Top Tips for Honeymoon Travel: ಮದುವೆ ಆರಂಭದೊಂದಿಗೆ ದಂಪತಿಗಳು ತಮ್ಮ ಹನಿಮೂನ್ಗೆ ಮುಂಚಿತವಾಗಿಯೇ ಪ್ಲಾನ್ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಮದುವೆಯ ನಂತರ ಹನಿಮೂನ್ಗೆ ಹೋಗುವ ಪ್ರವೃತ್ತಿ ಭಾರತದಲ್ಲಿ ವೇಗವಾಗಿ ಹೆಚ್ಚಾಗುತ್ತದೆ. ಹನಿಮೂನ್ ಒಂದು ವಿಶೇಷ ಪ್ರವಾಸವಾಗಿದ್ದು, ಅಲ್ಲಿ ಹೊಸದಾಗಿ ಮದುವೆಯಾದ ದಂಪತಿಗಳು ತಮ್ಮ ಮದುವೆಯನ್ನು ಸ್ಮರಣೀಯವಾಗಿ ಆಚರಿಸಲು ಮತ್ತು ಪರಸ್ಪರ ಗುಣಮಟ್ಟದ ಸಮಯವನ್ನು ಕಳೆಯಲು ಹೋಗುತ್ತಾರೆ. ಇದು ಅವರು ಪರಸ್ಪರ ಆಳವಾಗಿ ತಿಳಿದುಕೊಳ್ಳಲು ಹಾಗೂ ಪ್ರೀತಿಯ ಕ್ಷಣವನ್ನು ಅನುಭವಿಸಲು ಪ್ರಯತ್ನಿಸುವ ಕ್ಷಣವಾಗಿದೆ. ಕುಟುಂಬದಲ್ಲಿ ಸಂಬಂಧವನ್ನು ಬಲಪಡಿಸಲು ಸಂಗಾತಿಯೊಂದಿಗೆ ಸ್ವಲ್ಪ ಸಮಯ ಏಕಾಂಗಿಯಾಗಿ ಕಳೆಯುವುದು ಮುಖ್ಯವಾಗಿದೆ.
ಈ ಮಧುಚಂದ್ರದ ಕ್ಷಣಗಳು ಯಾವುದೇ ದಂಪತಿಗಳ ಜೀವನದ ಅತ್ಯಂತ ಅಮೂಲ್ಯ ಕ್ಷಣಗಳಾಗಿರಬಹುದು. ಹನಿಮೂನ್ ಪರಸ್ಪರ ಉತ್ತಮ ಸಮಯ ಕಳೆಯಲು ಮತ್ತು ದಂಪತಿಗಳ ಸಂಬಂಧವನ್ನು ಬಲಪಡಿಸಲು ಅತ್ಯುತ್ತಮ ಸಮಯವಾಗಿದೆ. ಹೆಚ್ಚಿನ ದಂಪತಿಗಳು ಮದುವೆಗೆ ಮೊದಲು ಒಬ್ಬರನ್ನೊಬ್ಬರು ಪೂರ್ತಿಯಾಗಿ ತಿಳಿದಿಕೊಂಡಿರುವುದಿಲ್ಲ. ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ಅವರಿಗೆ ಸಮಯವಿಲ್ಲ. ಇಬ್ಬರೂ ಪರಸ್ಪರ ತಿಳಿದುಕೊಳ್ಳಲು ಹಾಗೂ ಅರ್ಥಮಾಡಿಕೊಳ್ಳಲು ಹನಿಮೂನ್ ಪ್ರವಾಸ ಯೋಜಿಸಲಾಗಿದೆ. ಹಿಂದಿನ ದಿನಗಳಲ್ಲಿ ಹೀಗಿರಲಿಲ್ಲ, ಆದರೆ, ಈಗ ಹನಿಮೂನ್ ಒಂದು ಫ್ಯಾಷನ್ ಆಗಿ ಮಾರ್ಪಟ್ಟಿದೆ.
ನಿಮ್ಮ ವಿವಾಹದ ನಂತರ ಕೆಲವು ದಿನಗಳವರೆಗೆ ಕಳೆಯಲು ಬಯಸಿದ್ದರೆ, ನೀವು ದೇಶದಲ್ಲಿ ಬಜೆಟ್ ಸ್ನೇಹಿ ಹನಿಮೂನ್ ಅನ್ನು ಯೋಜಿಸುತ್ತಿದ್ದರೆ, ಸುರಕ್ಷತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಡಿ. ನಿಮ್ಮ ಹನಿಮೂನ್ ಪ್ರವಾಸವನ್ನು ಬುದ್ಧಿವಂತಿಕೆಯಿಂದ ಪ್ಲಾನ್ ಮಾಡಿಕೊಳ್ಳಿ. ಅಪರಿಚಿತ ಸ್ಥಳಗಳಿಗೆ ಹೋಗಲು ಮಾರ್ಗದರ್ಶಿಯ ಸಹಾಯವನ್ನು ಪಡೆದುಕೊಳ್ಳಬೇಕಾಗುತ್ತದೆ.
ಪರ್ವತ ಪ್ರದೇಶಗಳಿಗೆ ಹನಿಮೂನ್ಗೆ ಹೋಗಲು ಪ್ಲಾನ್ ಮಾಡುತ್ತಿದ್ದೀರಾ? ಈ ಎಚ್ಚರಿಕೆಗಳನ್ನು ವಹಿಸಿ:
- ನೀವು ಹನಿಮೂನ್ಗಾಗಿ ಯೋಜಿಸುವಾಗ ಯಾವುದೇ ರೀತಿಯಲ್ಲಿ ನಿಮ್ಮ ಸುರಕ್ಷತೆಯ ಬಗ್ಗೆ ರಾಜಿ ಮಾಡಿಕೊಳ್ಳಬಾರದು. ನೀವು ಪ್ರವಾಸವನ್ನು ಯೋಜಿಸಿದಾಗಲೆಲ್ಲಾ, ನಿಮ್ಮ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ.
- ನಿಮಗೆ ತಿಳಿಯದೇ ಇರುವ ಸ್ಥಳಗಳಿಗೆ ನೀವು ಹೋಗಬಾರದು. ಎರಡನೆಯದಾಗಿ ಹೋಟೆಲ್ ಬುಕ್ಕಿಂಗ್ನಿಂದ ಹಿಡಿದು ರಿಟರ್ನ್ ಟಿಕೆಟ್ವರೆಗೆ ಎಲ್ಲವನ್ನೂ ಮುಂಚಿತವಾಗಿ ಮಾಡಿಕೊಳ್ಳಿ. ಇದು ಪ್ರವಾಸದ ಸಮಯದಲ್ಲಿ ಒತ್ತಡವನ್ನು ಕಡಿಮೆ ಮಾಡುತ್ತದೆ.
- ಪರ್ವತದ ಪ್ರದೇಶಗಳಲ್ಲಿ ಪ್ರಯಾಣಿಸುವಾಗ ಹವಾಮಾನ ಪರಿಸ್ಥಿತಿಗಳನ್ನು ನೆನಪಿನಲ್ಲಿಡಿ. ಜೊತೆಗೆ ಹೋಟೆಲ್ ಸ್ಥಳವು ಪ್ರವಾಸಿ ಸ್ಥಳದಿಂದ ಎಷ್ಟು ದೂರದಲ್ಲಿದೆ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ.
- ನೀವು ಹೋಗುತ್ತಿರುವ ಸ್ಥಳದ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯಿರಿ, ಸ್ಥಳೀಯ ಜನರೊಂದಿಗೆ ಮಾತನಾಡಿ, ಇದರಿಂದ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದು ನಿಮಗೆ ತಿಳಿಯುತ್ತದೆ. ಎಲ್ಲಿಗೆ ಮತ್ತು ಹೇಗೆ ಹೋಗಬೇಕು ಅನ್ನೋದು ಗೊತ್ತಾಗುತ್ತೆ.
- ಪ್ರವಾಸಕ್ಕೆ ಹೋದ ಬಳಿಕ, ನಿಮ್ಮ ಲೈವ್ ಸ್ಥಳವನ್ನು ಖಂಡಿತವಾಗಿಯೂ ಕುಟುಂಬ ಸದಸ್ಯರು ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
- ಪ್ರವಾಸಕ್ಕೆ ಅಗತ್ಯವಿರುವ ದಾಖಲೆಗಳಾದ ಪಾಸ್ಪೋರ್ಟ್ ಮತ್ತು ವೀಸಾ ಮತ್ತು ಆಧಾರ್ ಕಾರ್ಡ್ ಅನ್ನು ಪರಿಶೀಲಿಸಿ.
- ಗುಡ್ಡಗಾಡು ಪ್ರದೇಶಗಳಲ್ಲಿ ಸಾಹಸ ಮಾಡುವಾಗ ಜಾಗರೂಕರಾಗಿರಿ, ಏಕೆಂದರೆ ರಸ್ತೆಗಳು ಅಂಕುಡೊಂಕಾದ ಮತ್ತು ಕಿರಿದಾಗಿರಬಹುದು. ತಾಪಮಾನ ಮತ್ತು ಗಾಳಿಯ ಒತ್ತಡವು ಎತ್ತರಕ್ಕೆ ಅನುಗುಣವಾಗಿ ಬದಲಾಗುತ್ತದೆ. ಸ್ಥಳಗಳು ಅಪಾಯಕಾರಿ ಮತ್ತು ನಿರ್ಜನವಾಗಿದ್ದರೆ, ಜಾಗರೂಕರಾಗಿರಿ.
- ನೀವು ಪರ್ವತದ ತಾಣಗಳಲ್ಲಿ ಹನಿಮೂನ್ಗೆ ಹೋಗುತ್ತಿದ್ದರೆ, ಖಂಡಿತವಾಗಿಯೂ ಸ್ಥಳೀಯ ಮಾರ್ಗದರ್ಶಿಯ ಸಹಾಯ ಪಡೆಯಿರಿ. ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಯಾಣಿಸುವುದು ಕೆಲವೊಮ್ಮೆ ಸವಾಲಿನದ್ದಾಗಿರಬಹುದು. ಸ್ಥಳೀಯ ಮಾರ್ಗದರ್ಶಿ ನಿಮ್ಮ ಪ್ರವಾಸವನ್ನು ಹೆಚ್ಚು ಆರಾಮದಾಯಕ ಮತ್ತು ಸುರಕ್ಷಿತವಾಗಿಸಬಹುದು.
ಹನಿಮೂನ್ಗಾಗಿ ಶಿಲ್ಲಾಂಗ್ಗೆ ಹೋಗುತ್ತಿದ್ದಾಗ ದಂಪತಿ ನಾಪತ್ತೆ: ಇತ್ತೀಚಿನ ದಿನಗಳಲ್ಲಿ ಇಂದೋರ್ ದಂಪತಿ ಕಾಣೆಯಾದ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಾಹಿತಿಯ ಪ್ರಕಾರ, ಮೇ 11ರಂದು ಇಂದೋರ್ನಲ್ಲಿ ಈ ಜೋಡಿಯ ವಿವಾಹವಾಗಿತ್ತು. ನವವಿವಾಹಿತ ದಂಪತಿ ರಾಜಾ ರಘುವಂಶಿ ಮತ್ತು ಅವರ ಪತ್ನಿ ಸೋನಮ್ ರಘುವಂಶಿ, ಶಿಲ್ಲಾಂಗ್ನಲ್ಲಿ ತಮ್ಮ ಹನಿಮೂನ್ನ ಸಮಯದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ಇಂದೋರ್ನಲ್ಲಿ ಈ ದಂಪತಿ ನಾಪತ್ತೆಗೆ ಕಾರಣವೇ ಎಂಬುದು ಇನ್ನು ತಿಳಿದಿಲ್ಲ. ವರದಿಗಳ ಪ್ರಕಾರ, ಯುವಕನ ಶವ ಪತ್ತೆಯಾಗಿದೆ. ಆದರೆ, ಅವರ ಪತ್ನಿ ಸೋನಮ್ ಇನ್ನೂ ಕಾಣೆಯಾಗಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರೆದಿದೆ. ಸೋನಮ್ ಮತ್ತು ರಾಜಾ ಪ್ರಕರಣ ಭಾರತದಲ್ಲಿ ಮೊದಲ ಪ್ರಕರಣವಲ್ಲ. ವಿವಿಧೆಡೆ ಈ ಹಿಂದೆಯೂ ಸಹ ದಂಪತಿಗಳು ಪ್ರವಾಸಕ್ಕೆ ಹೋಗಿ ಹಿಂತಿರುಗಲು ಸಾಧ್ಯವಾಗದ ಹಲವು ಪ್ರಕರಣಗಳು ವರದಿಯಾಗಿದ್ದವು.
ಇದನ್ನೂ ಓದಿ: ಸಂಗಾತಿಗಳಿಗೆ ಈ ಐದು ಪ್ರೇಮ ಭಾಷೆಗಳು ತಿಳಿದರೆ ಸಾಕು; ನಿಮ್ಮ ಬಂಧವು ಮತ್ತಷ್ಟು ಬಲವಾಗುತ್ತೆ