ಅಂಜನಾದ್ರಿ ಬೆಟ್ಟದಲ್ಲಿ 18ರ ಯುವಕ ಹೃದಯಸ್ತಂಭನದಿಂದ ಸಾವು
ಅಂಜನಾದ್ರಿ ಬೆಟ್ಟ ಹತ್ತುವಾದ ಯುವಕನೊಬ್ಬನಿಗೆ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾನೆ.

Published : January 29, 2025 at 7:01 PM IST
ಗಂಗಾವತಿ (ಕೊಪ್ಪಳ): ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪುರದ ಬಳಿ ಇರುವ ಅಂಜನಾದ್ರಿ ದೇಗುಲವನ್ನು ಮೆಟ್ಟಿಲುಗಳ ಮೂಲಕ ಏರುವಾಗ ಹೃದಯಾಘಾತಕ್ಕೀಡಾದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.
ಮೃತ ಯುವಕನನ್ನು ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿರುವ ಯುವಜನಸೇವಾ ಇಲಾಖೆಯ ತರಬೇತಿದಾರ ಸುರೇಶ್ ಯಾದವ್ ಪುತ್ರ ಜಯೇಶ ಯಾದವ್ (18) ಎಂದು ಗುರುತಿಸಲಾಗಿದೆ. ಈ ಯುವಕ ಅಂಜನಾದ್ರಿ ಸಮೀಪದ ಮತ್ತೊಂದು ಪುಣ್ಯ ಕ್ಷೇತ್ರ ಹುಲಗಿಯ ನಿವಾಸಿ ಎಂದು ತಿಳಿದು ಬಂದಿದೆ.
ಪ್ರೌಢ ಶಾಲೆ ಮತ್ತು ಕಾಲೇಜು ಹಂತದಲ್ಲಿ ತನ್ನೊಂದಿಗೆ ವಿದ್ಯಾಭ್ಯಾಸ ಮಾಡಿದ ಸ್ನೇಹಿತರೊಂದಿಗೆ ಅಂಜನಾದ್ರಿಯ ಹನುಮಪ್ಪನ ದರ್ಶನಕ್ಕೆಂದು ಬಂದಿದ್ದಾನೆ. ಬೆಟ್ಟ ಏರುವಾಗ ಎದುರುಸಿರು ಹಾಕುತ್ತಿದ್ದ ಯುವಕನಿಗೆ ಇದ್ದಕ್ಕಿದ್ದಂತೆ ಹೃದಯ ಸ್ತಂಭನವಾಗಿದೆ. ಸಹಪಾಠಿ ಸ್ನೇಹಿತರು ಹಾಗೂ ಹನುಪ್ಪನ ದರ್ಶನಕ್ಕೆ ಬಂದಿದ್ದ ಸಹಯಾತ್ರಿಕರು, ಹೃದಯ ಸ್ತಂಭನಕ್ಕೆ ಒಳಗಾದ ಯುವಕನಿಗೆ ಪ್ರಾಥಮಿಕ ಚಿಕಿತ್ಸೆ ಕೊಟ್ಟರೂ ಫಲಕಾರಿಯಾಗಿಲ್ಲ. ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಅಂಜನಾದ್ರಿ ಬೆಟ್ಟದಲ್ಲಿನ ದೇಗುಲದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಜಯೇಶನನ್ನು ಆನೆಗೊಂದಿ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಅಲ್ಲಿನ ವೈದ್ಯರು, ಪರಿಶೀಲಿಸಿ ಯುವಕ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಬಳಿಕ ಮೃತ ಯುವಕನ ಪಾರ್ಥಿವ ಶರೀರವನ್ನು ಶವಪರೀಕ್ಷೆಗಾಗಿ ಗಂಗಾವತಿಯ ಉಪ ವಿಭಾಗದ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಚಾಮರಾಜನಗರ: 3ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು - 8 YEAR OLD STUDENT DIES

