ಬೆಂಗಳೂರು: ಒಂದು ಪೈಸೆ ಲಂಚಕ್ಕೆ ಅವಕಾಶ ನೀಡದೆ ರಾಜ್ಯದ ಇತಿಹಾಸದಲ್ಲಿ ಏಕಕಾಲಕ್ಕೆ ಮೊದಲ ಬಾರಿಗೆ 1,000 ಜನರನ್ನು ಗ್ರಾಮ ಆಡಳಿತ ಅಧಿಕಾರಿಗಳಾಗಿ ನೇಮಕಾತಿ ಮಾಡಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್ ನಲ್ಲಿ ಇಂದು ನೂತನವಾಗಿ ಆಯ್ಕೆಯಾಗಿರುವ 1,000 ಗ್ರಾಮ ಆಡಳಿತ ಅಧಿಕಾರಿಗಳಿಗೆ ನೇಮಕಾತಿ ಆದೇಶ, ಕಂದಾಯ ಇಲಾಖೆಯನ್ನು ಡಿಜಿಟಲೀಕರಿಸುವ ನಿಟ್ಟಿನಲ್ಲಿ 4,000 ಕ್ರೋಮ್ ಬುಕ್ ವಿತರಣೆ ಜೊತೆಗೆ ಇಲಾಖೆಯ ಎರಡು ವರ್ಷದ ʼಸಾಧನೆಯ ಹಾದಿʼ ಪುಸ್ತಕ ಬಿಡುಗಡೆ ಮಾಡಲಾಯಿತು.

ಈ ಹಿಂದೆ ಪಿಯುಸಿ ಅಂಕದ ಆಧಾರದಲ್ಲಿ ಆಯಾ ಜಿಲ್ಲೆಯಲ್ಲಿ ಸೀಮಿತ ಸ್ಥಾನಗಳಿಗೆ ಗ್ರಾಮಾಡಳಿತಾಧಿಕಾರಿಗಳ ನೇಮಕಾತಿ ಆಗುತ್ತಿತ್ತು. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವು ಜಿಲ್ಲೆಗಳಲ್ಲಿ ಪಾರದರ್ಶಕತೆ ಇರಲಿಲ್ಲ ಎಂಬ ದೂರು ಇತ್ತು. ಹೀಗಾಗಿ ನಮ್ಮ ಸರ್ಕಾರ ಬಂದ ಮೇಲೆ ಇಡೀ ರಾಜ್ಯದಲ್ಲಿ ಒಂದೇ ಬಾರಿಗೆ ಪಾರದರ್ಶಕವಾಗಿ ಈ ನೇಮಕಾತಿ ನಡೆದಿದೆ. ನೇಮಕಾತಿಯಲ್ಲಿ ಎಲ್ಲ ಜಿಲ್ಲೆಯವರಿಗೂ ಸಮಾನ ಅವಕಾಶ ಸಿಗಬೇಕು ಎಂಬ ದೃಷ್ಟಿಯಲ್ಲಿ ಕ್ರಮವಹಿಸಲಾಯಿತು ಎಂದರು.
ಕೆಇಎ ಮೂಲಕ ಅರ್ಜಿ ಆಹ್ವಾನಿಸಿ, ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಸಲಾಗಿದೆ. ಈ ಹುದ್ದೆಗೆ 6,33,916 ಜನ ಅರ್ಜಿ ಸಲ್ಲಿಸಿದ್ದು, ಶೇ. 0.0016 ಜನ ಮಾತ್ರ ಆಯ್ಕೆಯಾಗಿದ್ದಾರೆ. ಸಂಪೂರ್ಣ ಪಾರದರ್ಶಕವಾಗಿ ಈ ಹುದ್ದೆ ನೇಮಕಾತಿ ನಡೆಸಲಾಗಿದೆ ಎಂಬ ಸಂತಸ ನನಗೆ ಇದೆ. ಮೊದಲ ಬಾರಿಗೆ ಸಾವಿರ ಜನ ಸರ್ಕಾರಿ ಸೇವೆಗೆ ಕಾಲಿಡುತ್ತಿದ್ದಾರೆ. ಅವರು ಮೊದಲ ಸಲ ವಿಧಾನಸೌಧಕ್ಕೆ ಕಾಲಿಟ್ಟರೆ ಅವರಿಗೆ ವಿಧಾನಸೌಧ ಕಟ್ಟಿದ ಆಶಯ ಅರ್ಥವಾಗುತ್ತೆ, ಆಗಲಾದರೂ ಅವರು ಜನಪರ ಕೆಲಸ ಮಾಡುತ್ತಾರೆ ಎಂಬ ಉದ್ದೇಶದಿಂದಲೇ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿದೆ” ಎಂದರು.

ಡಿಜೀಟಲೀಕರಣಕ್ಕೆ ಒತ್ತು: ದಿನ ಬೆಳಗಾದರೆ ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕು ಕಚೇರಿಗಳಿಗೆ ಟಪಾಲು ಕೆಲಸದಲ್ಲೇ ಸಮಯ ವ್ಯರ್ಥವಾಗುತ್ತದೆ. ಈಗಿನ ಡಿಜಿಟಲ್ ಕಾಲದಲ್ಲಿ ಈ ವ್ಯವಸ್ಥೆಗೆ ಅರ್ಥವಿಲ್ಲ. ಶೀಘ್ರ ಆಡಳಿತ ಮತ್ತು ಸುಲಭ ಸೇವೆಗಾಗಿ ಡಿಜಿಟಲೀಕರಣಕ್ಕೆ ಒತ್ತು ನೀಡಿ, ಲ್ಯಾಪ್ಟಾಪ್ ಅನ್ನು ನೀಡಲಾಗುತ್ತಿದೆ. ಇದರಿಂದ ಜನರಿಗೂ ಕಚೇರಿ ಅಲೆಯುವ ಸಂಕಷ್ಟ ತಪ್ಪಲಿದ್ದು, ವಿಎಯಿಂದ ಸಚಿವರವರೆಗೆ ಎಲ್ಲಾ ದಾಖಲೆಗಳು ಡಿಜಿಟಲ್ ರೂಪದಲ್ಲೇ ಕೆಲಸ ಆಗಬೇಕು. ಇದರಿಂದ ಸಮಯ ವ್ಯರ್ಥ ಆಗುವುದು ತಪ್ಪುತ್ತದೆ.
ಮೊದಲ ಹಂತದಲ್ಲಿ 4000 ಲ್ಯಾಪ್ಲಾಟ್ ವಿತರಣೆ ಮಾಡಲಾಗುತ್ತಿದ್ದು, ರೈತರಿಗೆ ಅನುಕೂಲವಾಗುವಂತೆ ಭ್ರಷ್ಟಾಚಾರ ಮುಕ್ತವಾಗಿ ಅವರಿಗೆ ಸೌಲಭ್ಯವನ್ನು ನೀಡುವ ಕೆಲಸವನ್ನು ಗ್ರಾಮಾಡಳಿತಾಧಿಕಾರಿಗಳು ಮಾಡಬೇಕು ಎಂದರು.
ಇದನ್ನೂ ಓದಿ: ಸಾರ್ವಜನಿಕ ಆಸ್ತಿಗಳ ರಕ್ಷಣೆ : ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕದಿಂದ ಆಗುವ ಅನುಕೂಲವೇನು?
ಇದನ್ನೂ ಓದಿ: ಭೂಸುರಕ್ಷಾ ಯೋಜನೆಯಡಿ ರಾಜ್ಯದ ಎಲ್ಲಾ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನ್ಲೈನ್ನಲ್ಲಿ ಅಪ್ಲೋಡ್; ಸಚಿವ ಕೃಷ್ಣಬೈರೇಗೌಡ