ಬೆಂಗಳೂರು : ಮದ್ಯಪಾನಕ್ಕೆ ಹಣ ಕೊಡದಿದ್ದಕ್ಕೆ ಸಿಟ್ಟಿಗೆದ್ದ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಗೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ನಗರದ ಕೊತ್ತನೂರು ಠಾಣೆ ವ್ಯಾಪ್ತಿಯ ಬಿಳಿಶಿವಾಲೆ ಬಳಿ ಫೆಬ್ರವರಿ 24ರಂದು ನಡೆದಿದೆ.
ಆನಂದ್ ಎಂಬಾತ ನಾಗಲಕ್ಷ್ಮಿ ಎಂಬವರ ಎಡ ಭಾಗದ ಕಿವಿಯಿಂದ ಗಲ್ಲದವರೆಗೆ ಚಾಕುವಿನಿಂದ ಇರಿದಿದ್ದಾನೆ. ಆರೋಪಿ ಆನಂದ್ನನ್ನು ಬಂಧಿಸಲಾಗಿದೆ ಎಂದು ಕೊತ್ತನೂರು ಪೊಲೀಸರು ತಿಳಿಸಿದ್ದಾರೆ.
ಕೆ.ಆರ್.ಪುರಂನತ್ತ ಹೊರಟಿದ್ದ ನಾಗಲಕ್ಷ್ಮಿ ಅವರು ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಬಿಳಿಶಿವಾಲೆ ಸರ್ಕಲ್ ಬಳಿ ಕುಳಿತಿದ್ದರು. ಅದೇ ಸಂದರ್ಭದಲ್ಲಿ ನಾಗಲಕ್ಷ್ಮಿಯವರ ಬಳಿ ಬಂದಿದ್ದ ಆನಂದ್, ಹಣ ಕೊಡುವಂತೆ ಕೇಳಿದ್ದ. ಆ ಅಪರಿಚಿತ ವ್ಯಕ್ತಿಗೆ ನಾಗಲಕ್ಷ್ಮಿ ಹಣ ನೀಡಿರಲಿಲ್ಲ. ಆಗ ಸ್ಥಳದಿಂದ ತೆರಳಿದ್ದ ಆತ, ಕೆಲ ನಿಮಿಷಗಳ ಬಳಿಕ ಚಾಕು ಸಮೇತ ಬಂದು ನಾಗಲಕ್ಷ್ಮಿ ಅವರ ಎಡಕಿವಿಯಿಂದ ಗಲ್ಲದವರೆಗೂ ಇರಿದಿದ್ದಾನೆ. ತಕ್ಷಣ ಸ್ಥಳೀಯರ ನೆರವಿನಿಂದ ಪಾರಾದ ನಾಗಲಕ್ಷ್ಮಿ ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ತುಮಕೂರು: ಶಿಶು ಮಾರಾಟ, ಪೋಷಕರು ಸೇರಿ ಐವರ ಬಂಧನ
ಕುಡಿತದ ಚಟಕ್ಕೆ ಬಿದ್ದಿದ್ದ ಆರೋಪಿ ಆನಂದ್, ಕಂಡ ಕಂಡವರ ಬಳಿ ಹಣ ಕೇಳುತ್ತಿದ್ದ. ಅದೇ ರೀತಿ ನಾಗಲಕ್ಷ್ಮಿ ಅವರ ಬಳಿಯೂ ಹಣ ಕೇಳಿದ್ದ. ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದಿದ್ದ ಎಂದು ಪೊಲೀಸರು ತಿಳಿಸಿದರು.
ಇದನ್ನೂ ಓದಿ: ಮಂಡ್ಯ: ಬ್ಯಾಂಕ್ ದರೋಡೆಗೆ ವಿಫಲ ಯತ್ನ