ಇಸ್ಲಾಮಾಬಾದ್ (ಪಾಕಿಸ್ತಾನ) : ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ವಿರುದ್ಧವಾಗಿ ಸಿಂಧೂ ನದಿ ನೀರು ಒಪ್ಪಂದ ಸ್ಥಗಿತಗೊಳಿಸುವ ಭಾರತದ ನಿರ್ಧಾರಕ್ಕೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 'ಭಾರತ ನೀರು ಹರಿಸದಿದ್ದರೆ, ನದಿಗಳಲ್ಲಿ ರಕ್ತ ಹರಿಯುತ್ತದೆ' ಎಂದು ಬೆದರಿಕೆ ಹಾಕಿದ್ದಾರೆ.
ಸಿಂಧ್ ಪ್ರಾಂತ್ಯದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿರುವ ಮಾಜಿ ವಿದೇಶಾಂಗ ಸಚಿವ ಬಿಲಾವಲ್, "ಸಿಂಧೂ ನಮ್ಮದು ಮತ್ತು ಅದು ಎಂದಿಗೂ ನಮ್ಮದೇ ಆಗಿ ಉಳಿಯುತ್ತದೆ. ನಮ್ಮ ನೀರು ಅದರ ಮೂಲಕ ಹರಿಯುತ್ತದೆ. ಭಾರತ ಸರ್ಕಾರ ನೀರು ಹರಿಸದಿದ್ದರೆ, ಅದರಲ್ಲಿ ರಕ್ತ ಹರಿಯುತ್ತದೆ" ಎಂದು ಬೆದರಿಕೆ ಹಾಕಿದ್ದಾಗಿ ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ.
"ಸಿಂಧ್ ಮತ್ತು ಸಿಂಧೂ ಜನರ ನಡುವಿನ ಶತಮಾನಗಳ ಬಾಂಧವ್ಯವನ್ನು ಪ್ರಧಾನಿ ಮೋದಿ ಮುರಿಯಲು ಸಾಧ್ಯವಿಲ್ಲ. ಭಾರತ ಸರ್ಕಾರ ಪಾಕಿಸ್ತಾನದ ನೀರಿನ ಮೇಲೆ ಕಣ್ಣಿಟ್ಟಿದೆ. ನಮ್ಮ ನೀರನ್ನು ರಕ್ಷಿಸಿಕೊಳ್ಳಲು ಮತ್ತು ಅದನ್ನು ಬೇರೆಡೆ ತಿರುಗಿಸದಂತೆ ತಡೆಯಲು ನಾಲ್ಕು ಪ್ರಾಂತ್ಯಗಳ ಜನರು ಒಗ್ಗಟ್ಟಾಗಬೇಕಿದೆ" ಎಂದು ಹೇಳಿದ್ದಾರೆ.
"ಪಾಕಿಸ್ತಾನ ಮತ್ತು ಅಂತಾರಾಷ್ಟ್ರೀಯ ಸಮುದಾಯವು ಮೋದಿ ಅವರ "ಯುದ್ಧೋದ್ರೇಕ" ನಡೆಯನ್ನು ಸಹಿಸುವುದಿಲ್ಲ. ಸಿಂಧೂ ನದಿ ನೀರನ್ನು ತಡೆದಲ್ಲಿ ನಾವು ಸುಮ್ಮನಿರಲ್ಲ ಎಂಬ ಸಂದೇಶವನ್ನು ಜಗತ್ತಿಗೆ ತಿಳಿಸುತ್ತೇವೆ. ಇದಕ್ಕಾಗಿ ಪಾಕಿಸ್ತಾನ ಪೀಪಲ್ಸ್ ಪಕ್ಷದ (ಪಿಪಿಪಿ) ಕಾರ್ಯಕರ್ತರು ಭಾರತದ ಆಕ್ರಮಣದ ವಿರುದ್ಧ ಹೋರಾಡಲು ಸಿದ್ಧರಾಗಿ" ಎಂದು ಕರೆ ನೀಡಿದ್ದಾರೆ.
ಸಿಂಧೂ ನದಿ ನೀರು ಒಪ್ಪಂದ ಸ್ಥಗಿತ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನ ಕೈವಾಡ ಇದೆ ಎಂದು ಆರೋಪಿ ಭಾರತ ಸರ್ಕಾರವು, ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಇದು ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳಿಗೆ 'ಜಲಾಘಾತ' ಉಂಟು ಮಾಡುವ ಸಾಧ್ಯತೆ ಇದೆ. ಅಲ್ಲದೇ, ಹಲವು ರಾಜತಾಂತ್ರಿಕ ಕಠಿಣ ನಿಲುವುಗಳನ್ನು ತೆಗೆದುಕೊಂಡಿದೆ.
ಇದರ ವಿರುದ್ಧವಾಗಿ ಪಾಕಿಸ್ತಾನವು ಸಿಮ್ಲಾ ಒಪ್ಪಂದವನ್ನು ಸ್ಥಗಿತಗೊಳಿಸುವುದಾಗಿ ಮತ್ತು ಭಾರತದೊಂದಿಗೆ ಇತರ ದ್ವಿಪಕ್ಷೀಯ ಒಪ್ಪಂದಗಳನ್ನು ತಡೆಹಿಡಿಯುವುದಾಗಿ ಹೇಳಿದೆ. ಭಾರತದೊಂದಿಗಿನ ವ್ಯಾಪಾರ ಸ್ಥಗಿತ, ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶ ನಿರ್ಬಂಧ ಹೇರಿದೆ.
ಭಯೋತ್ಪಾದಕ ದಾಳಿ: ದಕ್ಷಿಣ ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್ 22 ರಂದು ಭಯೋತ್ಪಾದಕರು ದಾಳಿ ನಡೆಸಿ ಕರ್ನಾಟಕದ ಮೂವರು ಸೇರಿ 26 ಮಂದಿಯನ್ನು ಬಲಿ ತೆಗೆದುಕೊಂಡಿದ್ದರು. ಅದರಲ್ಲಿ ಹೆಚ್ಚಿನವರು ಪ್ರವಾಸಿಗರಾಗಿದ್ದಾರೆ. ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೊಯ್ಬಾದ ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಇದನ್ನೂ ಓದಿ: "ಪಹಲ್ಗಾಮ್ ದಾಳಿ ವಿರುದ್ಧ ತಟಸ್ಥ ತನಿಖೆಗೆ ಸಿದ್ಧ": ಪಾಕಿಸ್ತಾನ ಪ್ರಧಾನಿ