ರಾಯಚೂರು: "ಜಾತಿ ಗಣತಿ ವರದಿಯ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ವರದಿಯನ್ನು ಕ್ಯಾಬಿನೆಟ್ನಲ್ಲಿ ಮಂಡಿದ್ದಾರೆ. ಅದನ್ನು ಪರಿಶೀಲಿಸಲು ಎಲ್ಲಾ ಸಚಿವರಿಗೂ ವರದಿಯ ಪ್ರತಿ ಕೊಟ್ಟಿದ್ದಾರೆ. ನಮ್ಮ ಅಭಿಪ್ರಾಯ ತಿಳಿಸಲು ಮತ್ತೊಂದು ಸಭೆ ಕರೆಯುತ್ತೇವೆ, ಅಲ್ಲಿ ಜನರ ಅಭಿಪ್ರಾಯದ ಬಗ್ಗೆಯೂ ಚರ್ಚಿಸಿ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳೋಣ ಅಂತ ಸಿಎಂ ಮತ್ತು ಡಿಸಿಎಂ ತಿಳಿಸಿದ್ದಾರೆ" ಎಂದು ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದಲ್ಲಿಂದು ಬಸವ ಜಯಂತಿ ಆಚರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಎಲ್ಲಾ ಜಾತಿಗೂ ಸೇರಿದ 1.25 ಲಕ್ಷ ಸಿಬ್ಬಂದಿ ಸಮೀಕ್ಷೆ ನಡೆಸಿದ್ದಾರೆ. ಜನರು ಏನು ಹೇಳಿದ್ದಾರೆ ಆ ಮಾಹಿತಿಯನ್ನು ದಾಖಲಿಸಿಕೊಂಡಿದ್ದಾರೆ. ಆ ಮಾಹಿತಿಯನ್ನು ಕ್ರೋಢೀಕರಿಸಿ ಜಾತಿ ಗಣತಿ ವರದಿ ಸಿದ್ಧಪಡಿಸಿದ್ದಾರೆ, ಅದನ್ನು ಕ್ಯಾಬಿನೆಟ್ನಲ್ಲಿ ಮಂಡನೆ ಮಾಡಿದ್ದಾರೆ. ಅದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಮುಕ್ತ ಚರ್ಚೆಗೆ ಅವಕಾಶ ನೀಡಲು ಸರ್ಕಾರ ಬದ್ಧವಾಗಿದೆ" ಎಂದರು.
"ರಾಜ್ಯದ ಏಳು ಕೋಟಿ ಜನರಿಗೆ ಅನ್ಯಾಯ ಆಗದಂತೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇಡೀ ರಾಷ್ಟ್ರಾದ್ಯಂತ ಜಾತಿ ಗಣತಿ ಮಾಡಬೇಕೆಂಬುವುದು ನಮ್ಮ ಪಕ್ಷ ನಿಲುವಾಗಿದೆ. ರಾಜ್ಯ ಹಿತದೃಷ್ಟಿಯಿಂದ ಜಾತಿ ಗಣತಿ ಮಾಡಲಾಗಿದೆ. ಈ ಬಗ್ಗೆ ಎಲ್ಲಾ ಪಕ್ಷದ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಸಮರ್ಥವಾಗಿ, ಯಾರಿಗೂ ತೊಂದರೆ ಆಗದಂತೆ ಜಾತಿ ಗಣತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ" ಎಂದು ತಿಳಿಸಿದರು.
ಶಾಸಕ ಡಾ.ಶಿವರಾಜ್ ಪಾಟೀಲ್ ಮಾತನಾಡಿ, "ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳು ಮುಂದಿನ ಹೆಜ್ಜೆ ಬಗ್ಗೆ ಸ್ಪಷ್ಟತೆಯಿಂದ ಇದ್ದಾರೆ. ಪಾಕಿಸ್ತಾನಕ್ಕೆ ನಾವು ಯಾವ ರೀತಿ ಪಾಠ ಕಲಿಸಬೇಕು. ಆ ರೀತಿ ಪಾಠವನ್ನು ಪ್ರಧಾನಿ ಕಲಿಸುತ್ತಾರೆ.
ನಾವು ಜಿಲ್ಲೆಯಿಂದ 500 ಜನರ ಯುವ ಪಡೆ ಸಿದ್ದ ಮಾಡುತ್ತಿದ್ದೇವೆ. ಸೈನಿಕರಿಕೆ ರಕ್ತ ಅವಶ್ಯಕತೆ ಇದ್ದರೆ, ಅಲ್ಲಿನ ಜನರಿಗೆ ಸಹಾಯಬೇಕಿದ್ರೆ ನಮ್ಮ ಪಡೆ ಸಿದ್ಧವಾಗಿರುತ್ತೆ. ಪ್ರಧಾನಿ ಕರೆ ಕೊಟ್ರೆ ನಾವು ಹೊರಡಲು ಸಿದ್ಧವಾಗಿದ್ದೇವೆ" ಎಂದರು.
"ಪ್ರಧಾನಿ ಮೋದಿ ಎಲ್ಲಿದ್ದಾರೆ ಅಂತ ಕೇಳುವ ರಾಹುಲ್ ಗಾಂಧಿ ದೇಶದಲ್ಲೇ ಇದ್ದಾರಾ?. ರಾಜ್ಯದಲ್ಲಿ ಭ್ರಷ್ಟಾಚಾರ, ಜಾತಿ ಗಣತಿ ಗೊಂದಲ, ದೇಶವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಹಿಂದೂ ಸಮಾಜದ ವಿರುದ್ಧ ಹೇಳಿಕೆಗಳು ಬರುತ್ತಿವೆ. ಮಂತ್ರಿಗಳು, ಮುಖ್ಯಮಂತ್ರಿಗಳು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ರಾಹುಲ್ ಗಾಂಧಿ ಯಾವ ಲೋಕದಲ್ಲಿದ್ದಾನೋ ಗೊತ್ತಿಲ್ಲ" ಎಂದು ಲೇವಡಿ ಮಾಡಿದರು.
ಇದಕ್ಕೂ ಮೊದಲು ಬಸವ ಜಯಂತಿ ಪ್ರಯುಕ್ತ ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣ ಪ್ರತಿಮೆಗೆ ವಿಶೇಷ ಪೂಜೆ ನೆರವೇರಿಸಿ ಮಾಲಾರ್ಪಣೆ ಮಾಡಲಾಯಿತು. ಕಿಲ್ಲೇ ಬೃಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆಯ ಶ್ರೀ ಅಭಿನವ ರಾಚೋಟಿ ವೀರಶಿವಾಚಾರ್ಯ ಸ್ವಾಮೀಜಿ, ಸಚಿವ ಎನ್.ಎಸ್.ಬೋಸರಾಜು, ಶಾಸಕ ಡಾ.ಶಿವರಾಜ್ ಪಾಟೀಲ್, ಸಂಸದ ಜಿ.ಕುಮಾರನಾಯಕ, ಜಿಲ್ಲಾಧಿಕಾರಿ ನಿತೀಶ್.ಕೆ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಜಾತಿ ಗಣತಿ ಜೊತೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಆಗ್ರಹ
ಇದನ್ನೂ ಓದಿ: ಮುಂದಿನ ಜನ ಗಣತಿಯ ಜೊತೆಗೆ ಜಾತಿ ಗಣತಿಯನ್ನೂ ನಡೆಸಲು ಕೇಂದ್ರ ಸರ್ಕಾರ ತೀರ್ಮಾನ