ಜೆರುಸಲೇಂ: ಗಾಜಾದ ಖಾನ್ ಯೂನಿಸ್ ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ರಾಜಕೀಯ ನಾಯಕ ಸಲಾಹ್ ಅಲ್-ಬರ್ದವೀಲ್ ಕೊಲ್ಲಲ್ಪಟ್ಟಿದ್ದಾರೆ. ಈ ದಾಳಿಯಲ್ಲಿ ಸಲಾಹ್ ಅಲ್ - ಬರ್ದವೀಲ್ ಅವರ ಪತ್ನಿ ಕೂಡ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಪರ ಮಾಧ್ಯಮಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಸ್ರೇಲ್ ಮಾಧ್ಯಮ ವರದಿ ಮಾಡಿದೆ.
ಈ ದಾಳಿಯು ಗಾಜಾ ಪಟ್ಟಿಯಾದ್ಯಂತ ಹಮಾಸ್ ಭದ್ರಕೋಟೆಗಳ ಮೇಲೆ ಇಸ್ರೇಲ್ ನಡೆಸಿದ ವ್ಯಾಪಕ ಮಿಲಿಟರಿ ಕಾರ್ಯಾಚರಣೆಯ ಭಾಗವಾಗಿತ್ತು. ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಮಾತುಕತೆಗಳು ವಿಫಲವಾದ ನಂತರ, ಜನವರಿ 19 ರಿಂದ ಜಾರಿಯಲ್ಲಿದ್ದ ಕದನ ವಿರಾಮ ಮುರಿದ ನಂತರ ಈ ದಾಳಿ ನಡೆದಿದೆ.
ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ನಿರಂತರವಾಗಿ ನಿರಾಕರಿಸುತ್ತಿದೆ ಮತ್ತು ಯುಎಸ್ ರಾಯಭಾರಿ ಸ್ಟೀವ್ ವಿಟ್ ಕಾಫ್ ಅವರು ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪಗಳನ್ನು ತಿರಸ್ಕರಿಸಿದೆ ಎಂದು ಹೇಳಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಇಸ್ರೇಲ್ ಸರ್ಕಾರ, ಗಾಜಾದಲ್ಲಿ ಮತ್ತೆ ಮಿಲಿಟರಿ ಕಾರ್ಯಾಚರಣೆ ಆರಂಭಿಸಿರುವುದನ್ನು ಸಮರ್ಥಿಸಿಕೊಂಡಿದೆ.
ಗಾಜಾದಲ್ಲಿ ಮಿಲಿಟಿರಿ ಮತ್ತು ರಾಜಕೀಯ ಶಕ್ತಿಯಾಗಿ ಹಮಾಸ್ ಅನ್ನು ನಿರ್ನಾಮಗೊಳಿಸುವ ಉದ್ದೇಶದಿಂದ ಹಮಾಸ್ ವಿರುದ್ಧ ದಾಳಿಗಳನ್ನು ತೀವ್ರಗೊಳಿಸುವಂತೆ ಇಸ್ರೇಲ್ ರಕ್ಷಣಾ ಪಡೆಗಳಿಗೆ (ಐಡಿಎಫ್) ನಿರ್ದೇಶಿಸಲಾಗಿದೆ ಎಂದು ನೆತನ್ಯಾಹು ಅವರ ಕಚೇರಿ ಹೇಳಿದೆ.
"ಇಸ್ರೇಲ್ ಇನ್ನು ಮುಂದೆ ಹಮಾಸ್ ವಿರುದ್ಧ ಮತ್ತಷ್ಟು ಹೆಚ್ಚಿನ ಮಿಲಿಟರಿ ಬಲದಿಂದ ಕ್ರಮ ಕೈಗೊಳ್ಳಲಿದೆ. ಈ ಕಾರ್ಯಾಚರಣೆಯ ಯೋಜನೆಯನ್ನು ಐಡಿಎಫ್ ವಾರಾಂತ್ಯದಲ್ಲಿ ಪ್ರಸ್ತುತಪಡಿಸಿತ್ತು ಮತ್ತು ಅದನ್ನು ರಾಜಕೀಯ ನಾಯಕತ್ವ ಅನುಮೋದಿಸಿತು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕದನ ವಿರಾಮ ಮಾತುಕತೆಗಳ ವೈಫಲ್ಯವು ಸಂಘರ್ಷ ಮರುಕಳಿಸಲು ಪ್ರಮುಖ ಕಾರಣವಾಗಿದೆ. ಇಸ್ರೇಲ್ ಮೊದಲ ಒಪ್ಪಂದದ ಮೂರು ಹಂತಗಳನ್ನು ವಿಸ್ತರಿಸಲು ಬಯಸಿದರೆ, ಹಮಾಸ್ ಎರಡನೇ ಒಪ್ಪಂದಕ್ಕೆ ಒತ್ತಾಯಿಸಿತ್ತು.
ಆರಂಭಿಕ ಹಂತದಲ್ಲಿ, ಹಮಾಸ್ ಸುಮಾರು 2,000 ಪ್ಯಾಲೆಸ್ಟೈನ್ ಕೈದಿಗಳಿಗೆ ಬದಲಾಗಿ 33 ಇಸ್ರೇಲಿ ಒತ್ತೆಯಾಳುಗಳು ಮತ್ತು ಐವರು ಥಾಯ್ ಪ್ರಜೆಗಳನ್ನು ಬಿಡುಗಡೆ ಮಾಡಿತ್ತು. ಆದಾಗ್ಯೂ ಹಮಾಸ್ ಈಗಲೂ ಸರಿಸುಮಾರು 59 ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿದೆ. ಹಮಾಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಲುವಿಗೆ ಪ್ರಧಾನಿ ನೆತನ್ಯಾಹು ದೃಢವಾಗಿ ಅಂಟಿಕೊಂಡಿದ್ದಾರೆ.
ಇದನ್ನೂ ಓದಿ : ವಿಶ್ವ ಜಲ ದಿನ: ಶುದ್ಧ ನೀರಿನ ಕೊರತೆಯಿಂದ ಪ್ರತಿವರ್ಷ 14 ಲಕ್ಷ ಜನ ಸಾವು - ವಿಶ್ವಸಂಸ್ಥೆ ಮಾಹಿತಿ - WORLD WATER DAY 2025