ನವದೆಹಲಿ: ಕಾಶ್ಮೀರವು ಇಸ್ಲಾಮಾಬಾದ್ನ ಕಂಠನಾಳ ಎಂಬ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರ ಹೇಳಿಕೆಗೆ ಭಾರತ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ವಿದೇಶಿ ವಸ್ತುಗಳು ಹೇಗೆ ಕಂಠನಾಳವಾಗಿರಲು ಸಾಧ್ಯ? ಇದು ಭಾರತದ ಕೇಂದ್ರಾಡಳಿತ ಪ್ರದೇಶ. ಆ ದೇಶವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಕಾಶ್ಮೀರದ ಪ್ರದೇಶಗಳನ್ನು ತೆರವುಗೊಳಿಸುವುದಷ್ಟೇ ಪಾಕಿಸ್ತಾನದೊಂದಿಗೆ ಕಾಶ್ಮೀರ ಹೊಂದಿರುವ ಏಕೈಕ ಸಂಬಂಧ." ಎಂದು ತಿರುಗೇಟು ನೀಡಿದೆ.
ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಹೇಳಿದ್ದೇನು?: ಮಂಗಳವಾರ ಇಸ್ಲಾಮಾಬಾದ್ನಲ್ಲಿ ಆಯೋಜಿಸಿದ್ದ ಸಾಗರೋತ್ತರ ಪಾಕಿಸ್ತಾನಿಗಳ ಸಮಾವೇಶದಲ್ಲಿ ಜನರಲ್ ಮುನೀರ್ ಈ ಮಾತುಗಳನ್ನಾಡಿದ್ದರು. "ಕಾಶ್ಮೀರ ಪಾಕಿಸ್ತಾನದ ಕಂಂಠನಾಳವಾಗಿದೆ. ದೇಶ ಅದನ್ನೆಂದೂ ಮರೆಯುವುದಿಲ್ಲ" ಎಂದು ಹೇಳಿದ್ದರು.
"1947ರಲ್ಲಿ ಸ್ವಾತಂತ್ರ್ಯದ ಸಮಯದಲ್ಲಿ ಭಾರತದ ವಿಭಜನೆಗೆ ಮೊಹಮ್ಮದ್ ಅಲಿ ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತವೇ ಕಾರಣ. ನಾವು ಉನ್ನತ ಸಿದ್ಧಾಂತ ಮತ್ತು ಸಂಸ್ಕೃತಿಗೆ ಸೇರಿದವರು ಮತ್ತು ಪಾಕಿಸ್ತಾನಿಗಳು ಜೀವನದ ಪ್ರತಿಯೊಂದು ಅಂಶಗಳಲ್ಲೂ ಹಿಂದೂಗಳಿಂದ ಭಿನ್ನವಾಗಿದ್ದಾರೆ ಎಂದು ನಿಮ್ಮ ಮಕ್ಕಳಿಗೆ, ನಮ್ಮ ಭವಿಷ್ಯದ ಪೀಳಿಗೆಗೆ ಹೇಳಿ" ಎಂದು ದ್ವಿರಾಷ್ಟ್ರ ಸಿದ್ಧಾಂತವನ್ನು ಸಮರ್ಥಿಸಿಕೊಂಡಿದ್ದರು.
"ನಮ್ಮ ಧರ್ಮವೇ ಬೇರೆ, ನಮ್ಮ ಆಚಾರಗಳು ಬೇರೆ, ನಮ್ಮ ಸಂಪ್ರದಾಯಗಳು ಬೇರೆ, ನಮ್ಮ ಆಲೋಚನೆಗಳು ಬೇರೆ, ನಮ್ಮ ಮಹತ್ವಾಕಾಂಕ್ಷೆಗಳು ಬೇರೆ. ಅಲ್ಲಿಯೇ ಎರಡು ರಾಷ್ಟ್ರಗಳ ಸಿದ್ಧಾಂತದ ಅಡಿಪಾಯ ಹಾಕಲಾಯಿತು. ನಾವು ಎರಡು ರಾಷ್ಟ್ರಗಳು, ನಾವು ಒಂದು ರಾಷ್ಟ್ರವಲ್ಲ." ಎಂದಿದ್ದರು
ನಾವು ಈ ಭಯೋತ್ಪಾದಕರ ನರಕವನ್ನು ಶೀಘ್ರದಲ್ಲೇ ಹೊಡೆದುರುಳಿಸುತ್ತೇವೆ. BLA, BLF ಮತ್ತು BRA ಇತ್ಯಾದಿಗಳಿಗೆ ಸೇರಿದ ಈ 1500 ಭಯೋತ್ಪಾದಕರು ಬಲೂಚಿಸ್ತಾನವನ್ನು ನಮ್ಮಿಂದ ಕಸಿದುಕೊಳ್ಳಬಹುದು ಎಂದು ನೀವು ಭಾವಿಸುತ್ತೀರಾ?" ಎಂದು ಕೇಳಿದ ಅವರು, ಮಾತ್ರವಲ್ಲದೇ ಬಲೂಚಿಸ್ತಾನ ಮೂಲದ ಭಯೋತ್ಪಾದಕರ ವಿರುದ್ಧ ದಾಳಿ ನಡೆಸುವುದಾಗಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಪ್ರತಿಜ್ಞೆ ಮಾಡಿದ್ದರು.
ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ವಿದೇಶಾಂಗ ಸಚಿವಾಲಯ: 2008ರ ಮುಂಬೈ ದಾಳಿಯ ಅಪರಾಧಿ ತಹವ್ವುರ್ ರಾಣಾ ನನ್ನು ಇತ್ತೀಚೆಗೆ ಅಮೆರಿಕದಿಂದ ಭಾರತಕ್ಕೆ ಹಸ್ತಾಂತರಿಸಿದ ಬಗ್ಗೆಯೂ ವಿದೇಶಾಂಗ ಸಚಿವಾಲಯ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ.
"ಇದರಲ್ಲಿ ತನ್ನ ಪಾತ್ರವೇನಿಲ್ಲ ಎನ್ನುವುದನ್ನು ತೋರಿಸಿಕೊಳ್ಳಲು ಪಾಕಿಸ್ತಾನ ಬಹಳ ಪ್ರಯತ್ನಿಸಬಹುದು. ಆದರೆ, ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು ಎನ್ನುವ ಅದರ ಖ್ಯಾತಿ ಕಡಿಮೆಯಾಗಲು ಸಾಧ್ಯವಿಲ್ಲ. ಅದು ರಕ್ಷಿಸುತ್ತಿರುವ ಮುಂಬೈ ದಾಳಿಯ ಇತರ ಅಪರಾಧಿಗಳನ್ನು ನ್ಯಾಯಾಂಗದ ಮುಂದೆ ತರುವ ಅಗತ್ಯವಿದೆ ಎನ್ನುವುದಕ್ಕೆ ರಾಣಾ ಹಸ್ತಾಂತರ ಎಚ್ಚರಿಎ ಗಂಟೆಯಾಗಲಿದೆ" ಎಂದು ಹೇಳಿದೆ.
ನೆರೆಯ ರಾಷ್ಟ್ರದ ಇಂತಹ ನಡವಳಿಕೆ ಸಾಧ್ಯವಿಲ್ಲ ಎಂದ ಜೈ ಶಂಕರ್: 166 ಜನರ ಪ್ರಾಣವನ್ನು ಬಲಿ ತೆಗೆದುಕೊಂಡ 2008ರ ಮುಂಬೈ ದಾಳಿ ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧದಲ್ಲಿ ಮಹತ್ವದ ತಿರುವು ನೀಡಿತ್ತು. ಆದರೆ ಈಗ ರಾಣಾ ಹಸ್ತಾಂತರ, ನೆರೆಯ ರಾಷ್ಟ್ರದ ಇಂತಹ ನಡವಳಿಕೆಗಳನ್ನು ಭಾರತ ಸಹಿಸುವುದಿಲ್ಲ ಎಂದು ದೇಶದ ಜನರು ಭಾವಿಸುವಂತೆ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಜಮ್ಮು ಕಾಶ್ಮೀರ ಸಂಪೂರ್ಣವಾಗಿ ತಮ್ಮದು ಎಂದು ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳು ಪ್ರತಿಪಾದಿಸುತ್ತವೆ. ಆದರೆ, ಜಮ್ಮು ಹಾಗೂ ಕಾಶ್ಮೀರದ ಕೆಲವು ಭಾಗಗಳನ್ನಷ್ಟೇ ಎರಡು ದೇಶಗಳ ನಿಯಂತ್ರಣದಲ್ಲಿವೆ. ಈ ಪ್ರದೇಶವನ್ನು ತಮ್ಮದಾಗಿಸಿಕೊಳ್ಳಲು ಉಭಯ ರಾಷ್ಟ್ರಗಳು 1947, 1965, 1971 ಮತ್ತು 1999 ರಲ್ಲಿ ಅನೇಕ ಯುದ್ಧಗಳನ್ನು ನಡೆಸಿವೆ.
ಇದನ್ನೂ ಓದಿ: ತಹವ್ವುರ್ ರಾಣಾ ಕೆನಡಾ ಪ್ರಜೆ, ನಮ್ಮ ದೇಶದವನಲ್ಲ: ಉಗ್ರನಿಂದ ಅಂತರ ಕಾಯ್ದುಕೊಂಡ ಪಾಕಿಸ್ತಾನ