ ಭಾಗಗಳಲ್ಲಿ ಈ ಹುಳುಗಳು ಜಾಸ್ತಿಯಾಗಿವೆ. ಇದರಿಂದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಅಡಿಕೆ ಸಂಶೋಧನಾ ಕೇಂದ್ರದ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ, ಬೆಳೆಗಾರರಿಗೆ ಅದರ ನಿರ್ವಹಣೆ ಹೇಗೆ ಮಾಡಬಹುದು ಎಂಬುದನ್ನು ತಿಳಿಸಿದ್ದಾರೆ'' ಎಂದರು.

ಅಡಿಕೆ ಸಂಶೋಧನಾ ಕೇಂದ್ರದ ಹಿರಿಯ ಸಂಶೋಧನಾ ಸಹಾಯಕರಾದ ಡಾ.ಸ್ವಾತಿ ಅವರು ಮಾತನಾಡಿ, ''ಅಡಿಕೆ ಬೆಳೆಯ ವಿಸ್ತೀರ್ಣ ಹೆಚ್ವಾದಂತೆ ಅದಕ್ಕೆ ಬರುವ ಕೀಟಗಳ ಪ್ರಮಾಣವೂ ಸಹ ಅಧಿಕವಾಗುತ್ತಿದೆ. ಇದಕ್ಕೂ ಮುನ್ನ ರಸ ಹೀರುವ ಕೀಟ, ಎಲೆ ತಿನ್ನುವ ಕೀಟಗಳ ಕಾಟ ಜಾಸ್ತಿ ಇರುತ್ತಿತ್ತು. ಈ ಕೆಂಪು ಮೂತಿ ಹುಳು ಮುಂಚೆಯೆಲ್ಲಾ ತೆಂಗಿನ ಮರದಲ್ಲಿ ಮಾತ್ರ ಕಂಡು ಬರುತ್ತಿತ್ತು. ಆದರೀಗ, ಅದು ಅಡಿಕೆಗೂ ಬಾಧೆಯಾಗಿ ಕಾಡುತ್ತಿದೆ'' ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಆಂಧ್ರ, ತೆಲಂಗಾಣದ ಭತ್ತ ಎಂಟ್ರಿ : 'ಭತ್ತದ ಕಣಜ' ದಾವಣಗೆರೆಯಲ್ಲಿ ಪಾತಾಳಕ್ಕೆ ಕುಸಿದ ಭತ್ತದ ಧಾರಣೆ, ರೈತರು ಕಂಗಾಲು
ಗಾಯವಾದ ಅಡಿಕೆ ಮರಗಳಿಗೆ ಬೇಗ ಬಾಧಿಸುವ ಹುಳು: ''ಗಾಯವಾಗಿರುವ ಅಡಿಕೆ ಮರಗಳಿಗೆ ಇದು ಬೇಗ ತಗುಲುತ್ತದೆ. ಅಲ್ಲದೆ, ಮಳೆ ನೀರು ಸರಾಗವಾಗಿ ಹೋಗದ ಜಮೀನಿನಲ್ಲಿಯೂ ಇದು ಹೆಚ್ಚಾಗಿ ಕಂಡುಬರುತ್ತದೆ. ನಿಂತ ನೀರಿನಲ್ಲಿ ಮರ ಕೊಳೆತಾಗ, ಅದಕ್ಕೆ ಕೀಟ ಬೇಗ ಆಕರ್ಷಿತವಾಗುತ್ತದೆ. ಈ ಕೀಟ 4ರಿಂದ 5 ವರ್ಷದ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಕೀಟಬಾಧಿತ ಅಡಿಕೆ ಮರಗಳ ಲಕ್ಷಣವೆಂದರೆ, ಮರದ ಎಲೆಗಳು ಹಾಗೂ ಸುಳಿಯೂ ಸಹ ಹಳದಿ ಬಣ್ಣಕ್ಕೆ ತಿರುಗುತ್ತದೆ. ಜೋರಾಗಿ ಗಾಳಿ ಬೀಸಿದರೆ ಅಥವಾ ಮುಟ್ಟಿದರೂ ಮರಗಳು ಏಕಾಏಕಿ ಬಿದ್ದು ಹೋಗುತ್ತವೆ'' ಎಂದು ವಿವರಿಸಿದರು.

ಬಲೆ ಹಾಕಿ ಹುಳು ಹತೋಟಿಗೆ ತರಬಹುದು: ''ಅಡಿಕೆ ಮರದ ಬುಡದಿಂದಲೂ ರಂಧ್ರಗಳಾಗಿ, ಅದರಿಂದ ದ್ರವ ಸೋರುತ್ತಿರುತ್ತದೆ. ಅಲ್ಲದೆ, ಕಾಂಡದ ನಾರಿನ ಅಂಶವೂ ಹೊರಬರುತ್ತದೆ. ಇದರ ನಿಯಂತ್ರಣವೆಂದರೆ, ಅಕ್ಕಪಕ್ಕದ ತೋಟದವರೆಲ್ಲ ಸೇರಿಕೊಂಡು ಹತೋಟಿ ಮಾಡಬಹುದು. ಕಾಂಡ ಹಾಗೂ ಸುಳಿಯಲ್ಲಿ ರಂಧ್ರಗಳು ಕಂಡುಬಂದರೆ, ರೈತರು ಉದ್ದನೆಯ ತಂತಿಯಿಂದ ಕೀಟವನ್ನು ಹೊರಕ್ಕೆ ತೆಗೆಯಬೇಕು. ಇಲ್ಲವಾದರೆ, ಕ್ಲೋರೊಜಿನ್ 18.5 ಎಸ್ಸಿ ಅನ್ನು ಪ್ರತಿ ನಾಲ್ಕು ಮಿ.ಲೀ.ಯಷ್ಟು ಪ್ರತಿ ಲೀಟರ್ ನೀರು ಅಥವಾ ನಾಲ್ಕು ಮಿ.ಲೀ.ಯಷ್ಟು ಇಂಡಾಕ್ಸಾಕಾರ್ಬ್ 14.5 ಅನ್ನು ಒಂದು ಲೀಟರ್ ನೀರಿನೊಂದಿಗೆ ಮಿಕ್ಸ್ ಮಾಡಿ, ಮರದ ರಂಧ್ರಗಳಿಗೆ ಹಾಕುವುದರಿಂದ ಈ ಕೀಟವನ್ನು ನಿಯಂತ್ರಿಸಬಹುದು. ಅಲ್ಲದೆ, ಎರಡು ಮಿ.ಲೀ.ನಷ್ಟು ಕ್ಲೋರೋಫೈರಿಪಾಸ್ ಅನ್ನು ಒಂದು ಲೀಟರ್ ನೀರಿನೊಂದಿಗೆ ಬೆರೆಯಿಸಿ ರಂಧ್ರ ಇರುವ ಜಾಗಕ್ಕ ಹಾಕಿ, ಮಣ್ಣಿನಿಂದ ಮುಚ್ಚಬಹುದಾಗಿದೆ. ಇದಲ್ಲದೆ, ಪ್ರತಿ ಎಕರೆಗೆ ಎರಡು ಮೋಹಕ ಬಲೆಯನ್ನು ಹಾಕಿ, ಕೆಂಪು ಮೂತಿ ಹುಳವನ್ನು ಹತೋಟಿಗೆ ತರಬಹುದು. ಈ ಬಲೆಯನ್ನು ಪ್ರತಿ 6 ತಿಂಗಳಿಗೊಮ್ಮೆ ಬದಲಾಯಿಸುತ್ತಿರಬೇಕು'' ಎಂದು ಡಾ.ಸ್ವಾತಿ ಮಾಹಿತಿ ನೀಡಿದರು.
ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚುತ್ತಿವೆ ಚಿಕೂನ್ಗುನ್ಯಾ ಪ್ರಕರಣಗಳು; ನಿರ್ದಿಷ್ಟ ಚಿಕಿತ್ಸೆ ಇಲ್ಲದ ಈ ರೋಗದ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ