ರಾಯಚೂರು : ಐತಿಹಾಸಿಕ ಹಿನ್ನೆಲೆಯುಳ್ಳ ಗಬ್ಬೂರಿನ ಶ್ರೀ ಬೂದಿ ಬಸವೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಇಲ್ಲಿ ಸತತ 20 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯುತ್ತಿದ್ದು, ಇದುವರೆಗೆ 2600 ಜೋಡಿಗಳ ಮದುವೆಯಾಗಿದೆ.
ಇಂದು 175 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ 136 ಜೋಡಿಗಳು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶ್ರೀಮಠದ ಪೀಠಾಧಿಪತಿಗಳಾದ ಬೂದಿಬಸವ ಶಿವಾಚಾರ್ಯ ಸ್ವಾಮಿಗಳ ತುಲಾಭಾರ ನೆರವೇರಿಸಲಾಯಿತು. ಇದಕ್ಕೂ ಮುನ್ನ ವಟುಗಳಿಗೆ ಅಯ್ಯಾಚಾರ ದೀಕ್ಷೆ ನೀಡಲಾಯಿತು.
ಫೆಬ್ರವರಿ 5 ರಿಂದ ಪ್ರಾರಂಭವಾಗಿದ್ದು 13ರ ವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ. ಫೆಬ್ರವರಿ 9 ರಂದು ಮಠದ ಆವರಣದಲ್ಲಿ ಮಹಾರಥೋತ್ಸವ ಜರುಗಲಿದೆ. ಮಹಾರಥೋತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.
ಈ ಬಗ್ಗೆ ಬೂದಿ ಬಸವೇಶ್ವರ ಮಠದ ಪೀಠಾಧಿಪತಿ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ, 'ಈ ಜೀವ ಜೀವನ ಯಾವಾಗಲು ಶಾಶ್ವತವಲ್ಲ. ಹುಟ್ಟು ಮತ್ತು ಸಾವು ಮಾತ್ರ ಸಾಮೂಹಿಕವಾಗಿದೆ. ನಡುವೆ ಎಂಬುದು ಕೂಡ ಸಾಮೂಹಿಕವಾಗಬೇಕು. ಆಡಂಬರದ ಅಗತ್ಯವಿಲ್ಲ. ಬಡವರಿಗಿಂತ ಸ್ಥಿತಿವಂತರು ಇಂತಹ ಮದುವೆ ಮಾಡಿಕೊಂಡಾಗ ಸಾಮೂಹಿಕ ವಿವಾಹಕ್ಕೆ ಶೋಭೆ ಬರುತ್ತದೆ. ಮುಂದಿನ ದಿನಗಳಲ್ಲಿ ನಾವು ನೀವೆಲ್ಲಾ ಸಾಮೂಹಿಕ ವಿವಾಹಕ್ಕೆ ಆದ್ಯತೆ ನೀಡೋಣ. ಸರ್ಕಾರ ಪ್ರತಿವರ್ಷ 50,000 ಪ್ರೋತ್ಸಾಹ ಧನ ನೀಡುತ್ತಿದೆ' ಎಂದು ತಿಳಿಸಿದರು.
ಇದನ್ನೂ ಓದಿ : ಸುತ್ತೂರು ಜಾತ್ರಾ ಮಹೋತ್ಸವ : ಸಾಮೂಹಿಕ ವಿವಾಹದಲ್ಲಿ ನವ ಜೀವನಕ್ಕೆ ಕಾಲಿಟ್ಟ 178 ಜೋಡಿಗಳು - MASS WEDDING